Delhi Election 2025: ಚುನಾವಣಾ ಪ್ರಚಾರದ ವೇಳೆ ಹಲ್ಲೆ; ಬಿಜೆಪಿ ಕಾರಣ ಎಂದ ಆಪ್
ಫೆ. 5ರಂದು ದೆಹಲಿ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಈಗಾಗಲೇ ಅಲ್ಲಿನ ಚುನಾವಣಾ ಕಣ ರಂಗೇರುತ್ತಿದೆ. ಮಾತ್ರವಲ್ಲದೇ ಪ್ರಮುಖ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಗಳೂ ಮೇರೆ ಮೀರುತ್ತಿದ್ದು, ಆಪ್ ಶಾಸಕನ ಮೇಲೆ ಹಲ್ಲೆ ನಡೆದಿದೆ.
ನವದೆಹಲಿ: ಆಮ್ ಆದ್ಮಿ ಪಾರ್ಟಿ (Aam Aadmi Party) ಶಾಸಕ ಮತ್ತು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ (Assembly Election) ದೆಹಲಿಯ (Delhi) ರಿಥಾಲಾ ಕ್ಷೇತ್ರದ (Rithala constituency) ಅಭ್ಯರ್ಥಿಯಾಗಿರುವ ಮೊಹಿಂದರ್ ಗೋಯಲ್ (Mohinder Goyal) ಇಲ್ಲಿನ ಚುನಾವಣಾ ಪ್ರಚಾರ ಸಭೆಯಲ್ಲಿ ದಾಳಿಗೊಳಗಾಗಿ ಬಳಿಕ ಪ್ರಜ್ಞೆ ತಪ್ಪಿಬಿದ್ದಿದ್ದಾರೆ. ಸದ್ಯ ಅವರು ರೋಹಿಣಿಯಲ್ಲಿರುವ (Rohini) ಅಂಬೇಡ್ಕರ್ ಆಸ್ಪತ್ರೆಯಲ್ಲಿ (Ambedkar Hospital) ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ದಾಳಿಗೆ ಬಿಜೆಪಿ (BJP) ಕಾರಣ ಎಂದು ಆಪ್ ಸಂಸದ ಸಂಜಯ್ ಸಿಂಗ್ ಆರೋಪಿಸಿದ್ದಾರೆ. ಈ ಕುರಿತಾಗಿ ತನ್ನ ‘ಎಕ್ಸ್’ (X) ಖಾತೆಯಲ್ಲಿ ಬರೆದುಕೊಂಡಿರುವ ಸಂಜಯ್ ಸಿಂಗ್, ‘ದೆಹಲಿಯ ಜನರೇ, ಇದರ ಬಗ್ಗೆ ಯೋಚಿಸಿ, ಇನ್ನೂ ಸರ್ಕಾರ ರಚನೆಯಾಗಿಲ್ಲ. ಅವರು ಈಗಲೇ ಗುಂಡಿನ ದಾಳಿ ಪ್ರಾರಂಭಿಸಿದ್ದಾರೆ, ಒಂದು ವೇಳೆ ತಪ್ಪಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅವರು ದೆಹಲಿಯನ್ನು ಗೂಂಡಾ ರಾಜ್ಯ ಮಾಡಿಬಿಡುತ್ತಾರೆ’ ಎಂದು ಬರೆದುಕೊಂಡಿದ್ದಾರೆ.
BJP का गुंडा AAP विधायक महेन्द्र गोयल को कह रहा है “गोली मार दूँगा”
— Sanjay Singh AAP (@SanjayAzadSln) February 1, 2025
दिल्ली वालों सोंच लो अभी सरकार नहीं बनी तो गोली मार रहे हैं, गलती से भाजपाईं आ गये तो “दिल्ली को गुंडागर्दी का गढ़ बना देंगे” pic.twitter.com/GQi1OtrKKQ
ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರಿಗೆ ಶನಿವಾರ (ಫೆ. 2) ಬೆಳಗ್ಗೆ 11.15ಕ್ಕೆ ಕರೆ ಬಂತು. ಕೂಡಲೇ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ‘ಆಮ್ ಆದ್ಮಿ ಪಕ್ಷದ ಶಾಸಕ ಮಹೇಂದ್ರ ಗೋಯಲ್ ಅವರ ಮೇಲೆ ಹಲ್ಲೆಯಾಗಿದೆ ಮತ್ತವರು ಪ್ರಜ್ಞೆ ತಪ್ಪಿದ್ದಾರೆ ಎಂಬ ಮಾಹಿತಿ ನಮಗೆ ಬಂದಿತು’ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ತನ್ನ ಪಕ್ಷದ ಶಾಸಕರ ಮೇಲೆ ನಡೆದಿರುವ ಹಲ್ಲೆಯನ್ನು ಆಮ್ ಆದ್ಮಿ ಪಕ್ಷದ ಸಮಾಲೋಚಕ ಅರವಿಂದ್ ಕೇಜ್ರಿವಾಲ್ (Arvind Kejriwal) ಬಲವಾಗಿ ಖಂಡಿಸಿದ್ದಾರೆ. ದೆಹಲಿ ಚುನಾವಣೆಯಲ್ಲಿ ಸೋಲುತ್ತೇವೆಂಬ ಹತಾಶೆಯಲ್ಲಿ ಬಿಜೆಪಿಯವರು ಹಿಂಸೆಯ ಮಾರ್ಗ ಹಿಡಿದಿದ್ದಾರೆ ಎಂದು ಕೇಜ್ರಿವಾಲ್ ಇದೇ ಸಂದರ್ಭದಲ್ಲಿ ಆರೋಪಿಸಿದ್ದಾರೆ.
ಇದನ್ನೂ ಓದಿ: Delhi Election 2025: ದೆಹಲಿ ರಾಜಕೀಯದಲ್ಲಿ ಭಾರೀ ಸಂಚಲನ; AAP ತೊರೆದಿದ್ದ 8 ಶಾಸಕರು ಬಿಜೆಪಿ ಸೇರ್ಪಡೆ
दिल्ली में बीजेपी बुरी तरह चुनाव हार रही है - बौखलाहट में ये लोग अब हिंसा पर उतर आए हैं। रिठाला से हमारे विधायक महेंद्र गोयल पर हमले की हम कड़ी निंदा करते हैं। https://t.co/dd8YR6JKmA
— Arvind Kejriwal (@ArvindKejriwal) February 1, 2025
ಈ ಕುರಿತಾಗಿ ‘ಎಕ್ಸ್’ ಖಾತೆಯಲ್ಲಿ ಬರೆದುಕೊಂಡಿರುವ ಮಾಜಿ ಮುಖ್ಯಮಂತ್ರಿ ಕೇಜ್ರಿವಾಲ್, ‘ಬಿಜೆಪಿಯವರು ದೆಹಲಿಯಲ್ಲಿ ಈ ಬಾರಿ ತುಂಬಾ ಕೆಟ್ಟದಾಗಿ ಸೋಲಲಿದ್ದಾರೆ – ಈ ಹತಾಶೆಯಲ್ಲಿ ಅವರು ಎಲ್ಲೆಂದರಲ್ಲಿ ಹಿಂಸೆಯಲ್ಲಿ ತೊಡಗಿಕೊಂಡಿದ್ದಾರೆ. ನಮ್ಮ ಶಾಸಕರಾಗಿರುವ ಮಹೇಂದ್ರ ಗೋಯಲ್ ಮೇಲಿನ ಈ ಹಲ್ಲೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
ಆಪ್ ಶಾಸಕರಾಗಿರುವ ಮೊಹಿಂದರ್ ಗೋಯಲ್ ಅವರು ಬಿಜೆಪಿಯ ಕುಲ್ವಂತ್ ರಾಣಾ ಹಾಗೂ ಸುಶಾಂತ್ ಮಿಶ್ರಾ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ದೆಹಲಿ ವಿಧಾನಸಭೆಗೆ ಫೆ.5ರಂದು ಚುನಾವಣೆ ನಡೆಯಲಿದೆ.
ದೆಹಲಿ ವಿಧಾನಸಭೆಯಲ್ಲಿ 70 ಸ್ಥಾನಗಳಿದ್ದು ಅವುಗಳಲ್ಲಿ ರಿತಾಲಾ ಕ್ಷೇತ್ರವೂ ಒಂದಾಗಿದೆ. ಇದು ವಾಯುವ್ಯ ದೆಹಲಿ ಜಿಲ್ಲೆಯಲ್ಲಿದೆ. ಆಪ್ ನ ಮೊಹಿಂದರ್ ಗೋಯಲ್ ಅವರು 2015ರಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.