ಮುಂಬೈ, ಫೆ. 5: ಮಹಾರಾಷ್ಟ್ರದ ಖಂಡಾಲಾ ಘಾಟ್ ಗ್ಯಾಸ್ ಟ್ಯಾಂಕರ್ ಪಲ್ಟಿಯಾದ ನಂತರ ಮುಂಬೈ-ಪುಣೆ ಎಕ್ಸ್ಪ್ರೆಸ್ವೇಯಲ್ಲಿ (Mumbai–Pune Expressway) ಸಂಚಾರ 24 ಗಂಟೆಗಳಿಗೂ ಹೆಚ್ಚು ಕಾಲ ಅಸ್ತವ್ಯಸ್ತಗೊಂಡಿತು. ಇದು ಇತ್ತೀಚಿನ ದಿನಗಳಲ್ಲಿ ಜನನಿಬಿಡ ಕಾರಿಡಾರ್ನಲ್ಲಿ ನಡೆದ ಅತ್ಯಂತ ಕೆಟ್ಟ ಸಂಚಾರ ದಟ್ಟಣೆಯಲ್ಲಿ ಒಂದಾಗಿದೆ. ಈ ಘಟನೆಯು ಲಕ್ಷಾಂತರ ಪ್ರಯಾಣಿಕರನ್ನು ಸಂಕಷ್ಟದಲ್ಲಿ ಸಿಲುಕಿಸಿತು. ವಾಹನಗಳ ಸಾಲುಗಳು 20ರಿಂದ 22 ಕಿಲೋಮೀಟರ್ಗಳವರೆಗೆ ವಿಸ್ತರಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಕಷ್ಟದಲ್ಲಿ ಸಿಲುಕಿದವರಲ್ಲಿ ಕೈಗಾರಿಕೋದ್ಯಮಿ ಮತ್ತು ಪಿನ್ನಾಕಲ್ ಗ್ರೂಪ್ ಅಧ್ಯಕ್ಷ ಡಾ. ಸುಧೀರ್ ಮೆಹ್ತಾ ಕೂಡ ಒಬ್ಬರು. ಅವರು ಸುಮಾರು ಎಂಟು ಗಂಟೆಗಳ ಕಾಲ ಎಕ್ಸ್ಪ್ರೆಸ್ವೇಯಲ್ಲಿ ಸಿಲುಕಿದ ನಂತರ ಹೆಲಿಕಾಪ್ಟರ್ ಮೂಲಕ ಪುಣೆಗೆ ತಲುಪಿದರು. ಇಕೆಎ ಮೊಬಿಲಿಟಿ ಮತ್ತು ಪಿನ್ನಾಕಲ್ ಇಂಡಸ್ಟ್ರೀಸ್ ಮುಖ್ಯಸ್ಥರೂ ಆಗಿರುವ ಮೆಹ್ತಾ, ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ನಲ್ಲಿ ಭಾರಿ ಸಂಚಾರ ದಟ್ಟಣೆಯ ವೈಮಾನಿಕ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ.
ಇಲ್ಲಿದೆ ಪೋಸ್ಟ್:
ತಮ್ಮ ಪೋಸ್ಟ್ನಲ್ಲಿ ಮೆಹ್ತಾ ಹೈ-ಸ್ಪೀಡ್ ಕಾರಿಡಾರ್ನಲ್ಲಿನ ತುರ್ತು ಪರಿಸ್ಥಿತಿ ಸಿದ್ಧತೆಯ ಕುರಿತು ಆತಂಕ ವ್ಯಕ್ತಪಡಿಸಿದರು. ಇಂತಹ ಸಂಕಷ್ಟಗಳನ್ನು ನಿಭಾಯಿಸಲು ರಚನಾತ್ಮಕ ಬದಲಾವಣೆಗಳ ಅಗತ್ಯವಿದೆ ಎಂದು ಹೇಳಿದರು. ತುರ್ತು ಸಂದರ್ಭಗಳಲ್ಲಿ ವಾಹನಗಳು ಹಿಂದಿರುಗಲು ಅನುಕೂಲವಾಗುವಂತೆ ಎಕ್ಸ್ಪ್ರೆಸ್ವೇ ಉದ್ದಕ್ಕೂ ನಿರ್ದಿಷ್ಟ ಅಂತರಗಳಲ್ಲಿ ಹೊರಹೋಗುವ ದಾರಿಗಳನ್ನು (ಎಕ್ಸಿಟ್ ಪಾಯಿಂಟ್ಗಳು) ನಿರ್ಮಿಸಬೇಕು ಎಂದು ಅವರು ಸಲಹೆ ನೀಡಿದರು. ಜತೆಗೆ, ತ್ವರಿತ ರಕ್ಷಣಾ ಮತ್ತು ಸ್ಥಳಾಂತರ ಕಾರ್ಯಾಚರಣೆಗಾಗಿ ರಸ್ತೆಯ ಸಮೀಪ ಹೆಲಿಪ್ಯಾಡ್ಗಳನ್ನು ನಿರ್ಮಿಸಬೇಕು ಎಂದು ಅವರು ಪ್ರಸ್ತಾಪಿಸಿದ್ದಾರೆ. ಇವುಗಳನ್ನು ಕಡಿಮೆ ವೆಚ್ಚದಲ್ಲಿ ಹಾಗೂ ಕಡಿಮೆ ಪ್ರಮಾಣದ ಭೂಮಿಯಲ್ಲಿ ಅಭಿವೃದ್ಧಿಪಡಿಸಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಗ್ಯಾಸ್ ಟ್ಯಾಂಕರ್ ಅಪಘಾತ; ಮುಂಬೈ-ಪುಣೆ ಕಾರಿಡಾರ್ನಲ್ಲಿ ಸಂಚಾರ ಅಸ್ತವ್ಯಸ್ತ: 15 ಗಂಟೆ ಟ್ರಾಫಿಕ್ ಜಾಮ್
ಪುಣೆಗೆ ಸುರಕ್ಷಿತವಾಗಿ ಮರಳಲು ಅನುವು ಮಾಡಿಕೊಟ್ಟ ವಾಯುಯಾನ ಸಲಹೆಗಾರ ಮತ್ತು ವಾಯುಪಡೆಯ ಅನುಭವಿ ನಿತಿನ್ ವೆಲ್ಡೆ ಅವರಿಗೆ ಮೆಹ್ತಾ ಕೃತಜ್ಞತೆ ಸಲ್ಲಿಸಿದರು. ಮಂಗಳವಾರ (ಫೆಬ್ರವರಿ 3) ಸಂಜೆ 5 ಗಂಟೆ ಸುಮಾರಿಗೆ ಪ್ರೊಪಿಲೀನ್ ಅನಿಲವನ್ನು ಸಾಗಿಸುತ್ತಿದ್ದ ಟ್ಯಾಂಕರ್ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ಅಪಘಾತದ ನಂತರ, ಟ್ಯಾಂಕರ್ನಿಂದ ಅನಿಲ ಸೋರಿಕೆಯಾಗಲು ಪ್ರಾರಂಭಿಸಿತು. ಇದರಿಂದಾಗಿ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಮುಂಬೈಗೆ ಹೋಗುವ ಕ್ಯಾರೇಜ್ವೇ ಅನ್ನು ಮುಚ್ಚಿದರು.
ದಿನದ 24 ಗಂಟೆಯ ಪ್ರಯತ್ನಗಳ ಹೊರತಾಗಿಯೂ, ಬುಧವಾರ ವೇಳೆಗೆ ಪರಿಸ್ಥಿತಿ ತುಸು ಮಟ್ಟಿಗೆ ಸುಧಾರಿಸಿತು. ಪೂರ್ತಿಯಾಗಿ ವ್ಯವಸ್ಥೆ ಸುಧಾರಿಸಿರಲಿಲ್ಲ. ಅಧಿಕಾರಿಗಳು ಬಿಡುಗಡೆ ಮಾಡಿದ ಡ್ರೋನ್ ದೃಶ್ಯಗಳು, ಎಕ್ಸ್ಪ್ರೆಸ್ವೇಯಲ್ಲಿ ಸಾವಿರಾರು ವಾಹನಗಳು ಒಂದರ ಹಿಂದೆ ಒಂದರಂತೆ ಸಿಲುಕಿಕೊಂಡಿರುವುದನ್ನು ತೋರಿಸಿವೆ. ಅನಿಲ ಸೋರಿಕೆಯನ್ನು ನಿಯಂತ್ರಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್), ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್) ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್)ನ ತುರ್ತು ನಿರ್ವಹಣಾ ತಂಡಗಳನ್ನು ನಿಯೋಜಿಸಲಾಯಿತು.
ಪರಿಸ್ಥಿತಿ ಸುಧಾರಿಸುವವರೆಗೆ ಮುಂಬೈ-ಪುಣೆ ಎಕ್ಸ್ಪ್ರೆಸ್ವೇಯಲ್ಲಿ ಸಂಚರಿಸದಂತೆ ಅಧಿಕಾರಿಗಳು ಪ್ರಯಾಣಿಕರನ್ನು ಕೋರಿದ್ದಾರೆ. ಗ್ಯಾಸ್ ಟ್ಯಾಂಕರ್ ಅನ್ನು ಸಂಪೂರ್ಣವಾಗಿ ಸುರಕ್ಷಿತಗೊಳಿಸುವವರೆಗೆ ಮತ್ತು ಹಾನಿಗೊಳಗಾದ ಪ್ರದೇಶವನ್ನು ಸುರಕ್ಷಿತವೆಂದು ಘೋಷಿಸುವವರೆಗೆ ಸಂಚಾರ ನಿರ್ಬಂಧಗಳು ಮುಂದುವರಿಯಬಹುದು ಎಂದು ತಿಳಿಸಿದ್ದಾರೆ.