ಲಖನೌ: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ISI)ಗೆ ಗೌಪ್ಯ ಮತ್ತು ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡ ಆರೋಪದ ಮೇಲೆ ಫಿರೋಜಾಬಾದ್ನ ಶಸ್ತ್ರಾಸ್ತ್ರ ಕಾರ್ಖಾನೆಯ ಉದ್ಯೋಗಿಯೊಬ್ಬನನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ATS) ಶುಕ್ರವಾರ (ಮಾ. 14) ಬಂಧಿಸಿದೆ (Honey Trap). ಯುಪಿ ಎಟಿಎಸ್ನ ಹೆಚ್ಚುವರಿ ಮಹಾನಿರ್ದೇಶಕ (ಎಡಿಜಿ) ನೀಲಬ್ಜಾ ಚೌಧರಿ ಅವರ ನಿರ್ದೇಶನದ ಮೇರೆಗೆ ಆರೋಪಿ ರವೀಂದ್ರ ಕುಮಾರ್ (Ravindra Kumar)ನನ್ನು ಲಖನೌದಲ್ಲಿರುವ ಎಟಿಎಸ್ ಪ್ರಧಾನ ಕಚೇರಿಗೆ ಕರೆಸಿ ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಬಂಧಿಸಲಾಯಿತು.
'ನೇಹಾ' ಎಂದು ಗುರುತಿಸಲಾದ ಪಾಕಿಸ್ತಾನದ ಗುಪ್ತಚರ ಕಾರ್ಯಕರ್ತೆಗೆ ಕುಮಾರ್ ರಕ್ಷಣಾ ಸಂಬಂಧಿತ ಸೂಕ್ಷ್ಮ ದಾಖಲೆಗಳನ್ನು ರವಾನಿಸಿದ್ದಾನೆ ಎಂಬ ಆರೋಪ ಇದೆ ಎಂದು ಚೌಧರಿ ಹೇಳಿದ್ದಾರೆ.
"ರವೀಂದ್ರ ಕುಮಾರ್ ಎಂಬ ವ್ಯಕ್ತಿ ಪಾಕ್ ಐಎಸ್ಐ ಏಜೆಂಟ್ ಜತೆ ಗೌಪ್ಯ ಮತ್ತು ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾನೆ ಎಂಬ ಮಾಹಿತಿ ಎಟಿಎಸ್ ಯುಪಿ ಮತ್ತು ಅದರ ಸಹ ಸಂಸ್ಥೆಗಳಿಗೆ ಸಿಕ್ಕಿತ್ತು. ಆದ್ದರಿಂದ ಇದರ ಮೇಲೆ ಕೆಲಸ ಮಾಡುತ್ತಿದ್ದ ನಮ್ಮ ಆಗ್ರಾ ಘಟಕವು ರವೀಂದ್ರ ಕುಮಾರ್ನನ್ನು ಪ್ರಾಥಮಿಕ ವಿಚಾರಣೆ ನಡೆಸಿತ್ತು. ಬಳಿಕ ಕೂಲಂಕುಷ ವಿಚಾರಣೆಗಾಗಿ ಎಟಿಎಸ್ ಪ್ರಧಾನ ಕಚೇರಿಗೆ ಕರೆಯಲಾಯಿತು. ಅಲ್ಲಿ ಆತ ನೇಹಾ ಎಂಬ ಏಜೆಂಟ್ ಮೂಲಕ ಬಹಳ ಸೂಕ್ಷ್ಮ ಮಾಹಿತಿಯನ್ನು ರವಾನಿಸಿದ್ದಾರೆ ಎಂಬುದು ಸಾಬೀತಾಗಿದೆ" ಎಂದು ಎಡಿಜಿ ಚೌಧರಿ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Pawan Kalyan: "ಭಾರತಕ್ಕೆ ಎರಡಲ್ಲ, ಬಹು ಭಾಷೆಗಳು ಬೇಕು" ; ಸ್ಟ್ಯಾಲಿನ್ಗೆ ಕೌಂಟರ್ ಕೊಟ್ಟ ಪವನ್ ಕಲ್ಯಾಣ್
"ಈ ಐಎಸ್ಐ ಮಾಡ್ಯೂಲ್ ಬಹಳ ಹಿಂದಿನಿಂದಲೂ ಇದೆ. ಅವರು ಜನರನ್ನು ಹನಿಟ್ರ್ಯಾಪ್ ಮಾಡಿ ಮಾಹಿತಿಯನ್ನು ಹೊರತೆಗೆಯುತ್ತಾರೆ. ಇದು ರಾಷ್ಟ್ರೀಯ ಭದ್ರತೆಗೆ ದೊಡ್ಡ ಅಪಾಯವನ್ನುಂಟು ಮಾಡುತ್ತದೆ. ಕುಮಾರ್ನನ್ನು ವಿಚಾರಣೆ ನಡೆಸಿದಾಗ, ಆತ ಕಾಲಕಾಲಕ್ಕೆ ಕೆಲಸ ಮಾಡುತ್ತಿದ್ದ ಶಸ್ತ್ರಾಸ್ತ್ರ ಕಾರ್ಖಾನೆಯ ದೈನಂದಿನ ಉತ್ಪಾದನಾ ವರದಿ ಮತ್ತು ಅಂಗಡಿಗಳ ರಶೀದಿ, ಇತರ ದಾಖಲೆಗಳು, ಬರಲಿರುವ ಸ್ಟಾಕ್, ಆರ್ಡರ್ಗಳು ಹೀಗೆ ಎಲ್ಲವನ್ನೂ ಹಂಚಿಕೊಂಡಿದ್ದ ಎಂಬುದು ತಿಳಿದುಬಂದಿದೆ" ಎಂದು ಅವರು ಹೇಳಿದ್ದಾರೆ.
ಕನಿಷ್ಠ ಮಟ್ಟದ ಭದ್ರತೆ ಖಚಿತಪಡಿಸಿ
ಈ ರೀತಿಯ ಸೂಕ್ಷ್ಮ ಸಂಸ್ಥೆಗಳು ತಮ್ಮ ಉದ್ಯೋಗಿಗಳ ಮೇಲೆ ಕನಿಷ್ಠ ಮಟ್ಟದ ಭದ್ರತಾ ತಪಾಸಣೆಗಳನ್ನು ನಿರ್ವಹಿಸಬೇಕೆಂದು ಹಿರಿಯ ಎಟಿಎಸ್ ಅಧಿಕಾರಿ ವಿನಂತಿಸಿದ್ದಾರೆ. "ನಿಮ್ಮ ಮೂಲಕ ನಾನು ವಿನಂತಿಸುವುದು ಏನೆಂದರೆ, ಎಲ್ಲ ಸೂಕ್ಷ್ಮ ಸಂಸ್ಥೆಗಳು ನಮ್ಮ ಅಧಿಕಾರಿಗಳೊಂದಿಗೆ ತಮ್ಮ ಭದ್ರತಾ ಕಸರತ್ತುಗಳು, ಎಸ್ಒಪಿಗಳು ಇತ್ಯಾದಿಗಳನ್ನು ನವೀಕರಿಸಬೇಕು ಮತ್ತು ಭವಿಷ್ಯದಲ್ಲಿ ಇಂತಹ ಸಂದರ್ಭಗಳನ್ನು ತಪ್ಪಿಸಲು ತಮ್ಮ ಉದ್ಯೋಗಿಗಳ ಮೇಲೆ ಕನಿಷ್ಠ ಮಟ್ಟದ ಭದ್ರತಾ ಪರಿಶೀಲನೆಯನ್ನು ನಿರ್ವಹಿಸಬೇಕು" ಎಂದು ಅವರು ಸಲಹೆ ನೀಡಿದ್ದಾರೆ.