Covid 19: ದೇಶದಾದ್ಯಂತ ಕೋವಿಡ್ 19 ಕೇಸ್ ಹೆಚ್ಚಳ; ಕಟ್ಟೆಚ್ಚರ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ
ದೇಶದಾದ್ಯಂತ ಕೋವಿಡ್ 19 (Covid 19) ಕೇಸ್ಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಕೇರಳ, ತಮಿಳುನಾಡು, ಮಹಾರಾಷ್ಟ್ರ ಮತ್ತು ಕರ್ನಾಟಕ ಸೇರಿದಂತೆ ರಾಜ್ಯಗಳಲ್ಲಿ ಹೊಸ ಸೋಂಕುಗಳ ಹೆಚ್ಚಳ ಕಂಡುಬಂದಿದೆ. ದೇಶದಾದ್ಯಂತ ಮುನ್ನೆಚ್ಚರಿಕೆ ವಹಿಸಲು ಆರೋಗ್ಯ ಇಲಾಖೆ ಸೂಚನೆಯನ್ನು ನೀಡಿದೆ.


ನವದೆಹಲಿ: ದೇಶದಾದ್ಯಂತ ಕೋವಿಡ್ 19 (Covid 19) ಕೇಸ್ಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಕೇರಳ, ತಮಿಳುನಾಡು, ಮಹಾರಾಷ್ಟ್ರ ಮತ್ತು ಕರ್ನಾಟಕ ಸೇರಿದಂತೆ ರಾಜ್ಯಗಳಲ್ಲಿ ಹೊಸ ಸೋಂಕುಗಳ ಹೆಚ್ಚಳ ಕಂಡುಬಂದಿದೆ. ದೇಶದಾದ್ಯಂತ ಮುನ್ನೆಚ್ಚರಿಕೆ ವಹಿಸಲು ಆರೋಗ್ಯ ಇಲಾಖೆ ಸೂಚನೆಯನ್ನು ನೀಡಿದೆ. ದೆಹಲಿ, ನೋಯ್ಡಾ, ಹೈದರಾಬಾದ್, ಬೆಂಗಳೂರು, ಥಾಣೆ, ಇಂದೋರ್ ಮತ್ತು ಋಷಿಕೇಶಗಳಲ್ಲಿ ಸೌಮ್ಯ ಸೋಂಕುಗಳು ವರದಿಯಾಗಿವೆ. ಈಗಾಗಲೇ ಆಂಧ್ರಪ್ರದೇಶದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು
ಕಡ್ಡಾಯಗೊಳಿಸಲಾಗಿದೆ.
ಗುಜರಾತ್ನಲ್ಲಿ 15, ಹರಿಯಾಣದ ಗುರುಗ್ರಾಮ್ ಹಾಗೂ ಫರಿದಾಬಾದ್ನಲ್ಲಿ ತಲಾ ಮೂರು ಪ್ರಕರಣಗಳು ಪತ್ತೆಯಾಗಿದ್ದು, ಕೇರಳದಲ್ಲಿ 182 ಕರ್ನಾಟಕದಲ್ಲಿ 40 ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ದಕ್ಷಿಣ ಏಷ್ಯಾದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳಕ್ಕೆ JN.1 ರೂಪಾಂತರದ ವೈರಸ್ ಕಾರಣ ಎಂದು ತಿಳಿದು ಬಂದಿದೆ. ಈ ಬಾರಿಯ ಕೊರೋನಾದ ಲಕ್ಷಣ ಅಷ್ಟೇನು ತೀವೃವಾಗಿರುವುದಿಲ್ಲ. ಜ್ವರ, ಮೂಗು ಸೋರುವಿಕೆ, ಗಂಟಲು ನೋವು, ತಲೆನೋವು, ಆಯಾಸ, ಬಳಲಿಕೆ ಮುಂತಾದ ಲಕ್ಷಣಗಳು ಸೇರಿವೆ. ಪ್ರಸ್ತುತ, ಕೋವಿಡ್-19 ಪರಿಸ್ಥಿತಿಯು ಹತೋಟಿಯಲ್ಲಿದ್ದು ಸಾರ್ವಜನಿಕರು ಅನಗತ್ಯ ಭಯಪಡುವ ಅಗತ್ಯವಿಲ್ಲ, ಆದರೆ ಎಚ್ಚರಿಕೆಯನ್ನು ವಹಿಸುವುದು ಅಗತ್ಯವಾಗಿದೆ. ಆದಾಗ್ಯೂ, ಸಾರ್ವಜನಿಕರು ಅದರಲ್ಲೂ ವಿಶೇಷವಾಗಿ ಗರ್ಭಿಣಿಯರು, ಮಕ್ಕಳು ಹಾಗೂ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಮುಂಜಾಗ್ರತಾ ಕ್ರಮವಾಗಿ ಜನನಿಬಿಡ ಪ್ರದೇಶಗಳಿಗೆ ತೆರಳುವಾಗ ಮಾಸ್ಕ್ ಧರಿಸುವುದು ಸೂಕ್ತವಾಗಿದೆ. ಸ್ವಚ್ಛತೆ, ಹ್ಯಾಂಡ್ ಸ್ಯಾನಿಟೈಸರ್ನ ಬಳಕೆ ಇತ್ಯಾದಿಗಳನ್ನು ಪಾಲಿಸುವುದು ಅಗತ್ಯವಾಗಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಸರ್ಕಾರವು ಆಸ್ಪತ್ರೆಗಳಲ್ಲಿ ಹಾಸಿಗೆಗಳು, ಆಮ್ಲಜನಕ ಸಿಲಿಂಡರ್ಗಳು, ಪರೀಕ್ಷಾ ಕಿಟ್ಗಳು ಮತ್ತು ಲಸಿಕೆಗಳ ಲಭ್ಯತೆಯನ್ನು ಕಾಯ್ದುಕೊಳ್ಳುವಂತೆ ನಿರ್ದೇಶಿಸಿದೆ. ಮೇ ತಿಂಗಳಲ್ಲಿ 273 ಕೋವಿಡ್ ಸೋಂಕುಗಳು ದಾಖಲಾಗಿದ್ದು, ಗರಿಷ್ಠ ಪ್ರಕರಣಗಳು ವರದಿಯಾಗಿವೆ, ಆದ್ದರಿಂದ ಆರೋಗ್ಯ ಸಚಿವರು ಎಲ್ಲಾ ಜಿಲ್ಲೆಗಳಲ್ಲಿ ಕಣ್ಗಾವಲು ಹೆಚ್ಚಿಸುವಂತೆ ನಿರ್ದೇಶನ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ: Corona Virus: ರಾಜ್ಯಕ್ಕೆ ಕೋವಿಡ್ ಕಂಟಕ; ಮತ್ತೆ ಇಬ್ಬರಿಗೆ ಸೋಂಕು ದೃಢ, 40 ಕ್ಕೇರಿದ ಪ್ರಕರಣ
ಕೊರೋನಾಗೆ ಈ ವರೆಗೆ ಮಹಾರಾಷ್ಟ್ರದ ಥಾಣೆಯಲ್ಲಿ ಒಬ್ಬರು ಮೃತಪಟ್ಟಿದ್ದರೆ, ಕರ್ನಾಟಕದಲ್ಲಿ 84 ವರ್ಷದ ವೃದ್ಧರು ಮೃತಪಟ್ಟಿದ್ದಾರೆ. ಇದುವರೆಗೆ ದೇಶದಲ್ಲಿ 257 ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳು ವರದಿಯಾಗಿವೆ. ದೆಹಲಿ ಸರ್ಕಾರವು ಕೋವಿಡ್ ಸಲಹೆಯನ್ನು ಹೊರಡಿಸಿದ್ದು, ಹಾಸಿಗೆಗಳು, ಆಮ್ಲಜನಕ, ಔಷಧಿಗಳು ಮತ್ತು ಲಸಿಕೆಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವಂತೆ ಆಸ್ಪತ್ರೆಗಳಿಗೆ ನಿರ್ದೇಶನ ನೀಡಿದೆ.