ನಾಗ್ಪುರ: ಅಯೋಧ್ಯೆಯಲ್ಲಿ ರಾಮ ಮಂದಿರ (Ayodhya Ram temple) ನಿರ್ಮಾಣವಾಗುತ್ತದೆ ಎಂದು ಯಾರೂ ಎಣಿಸಿರಲಿಲ್ಲ. ಆದರೆ ಅದು ಆಗಿದೆ. ಅಂತೆಯೇ ಒಂದು ದಿನ ಭಾರತ ವಿಶ್ವಗುರು (vishwaguru) ಆಗಲಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (Rashtriya Swayamsevak Sangh) ಮುಖ್ಯಸ್ಥ ಮೋಹನ್ ಭಾಗವತ್ (RSS Chief Mohan Bhagwat) ಹೇಳಿದರು. ನಾಗ್ಪುರದಲ್ಲಿ ಶುಕ್ರವಾರ ಮಾತನಾಡಿದ ಅವರು, ಭಾರತ ಖಂಡಿತವಾಗಿಯೂ 'ವಿಶ್ವ ಗುರು' ಆಗುತ್ತದೆ ಮತ್ತು ಜಗತ್ತಿಗೆ ಮಾರ್ಗದರ್ಶನ ನೀಡುತ್ತದೆ. ದೇಶದ ಭವಿಷ್ಯದ ಬಗ್ಗೆ ಯಾರೂ ಯಾವುದೇ ಅನುಮಾನಗಳನ್ನು ಇಟ್ಟುಕೊಳ್ಳಬಾರದು ಎಂದು ಹೇಳಿದರು.
ನಾಗ್ಪುರ ನಗರದ ಹೊರವಲಯದಲ್ಲಿರುವ ಜಾಮ್ತಾ ಪ್ರದೇಶದ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯ (ಎನ್ಸಿಐ) ಆವರಣದಲ್ಲಿ ಶುಕ್ರವಾರ ಸಂಜೆ 'ಭಾರತ್ ದುರ್ಗಾ ಶಕ್ತಿ ಸ್ಥಳ' ದೇವಾಲಯಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಭಾರತವು ವಿಶ್ವ ಗುರುವಾಗಲು ಸ್ಥಿರವಾದ ದೃಷ್ಟಿಕೋನ, ಪ್ರಯತ್ನ ಮತ್ತು ಸಾಮೂಹಿಕ ಶಿಸ್ತಿನ ಮೂಲಕ ಸಾಧ್ಯವಾಗುತ್ತದೆ. ಅಂತಹ ಪರಿವರ್ತನೆಯನ್ನು ನಾವು ಈಗಿನ ಪೀಳಿಗೆಯಲ್ಲಿ ಕಾಣಬಹುದು ಎಂದು ತಿಳಿಸಿದರು.
West Bengal Election ground report by Raghav Sharma Nidle: ಮಮತಾ ದೀದಿಯ ನಿದ್ದೆಗೆಡಿಸಿದ್ದ ಅಭಯಾಳ ಸುತ್ತ...
ಭಾರತದ ಭವಿಷ್ಯದ ಬಗ್ಗೆ ಅನುಮಾನಗಳನ್ನು ಬಿಡಬೇಕು ಎಂದ ಅವರು, ಧೈರ್ಯ ಮತ್ತು ಸ್ವಾವಲಂಬನೆಯಿಂದ ಬದುಕಿ. ದೈನಂದಿನ ಜೀವನದಲ್ಲಿ ಮೌಲ್ಯಗಳನ್ನು ಅಭ್ಯಾಸ ಮಾಡಿ. ನಾವು ಹಂತ ಹಂತವಾಗಿ ನಮ್ಮ ಸಂಕಲ್ಪಕ್ಕೆ ಅನುಗುಣವಾಗಿ ವರ್ತಿಸಿದರೆ ಭಾರತ ಬಲಿಷ್ಠವಾಗುತ್ತದೆ ಮತ್ತು ಜಗತ್ತಿಗೆ ಮಾರ್ಗದರ್ಶನ ನೀಡುತ್ತದೆ ಎಂದು ತಿಳಿಸಿದರು.
ಭಾರತವನ್ನು ನಿಜವಾಗಿಯೂ ಅರ್ಥ ಮಾಡಿಕೊಳ್ಳಲು ಜನರು ಮೊದಲು ಭಾರತವನ್ನು ಆಳವಾಗಿ ಅರ್ಥಮಾಡಿಕೊಳ್ಳಬೇಕು. ಅನಂತರ ಅದನ್ನು ತಮ್ಮ ದೈನಂದಿನ ಜೀವನದಲ್ಲಿ ಅಭ್ಯಾಸ ಮಾಡಲು ಪ್ರಾರಂಭಿಸಬೇಕು ಎಂದ ಅವರು, ದೇಶವನ್ನು 150 ವರ್ಷಗಳಲ್ಲಿ ಅಭಿವೃದ್ಧಿಪಡಿಸಿದ ವಸಾಹತುಶಾಹಿ ಅಥವಾ ಪಾಶ್ಚಿಮಾತ್ಯ ದೃಷ್ಟಿಕೋನದಿಂದ ಅಲ್ಲ, ಬದಲಾಗಿ ಅದರ ಸ್ವಂತ ನಾಗರಿಕ ಮೌಲ್ಯಗಳಿಂದ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.
ಜನರು ಪಾಶ್ಚಿಮಾತ್ಯ ಚಿಂತನೆಯನ್ನು ತ್ಯಜಿಸಿ ಚಿಂತನೆ ಮತ್ತು ನಡವಳಿಕೆಯಲ್ಲಿ ಭಾರತೀಯ ಸಂಪ್ರದಾಯಗಳೊಂದಿಗೆ ಮರುಸಂಪರ್ಕಿಸುವಂತೆ ಹೇಳಿದ ಅವರು, ಈ ಪರಿವರ್ತನೆಯು ಭಾಷೆ, ಬಟ್ಟೆ, ಆಹಾರ ಪದ್ಧತಿ ಮತ್ತು ಸಾಂಸ್ಕೃತಿಕ ಆಚರಣೆಗಳಂತಹ ದೈನಂದಿನ ಜೀವನದಲ್ಲಿ ಸಣ್ಣ ಆದರೆ ಅರ್ಥಪೂರ್ಣ ಬದಲಾವಣೆಗಳೊಂದಿಗೆ ಪ್ರಾರಂಭವಾಗುತ್ತದೆ. ಭಾರತವನ್ನು ತಿಳಿದುಕೊಳ್ಳಬೇಕು, ಸ್ವೀಕರಿಸಬೇಕು ಮತ್ತು ದೈನಂದಿನ ಜೀವನದಲ್ಲಿ ಬದುಕಬೇಕು. ಭಾರತ ಮಾತೆಯನ್ನು ಪೂಜಿಸುವ ಕಲ್ಪನೆಯು ಕೇವಲ ಆಚರಣೆಗಳಿಗೆ ಸೀಮಿತವಾಗಿಲ್ಲ ಎಂದರು.
ನಾಗ್ಪುರದಲ್ಲಿ 'ಭಾರತ ಮಾತಾ' ದೇವಾಲಯದ ಕಲ್ಪನೆಯನ್ನು ದಿವಂಗತ ಮೊರೋಪಂತ್ ಪಿಂಗಳೆ ಅವರು ಕಲ್ಪಿಸಿಕೊಂಡರು ಎಂದು ತಿಳಿಸಿದ ಅವರು, ಭಾರತ ಮಾತೆಯ ವಿಗ್ರಹಗಳನ್ನು ಏಕತಾ ಪ್ರಯಾಣದ ಸಮಯದಲ್ಲಿ ಭಾರತದಲ್ಲಿ ವಿವಿಧ ಮಾರ್ಗಗಳಲ್ಲಿ ಸಾಗಿಸಿದಾಗ ಈ ಕಲ್ಪನೆ ಹುಟ್ಟಿಕೊಂಡಿತ್ತು. ಪ್ರಯಾಣದ ನಾಲ್ಕು ವಿಗ್ರಹಗಳಲ್ಲಿ ಒಂದು ಅಂತಿಮವಾಗಿ ನಾಗ್ಪುರಕ್ಕೆ ಬಂದಿತ್ತು ಎಂದು ತಿಳಿಸಿದರು.
ಆಸ್ಪತ್ರೆಯಲ್ಲಿ ಈಗ ಭಾರತ ಮಾತಾ ದೇವಾಲಯ ನಿರ್ಮಾಣದ ಸಂಕಲ್ಪ ಮಾಡಲಾಗಿದೆ. ಇದು ಶಕ್ತಿ, ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ಪ್ರತಿನಿಧಿಸುತ್ತದೆ ಎಂದು ಅವರು, "'ವಂದೇ ಮಾತರಂ' ನಿಂದ ಪ್ರೇರಿತರಾಗಿ ಭಾರತ ಮಾತಾ ಹತ್ತು ತೋಳುಗಳ ಶಕ್ತಿಯ ದೇವತೆ ದುರ್ಗಾ ರೂಪದಲ್ಲಿರಬೇಕು. ಶಕ್ತಿಯಿಲ್ಲದೆ ಜಗತ್ತಿನಲ್ಲಿ ಸತ್ಯ ಮಾತ್ರ ಮೇಲುಗೈ ಸಾಧಿಸಲು ಸಾಧ್ಯವಿಲ್ಲ. ಭಾರತವು ಸತ್ಯದಲ್ಲಿ ಬೇರೂರಿದ್ದರೂ ಶಕ್ತಿಯಿರುವವರು ಸರಿ ಎಂಬ ತತ್ತ್ವವನ್ನು ಪ್ರಪಂಚದ ಉಳಿದ ಭಾಗಗಳು ಹೆಚ್ಚಾಗಿ ಅನುಸರಿಸುತ್ತವೆ ಎಂದರು.
Ahinda: ಕಾಂಗ್ರೆಸ್ ಪಕ್ಷಕ್ಕೆ ಅಹಿಂದ ಬುಡ ಅಲುಗಾಡುವ ಆತಂಕ
ಈ ಸಂದರ್ಭದಲ್ಲಿ ಶ್ರೀ ಗುರುಶರಂಜಿ ಮಹಾರಾಜ್, ಸ್ವಾಮಿ ಗೋವಿಂದದೇವ್ ಗಿರಿ ಮಹಾರಾಜ್, ಸ್ವಾಮಿ ಅವಧೇಶನಂದ್ ಗಿರಿ ಮಹಾರಾಜ್, ಸ್ವಾಮಿ ಮಿತ್ರಾನಂದಜಿ ಮಹಾರಾಜ್, ಸಾಧ್ವಿ ಋತಂಭರ ಮತ್ತು ಧೀರೇಂದ್ರ ಶಾಸ್ತ್ರಿ ಸೇರಿದಂತೆ ಅನೇಕ ಧಾರ್ಮಿಕ ಮುಖಂಡರು, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಉಪಸ್ಥಿತರಿದ್ದರು.