ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʼʼ2018ರ ಇತಿಹಾಸ ಮರುಕಳಿಸದಿರಲಿʼʼ: ಮಹಾ ಮಳೆಗೆ ಕೇರಳಂ ತತ್ತರ; ಬಹುತೇಕ ಭಾಗಗಳು ಮುಳುಗಡೆ, ಅಪಾಯ ಮಟ್ಟ ಮೀರಿ ಹರಿಯುತ್ತಿರುವ ನದಿಗಳು

Heavy Rains Continue in Keralam: ಕೇರಳಂನ ಕೆಲವು ಭಾಗಗಳಲ್ಲಿ ಭಾರಿ ಮಳೆ ಮುಂದುವರಿದಿದೆ. ಉತ್ತರದ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಪ್ರವಾಹ ಪರಿಸ್ಥಿತಿ ಉಂಟಾದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಪ್ರವಾಹದಿಂದ ಬಾಧಿತ ಕುಟುಂಬಗಳಿಗೆ ನೆರವು ನೀಡಲು ಹಲವು ಕ್ರಮಗಳನ್ನು ಘೋಷಿಸಿದೆ.

ಕೇರಳಂನಲ್ಲಿ ಭಾರಿ ಮಳೆ, ಹಲವೆಡೆ ಪ್ರವಾಹ

ಕೇರಳಂನ ಉತ್ತರದ ಜಿಲ್ಲೆಗಳಲ್ಲಿ ಮುಂದುವರಿದ ಭಾರಿ ಮಳೆ -

Priyanka P
Priyanka P Aug 4, 2026 5:03 PM

ತಿರುವನಂತಪುರಂ, ಆ. 4: ಮಂಗಳವಾರ (ಆಗಸ್ಟ್‌ 4) ಕೇರಳಂನ ಕೆಲವು ಭಾಗಗಳಲ್ಲಿ ಭಾರಿ ಮಳೆ (Heavy Rain in Keralam) ಮುಂದುವರಿದಿದೆ. ಅದರಲ್ಲೂ ಉತ್ತರದ ಜಿಲ್ಲೆಗಳಲ್ಲಿ ಅತಿ ಹೆಚ್ಚು ವರ್ಷಧಾರೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಆಲಪ್ಪುಳ, ಪಟ್ಟಣಂತಿಟ್ಟ, ಕೊಟ್ಟಾಯಂ ಮತ್ತು ಕೋಝಿಕ್ಕೋಡ್‌ನ ಅನೇಕ ತಗ್ಗು ಪ್ರದೇಶಗಳು ಮತ್ತು ನದಿ ತೀರದ ಪ್ರದೇಶಗಳಲ್ಲಿ ಪ್ರವಾಹ ಮುಂದುವರಿದಿದ್ದು, ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ಜನರು ಪರಿಹಾರ ಶಿಬಿರಗಳಿಗೆ ಸ್ಥಳಾಂತರಗೊಂಡಿದ್ದಾರೆ. ಅಮೂಲ್ಯವಾದ ದಾಖಲೆಗಳು ಮತ್ತು ಮಕ್ಕಳ ಶಾಲಾ ಪುಸ್ತಕಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ಮಂಗಳವಾರ ಮಳೆ ಸಂಬಂಧಿತ ದುರಂತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

ಮಳೆಗಾಲ ಮುಂದುವರಿದಂತೆ, ರಾಜ್ಯ ಸರ್ಕಾರವು ಸಂತ್ರಸ್ತ ಕುಟುಂಬಗಳಿಗೆ ನೆರವಿನ ಹಸ್ತ ಚಾಚಿದೆ. ಪ್ರವಾಹದಲ್ಲಿ ಕಳೆದುಹೋದ ದಾಖಲೆಗಳನ್ನು ಮರಳಿ ಪಡೆಯಲು ವಿಶೇಷ ಅದಾಲತ್‌ಗಳನ್ನು ನಡೆಸಲಾಗುವುದು ಮತ್ತು ಮಕ್ಕಳಿಗೆ ಅಗತ್ಯವಿರುವ ಪಠ್ಯಪುಸ್ತಕಗಳು ಮತ್ತು ಇತರ ಅಧ್ಯಯನ ಸಾಮಗ್ರಿಗಳನ್ನು ಸರ್ಕಾರ ಒದಗಿಸಲಿದೆ ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ಪಿ.ಸಿ. ವಿಷ್ಣುನಾಥ್ ತಿಳಿಸಿದರು.

ಕೇರಳಂನಲ್ಲಿ ಮುಂದುವರಿದ ಭಾರಿ ಮಳೆ:



ಪ್ರತಿ ವಾರ್ಡ್‌ನ ಸ್ವಚ್ಛತೆಗಾಗಿ ಸರ್ಕಾರ 25,000 ರುಪಾಯಿ ಮಂಜೂರು ಮಾಡಿದೆ ಎಂದು ಅವರು ಹೇಳಿದರು. ಹಲವು ಸ್ವಯಂಸೇವಕ ಸಂಸ್ಥೆಗಳು ಪ್ರವಾಹದ ನೀರು ಪ್ರವೇಶಿಸಿದ ಮನೆಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡಲು ಮುಂದೆ ಬಂದಿವೆ.

ಕೇರಳದಾದ್ಯಂತ ಭಾರಿ ಮಳೆ: ಭೂಕುಸಿತದಿಂದ ಮೂವರ ಸಾವು, ಹಲವು ಮನೆಗಳು ಜಲಾವೃತ

ಮನೆ ಮತ್ತು ಜೀವನೋಪಾಯವನ್ನು ಕಳೆದುಕೊಂಡ ಜನರಿಗೆ ವಿಳಂಬವಿಲ್ಲದೆ ಆರ್ಥಿಕ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ವಿ.ಡಿ. ಸತೀಶನ್‌ ಘೋಷಿಸಿದ್ದಾರೆ ಎಂದು ಸಚಿವರು ಹೇಳಿದರು. ಆಗಸ್ಟ್ 4ರಂದು ರಾಜ್ಯದ 12 ಜಿಲ್ಲೆಗಳಿಗೆ ಐಎಂಡಿ ಆರೆಂಜ್ ಅಲರ್ಟ್ ಮತ್ತು ಎರಡು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ನೀಡಿತ್ತು.

ಆಗಸ್ಟ್ 3ರಂದು ಬೆಳಗಿನ ಜಾವ 3 ಗಂಟೆಯಿಂದ ಮಧ್ಯರಾತ್ರಿಯವರೆಗೆ ಕಾಸರಗೋಡಿನ ಬಾಯಾರ್‌ನಲ್ಲಿ 121.5 ಮಿ.ಮೀ. ಮಳೆಯಾಗಿದ್ದು, ಇದು ರಾಜ್ಯದಲ್ಲಿ ಅತ್ಯಧಿಕ ಎಂದು ಐಎಂಡಿ ತಿಳಿಸಿದೆ. ಕಾಸರಗೋಡಿನ ಮುಳಿಯಾರ್‌ನಲ್ಲಿ 81 ಮಿ.ಮೀ. ಮಳೆಯಾಗಿದ್ದರೆ, ಕಣ್ಣೂರು ವಿಮಾನ ನಿಲ್ದಾಣದಲ್ಲಿ 74 ಮಿ.ಮೀ. ಮಳೆ ಸುರಿದಿದೆ.

ಕೋಝಿಕ್ಕೋಡ್‌ನ ಉರುಮಿಯಲ್ಲಿ 65 ಮಿ.ಮೀ., ಕಣ್ಣೂರಿನ ಚೆರುವಾಂಚೇರಿ ಮತ್ತು ಕಾಸರಗೋಡಿನ ಆರ್‌ಎಆರ್‌ಎಸ್ ಪಿಲಿಕೋಡ್‌ನಲ್ಲಿ ತಲಾ 59.5 ಮಿ.ಮೀ., ಎರ್ನಾಕುಲಂನ ನೆರ್ಯಮಂಗಲಂನಲ್ಲಿ 59 ಮಿ.ಮೀ. ವರ್ಷಧಾರೆಯಾಗಿದೆ. 24 ಗಂಟೆಗಳಲ್ಲಿ 60 ಮಿ.ಮೀ. ಮತ್ತು ಅದಕ್ಕಿಂತ ಹೆಚ್ಚಿನ ಮಳೆ ಸುರಿಯಬಹುದು ಎಂದು ಐಎಂಡಿ ಎಚ್ಚರಿಸಿದೆ.

ರಾಜ್ಯದ ಹಲವು ಭಾಗಗಳಲ್ಲಿ ಮಳೆ ಮುಂದುವರಿದಿರುವುದರಿಂದ ನದಿಗಳ ಮೇಲೆ ನಿಗಾ ಇಡಲಾಗಿದ್ದು, ದಡದಲ್ಲಿ ವಾಸಿಸುವ ಜನರು ಜಾಗರೂಕರಾಗಿರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಮೀನುಗಾರರಿಗೂ ಎಚ್ಚರಿಕೆ ನೀಡಲಾಗಿದೆ.