ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಾಲ್ವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇಮಕಕ್ಕೆ ಸಂಪುಟ ಅನುಮೋದನೆ

Supreme Court judges appointment: ನಾಲ್ವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇಮಕಕ್ಕೆ ಸಂಪುಟ ಅನುಮೋದನೆ ನೀಡಿದೆ. ಈ ವರ್ಷದ ಆರಂಭದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಮಾಡಿದ ಔಪಚಾರಿಕ ಕೋರಿಕೆಯ ಮೇರೆಗೆ, ಕೇಂದ್ರ ಸಚಿವ ಸಂಪುಟವು ಸಿಜೆಐ ಹೊರತುಪಡಿಸಿ ನ್ಯಾಯಮೂರ್ತಿಗಳ ಸಂಖ್ಯೆಯನ್ನು 33 ರಿಂದ 37ಕ್ಕೆ ಹೆಚ್ಚಿಸುವ ಪ್ರಸ್ತಾಪವನ್ನು ಅನುಮೋದಿಸಿದೆ.

ಸುಪ್ರೀಂ ಕೋರ್ಟ್ (ಸಂಗ್ರಹ ಚಿತ್ರ)

ನವದೆಹಲಿ, ಮೇ 6: ನಾಲ್ವರು ಸುಪ್ರೀಂ ಕೋರ್ಟ್ (Supreme Court) ನ್ಯಾಯಮೂರ್ತಿಗಳ ನೇಮಕಕ್ಕೆ ಸಂಪುಟ ಅನುಮೋದನೆ ನೀಡಿದೆ. ಈ ವರ್ಷದ ಆರಂಭದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಮಾಡಿದ ಔಪಚಾರಿಕ ಕೋರಿಕೆಯ ಮೇರೆಗೆ, ಕೇಂದ್ರ ಸಚಿವ ಸಂಪುಟವು (cabinet) ಮಂಗಳವಾರ (ಮೇ 5) ಸುಪ್ರೀಂ ಕೋರ್ಟ್‌ನಲ್ಲಿ ಸಿಜೆಐ ಹೊರತುಪಡಿಸಿ ನ್ಯಾಯಮೂರ್ತಿಗಳ ಸಂಖ್ಯೆಯನ್ನು 33 ರಿಂದ 37ಕ್ಕೆ ಹೆಚ್ಚಿಸುವ ಪ್ರಸ್ತಾಪವನ್ನು ಅನುಮೋದಿಸಿದೆ. ಹೆಚ್ಚುತ್ತಿರುವ ಬಾಕಿ ಪ್ರಕರಣಗಳನ್ನು ಪರಿಹರಿಸಲು ಮತ್ತು ನ್ಯಾಯಾಲಯದ ಕಾರ್ಯನಿರ್ವಹಣೆಯನ್ನು ಬಲಪಡಿಸಲು ಈ ಪ್ರಸ್ತಾವನೆಯನ್ನು ಅನುಮೋದಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಳ್ಳಲಾದ ಈ ನಿರ್ಧಾರವು, ಸುಪ್ರೀಂ ಕೋರ್ಟ್ (ನ್ಯಾಯಾಧೀಶರ ಸಂಖ್ಯೆ) ತಿದ್ದುಪಡಿ ಮಸೂದೆ, 2026 ಅನ್ನು ಸಂಸತ್ತಿನಲ್ಲಿ ಮಂಡಿಸಲು ದಾರಿ ಮಾಡಿಕೊಡುತ್ತದೆ. 92,000 ಕ್ಕೂ ಹೆಚ್ಚು ಪ್ರಕರಣಗಳು ಸುಪ್ರೀಂ ಕೋರ್ಟ್ ಮುಂದೆ ಬಾಕಿ ಇರುವ ಸಮಯದಲ್ಲಿ, ಪ್ರಸ್ತಾವಿತ ಶಾಸನವು ಸುಪ್ರೀಂ ಕೋರ್ಟ್ (ನ್ಯಾಯಾಧೀಶರ ಸಂಖ್ಯೆ) ಕಾಯ್ದೆ, 1956 ಅನ್ನು ತಿದ್ದುಪಡಿ ಮಾಡಲು ಪ್ರಯತ್ನಿಸುತ್ತದೆ.

ಫೆಬ್ರವರಿ ತಿಂಗಳಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳು (CJI) ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳ ಸಂಖ್ಯೆಯನ್ನು ತಕ್ಷಣವೇ ನಾಲ್ಕರಷ್ಟು ಹೆಚ್ಚಿಸುವಂತೆ ಕೋರಿದ್ದರು ಎಂದು ಈ ಬೆಳವಣಿಗೆಯ ಬಗ್ಗೆ ತಿಳಿದಿರುವ ಮೂಲಗಳು ತಿಳಿಸಿವೆ.

ಧರ್ಮಾಂತರವಾದರೆ ಎಸ್‌ಸಿ ಹಕ್ಕು ಅನ್ವಯವಾಗುವುದಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ನ್ಯಾಯಮೂರ್ತಿಗಳ ಸಂಖ್ಯೆಯನ್ನು ಹೆಚ್ಚಿಸುವುದರಿಂದ ನ್ಯಾಯಾಂಗದ ಸಾಮರ್ಥ್ಯ ಮತ್ತು ವೇಗವನ್ನು ಹೆಚ್ಚಿಸಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಪ್ರಮುಖ ಕಾನೂನು ಪ್ರಶ್ನೆಗಳನ್ನು ವಿಚಾರಣೆ ಮಾಡುವ ಸಂವಿಧಾನ ಪೀಠಗಳನ್ನು ನಿಯಮಿತವಾಗಿ ರಚಿಸಲು ನ್ಯಾಯಾಂಗದ ಶಕ್ತಿಯನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಅವರು ಸೂಚಿಸಿದ್ದಾರೆ.

ಈ ಪ್ರಸ್ತಾವನೆಯಲ್ಲಿ ಮುಖ್ಯ ನ್ಯಾಯಮೂರ್ತಿಗಳು ಹಂತ ಹಂತದ ಕ್ರಮವನ್ನು ಅನುಸರಿಸಲು ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಾಲ್ಕು ನ್ಯಾಯಮೂರ್ತಿಗಳನ್ನು ತಕ್ಷಣವೇ ನೇಮಕ ಮಾಡುವುದು. ನಂತರ, ನ್ಯಾಯಾಲಯದ ಕೆಲಸದ ವೇಗ ಮತ್ತು ಒತ್ತಡದ ಮೇಲೆ ಅದು ಬೀರುವ ಧನಾತ್ಮಕ ಪರಿಣಾಮವನ್ನು ಮೌಲ್ಯಮಾಪನ ಮಾಡುವುದು. ಇದು ಬಹಳ ತುರ್ತಾಗಿ ಆಗಬೇಕೆಂದು ನ್ಯಾಯಮೂರ್ತಿಗಳ ಸಲಹೆಯಾಗಿದೆ.

ಸರ್ಕಾರ ತನ್ನ ಹೇಳಿಕೆಯಲ್ಲಿ, ಹೆಚ್ಚುತ್ತಿರುವ ಪ್ರಕರಣಗಳ ಬಾಕಿ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು ವೇಗವಾಗಿ ನ್ಯಾಯ ಒದಗಿಸುವ ಉದ್ದೇಶದಿಂದ ಈ ನ್ಯಾಯಾಮೂರ್ತಿಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ ಎಂದು ತಿಳಿಸಿದೆ. 2019ರಲ್ಲಿ ಸಂಸತ್ತು ನ್ಯಾಯಾಧೀಶರ ಸಂಖ್ಯೆಯನ್ನು 30ರಿಂದ 33ಕ್ಕೆ ಹೆಚ್ಚಿಸಿದ ನಂತರ, ಇದೀಗ ಆರು ವರ್ಷಕ್ಕೂ ಹೆಚ್ಚು ಕಾಲದ ಬಳಿಕ ಈ ಹೊಸ ವಿಸ್ತರಣೆ ಕೈಗೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ.

ಅನುಮೋದಿತ ಸಂಖ್ಯೆಯನ್ನು 37ಕ್ಕೆ ಹೆಚ್ಚಿಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್‌ನಲ್ಲಿ ಒಟ್ಟು 10 ಹುದ್ದೆಗಳು ಖಾಲಿಯಾಗುವ ಸಾಧ್ಯತೆ ಇದೆ. ಈ ಹುದ್ದೆಗಳನ್ನು ನೇಮಕ ಮಾಡುವ ಶಿಫಾರಸುಗಳನ್ನು ನೀಡುವ ಕೊಲಿಜಿಯಂಗೆ ನೇತೃತ್ವ ವಹಿಸಿರುವ ಸೂರ್ಯಕಾಂತ್ ಅವರ ಅವಧಿಯಲ್ಲಿ ಈ ನೇಮಕಾತಿಗಳು ನಡೆಯಬೇಕಾಗಿದೆ. ಅವರ ಪೂರ್ವವರ್ತಿ, ಮಾಜಿ ಮುಖ್ಯ ನ್ಯಾಯಮೂರ್ತಿ ಭೂಷಣ್ ಆರ್. ಗವಾಯಿ ಅವರು ನವೆಂಬರ್‌ನಲ್ಲಿ ನಿವೃತ್ತರಾದರು. ಜೊತೆಗೆ ನ್ಯಾಯಮೂರ್ತಿ ರಾಜೇಶ್ ಬಿಂಡಲ್ ಅವರು ಏಪ್ರಿಲ್‌ನಲ್ಲಿ ತಮ್ಮ ಹುದ್ದೆಯಿಂದ ನಿವೃತ್ತರಾದರು ಎಂದು ತಿಳಿದುಬಂದಿದೆ.

ನ್ಯಾಯಮೂರ್ತಿ ಪಂಕಜ್ ಮಿಥಲ್ ಜೂನ್ 6 ರಂದು ನಿವೃತ್ತರಾಗಲಿದ್ದಾರೆ, ನಂತರ ನ್ಯಾಯಮೂರ್ತಿ ಜೆಕೆ ಮಹೇಶ್ವರಿ ಜೂನ್ 28 ರಂದು, ನ್ಯಾಯಮೂರ್ತಿ ಸಂಜಯ್ ಕರೋಲ್ ಆಗಸ್ಟ್ 28 ರಂದು ಮತ್ತು ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನವೆಂಬರ್ 29 ರಂದು ನಿವೃತ್ತರಾಗಲಿದ್ದಾರೆ.