ಬೆಂಗಳೂರು: ಹಿರಿಯ ವಿಜ್ಞಾನಿ, ಭಾರತ ರತ್ನ ಪ್ರಶಸ್ತಿ ಪುರಸ್ಕೃತರಾಗಿರುವ ಸಿ.ಎನ್.ಆರ್. ರಾವ್ (Prof CNR Rao) ಅವರಿಗೆ ತಮ್ಮ ಗುರುತನ್ನು ಸಾಬೀತುಪಡಿಸುವಂತೆ ಭಾರತೀಯ ಚುನಾವಣಾ ಆಯೋಗ (Election Commission of India) ನೋಟಿಸ್ ಜಾರಿ ಮಾಡಿದೆ. ರಾಜ್ಯಾದ್ಯಂತ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರೊ. ಸಿ.ಎನ್.ಆರ್ ರಾವ್ ಅವರ ಹೆಸರಿನಲ್ಲಿ ಹೆಚ್ಚುವರಿ ಎಫ್ ಇರುವುದರಿಂದ ಹಳೆ ಮತದಾರರ ಪಟ್ಟಿಗೆ ಇದು ಹೊಂದಣಿಯಾಗುತ್ತಿಲ್ಲ. ಹೀಗಾಗಿ ಅವರಿಗೆ ನೋಟಿಸ್ ಜಾರಿಗೊಳಿಸಲಾಗಿದೆ ಎನ್ನಲಾಗಿದೆ.
ಹಳೆ ಮತದಾರರ ಪಟ್ಟಿಯಲ್ಲಿ ಅವರ ಹೆಸರನ್ನು ಪ್ರೊ. ಸಿ.ಎನ್.ಆರ್ ರಾವ್ ಎಂದು ನಮೂದಿಸಲಾಗಿದ್ದು, ಹೊಸ ಪಟ್ಟಿಯಲ್ಲಿ ಪ್ರೊಫೆಸರ್ ಪದಕ್ಕೆ ಹೆಚ್ಚುವರಿ ಎಫ್ ಸೇರಿಸಲಾಗಿದೆ. ಇದು ಹೊಂದಣಿಯಾಗದೇ ಇರುವುದರಿಂದ ದಾಖಲೆಗೆ ತಾಂತ್ರಿಕ ದೋಷ ಕಂಡು ಬಂದಿದೆ. ಇದನ್ನು ಸರಿಪಡಿಸಿ, ಗುರುತನ್ನು ದೃಢೀಕರಿಸುವಂತೆ ಚುನಾವಣಾ ಆಯೋಗ ಅವರಿಗೆ ಸೂಚಿಸಿದೆ.
ಕೆಲಸ ಬಿಡಿ ಅಥವಾ ಸಾವನ್ನು ಸ್ವೀಕರಿಸಿ: ಎಲ್ಇಟಿ ಬೆದರಿಕೆ; ಆತಂಕದಲ್ಲಿ ಕಾಶ್ಮೀರಿ ಪಂಡಿತರು
ಪ್ರೊ. ಸಿ.ಎನ್.ಆರ್ ರಾವ್ ಅವರಿಗೆ ವಿಚಾರಣೆಗೆ ಖುದ್ದಾಗಿ ಹಾಜರಾಗುವಂತೆ ಸೂಚಿಸಲಾಗಿದೆ. ಚುನಾವಣಾ ಆಯೋಗ ಅವರಿಗೆ ನೀಡಿರುವ ನೋಟಿಸ್ ಬಗ್ಗೆ ಅವರ ಆಪ್ತರು ಯಾರಿಗೂ ಮಾಹಿತಿ ಇಲ್ಲ. ಅವರಿಗೆ ನೀಡಿರುವ ನೋಟಿಸ್ ನಲ್ಲಿ "ಸ್ವಯಂ-ಹೆಸರು ಹೊಂದಾಣಿಕೆಯಾಗದಿರುವುದು" ಕಾರಣ ಎಂದು ಉಲ್ಲೇಖಿಸಲಾಗಿದೆ.
"ಸ್ವಯಂ-ಹೆಸರಿನ ವ್ಯತ್ಯಾಸ" ವೆಂದರೆ 2002ರ ಮತದಾರರ ಪಟ್ಟಿಯಲ್ಲಿ ಪಟ್ಟಿ ಮಾಡಲಾದ ಮತದಾರರು SIR ಎಣಿಕೆ ಫಾರ್ಮ್ ಅನ್ನು ಭರ್ತಿ ಮಾಡುವಾಗ ಆ ಪಟ್ಟಿಯಿಂದ ತಮ್ಮದೇ ಆದ ವಿವರಗಳನ್ನು ಬಳಸಿದಾಗ ಉಂಟಾಗುವ ವ್ಯತ್ಯಾಸವಾಗಿದೆ. ನೋಟಿಸ್ ಗೆ ಸಂಬಂಧಿಸಿದ ವ್ಯಕ್ತಿ ತನ್ನ ಪರವಾಗಿ ಬೇರೆಯವರನ್ನು ಕಳುಹಿಸುವಂತಿಲ್ಲ. ಸ್ವಯಂ ಖುದ್ದಾಗಿ ಹಾಜರಾಗಬೇಕಿದೆ. ಹೀಗಾಗಿ ಪ್ರೊಫೆಸರ್ ರಾವ್ ಅವರು ಭಾರತೀಯ ವಿಜ್ಞಾನ ಸಂಸ್ಥೆ (IISc) ಬಳಿಯ ಮಲ್ಲೇಶ್ವರಂನಲ್ಲಿ ನಿಗದಿಯಾಗಿರುವ ಸ್ಥಳದಲ್ಲಿ ವಿಚಾರಣೆಗೆ ಹಾಜರಾಗಬೇಕಿದೆ.
ಘನ-ಸ್ಥಿತಿ (ಸಾಲಿಡ್ ಸ್ಟೇಟ್) ಮತ್ತು ವಸ್ತು ರಸಾಯನಶಾಸ್ತ್ರ ಕ್ಷೇತ್ರದಲ್ಲಿ ಸಲ್ಲಿಸಿರುವ ಅಪಾರ ಕೊಡುಗೆಗಳಿಗಾಗಿ ಪ್ರೊ. ಸಿ.ಎನ್.ಆರ್. ರಾವ್ ಅವರು ಪದ್ಮವಿಭೂಷಣ, ಪದ್ಮಶ್ರೀ ಮತ್ತು ಕರ್ನಾಟಕ ರತ್ನ ಸೇರಿದಂತೆ ಹಲವಾರು ಗೌರವಕ್ಕೆ ಪಾತ್ರರಾಗಿದ್ದಾರೆ. 2014ರಲ್ಲಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ ನೀಡಿ ಗೌರವಿಸಲಾಗಿದೆ. ಪ್ರೊಫೆಸರ್ ರಾವ್ ಅವರು ಭಾರತದ ವಿಜ್ಞಾನ ನೀತಿಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ವೈಜ್ಞಾನಿಕ ಸಲಹಾ ಮಂಡಳಿಯ ಸದಸ್ಯರಾಗಿದ್ದ ಅವರು ನಾಲ್ಕು ಪ್ರಧಾನ ಮಂತ್ರಿಗಳಾದ ರಾಜೀವ್ ಗಾಂಧಿ, ಎಚ್ಡಿ ದೇವೇಗೌಡ, ಐಕೆ ಗುಜ್ರಾಲ್ ಮತ್ತು ಮನಮೋಹನ್ ಸಿಂಗ್ ಅವರ ವೈಜ್ಞಾನಿಕ ಸಲಹಾ ಮಂಡಳಿಗಳ ನೇತೃತ್ವ ವಹಿಸಿದ್ದರು.ಜಾಗತಿಕ ವಿಜ್ಞಾನ ಮತ್ತು ಬೆಂಗಳೂರಿಗೆ ಅಪಾರ ಕೊಡುಗೆಗಳನ್ನು ನೀಡಿರುವ ಪ್ರೊ. ಸಿ.ಎನ್.ಆರ್. ರಾವ್ ಅವರು ಪ್ರತಿಷ್ಠಿತ ಐಐಎಸ್ಸಿಯ ಮುಖ್ಯಸ್ಥರಾಗಿದ್ದರು.
ಕರ್ನಾಟಕದಲ್ಲಿ ನಡೆಯುತ್ತಿರುವ ಮೂರನೇ ಹಂತದ ಎಸ್ಐಆರ್ (SIR) ಅಡಿಯಲ್ಲಿ ಆಗಸ್ಟ್ 24ರಂದು ಪ್ರಕಟವಾದ ಕರಡು ಮತದಾರರ ಪಟ್ಟಿಯಿಂದ ಒಂದು ಕೋಟಿಗೂ ಹೆಚ್ಚು ಮತದಾರರ ಹೆಸರನ್ನು ತೆಗೆದುಹಾಕಲಾಗಿದೆ. ಸುಮಾರು 43 ಲಕ್ಷ ಮಂದಿಗೆ ವಿಚಾರಣೆಗಾಗಿ ನೋಟಿಸ್ ಕಳುಹಿಸಲಾಗುವುದು.
“11 ದೇಶಗಳಲ್ಲಿ ಯುಪಿಐ ಕಾರ್ಯನಿರ್ವಹಿಸುತ್ತಿದೆ”: ಜಾಗತಿಕ ವ್ಯಾಪ್ತಿ ಮತ್ತಷ್ಟು ಹೆಚ್ಚಳ ಎಂದ ಪ್ರಧಾನಿ ಮೋದಿ
ಮತದಾರರ ಪಟ್ಟಿಯಿಂದ ಹೆಸರು ಬಿಟ್ಟು ಹೋದವರಿಗೆ ಆಕ್ಷೇಪಣೆ ಸಲ್ಲಿಸಲು ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ ಅವಕಾಶ ಕಲ್ಪಿಸಲಾಗಿದೆ. ಅಕ್ಟೋಬರ್ 22ರೊಳಗೆ ಮೇಲ್ಮನವಿಗಳ ವಿಚಾರಣೆ ನಡೆಯಲಿದ್ದು, ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ ಎಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದೆ.