ನವದೆಹಲಿ, ಆ. 18: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತೆಹಲ್ಕಾ ಮಾಜಿ ಪ್ರಧಾನ ಸಂಪಾದಕ ತರುಣ್ ತೇಜ್ಪಾಲ್ (Tarun Tejpal) ಅವರಿಗೆ ವಿಧಿಸಲಾಗಿರುವ ಶಿಕ್ಷೆಯನ್ನು ಹೆಚ್ಚಿಸುವಂತೆ ಗೋವಾ ಸರ್ಕಾರ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಮುಂಬೈ ಹೈಕೋರ್ಟ್ನ ಗೋವಾ ಪೀಠವು ಆಗಸ್ಟ್ 6ರಂದು ತೇಜ್ಪಾಲ್ ಅವರನ್ನು ದೋಷಿ ಎಂದು ತೀರ್ಪು ನೀಡಿ, 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಈ ಮೂಲಕ 2021ರಲ್ಲಿ ಗೋವಾ ಸೆಷನ್ಸ್ ಕೋರ್ಟ್ ನೀಡಿದ್ದ ಖುಲಾಸೆ ತೀರ್ಪನ್ನು ಹೈಕೋರ್ಟ್ ರದ್ದುಗೊಳಿಸಿತ್ತು.
2013ರ ನವೆಂಬರ್ನಲ್ಲಿ ಗೋವಾದಲ್ಲಿ ನಡೆದ ತೆಹಲ್ಕಾ ಕಾರ್ಯಕ್ರಮದ ಸಂದರ್ಭದಲ್ಲಿ ಹೋಟೆಲ್ನ ಲಿಫ್ಟ್ನಲ್ಲಿ ತಮ್ಮ ಕಿರಿಯ ಮಹಿಳಾ ಸಹೋದ್ಯೋಗಿಯ ಮೇಲೆ ತರುಣ್ ತೇಜ್ಪಾಲ್ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಗೋವಾ ಪೊಲೀಸರು ಪ್ರಕರಣ ದಾಖಲಿಸಿ 2013ರಲ್ಲಿ ತೇಜ್ಪಾಲ್ ಅವರನ್ನು ಬಂಧಿಸಿದ್ದರು. ಆದರೆ ಅವರು ಆರೋಪಗಳನ್ನು ನಿರಾಕರಿಸಿದ್ದು, ತಮ್ಮ ನಡುವಿನ ಲೈಂಗಿಕ ಸಂಬಂಧ ಸಮ್ಮತಿಯದ್ದಾಗಿತ್ತು ಅಥವಾ ಅದನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ವಾದಿಸಿದ್ದರು.
ಭಾರತೀಯ ದಂಡ ಸಂಹಿತೆಯ ಅತ್ಯಾಚಾರ, ಲೈಂಗಿಕ ಕಿರುಕುಳ, ವಿವಸ್ತ್ರಗೊಳಿಸುವ ಉದ್ದೇಶದಿಂದ ಹಲ್ಲೆ, ತಪ್ಪಾಗಿ ತಡೆಹಿಡಿಯುವುದು ಸೇರಿದಂತೆ ಹಲವು ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಮರಣದಂಡನೆ ಶಿಕ್ಷೆಗೊಳಗಾದವರಿಗೆ ಕಡಿಮೆ ನೋವಿನ ಇಂಜೆಕ್ಷನ್ ಬಳಕೆ ಸದ್ಯಕ್ಕಿಲ್ಲ: ಸುಪ್ರೀಂ ಕೋರ್ಟ್
2021ರಲ್ಲಿ ಖುಲಾಸೆಗೊಳಿಸಿದ್ದ ಕೋರ್ಟ್
2021ರ ಮೇಯಲ್ಲಿ ಗೋವಾ ಸೆಷನ್ಸ್ ಕೋರ್ಟ್ ತರುಣ್ ತೇಜ್ಪಾಲ್ ಅವರನ್ನು ಎಲ್ಲ ಆರೋಪಗಳಿಂದ ಖುಲಾಸೆಗೊಳಿಸಿತ್ತು. ಆದರೆ ಈ ತೀರ್ಪನ್ನು ಗೋವಾ ಸರ್ಕಾರ ಹೈಕೋರ್ಟ್ನಲ್ಲಿ ಪ್ರಶ್ನಿಸಿತ್ತು. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆ ಹೇಗೆ ವರ್ತಿಸಬೇಕು ಎಂಬ ಪೂರ್ವಗ್ರಹದ ಆಧಾರದ ಮೇಲೆ ವಿಚಾರಣಾ ನ್ಯಾಯಾಲಯ ಸಾಕ್ಷ್ಯಗಳನ್ನು ಮೌಲ್ಯಮಾಪನ ಮಾಡಿದೆ ಎಂದು ಸರ್ಕಾರ ವಾದಿಸಿತ್ತು.
10 ವರ್ಷಗಳ ಕಠಿಣ ಜೈಲು ಶಿಕ್ಷೆ
ಹೈಕೋರ್ಟ್ ವಿಚಾರಣಾ ನ್ಯಾಯಾಲಯದ ಸಾಕ್ಷ್ಯ ಮೌಲ್ಯಮಾಪನವನ್ನು ಅಸಮಂಜಸ ಹಾಗೂ ಕಾನೂನುಬದ್ಧವಾಗಿ ʼವಿಕೃತʼ ಎಂದು ಪರಿಗಣಿಸಿ, ತೇಜ್ಪಾಲ್ ವಿರುದ್ಧದ ಆರೋಪಗಳು ಸಾಬೀತಾಗಿವೆ ಎಂದು ಹೇಳಿತು. ದೂರುದಾರ ಮಹಿಳೆಯ ಹೇಳಿಕೆ ವಿಶ್ವಾಸಾರ್ಹವಾಗಿದೆ ಎಂದು ಹೇಳಿದ ನ್ಯಾಯಾಲಯ, ಸಿಸಿಟಿವಿ ದೃಶ್ಯಗಳು, ಘಟನೆಯ ಸುತ್ತಲಿನ ಸಂದರ್ಭಗಳು, ತೇಜ್ಪಾಲ್ ಅವರ ಕ್ಷಮೆಯಾಚನಾ ಇ-ಮೇಲ್ಗಳು ಹಾಗೂ ಇತರ ಸಂವಹನಗಳನ್ನು ಸಾಕ್ಷ್ಯವಾಗಿ ಪರಿಗಣಿಸಿತು.
ಅಂತಿಮವಾಗಿ ತೇಜ್ಪಾಲ್ ಅವರಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ಸುಮಾರು ₹10.21 ಲಕ್ಷ ದಂಡ ವಿಧಿಸಲಾಯಿತು. ವಿವಿಧ ಅಪರಾಧಗಳಿಗೆ ವಿಧಿಸಲಾದ ಶಿಕ್ಷೆಗಳು ಏಕಕಾಲದಲ್ಲಿ ಜಾರಿಯಾಗಲಿರುವುದರಿಂದ ಪರಿಣಾಮಕಾರಿ ಜೈಲು ಶಿಕ್ಷೆ 10 ವರ್ಷಗಳಾಗಿದೆ.
ಸುಪ್ರೀಂ ಕೋರ್ಟ್ಗೆ ತೇಜ್ಪಾಲ್ ಮೊರೆ
ಹೈಕೋರ್ಟ್ ಆರಂಭದಲ್ಲಿ ತೇಜ್ಪಾಲ್ ಅವರಿಗೆ ಶರಣಾಗಲು ಎರಡು ವಾರಗಳ ಕಾಲಾವಕಾಶ ನೀಡಿತ್ತು. ಬಳಿಕ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ಅವರ ವಕೀಲರ ಮನವಿಯ ಮೇರೆಗೆ ಈ ಅವಧಿಯನ್ನು ನಾಲ್ಕು ವಾರಗಳಿಗೆ ವಿಸ್ತರಿಸಲಾಯಿತು. ತಮ್ಮ ವಿರುದ್ಧದ ದೋಷಾರೋಪಣೆ ಹಾಗೂ ಶಿಕ್ಷೆ ಎರಡನ್ನೂ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸುವುದಾಗಿ ತೇಜ್ಪಾಲ್ ಹೇಳಿದ್ದಾರೆ.
ಇದೀಗ ಗೋವಾ ಸರ್ಕಾರವೂ ಪ್ರತ್ಯೇಕವಾಗಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿ, ಅವರಿಗೆ ವಿಧಿಸಿರುವ ಶಿಕ್ಷೆಯನ್ನು ಹೆಚ್ಚಿಸುವಂತೆ ಮನವಿ ಮಾಡಿದೆ. ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡುವವರೆಗೆ ಅಥವಾ ತೀರ್ಪನ್ನು ಬದಲಾಯಿಸುವವರೆಗೆ ಹೈಕೋರ್ಟ್ನ ದೋಷಾರೋಪಣೆ ಮತ್ತು ಶಿಕ್ಷೆ ಜಾರಿಯಲ್ಲಿರುತ್ತದೆ.