ನವದೆಹಲಿ, ಫೆ. 12: ಐತಿಹಾಸಿಕ ಕೆಂಪುಕೋಟೆಯ ಮೇಲೆ ಇತ್ತೀಚೆಗೆ ನಡೆದ ಮಾರಕ ದಾಳಿಯಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್ನ (Jaish-e-Mohammed) ಕೈವಾಡ ಇದೆ ಎಂದು ವಿಶ್ವಸಂಸ್ಥೆಯ ಭಯೋತ್ಪಾದನಾ ನಿಗ್ರಹ ಮೇಲ್ವಿಚಾರಣಾ ತಂಡವು ಹೇಳಿದೆ. ಅಲ್ಲದೆ ಭಯೋತ್ಪಾದಕ ಕಾರ್ಯಾಚರಣೆಗಳಿಗಾಗಿ ಮಹಿಳೆಯರಿಗೆ (women terrorism) ಪ್ರತ್ಯೇಕ ವಿಭಾಗವನ್ನು ರಚಿಸುವುದು ಸೇರಿದಂತೆ ಸಂಘಟನೆಯ ವಿಕಸನಗೊಳ್ಳುತ್ತಿರುವ ಸಾಂಸ್ಥಿಕ ತಂತ್ರಗಳ ಬಗ್ಗೆ ಅದು ಕಳವಳ ವ್ಯಕ್ತಪಡಿಸಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಸಲ್ಲಿಸಿದ ಇತ್ತೀಚಿನ ವರದಿಯಲ್ಲಿ, ಅನಾಲಿಟಿಕಲ್ ಸಪೋರ್ಟ್ ಆ್ಯಂಡ್ ಸ್ಯಾಂಕ್ಷನ್ಸ್ ಮಾನಿಟರಿಂಗ್ ತಂಡವು ತಿಳಿಸಿರುವಂತೆ, ಒಂದು ಸದಸ್ಯ ರಾಷ್ಟ್ರವು ಜೈಶ್-ಎ-ಮೊಹಮ್ಮದ್ (JeM) ಸಂಘಟನೆ ಹಲವು ದಾಳಿಗಳ ಜವಾಬ್ದಾರಿ ಹೊತ್ತಿರುವುದಾಗಿ ವರದಿ ಮಾಡಿದೆ. 2025ರ ನವೆಂಬರ್ 9ರಂದು ನವದೆಹಲಿಯ ಕೆಂಪುಕೋಟೆಯಲ್ಲಿ ನಡೆದ ದಾಳಿಯೊಂದಿಗೂ ಈ ಸಂಘಟನೆ ಸಂಬಂಧ ಹೊಂದಿದೆ ಎಂದು ಹೇಳಲಾಗಿದೆ. ಆ ದಾಳಿಯಲ್ಲಿ 15 ಮಂದಿ ಮೃತಪಟ್ಟಿದ್ದರು.
ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾಗಿರುವ ಹಾಗೂ ಭಾರತದ ಸ್ವಾಯತ್ತತೆಯ ಸಂಕೇತವಾಗಿ ಪರಿಗಣಿಸಲ್ಪಡುವ ಕೆಂಪುಕೋಟೆಯಲ್ಲಿ ನಡೆದ ಆ ದಾಳಿಯೊಂದಿಗೆ ಸಂಘಟನೆಯ ಸಂಪರ್ಕ ಇರುವುದಾಗಿ ವರದಿಯಾಗಿರುವುದು ಪ್ರಾದೇಶಿಕ ಭದ್ರತಾ ಪರಿಸ್ಥಿತಿಯ ಬಗ್ಗೆ ಹೆಚ್ಚಿನ ನಿಗಾ ಇರಿಸುವ ಅಗತ್ಯವನ್ನು ಒತ್ತಿ ಹೇಳಿದೆ.
ಅನ್ಸಾರ್ ಘಜ್ವತ್-ಉಲ್-ಹಿಂದ್ ಸಂಘಟನೆ ಬಲಪಡಿಸಲು ದೆಹಲಿ ಸ್ಫೋಟ; ವಿಚಾರಣೆ ವೇಳೆ ಬಯಲಾಯ್ತು ಉಗ್ರ ರಹಸ್ಯ
ಅಕ್ಟೋಬರ್ 8ರಂದು, ಜೆಇಎಂ ನಾಯಕ ಮಸೂದ್ ಅಜರ್ ಜಮಾತ್ ಉಲ್-ಮುಮಿನಾತ್ ಎಂಬ ಮಹಿಳಾ ಘಟಕವನ್ನು ಸ್ಥಾಪಿಸಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಯುಎನ್ ತಂಡದ ಪ್ರಕಾರ, ಹೊಸ ಸಂಸ್ಥೆಯು ಭಯೋತ್ಪಾದಕ ದಾಳಿಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ. ಇದು ಸಂಘಟನೆಯ ನೇಮಕಾತಿ ಮತ್ತು ಸಹಾಯಕ ತಂತ್ರಗಳಲ್ಲಿ ಬದಲಾವಣೆ ಕಂಡುಬರುತ್ತಿರುವುದನ್ನು ಸೂಚಿಸುತ್ತದೆ.
ಅಲ್-ಖೈದಾ ಸಂಬಂಧಿತ ಸಂಘಟನೆಯಾಗಿ ಗುರುತಿಸಿರುವ ಜೈಶ್-ಇ-ಮೊಹಮ್ಮದ್ (JeM), ಮುಖ್ಯವಾಗಿ ಭಾರತವನ್ನು, ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರ ಪ್ರದೇಶವನ್ನು ಗುರಿಯಾಗಿಸಿಕೊಂಡು ದೀರ್ಘಕಾಲದಿಂದ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ. 2000ರಲ್ಲಿ ಸ್ಥಾಪಿತವಾದ ಈ ಸಂಘಟನೆ, ಭದ್ರತಾ ಪಡೆಗಳು ಮತ್ತು ನಾಗರಿಕರನ್ನು ಗುರಿಯಾಗಿಸಿ ಮಾಡಿರುವ ದಾಳಿಗಳು ಸೇರಿದಂತೆ ಹಲವಾರು ಪ್ರಮುಖ ದಾಳಿಗಳ ಹೊಣೆ ಹೊತ್ತುಕೊಂಡಿದೆ. ಇದರ ನಾಯಕ ಮಸೂದ್ ಅಜರ್, ಪ್ರಯಾಣ ನಿಷೇಧ ಮತ್ತು ಆಸ್ತಿಗಳ ಮುಟ್ಟುಗೋಲು ಸೇರಿದಂತೆ ಹಲವು ವರ್ಷಗಳಿಂದ ವಿಶ್ವಸಂಸ್ಥೆಯ ವಿವಿಧ ನಿರ್ಬಂಧಗಳಿಗೆ ಒಳಗಾಗಿದ್ದಾನೆ.
ಆದರೆ ಮೇಲ್ವಿಚಾರಣಾ ತಂಡವು ಗುಂಪಿನ ಪ್ರಸ್ತುತ ಸ್ಥಿತಿಯ ಬಗ್ಗೆ ಸದಸ್ಯ ರಾಷ್ಟ್ರಗಳಲ್ಲಿ ವಿಭಿನ್ನ ಮೌಲ್ಯಮಾಪನಗಳನ್ನು ಎತ್ತಿ ತೋರಿಸಿದೆ. ಕೆಲವು ದೇಶಗಳು ಜೆಇಎಂ ಅನ್ನು ಸಕ್ರಿಯ ಮತ್ತು ಕಾರ್ಯಾಚರಣೆಯ ಅಪಾಯಕಾರಿ ಎಂದು ಬಿಂಬಿಸುತ್ತಲೇ ಇದ್ದರೂ, ಮತ್ತೊಂದು ಸದಸ್ಯ ರಾಷ್ಟ್ರವು ಸಂಘಟನೆ ನಿಷ್ಕ್ರಿಯವಾಗಿದೆ ಎಂದು ತಿಳಿಸಿದೆ.
ದೆಹಲಿ ಕಾರು ಬಾಂಬ್ ಸ್ಫೋಟ ಪ್ರಕರಣ; ಎರಡನೇ ಆತ್ಮಹತ್ಯಾ ಬಾಂಬರ್ ನೇಮಕಕ್ಕೆ ಮುಂದಾಗಿದ್ದ ಮಾಸ್ಟರ್ ಮೈಂಡ್
ನಿರಂತರ ಭಯೋತ್ಪಾದನಾ ನಿಗ್ರಹ ಒತ್ತಡದ ಹೊರತಾಗಿಯೂ, ಜೆಇಎಂ ಮುಂತಾದ ಸಂಘಟನೆಗಳು ಹೊಸ ನೇಮಕಾತಿ ಮಾದರಿಗಳು ಅಥವಾ ಹೆಚ್ಚಿನ ಪ್ರಭಾವ ಬೀರುವ ದಾಳಿಗಳ ಮೂಲಕ ತಮ್ಮ ಹೊಂದಾಣಿಕೆ ಸಾಮರ್ಥ್ಯವನ್ನು ಮುಂದುವರಿಸಿಕೊಂಡಿದೆ ಎಂದು ವರದಿ ಕಳವಳ ವ್ಯಕ್ತಪಡಿಸಿದೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಪ್ರತ್ಯೇಕ ದಾಳಿಯಲ್ಲಿ ಭಾಗಿಯಾಗಿದ್ದರು ಎನ್ನಲಾದ ಮೂವರು ಉಗ್ರರು ಜುಲೈನಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದು ಈ ಪ್ರದೇಶದಲ್ಲಿ ಉಗ್ರಗಾಮಿ ಜಾಲಗಳ ವಿರುದ್ಧ ನಡೆಯುತ್ತಿರುವ ಪ್ರಬಲ ಭದ್ರತಾ ಕಾರ್ಯಾಚರಣೆಯನ್ನು ಒತ್ತಿ ಹೇಳಿದೆ.
ಒಟ್ಟಾರೆಯಾಗಿ ಕೆಲವು ಭಯೋತ್ಪಾದಕ ಸಂಘಟನೆಗಳು ದುರ್ಬಲಗೊಂಡಿದ್ದರೂ ಅಥವಾ ಛಿದ್ರಗೊಂಡಿದ್ದರೂ ಅವುಗಳನ್ನು ಮರುಸಂಘಟಿಸುವ ಮತ್ತು ಉನ್ನತ ಮಟ್ಟದ ಗುರಿಗಳ ಮೇಲೆ ದಾಳಿ ಮಾಡುವ ಸಾಮರ್ಥ್ಯವು ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಭದ್ರತೆಗೆ ಗಂಭೀರ ಬೆದರಿಕೆಯಾಗಿ ಉಳಿದಿದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.