ನವದೆಹಲಿ, ಆ. 27: ಆಪರೇಷನ್ ಸಿಂದೂರ್ (Operation Sindoor) ಕಾರ್ಯಾಚರಣೆಯಲ್ಲಿ ಎಸ್-400 (S-400) ವಾಯು ರಕ್ಷಣಾ ವ್ಯವಸ್ಥೆಯು ಪ್ರಮುಖ ಆಕರ್ಷಣೆಯಾಗಿದ್ದು, ಪಾಕಿಸ್ತಾನದ ವೈಮಾನಿಕ ದಾಳಿಗಳನ್ನು ಎದುರಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. 2025ರ ಮೇಯಲ್ಲಿ ನಡೆದ ಸಂಘರ್ಷದ ಸಮಯದಲ್ಲಿ ಭಾರತದೊಳಗಿದ್ದ ಈ ಎಸ್-400 ವ್ಯವಸ್ಥೆಗಳು ಇರುವ ನಿಖರ ಸ್ಥಳವನ್ನು ಪತ್ತೆಹಚ್ಚಲು ಸಾಧ್ಯವಾಗದೆ ಪಾಕಿಸ್ತಾನವು (Pakistan) ಎಷ್ಟು ಹತಾಶವಾಗಿತ್ತು ಎಂದರೆ, ಅದು ಭಾರತದೊಳಗಿದ್ದ ತನ್ನ ಗೂಢಚಾರರು ಮತ್ತು ಸ್ಲೀಪರ್ ಸೆಲ್ಗಳನ್ನು ಸಕ್ರಿಯಗೊಳಿಸಿತ್ತು ಎಂದು ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ ಬಹಿರಂಗಪಡಿಸಿದ್ದಾರೆ.
ಆಪರೇಷನ್ ಸಿಂದೂರ್ ಸಮಯದಲ್ಲಿ ಪಶ್ಚಿಮ ವಾಯು ಕಮಾಂಡ್ನ ಮುಖ್ಯಸ್ಥರಾಗಿದ್ದ ಮಿಶ್ರಾ, ಈ ಎಸ್-400 ವ್ಯವಸ್ಥೆಗಳ ಕಾರಣದಿಂದಾಗಿಯೇ ಪಾಕಿಸ್ತಾನದ ಯುದ್ಧ ವಿಮಾನಗಳು ಭಾರತದ ಗಡಿಯ 200 ಕಿಲೋ ಮೀಟರ್ ಹತ್ತಿರಕ್ಕೂ ಬರಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.
ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ ಜತೆಗಿನ ಸಂದರ್ಶನ:
ಆಪರೇಷನ್ ಸಿಂದೂರ್ ಸಂದರ್ಭದಲ್ಲಿ ರಷ್ಯಾ ನಿರ್ಮಿತ ಎಸ್-400 ವಾಯು ರಕ್ಷಣಾ ವ್ಯವಸ್ಥೆಯು ಪಾಕಿಸ್ತಾನದ ವೈಮಾನಿಕ ಕಾರ್ಯಾಚರಣೆಗಳಿಗೆ ಅತಿ ದೊಡ್ಡ ಬೆದರಿಕೆಯಾಗಿ ಪರಿಣಮಿಸಿತ್ತು. ಈ ವ್ಯವಸ್ಥೆಯಿಂದಾಗಿ ಪಾಕಿಸ್ತಾನಕ್ಕೆ ತನ್ನ ಎಲ್ಲ ಯುದ್ಧ ತಂತ್ರಗಳನ್ನು ಬಳಸಬೇಕಾಯಿತು ಎಂದು ಜಿತೇಂದ್ರ ಮಿಶ್ರಾ ತಿಳಿಸಿದ್ದಾರೆ.
ʻಆಪರೇಷನ್ ಸಿಂಧೂರ್ʼ ಕುರಿತ ಸಿನಿಮಾ ಮಾಡಲಿದ್ದಾರೆ ʻಕಾಶ್ಮೀರ್ ಫೈಲ್ಸ್ʼ ವಿವೇಕ್ ಅಗ್ನಿಹೋತ್ರಿ
ಈ ಎಸ್-400 ಎಲ್ಲಿವೆ ಎಂದು ಕಂಡುಹಿಡಿಯಲು ಸಾಧ್ಯವಾಗದೆ ಪಾಕಿಸ್ತಾನ ಹತಾಶೆಗೆ ಒಳಗಾಗಿತ್ತು. ಸ್ಥಳ ಕಂಡು ಹಿಡಿಯಲು ಅಲ್ಲಿನ ಅಧಿಕಾರಿಗಳು ಲಭ್ಯವಿರುವ ಎಲ್ಲ ವಿಧಾನಗಳನ್ನು ಬಳಸಿದರು. ಅವರು ಇತರ ರಾಷ್ಟ್ರಗಳ ಉಪಗ್ರಹ ಸಹಾಯವನ್ನು ಸಹ ಪಡೆದಿದ್ದರು ಎಂದು ಏರ್ ಮಾರ್ಷಲ್ ಹೇಳಿದರು. ಅಂತಹ ರಾಷ್ಟ್ರಗಳನ್ನು ಹೆಸರಿಸಲು ನಿರಾಕರಿಸಿದರೂ, ಚೀನಾ ತನ್ನ ಸ್ನೇಹಿತ ಪಾಕಿಸ್ತಾನಕ್ಕೆ ಗುಪ್ತಚರ ಮಾಹಿತಿಯನ್ನು ಒದಗಿಸುತ್ತಿದೆ ಎಂದು ಸೇನಾ ಅಧಿಕಾರಿಯೊಬ್ಬರು ಈ ಹಿಂದೆ ದೃಢಪಡಿಸಿದ್ದರು.
“ಪಾಕಿಸ್ತಾನ ವಾಯುದಾಳಿ ಮಾಡಿದಾಗಲೆಲ್ಲ, ಅವರ ಮೇಲೆ ಎಸ್-400 ಗುಂಡು ಹಾರಿಸುತ್ತಿತ್ತು. ಅವರಿಗೆ ಸಂಬಂಧಿಸಿದಂತೆ ಎಸ್-400 ಅತಿದೊಡ್ಡ ಬೆದರಿಕೆಯಾಗಿತ್ತು. ಎಸ್-400 ಎಲ್ಲಿವೆ ಎಂಬುದನ್ನು ಕಂಡುಹಿಡಿಯಲು ಅವರು ಭಾರತದೊಳಗೆ ಗೂಢಚಾರರು ಮತ್ತು ಸ್ಲೀಪರ್ ಸೆಲ್ಗಳನ್ನು ಸಹ ಸಕ್ರಿಯಗೊಳಿಸಿದ್ದರು” ಎಂದು ಮಿಶ್ರಾ ವಿವರಿಸಿದ್ದಾರೆ.
ಭಾರತದ ಸುದರ್ಶನ ಚಕ್ರ ಎಂದು ಕರೆಯಲ್ಪಡುವ ಎಸ್-400, ಮೇಲ್ಮೈಯಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ ವ್ಯವಸ್ಥೆಯಾಗಿದ್ದು, ಇದು ದೇಶದ ವಾಯು ರಕ್ಷಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಸುಧಾರಿತ ರಾಡಾರ್ ಮತ್ತು ಪ್ರತಿಬಂಧಕ ಸಾಮರ್ಥ್ಯಗಳೊಂದಿಗೆ, ಎಸ್-400 ದೂರದಿಂದಲೇ ವೈಮಾನಿಕ ಬೆದರಿಕೆಗಳನ್ನು ಗುರುತಿಸಿ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿ ಬಳಿಕ ಪ್ರಧಾನಿ ನರೇಂದ್ರ ಮೋದಿ ಮೊದಲು ಕೇಳಿದ್ದೇನು? ಮಾಹಿತಿ ಬಹಿರಂಗಪಡಿಸಿದ ಅಜಿತ್ ದೋವಲ್
2018ರಲ್ಲಿ ಭಾರತ ಮತ್ತು ರಷ್ಯಾ ಐದು ಎಸ್-400 ವ್ಯವಸ್ಥೆಗಳಿಗೆ ಒಪ್ಪಂದಕ್ಕೆ ಸಹಿ ಹಾಕಿದವು. ಮೂರು ಈಗಾಗಲೇ ವಿತರಿಸಲ್ಪಟ್ಟಿವೆ. ಈ ವರ್ಷದ ಜೂನ್ನಲ್ಲಿ ನಾಲ್ಕನೇ ಸ್ಕ್ವಾಡ್ರನ್ ಅನ್ನು ಭಾರತ ಸ್ವೀಕರಿಸಿದೆ.
ಪಾಕಿಸ್ತಾನವು ಆರಂಭದಲ್ಲಿ ಅದಮ್ಪುರ್ ವಾಯುನೆಲೆಯನ್ನು ಗುರಿಯಾಗಿಸಿಕೊಂಡು 14-15 ಡ್ರೋನ್ಗಳನ್ನು ಹಾರಿಸಿತು. ಅವೆಲ್ಲವನ್ನೂ ತಟಸ್ಥಗೊಳಿಸಲಾಯಿತು. ಮೇ 9ರಂದು ಪಾಕಿಸ್ತಾನ ನೂರಾರು ಡ್ರೋನ್ಗಳು ಮತ್ತು ಕ್ಷಿಪಣಿಗಳನ್ನು ಉಡಾಯಿಸಿತು. ಭಾರತವು ಅದನ್ನು ದಿಟ್ಟವಾಗಿ ಎದುರಿಸಿತು. ಮಾಜಿ ವೆಸ್ಟರ್ನ್ ಕಮಾಂಡ್ ಮುಖ್ಯಸ್ಥರು, ಮಹಿಳಾ ಯುದ್ಧ ಪೈಲಟ್ಗಳು ಕಾರ್ಯಾಚರಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು.