ಚೆನ್ನೈ: ಶ್ರೀಲಂಕಾ (srilanka), ತಮಿಳುನಾಡಿನ (tamilnadu) ಕೆಲವು ಭಾಗಗಳಲ್ಲಿ ಆತಂಕ ಮೂಡಿಸಿರುವ ದಿತ್ವಾ ಚಂಡಮಾರುತದ (Cyclone Ditwah) ಬಿರುಗಾಳಿ (storm) ದುರ್ಬಲಗೊಂಡಿದ್ದು, ಆಳವಾದ ವಾಯುಭಾರ ಕುಸಿತವಾಗಿ (Air pressure drop) ಪರಿವರ್ತನೆಯಾಗುವ ಸಾಧ್ಯತೆ ಇದೆ. ಇದರಿಂದ ತಮಿಳುನಾಡಿನಲ್ಲಿ ಹೆಚ್ಚಿನ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (India Meteorological Department) ಮುನ್ಸೂಚನೆ ನೀಡಿದೆ. ಸೋಮವಾರ ಮಧ್ಯಾಹ್ನದ ವೇಳೆಗೆ ದಿತ್ವಾ ಚಂಡಮಾರುತ ಉತ್ತರ ತಮಿಳುನಾಡು-ಪುದುಚೇರಿ ಕರಾವಳಿಯಲ್ಲಿ ಉತ್ತರಕ್ಕೆ ಚಲಿಸುವ ನಿರೀಕ್ಷೆಯಿದೆ. ಇದರಿಂದಾಗಿ ಬಿರುಗಾಳಿ ಮತ್ತಷ್ಟು ದುರ್ಬಲವಾಗಲಿದೆ ಎನ್ನಲಾಗಿದೆ.
ನೈಋತ್ಯ ಬಂಗಾಳಕೊಲ್ಲಿಯಲ್ಲಿ ಆಳವಾದ ವಾಯುಭಾರ ಕುಸಿತದಿಂದಾಗಿ ದಿತ್ವಾ ಚಂಡಮಾರುತವು ದುರ್ಬಲಗೊಂಡಿದ್ದು, ಗಂಟೆಗೆ 10 ಕಿ.ಮೀ ವೇಗದಲ್ಲಿ ಉತ್ತರಕ್ಕೆ ಸಾಗುತ್ತಲಿದೆ. ಇದು ಸೋಮವಾರ ಮಧ್ಯಾಹ್ನದ ವೇಳೆಗೆ ಮತ್ತಷ್ಟು ದುರ್ಬಲಗೊಳ್ಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ.
ವಾಯುಭಾರ ಕುಸಿತದ ಕೇಂದ್ರವು ಮುಂಜಾನೆ ೨ ಗಂಟೆಗೆ ಉತ್ತರ ತಮಿಳುನಾಡು-ಪುದುಚೇರಿ ಕರಾವಳಿಯಿಂದ ಸುಮಾರು 50 ಕಿ.ಮೀ ದೂರದಲ್ಲಿತ್ತು. ಹೀಗಾಗಿ ಉತ್ತರ ತಮಿಳುನಾಡು, ಪುದುಚೇರಿ ಮತ್ತು ದಕ್ಷಿಣ ಆಂಧ್ರಪ್ರದೇಶ ಕರಾವಳಿಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ದಿತ್ವಾ ಚಂಡಮಾರುತದ ಪರಿಣಾಮ ಈಗಾಗಲೇ ತಮಿಳುನಾಡಿನಲ್ಲಿ ಉಂಟಾದ ಮಳೆಯಿಂದಾಗಿ ಮೂವರು ಸಾವನ್ನಪ್ಪಿದ್ದಾರೆ.
ಹೇಗಿದೆ ಚಂಡಮಾರುತದ ಪರಿಸ್ಥಿತಿ?
ದಿತ್ವಾ ಚಂಡಮಾರುತವು ನೈಋತ್ಯ ಬಂಗಾಳಕೊಲ್ಲಿಯಲ್ಲಿ ದುರ್ಬಲಗೊಂಡು ಆಳವಾದ ವಾಯುಭಾರ ಕುಸಿತಕ್ಕೆ ಒಳಗಾಗಿದೆ. ಕಳೆದ 6 ಗಂಟೆಗಳಲ್ಲಿ ಗಂಟೆಗೆ 10 ಕಿ.ಮೀ ವೇಗದಲ್ಲಿದ್ದ ಚಂಡಮಾರುತ ಉತ್ತರಕ್ಕೆ ಚಲಿಸಿ ಭಾನುವಾರ ರಾತ್ರಿ 11.30ರವರೆಗೆ ಅದೇ ಪ್ರದೇಶದಲ್ಲಿತ್ತು. ಚೆನ್ನೈ ನಿಂದ ಸುಮಾರು 90 ಕಿ.ಮೀ ಆಗ್ನೇಯಕ್ಕೆ, ಪುದುಚೇರಿಯಿಂದ 90 ಕಿ.ಮೀ ಪೂರ್ವ ಮತ್ತು ಆಗ್ನೇಯದಲ್ಲಿ, ಕಡಲೂರಿನಿಂದ 110 ಕಿ.ಮೀ ಪೂರ್ವ ಮತ್ತು ಈಶಾನ್ಯದಲ್ಲಿ ಕಾರೈಕಲ್ ನಿಂದ 180 ಕಿ.ಮೀ ಈಶಾನ್ಯದಲ್ಲಿ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ವಾಯುಭಾರ ಕುಸಿತವು ಉತ್ತರ ತಮಿಳುನಾಡು ಮತ್ತು ಪುದುಚೇರಿ ಕರಾವಳಿಯಲ್ಲಿ ಬಹುತೇಕ ಉತ್ತರಕ್ಕೆ ಚಲಿಸುವ ನಿರೀಕ್ಷೆಯಿದೆ. ಇದು ಸೋಮವಾರ ನೈಋತ್ಯ ಬಂಗಾಳಕೊಲ್ಲಿಯಲ್ಲಿ ಕನಿಷ್ಠ 30 ಕಿ.ಮೀ ದೂರದಲ್ಲೇ ಇರುವ ಸಾಧ್ಯತೆ ಇದೆ.
ವಾಯುಭಾರ ಕುಸಿತದ ಪರಿಣಾಮದಿಂದ ತಿರುವಲ್ಲೂರು, ಕಾಂಚೀಪುರಂ, ಚೆನ್ನೈ, ಚೆಂಗಲ್ಪಟ್ಟು, ವೆಲ್ಲೂರು ಮತ್ತು ರಾಣಿಪೇಟೆ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ಪ್ರದೇಶದಾದ್ಯಂತ ಕೆಲವು ಸ್ಥಳಗಳಲ್ಲಿ ಹಗುರ ಮಳೆಯ ನಿರೀಕ್ಷೆ ಇದೆ. ಮಳೆಯೊಂದಿಗೆ ಗುಡುಗು ಮತ್ತು ಮಿಂಚು ಕೂಡ ಕಾಣಿಸಿಕೊಳ್ಳಲಿದೆ ಎಂದು ಚೆನ್ನೈ ಹವಾಮಾನ ಕೇಂದ್ರ ತಿಳಿಸಿದೆ.
ತಮಿಳುನಾಡಿನ ಉತ್ತರ ಕರಾವಳಿ ಭಾಗಗಳು, ಪುದುಚೇರಿ ಮತ್ತು ಕಾರೈಕಲ್ ಪ್ರದೇಶಗಳಲ್ಲಿ ಗಂಟೆಗೆ 60- 70 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ತಮಿಳುನಾಡಿನ ದಕ್ಷಿಣ ಕರಾವಳಿ ಭಾಗದಲ್ಲಿ ಗಂಟೆಗೆ 55- 65 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ.
ಆಂಧ್ರಪ್ರದೇಶ ಮತ್ತು ರಾಯಲಸೀಮಾ ಪ್ರದೇಶದ ಹೆಚ್ಚಿನ ಭಾಗದಲ್ಲಿ ಸಾಮಾನ್ಯ ಮಳೆಯಾಗಲಿದ್ದು, ಆಂಧ್ರಪ್ರದೇಶದ ಉತ್ತರ ಕರಾವಳಿಯಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಒಡಿಶಾದ ಕೆಲವು ಭಾಗಗಳಲ್ಲಿ ಹಗುರ, ಇನ್ನು ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ.
ಶ್ರೀಲಂಕಾದಲ್ಲಿ ಏನಾಗಿದೆ?
ಶ್ರೀಲಂಕಾದಲ್ಲಿ ಚಂಡಮಾರುತದಿಂದ 334 ಮಂದಿ ಸಾವನ್ನಪ್ಪಿದ್ದು, 400 ಜನರು ನಾಪತ್ತೆಯಾಗಿದ್ದಾರೆ. 1.3 ಮಿಲಿಯನ್ಗಿಂತಲೂ ಹೆಚ್ಚು ಜನರು ಸಂಕಷ್ಟದಲ್ಲಿದ್ದಾರೆ ಎಂದು ವಿಪತ್ತು ನಿರ್ವಹಣಾ ಕೇಂದ್ರ ತಿಳಿಸಿದೆ.
LPG Price Cut: ಎಲ್ಪಿಜಿ ಸಿಲಿಂಡರ್ ಬೆಲೆ 10 ರೂ. ಇಳಿಕೆ, ಬೆಂಗಳೂರಿನಲ್ಲಿ ಎಷ್ಟಿದೆ ನೋಡಿ
ಶ್ರೀಲಂಕಾದಲ್ಲಿರುವ ಕೊಲಂಬೊದ ಬಂಡರನಾಯಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರತೀಯ ಪ್ರಯಾಣಿಕರನ್ನು ಆಪರೇಷನ್ ಸಾಗರ್ ಬಂಧು ಅಡಿಯಲ್ಲಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ವಿಪತ್ತು ಪರಿಹಾರ ಸಾಮಗ್ರಿಗಳನ್ನು ಹೊತ್ತುಕೊಂಡು ಭಾರತೀಯ ವಾಯುಪಡೆಯ ಮತ್ತೊಂದು ವಿಮಾನ ಭಾನುವಾರ ಕೊಲಂಬೊಗೆ ತೆರಳಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ತಿಳಿಸಿದ್ದಾರೆ.
ಕೆಲವು ಶಾಲೆಗಳಿಗೆ ರಜೆ ?
ತಮಿಳುನಾಡು ಮತ್ತು ಪುದುಚೇರಿಯಲ್ಲಿ ಕೆಲವು ಶಾಲೆಗಳನ್ನು ಮುಚ್ಚಲಾಗಿದೆ. ಈ ಕುರಿತು ನಿಖರ ಮಾಹಿತಿಗಾಗಿ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಸಂಸ್ಥೆಗಳನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ. ಪುದುಚೇರಿಯ ನಾಲ್ಕು ಪ್ರದೇಶಗಳಲ್ಲಿನ ಎಲ್ಲಾ ಖಾಸಗಿ ಮತ್ತು ಸರ್ಕಾರಿ ಅನುದಾನಿತ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗಿದೆ.