ಚಂಡೀಗಢ, ನ. 26: ದೆಹಲಿ ಬಾಂಬ್ ಸ್ಫೋಟ (Delhi Blast), ಹರಿಯಾಣದ ಫರಿದಾಬಾದ್ನಲ್ಲಿ ಸುಮಾರು 2,900 ಕೆಜಿ ಸ್ಫೋಟಕ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ತನಿಖೆ ವೇಗವಾಗಿ ಸಾಗುತ್ತಿದ್ದು, ಮಹತ್ವದ ವಿವರ ಹೊರ ಬೀಳುತ್ತಿದೆ. ಅನುಮಾನದ ಮೇರೆಗೆ ಫರಿದಾಬಾದ್ನ ಅಲ್ ಫಲಾಹ್ ವಿಶ್ವ ವಿದ್ಯಾನಿಲಯದಲ್ಲಿ (Al Falah University) ತನಿಖೆ ನಡೆಸಲಾಗುತ್ತಿದೆ. ಇದೀಗ ತನಿಖೆಯ ದಿಕ್ಕು ಈ ವಿವಿಯ ಕೇವಲ 900 ಮೀಟರ್ ದೂರಲ್ಲಿರುವ ಮದ್ರಸಾದತ್ತ ತಿರುಗಿದೆ. ಮದ್ರಸಾದ ನೆಲ ಮಳಿಗೆಯನ್ನು ತನಿಖಾಧಿಕಾರಿಗಳು ಶೋಧಿಸಿದ್ದು, ಪ್ರಕರಣದ ಸಂಚು ಹೊರ ಬೀಳುವ ಸಾಧ್ಯತೆ ಇದೆ.
ಈ ಮದ್ರಸಾ ಫರಿದಾಬಾದ್ನ ದೌಜ್ ಗ್ರಾಮದ ನಿರ್ಜನ ಪ್ರದೇಶದಲ್ಲಿದೆ. 4,000-5,000 ಚದರ ಅಡಿಯಲ್ಲಿ ಹರಡಿರುವ ಮದ್ರಸಾದ ರಚನೆಯೇ ನಿಗೂಢವಾಗಿದ್ದು, ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಮದ್ರಸಾದ ಸುಮಾರು 7 ಅಡಿಯಲ್ಲಿ ನೆಳ ಮಾಳಿಗೆ ಇದ್ದು, ಇದರ ರಹಸ್ಯ ಹೊರ ತೆಗೆಯಲು ಅಧಿಕಾರಿಗಳು ಮುಂದಾಗಿದ್ದಾರೆ.
ಮದ್ರಸಾದ 3 ಅಡಿ ಎತ್ತರದ ಸಣ್ಣ ರಚನೆ ಮಾತ್ರ ನೆಲದ ಮೇಲೆ ಗೋಚರವಾಗುತ್ತದೆ. ಸುತ್ತಲಿನ ಗೋಡೆಗಳು ತುಂಬಾ ದಪ್ಪವಾಗಿದ್ದು, ಹೊರಗಿನ ಜಗತ್ತಿನಿಂದ ಅಂತರ ಕಾಯ್ದುಕೊಂಡಿದೆ. ಸಾಮಾನ್ಯ ಮದ್ರಸಾಕ್ಕಿಂತ ತೀರಾ ಭಿನ್ನ ರೀತಿಯಲ್ಲಿ ಇದನ್ನು ಕಟ್ಟಲಾಗಿದ್ದು, ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ.
ಆಸ್ತಿ ಯಾರ ಹೆಸರಿನಲ್ಲಿದೆ?
ಮದ್ರಸಾದ ಆಸ್ತಿಯನ್ನು ಮೌಲಾನಾ ಇಶ್ತೆಯಾಕ್ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಈತ ನವೆಂಬರ್ 10ರಂದು ಕೆಂಪು ಕೋಟೆ ಬಳಿ ಸ್ಫೋಟ ನಡೆಸಿದ ಆತ್ಮಹತ್ಯಾ ಬಾಂಬರ್ ಉಮರ್ ಉನ್-ನಬಿಯ ಸಹಚರರಲ್ಲಿ ಒಬ್ಬನಾದ ಮುಜಮ್ಮಿಲ್ ಶಕೀಲ್ಗೆ ರೂಮ್ ಬಾಡಿಗೆಗೆ ನೀಡಿದ್ದ. ಈಗಾಗಲೇ ಮೌಲಾನಾ ಇಶ್ತೆಯಾಕ್ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ವಶಕ್ಕೆ ಪಡೆದಿದೆ.
ಮದ್ರಸಾದ ಹಣಕಾಸಿನ ಮೂಲ, ಅದಕ್ಕೆ ಕೊಡುಗೆ ನೀಡಿದವರು ಹೀಗೆ ಎಲ್ಲ ಆಯಾಮದಲ್ಲಿಯೂ ತನಿಖೆ ನಡೆಸಲಾಗುತ್ತಿದೆ. ಮುಜಮ್ಮಿಲ್ ಈ ಮದ್ರಸಾಕ್ಕೆ ಕೊಡುಗೆ ನೀಡಿದವರಲ್ಲಿ ಒಬ್ಬ ಎನ್ನುವುದು ಈಗಾಗಲೇ ಗೊತ್ತಾಗಿದೆ. ಈ ಮದ್ರಸಾಕ್ಕೆ ಮಕ್ಕಳು ಭೇಟಿ ನೀಡುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ತನಿಖಾ ಸಂಸ್ಥೆಯ ಅಧಿಕಾರಿಗಳು ಮತ್ತು ಫರಿದಾಬಾದ್ ಪೊಲೀಸರು ಈಗಾಗಲೇ ಮದ್ರಸಾವನ್ನು ಕೂಲಂಕುಷವಾಗಿ ಪರಿಶೀಲಿಸಿದ್ದಾರೆ.
ಮೌಲಾನಾ ಇಶ್ತಿಯಾಕ್ ಕುಟುಂಬವು ಈಗಾಗಲೇ ಉಗ್ರ ಮುಜಮ್ಮಿಲ್ ಶಕೀಲ್ಗೆ ತಮ್ಮ ಮನೆಯನ್ನು ಬಾಡಿಗೆಗೆ ನೀಡಿರುವುದಾಗಿ ಒಪ್ಪಿಕೊಂಡಿದೆ. ಅದಾಗ್ಯೂ ಇಶ್ತಿಯಾಕ್ ನಿರಪರಾಧಿ ಎಂದು ಹೇಳಿಕೊಂಡಿದೆ. ಮುಜಮ್ಮಿಲ್ ಶಕೀಲ್ ತಮಗೆ ಮೊದಲೇ ಪರಿಚಯವಿರಲಿಲ್ಲವೆಂದೂ, ಸಾಮಾನ್ಯ ಬಾ ಡಿಗೆದಾರನೆಂದು ಪರಿಗಣಿಸಿ ರೂಮ್ ನೀಡಿದ್ದಾಗಿ ತಿಳಿಸಿದೆ.
ಆ 3 ಗಂಟೆಯ ರಹಸ್ಯ; ದೆಹಲಿ ಸ್ಫೋಟಕ್ಕೂ ಮುನ್ನ ಕಾರು ನಿಲ್ಲಿಸಿ ಬಾಂಬರ್ ಮಾಡಿದ್ದೇನು?
ಅಲ್ ಫಲಾಹ್ ವಿಶ್ವ ವಿದ್ಯಾನಿಲಯ ಉಗ್ರರ ನೆಲೆ?
ಈಗಾಗಲೇ ಪೊಲೀಸರು ವಶಕ್ಕೆ ಪಡೆದಿರುವ ಬಹುತೇಕ ಉಗ್ರರು ಅಲ್ ಫಲಾಹ್ ವಿಶ್ವ ವಿದ್ಯಾನಿಲಯದೊಂದಿಗೆ ಸಂಬಂಧ ಹೊಂದಿದವರು. ಈಗಾಗಲೇ ವೈಟ್ ಕಾಲರ್ ಟೆರರ್ ಮೊಡ್ಯೂಲ್ಗೆ ಸಂಬಂಧಿಸಿ ಈ ವಿವಿಯ ಮೂವರು ವೈದ್ಯರನ್ನು ಬಂಧಿಸಲಾಗಿದೆ. ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಪ್ರಧಾನ ಕೊಂಡಿಗಳಾದ ಆತ್ಮಹತ್ಯಾ ಬಾಂಬರ್ ಉಮರ್ ಉನ್-ನಬಿ, ಡಾ. ಮುಜಮ್ಮಿಲ್ ಗನೈ, ಡಾ. ಶಾಹೀನ್ ಶಹೀದ್ ಕೂಡ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.