ನವದೆಹಲಿ: ವಿಶಾಖಪಟ್ಟಣಂ (Visakhapatnam)ನಿಂದ ಶನಿವಾರ ದೆಹಲಿ (Delhi)ಗೆ ಬರುತ್ತಿದ್ದ ಇಂಡಿಗೋ (IndiGo) ವಿಮಾನದಲ್ಲಿ (6E 579) ಎಂಜಿನ್ ವೈಫಲ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (Indira Gandhi International Airport) ದಲ್ಲಿ 'ಪೂರ್ಣ ತುರ್ತು ಪರಿಸ್ಥಿತಿ' ಘೋಷಿಸಲಾಯಿತು. ವಿಮಾನ ನಿಲ್ದಾಣದ ರನ್ವೇ 28ರಲ್ಲಿ ಹೈ ಅಲರ್ಟ್ ಘೋಷಿಸಿ, ತುರ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಅದೃಷ್ಟವಶಾತ್, 161 ಪ್ರಯಾಣಿಕರನ್ನು ಹೊತ್ತಿದ್ದ ಈ ಬೋಯಿಂಗ್ (Boeing) 737-800 ವಿಮಾನವು ಬೆಳಿಗ್ಗೆ 11 ಗಂಟೆ ಸುಮಾರಿಗೆ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದೆ. ಎಲ್ಲಾ ಪ್ರಯಾಣಿಕರನ್ನು ಯಾವುದೇ ತೊಂದರೆಯಿಲ್ಲದೆ ವಿಮಾನದಿಂದ ಹೊರತರಲಾಗಿದೆ ಎಂದು ಮೂಲಗಳು ತಿಳಿಸಿವೆ.
ದೆಹಲಿ ಅಗ್ನಿಶಾಮಕದಳ ಅಧಿಕಾರಿಗಳ ಪ್ರಕಾರ, ಬೆಳಿಗ್ಗೆ 10.53ಕ್ಕೆ ವಿಮಾನ ತುರ್ತು ಭೂಸ್ಪರ್ಶವಾದ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ರವಾನಿಸಲಾಗಿತ್ತು. ವಿಮಾನಕ್ಕೆ ಯಾವುದೇ ಹಾನಿಯಾಗಿಲ್ಲ ಮತ್ತು ಪ್ರಯಾಣಿಕರೆಲ್ಲರೂ ಕ್ಷೇಮವಾಗಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
V Somanna: ಕರ್ನಾಟಕಕ್ಕೆ ಹೊಸ ರೈಲು ಘೋಷಿಸಿದ ಸಚಿವ ಸೋಮಣ್ಣ, 4 ಜಿಲ್ಲೆಗಳ ನಡುವೆ ಸಂಚಾರ
ಗಮನಾರ್ಹ ಸಂಗತಿ ಎಂದರೆ, ಕಳೆದ ತಿಂಗಳು ಕೂಡ ಸ್ಪೈಸ್ಜೆಟ್ನ ದೆಹಲಿ-ಲೇಹ್ ವಿಮಾನವೊಂದು ಎಂಜಿನ್ ಸಮಸ್ಯೆಯಿಂದಾಗಿ ದೆಹಲಿಯಲ್ಲೇ ತುರ್ತು ಭೂಸ್ಪರ್ಶ ಮಾಡಿತ್ತು. ಇತ್ತೀಚಿನ ದಿನಗಳಲ್ಲಿ ಬೋಯಿಂಗ್ 737 ವಿಮಾನಗಳಲ್ಲಿನ ಎಂಜಿನ್ ವೈಫಲ್ಯಗಳು ಜಾಗತಿಕವಾಗಿ ಕಳವಳಕ್ಕೆ ಕಾರಣವಾಗಿದ್ದು, ಹಲವು ಅಂತರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ಇದೇ ಮಾದರಿಯ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿವೆ.