ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವೋಟ್‌ ಚೋರಿ ನೆಪದಲ್ಲಿ ಸುಳ್ಳು ಸಂಕಥನ ಸೃಷ್ಟಿ; ಕಾಂಗ್ರೆಸ್‌ ವಿರುದ್ಧ ಗುಡುಗಿದ ಎಚ್.ಡಿ. ದೇವೇಗೌಡ

HD Deve Gowda: ಮತದಾರರ ಪಟ್ಟಿಯಲ್ಲಿನ ಲೋಪಗಳನ್ನು ಪ್ರಸ್ತಾಪಿಸಿಯೂ ಕಾಂಗ್ರೆಸ್ ಪಕ್ಷವು ಇತ್ತೀಚಿಗೆ ಬಿಹಾರ ಚುನಾವಣೆಯಲ್ಲಿ ಸೋಲು ಎದುರಿಸಿತು. ಮತದಾರರ ಪಟ್ಟಿಯ ಕೂಲಂಕಷ ಪರಿಶೀಲನೆಯ ನಂತರವೂ ಆ ರಾಜ್ಯದಲ್ಲಿ ಏನಾಯಿತು ಎಂಬುದನ್ನು ಸ್ವತಃ ಪ್ರತಿಪಕ್ಷ ನಾಯಕರು ಆಲೋಚಿಸಬೇಕು ಎಂದು ಕೈ ನಾಯಕರ ವಿರುದ್ಧ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಕಿಡಿಕಾರಿದ್ದಾರೆ.

ವೋಟ್‌ ಚೋರಿ ನೆಪದಲ್ಲಿ ಸುಳ್ಳು ಸಂಕಥನ ಸೃಷ್ಟಿ: ಎಚ್.ಡಿ. ದೇವೇಗೌಡ

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ -

Prabhakara R
Prabhakara R Dec 15, 2025 9:17 PM

ನವದೆಹಲಿ, ಡಿ.15: ವೋಟ್‌ ಚೋರಿ ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಹಾಗೂ ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ಸುಳ್ಳಿನ ಸಂಕಥನ ಸೃಷ್ಟಿಸುತ್ತಿರುವ ಪ್ರತಿಪಕ್ಷಗಳು ಭವಿಷ್ಯದಲ್ಲಿ ಘೋರ ಪರಿಣಾಮ ಅನುಭವಿಸುತ್ತವೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು (HD Deve Gowda) ಗಂಭೀರ ಎಚ್ಚರಿಕೆ ನೀಡಿದರು. ವೋಟ್‌ ಚೋರಿ ಕುರಿತು ರಾಜ್ಯಸಭೆಯಲ್ಲಿ (Parliament Winter session) ಸೋಮವಾರ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಪ್ರಧಾನಿಗಳು, ಪ್ರತಿಪಕ್ಷಗಳು ನಿರಂತರವಾಗಿ ಸುಳ್ಳಿನ ಕಥೆಗಳನ್ನು ಪ್ರಚಾರ ಮಾಡುತ್ತಾ ಹೋದರೆ, ಮತದಾರರ ಮನಸ್ಸಿನಲ್ಲಿ ಅನುಮಾನಗಳನ್ನು ಹುಟ್ಟು ಹಾಕಿದರೆ ಅದರಿಂದ ಪ್ರತಿಪಕ್ಷಗಳಿಗೆ ಒಳ್ಳೆಯದು ಮಾಡುವುದಿಲ್ಲ ಎಂದು ಹೇಳಿದರು.

ಪ್ರತಿಪಕ್ಷಗಳು ಪ್ರಧಾನಿಯವರ ಬಗ್ಗೆ ಹಾದಿಬೀದಿಗಳಲ್ಲಿ ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಕಟ್ಟದ್ದಾಗಿ ಟೀಕೆ ಮಾಡುತ್ತಿರುವ ಬಗ್ಗೆ ಮಾಜಿ ಪ್ರಧಾನಿಗಳು ಹರಿಹಾಯ್ದರು. "ನಮ್ಮದು ಬಹಳ ದೊಡ್ಡ ರಾಷ್ಟ್ರ. ಕಾಂಗ್ರೆಸ್ ಪಕ್ಷವು ಮೂರು ರಾಜ್ಯಗಳಲ್ಲಿ ಅಧಿಕಾರದಲ್ಲಿ ಇರಬಹುದು. ನನ್ನ ಪ್ರತಿಪಕ್ಷ ಸ್ನೇಹಿತರೇ ದಯವಿಟ್ಟು ನೆನಪಿಡಿ 'ವೋಟ್ ಚೋರಿ' ಎಂಬ ಪದಗಳನ್ನು ಬಳಸುವುದರಿಂದ ನೀವು ಮುಂಬರುವ ದಿನಗಳಲ್ಲಿ ತೊಂದರೆ ಅನುಭವಿಸುತ್ತೀರಿ. ನೀವು ಯುದ್ಧದಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ದೇವೇಗೌಡರು ಕಟುವಾದ ಶಬ್ದಗಳಲ್ಲಿ ಹೇಳಿದರು.

ʼವೋಟ್ ಚೋರಿʼ ಎಂಬ ಅಪಪ್ರಚಾರದ ಮೂಲಕ ನರೇಂದ್ರ ಮೋದಿ ಅವರ ನಾಯಕತ್ವವನ್ನು ದೂಷಿಸುವ ಮೂಲಕ ಮತ್ತು ಮತದಾರರ ಮನಸ್ಸಿನಲ್ಲಿ ಅನುಮಾನವನ್ನು ಸೃಷ್ಟಿಸುವ ಮೂಲಕ ಪ್ರತಿಪಕ್ಷಗಳು ಏನು ಗಳಿಸಲಿವೆ ಎಂದು ಪ್ರಶ್ನಿಸಿದ ಮಾಜಿ ಪ್ರಧಾನಿಗಳು, ನಿಮ್ಮ ಮನಸ್ಸಿಗೆ ಏನಾಗಿದೆ? ಏನಾದರೂ ಸಮಸ್ಯೆ ಇದ್ದರೆ ಸರಿಪಡಿಸಿಕೊಳ್ಳಿ ಎಂದು ಪ್ರತಿಪಕ್ಷದವರಿಗೆ ಕಿವಿಮಾತು ಹೇಳಿದರು.

ಎನ್‌ಡಿಎ ಜತೆ ಯಾವುದೇ ಕಾರಣಕ್ಕೂ ಮೈತ್ರಿ ಕಡಿದುಕೊಳ್ಳಲ್ಲ: ಎಚ್.ಡಿ. ದೇವೇಗೌಡ

ನಾನು ಏಳು ದಶಕಗಳಿಗೂ ಹೆಚ್ಚಿನ ಸಾರ್ವಜನಿಕ ಜೀವನದಲ್ಲಿ ಚುನಾವಣೆಯಲ್ಲಿ ಸೋಲು ಗೆಲುವನ್ನು ಎದುರಿಸಿದ್ದೇನೆ. ನಾನು ಎಂದಿಗೂ ಮತಗಳ್ಳತನದ ಅಂತಹ ವಿಷಯಗಳನ್ನು ಹೇಳಲಿಲ್ಲ ಎಂದು ಮಾಜಿ ಪ್ರಧಾನಿಗಳು ಒತ್ತಿ ಹೇಳಿದರು.

ಕೇರಳದಲ್ಲಿ 18,000 ಮತದಾರರ ಸೇರ್ಪಡೆಗೆ ಸಂಬಂಧಿಸಿದಂತೆ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಬರೆದ ಪತ್ರವನ್ನು ಅವರು ಉಲ್ಲೇಖಿಸಿದರು. "ನಾನು ಇದನ್ನು ಏಕೆ ಹೇಳುತ್ತಿದ್ದೇನೆಂದರೆ ನೆಹರು ಅವಧಿಯಲ್ಲಿಯೂ ಸಹ ಚುನಾವಣಾ ವ್ಯವಸ್ಥೆಯಲ್ಲಿ ಕೆಲವು ಲೋಪಗಳು ಇದ್ದವು ಎಂಬುದಾಗಿ ಜೂನ್ 1, 1996 ಮತ್ತು ಏಪ್ರಿಲ್ 21, 1997ರ ನಡುವೆ ಪ್ರಧಾನಿಯಾಗಿದ್ದ ದೇವೇಗೌಡರು ಹೇಳಿದರು.

ಮತದಾರರ ಪಟ್ಟಿಯಲ್ಲಿನ ಲೋಪಗಳನ್ನು ಪ್ರಸ್ತಾಪಿಸಿಯೂ ಕಾಂಗ್ರೆಸ್ ಪಕ್ಷವು ಇತ್ತೀಚಿಗೆ ಬಿಹಾರ ಚುನಾವಣೆಯಲ್ಲಿ ಸೋಲು ಎದುರಿಸಿತು. ಮತದಾರರ ಪಟ್ಟಿಯ ಕೂಲಂಕಷ ಪರಿಶೀಲನೆಯ ನಂತರವೂ ಆ ರಾಜ್ಯದಲ್ಲಿ ಏನಾಯಿತು ಎಂಬುದನ್ನು ಸ್ವತಃ ಪ್ರತಿಪಕ್ಷ ನಾಯಕರು ಆಲೋಚಿಸಬೇಕು. ಆ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಆರು ಶಾಸಕರು ಸಿಕ್ಕಿದ್ದಾರೆ ಎಂದು ಮಾಜಿ ಪ್ರಧಾನಿಗಳು ಕಟುವಾಗಿ ಟೀಕಿಸಿದರು.

ಮತದಾರರ ಪಟ್ಟಿಯ ಪರಿಷ್ಕರಣೆ ಬಗ್ಗೆ ಪ್ರಧಾನಿಗಳ ವಿರುದ್ಧ ಪ್ರತಿಪಕ್ಷಗಳು ಆರೋಪಗಳನ್ನು ಮಾಡಲು ಅವರು ಏಕೆ ಬಯಸುತ್ತಾರೆ ಎಂದು ಖಾರವಾಗಿ ಪ್ರಶ್ನಿಸಿದ ದೇವೇಗೌಡರು; ದೇಶದಲ್ಲಿ ಚುನಾವಣಾ ಆಯೋಗವಿದೆ, ಸುಪ್ರೀಂ ಕೋರ್ಟ್ ಇದೆ. ಈ ಎಲ್ಲ ವಿಷಯಗಳನ್ನು ಸರಿಪಡಿಸಲು ಚುನಾವಣಾ ಆಯೋಗವು ಎಲ್ಲಾ ರಾಜ್ಯ ಘಟಕಗಳಿಗೆ ನಿರ್ದೇಶನ ನೀಡಿದೆ ಎಂದು ಅವರು ಒತ್ತಿ ಹೇಳಿದರು.

ಮನುವಾದಕ್ಕೂ ಭಗವದ್ಗೀತೆಗೂ ಏನು ಸಂಬಂಧ?; ಸಿಎಂ ಸಿದ್ದರಾಮಯ್ಯಗೆ ಎಚ್‌ಡಿಕೆ ತಿರುಗೇಟು

ರಾಷ್ಟ್ರದ ಜನರು ನರೇಂದ್ರ ಮೋದಿ ಅವರ ಸರಕಾರದ ಮೇಲೆ ಸಂಪೂರ್ಣ ವಿಶ್ವಾಸ ಹೊಂದಿದ್ದಾರೆ ಮತ್ತು ಮುಂದಿನ ಲೋಕಸಭೆ ಚುನಾವಣೆಯ ನಂತರವೂ ಅವರು ಮತ್ತೆ ಅಧಿಕಾರಕ್ಕೆ ಬರುತ್ತಾರೆ ಎಂದು ದೇವೇಗೌಡರು ಭವಿಷ್ಯ ನುಡಿದರು.