ದೆಹಲಿ, ಜು. 25: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುತ್ತಿದ್ದಂತೆ (Dharmendra Pradhan Resigns) ಕಾಕ್ರೋಚ್ ಜನತಾ ಪಕ್ಷ (CJP) ತನ್ನ ಪ್ರತಿಭಟನೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂತೆಗೆದುಕೊಂಡಿದೆ. ಮನೆಗೆ ಮರಳುವಂತೆ ದೆಹಲಿಯ ಜಂತರ್ ಮಂತರ್ನಲ್ಲಿರುವ ಬೆಂಬಲಿಗರಿಗೆ ಸಿಜೆಪಿ ಸೂಚಿಸಿದೆ. ಧರ್ಮೇಂದ್ರ ಪ್ರಧಾನ್ ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ನಡೆದ ಸರ್ಕಾರ-ಸಿಜೆಪಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ಘೋಷಣೆ ಹೊರಬಿದ್ದಿದೆ. ಪ್ರಧಾನ್ ಅವರ ರಾಜೀನಾಮೆ ಸಿಜೆಪಿಯ ಪ್ರಮುಖ ಬೇಡಿಕೆಯಾಗಿತ್ತು.
ದೆಹಲಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಜತೆ ಮಾತನಾಡಿದ ಸಿಜೆಪಿ ವಕ್ತಾರರಾದ ಸೌರವ್ ದಾಸ್ ಹಾಗೂ ಆಶುತೋಷ್ ರಾಂಕ ಪ್ರತಿಭಟನೆ ಅಂತ್ಯಗೊಳಿಸುವ ನಿರ್ಧಾರ ಪ್ರಕಟಿಸಿದರು. ಸದ್ಯ ಕೇಂದ್ರ ತಮ್ಮ ಪ್ರಮುಖ ಬೇಡಿಕೆಯಾದ ಧರ್ಮೇಂದ್ರ ಪ್ರಧಾನ್ ರಾಜೀನಾಮೆಯನ್ನುಈಡೇರಿಸಿದ್ದು, ಉಳಿದ ಷರತ್ತಿಗೆ ಒಪ್ಪಿದೆ ಎಂದು ಹೇಳಿದರು. ಕೇಂದ್ರ ಸಚಿವರ ಜತೆ ಸಿಜೆಪಿ ನಾಯಕರ 3ನೇ ಸುತ್ತಿನ ಮಾತುಕತೆ ಬಳಿಕ ಈ ಮಹತ್ವದ ಬೆಳವಣಿಗೆ ಸಂಭವಿಸಿತು.
ಜಂಟಿ ಪತ್ರಿಕಾಗೋಷ್ಠಿ:
ʼʼಪ್ರತಿಭಟನಾಕಾರರ ವಿರುದ್ಧದ ದೂರು ಹಿಂಪಡೆಯಲು ಸರ್ಕಾರ ಒಪ್ಪಿಕೊಂಡಿದೆ. ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಹೇಳಿದೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಬಳಿಕ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ನಿಯಮಾನುಸಾರ ಗರಿಷ್ಠ ಪರಿಹಾರ ಒದಗಿಸಲು ಸಮ್ಮತಿಸಿದೆ. ಕೇಂದ್ರದೊಂದಿಗೆ ನಡೆದ 3 ಹಂತದ ಮಾತುಕತೆಗಳಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆʼʼ ಎಂದು ಸೌರವ್ ದಾಸ್ ಹೇಳಿದರು.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಿಂದ ಧರ್ಮೇಂದ್ರ ಪ್ರಧಾನ್ ರಾಜೀನಾಮೆವರೆಗೆ; ಯಾವಾಗ, ಏನೇನಾಯ್ತು?
ಆಶುತೋಷ್ ರಾಂಕ ಮಾತನಾಡಿ, ʼʼಪ್ರತಿಭಟನೆಯ 36 ದಿನಗಳ ಬಳಿಕ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಒಪ್ಪಿಕೊಂಡಿದೆ. ಪ್ರತಿಯೊಬ್ಬರೂ ಪ್ರತಿಭಟನಾ ಸ್ಥಳದಿಂದ ಸಮಾಧಾನದಿಂದ ಹಿಂದಿರುಗಬೇಕೆಂದು ಮನವಿ ಮಾಡುತ್ತಿದ್ದೇವೆ. ನಮ್ಮ ಬೇಡಿಕೆ ನ್ಯಾಯದಿಂದ ಕೂಡಿತ್ತುʼʼ ಎಂದು ತಿಳಿಸಿದರು.
ಜೆ.ಪಿ. ನಡ್ಡಾ ಹೇಳಿದ್ದೇನು?
ಇಲ್ಲಿಯವರೆಗೆ ದಾಖಲಾಗಿರುವ ಪ್ರತಿಭಟನಾಕಾರರ ವಿರುದ್ಧ ಎಲ್ಲ ಎಫ್ಐಆರ್ಗಳ ಪ್ರತಿಯನ್ನು ಸಿಜೆಪಿಗೆ ನೀಡಲಾಗುವುದು ಮತ್ತು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಜೆ.ಪಿ. ನಡ್ಡಾ ಹೇಳಿದರು. "ನಿಯಮಗಳ ಪ್ರಕಾರ ಸಾಧ್ಯವಾದಷ್ಟು ಗರಿಷ್ಠ ಮೊತ್ತವನ್ನು ಪರಿಹಾರವಾಗಿ ನೀಡಲಾಗುವುದು" ಎಂದರು. ಸಿಜೆಪಿ ಸರ್ಕಾರಕ್ಕೆ ಐದು ಅಂಶಗಳ ಚಾರ್ಟರ್ ಸಲ್ಲಿಸಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ನಡ್ಡಾ, "ಶಿಕ್ಷಣ ವ್ಯವಸ್ಥೆಗಳ ಸುಧಾರಣೆಗಳಿಗಾಗಿ ನೀವು ಸಲ್ಲಿಸಿರುವ ಚಾರ್ಟರ್ ಪರಿಗಣಿಸುತ್ತೇವೆ ಮತ್ತು ಈ ಬಗ್ಗೆ ಅಧ್ಯಯನ ನಡೆಸಿ ಜಾರಿಗೆ ತರಲು ಯತ್ನಿಸುತ್ತೇವೆ" ಎಂದು ಭರವಸೆ ನೀಡಿದರು.
ಒಂದು ತಿಂಗಳಿಗೂ ಹೆಚ್ಚು ಕಾಲ ನಡೆದ ಪ್ರತಿಭಟನೆಯನ್ನು ಸಿಜೆಪಿ ಕೊನೆಗೊಳಿಸಿದ್ದು, ತನ್ನ ಎಲ್ಲ ಬೇಡಿಕೆಗಳನ್ನು ಸರ್ಕಾರ ಅಂಗೀಕರಿಸಿದೆ ಎಂದು ಎಕ್ಸ್ನಲ್ಲಿ ಘೋಷಿಸಿದೆ. “ಸಿಜೆಪಿ ತನ್ನ ರಾಷ್ಟ್ರವ್ಯಾಪಿ ಆಂದೋಲನವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂತೆಗೆದುಕೊಂಡಿದೆ. ನಮ್ಮ ಎಲ್ಲ ಬೇಡಿಕೆಗಳನ್ನು ಸರ್ಕಾರ ಅಂಗೀಕರಿಸಿದೆ” ಎಂದು ತಿಳಿಸಿದೆ.
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಪ್ರಜಾಪ್ರಭುತ್ವದ ಗೆಲುವು: ಸೋನಮ್ ವಾಂಗ್ಚುಕ್ ಮೊದಲ ಪ್ರತಿಕ್ರಿಯೆ
ಸಿಜೆಪಿ ಎಕ್ಸ್ ಪೋಸ್ಟ್:
ಸಿಜೆಪಿ ಪ್ರಕಾರ ಸರ್ಕಾರ ಒಪ್ಪಿಕೊಂಡ 3 ಪ್ರಮುಖ ಬೇಡಿಕೆಗಳು:
- ನೀಟ್ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿ ಆತ್ಮಹತ್ಯೆ ಮಾಡಿಕೊಂಡ ಅಭ್ಯರ್ಥಿಗಳ ಕುಟುಂಬಗಳಿಗೆ ಗರಿಷ್ಠ ಪರಿಹಾರ.
- ಕೇಂದ್ರ ಸರ್ಕಾರ ಮತ್ತು ಎನ್ಡಿಎ ಆಡಳಿತದ ರಾಜ್ಯಗಳಲ್ಲಿನ ಎಲ್ಲ ಎಫ್ಐಆರ್ಗಳನ್ನು ಹಿಂತೆಗೆದುಕೊಳ್ಳುವುದು ಮತ್ತು ಭವಿಷ್ಯದಲ್ಲಿ ಯಾವುದೇ ಕ್ರಮ ಕೈಗೊಳ್ಳದಿರುವುದು.
- ಸಿಜೆಪಿಯ 5-ಅಂಶಗಳ ಪರೀಕ್ಷಾ ಸುಧಾರಣಾ ಚಾರ್ಟರ್ ಪರಿಶೀಲನೆ ಮತ್ತು ಈ ಸುಧಾರಣೆಗಳ ಬಗ್ಗೆ ಮತ್ತಷ್ಟು ಚರ್ಚಿಸಲು ಸಿಜೆಪಿಯೊಂದಿಗೆ ಸಭೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.