ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಟಿಎಂಸಿ ಬಂಡಾಯದಿಂದ ಎನ್‌ಡಿಎಗೆ ಬಲ; ಮತ್ತೆ ಡಿಲಿಮಿಟೇಶನ್ ಮಸೂದೆ ಜಾರಿ?

ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಯಲ್ಲಿ ಬಂಡಾಯ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಎನ್‌ಡಿಎ ಸರ್ಕಾರದ ಸಂಖ್ಯಾಬಲ ಹೆಚ್ಚುವ ಸಾಧ್ಯತೆ ಮೂಡಿದೆ. ಇದರಿಂದ ಕ್ಷೇತ್ರ ಮರುಹಂಚಿಕೆ (ಡಿಲಿಮಿಟೇಶನ್) ಮಸೂದೆ ಸೇರಿದಂತೆ ಪ್ರಮುಖ ಸಂವಿಧಾನ ತಿದ್ದುಪಡಿ ಮಸೂದೆಗಳನ್ನು ಮತ್ತೆ ಸಂಸತ್ತಿನಲ್ಲಿ ಮಂಡಿಸುವ ಚರ್ಚೆ ಜೋರಾಗಿದೆ.

ಲೋಕಸಭೆ

ನವದೆಹಲಿ: ಮಮತಾ ಬ್ಯಾನರ್ಜಿ( Mamata Banerjee) ನೇತೃತ್ವದ ತೃಣಮೂಲ ಕಾಂಗ್ರೆಸ್‌ (ಟಿಎಂಸಿ)(TMC) ಪಕ್ಷದಲ್ಲಿ ಉಂಟಾಗಿರುವ ಬಂಡಾಯ ಬೆಳವಣಿಗೆಗಳ ನಡುವೆ, ಕೇಂದ್ರದ ಎನ್‌ಡಿಎ ಸರ್ಕಾರ (NDA Government)ವು ಮುಂಗಾರು ಅಧಿವೇಶನದಲ್ಲಿ ಮತ್ತೆ ಕ್ಷೇತ್ರ ಮರುಹಂಚಿಕೆ (Delimitation) ಮಸೂದೆಯನ್ನು ಮಂಡಿಸುವ ಸಾಧ್ಯತೆಗಳು ಹೆಚ್ಚಾಗಿವೆ ಎಂಬ ರಾಜಕೀಯ ಚರ್ಚೆಗಳು ಜೋರಾಗಿವೆ. ಜುಲೈ ಮೂರನೇ ವಾರದಿಂದ ಆರಂಭವಾಗಲಿರುವ ಸಂಸತ್ತು (Parliament)ದ ಮುಂಗಾರು ಅಧಿವೇಶನದಲ್ಲಿ ಹಲವು ಮಹತ್ವದ ಸಂವಿಧಾನ ತಿದ್ದುಪಡಿ ಮಸೂದೆಗಳಗಳನ್ನು ಮಂಡಿಸಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಈ ವರ್ಷದ ಏಪ್ರಿಲ್‌ನಲ್ಲಿ ಮಂಡನೆಯಾಗಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆ (Delimitation Bill, 2026) ಅಗತ್ಯವಿದ್ದ ಎರಡು-ಮೂರನೇ ಬಹುಮತವನ್ನು ಪಡೆಯಲು ವಿಫಲವಾಗಿ ಸೋತಿತ್ತು. ಇದೇ ಕಾರಣದಿಂದ ಮಹಿಳೆಯರಿಗೆ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ 33% ಮೀಸಲಾತಿ ಕಲ್ಪಿಸುವ ಮಸೂದೆಯೂ ಅಂಗೀಕಾರವಾಗಿರಲಿಲ್ಲ.

ಟಿಎಂಸಿ ಸಂಸದರಿಂದ ಬಂಡಾಯ

ಟಿಎಂಸಿ ಸಂಸದೆ ಕಕೋಲಿ ಘೋಷ್ ದಸ್ತಿದಾರ್ ಅವರು ಲೋಕಸಭೆಯ 20 ಟಿಎಂಸಿ ಸಂಸದರು ತಮ್ಮ ಬೆಂಬಲದಲ್ಲಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಪಕ್ಷ ವಿಭಜನೆಗೆ ಅಗತ್ಯವಿರುವ ಸಂಖ್ಯೆಗೆ ಇದು ಸಾಕಾಗಲಿದೆ. ಈ ಬಂಡಾಯ ಗುಂಪು ಎನ್‌ಡಿಎ ಸರ್ಕಾರಕ್ಕೆ ಬೆಂಬಲ ನೀಡಲು ಮುಂದಾಗಿದೆ ಎನ್ನಲಾಗಿದೆ.

ಪ್ರಸ್ತುತ ಲೋಕಸಭೆಯಲ್ಲಿ ಟಿಎಂಸಿಗೆ 29 ಸಂಸದರು ಇದ್ದಾರೆ. 20 ಸಂಸದರು ಎನ್‌ಡಿಎಗೆ ಬೆಂಬಲ ನೀಡಿದರೆ, ಆಡಳಿತಾರೂಢ ಮೈತ್ರಿಯ ಸಂಖ್ಯೆ ಮೊದಲ ಬಾರಿಗೆ 300ರ ಗಡಿ ದಾಟಲಿದೆ.

ಡಿಎಂಕೆ ಬೆಂಬಲದ ನಿರೀಕ್ಷೆ

ತಮಿಳುನಾಡಿನಲ್ಲಿ ಇತ್ತೀಚಿನ ಚುನಾವಣಾ ಸೋಲಿನ ಬಳಿಕ ಕಾಂಗ್ರೆಸ್‌ನಿಂದ ದೂರವಾದ ಡಿಎಂಕೆಯ 22 ಲೋಕಸಭಾ ಸದಸ್ಯರಿಂದ ವಿಷಯಾಧಾರಿತ ಬೆಂಬಲ ಪಡೆಯಲು ಸಹ ಮಾತುಕತೆಗಳು ನಡೆಯುತ್ತಿವೆ ಎಂದು ವರದಿಯಾಗಿದೆ. ಡಿಎಂಕೆಯ ಬೆಂಬಲ ದೊರೆತರೆ, ಸಂವಿಧಾನ ತಿದ್ದುಪಡಿ ಮಸೂದೆಗಳನ್ನು ಅಂಗೀಕರಿಸಲು ಅಗತ್ಯವಿರುವ ವಿಶೇಷ ಬಹುಮತದತ್ತ ಎನ್‌ಡಿಎ ಮತ್ತಷ್ಟು ಸಮೀಪಿಸಲಿದೆ.

ಎನ್‌ಡಿಎ ಸಂಖ್ಯಾಬಲ ಎಷ್ಟು?

543 ಸದಸ್ಯರ ಲೋಕಸಭೆಯಲ್ಲಿ ಎರಡು-ಮೂರನೇ ಬಹುಮತಕ್ಕೆ 362 ಸದಸ್ಯರ ಬೆಂಬಲ ಅಗತ್ಯ. ಆದರೆ ಮೂರು ಸ್ಥಾನಗಳು ಖಾಲಿ ಇರುವುದರಿಂದ ಪ್ರಸ್ತುತ ಪರಿಣಾಮಕಾರಿ ಸಂಖ್ಯೆ 540 ಆಗಿದ್ದು, ಅಗತ್ಯ ಬಹುಮತ 360ಕ್ಕೆ ಇಳಿದಿದೆ.

ಎನ್‌ಡಿಎ ಪ್ರಸ್ತುತ ಬೆಂಬಲ: 293

ಟಿಎಂಸಿಯ 20 ಬಂಡಾಯ ಸಂಸದರ ಬೆಂಬಲ ಸಿಕ್ಕರೆ: 313

ಡಿಎಂಕೆಯ 22 ಸದಸ್ಯರ ಬೆಂಬಲ ಸೇರಿಸಿದರೆ: 335

ಶಿವಸೇನೆ (ಉದ್ಧವ್ ಠಾಕ್ರೆ ಬಣ)ಯಿಂದ 6 ಸದಸ್ಯರ ಬೆಂಬಲ ದೊರೆತರೆ: 341

ಇದರ ಜೊತೆಗೆ ಸಣ್ಣ ಪಕ್ಷಗಳು, ಪಕ್ಷೇತರ ಸದಸ್ಯರು ಹಾಗೂ ಅಡ್ಡ ಮತದಾನದ ಮೂಲಕ ಉಳಿದ ಅಂತರವನ್ನು ಕಡಿಮೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎನ್ನಲಾಗಿದೆ.

Sunil Kanugolu: ಸಿಎಂ ಮುಖ್ಯ ಸಲಹೆಗಾರರಾಗಿ 'ಕಾಂಗ್ರೆಸ್‌ ಚುನಾವಣಾ ಚಾಣಕ್ಯ' ಸುನೀಲ್ ಕನುಗೋಳು ನೇಮಕ

ಮಹಿಳಾ ಮೀಸಲಾತಿ, 'ಒಂದು ರಾಷ್ಟ್ರ-ಒಂದು ಚುನಾವಣೆ'ಗೆ ಒತ್ತು

ಕೇಂದ್ರ ಸರ್ಕಾರವು 2029ರ ಲೋಕಸಭೆ ಚುನಾವಣೆಯಿಂದ ಮಹಿಳೆಯರಿಗೆ 33% ಮೀಸಲಾತಿ ಜಾರಿಗೊಳಿಸುವ ಸಂವಿಧಾನ ತಿದ್ದುಪಡಿ ಮಸೂದೆ ಹಾಗೂ 'ಒಂದು ರಾಷ್ಟ್ರ - ಒಂದು ಚುನಾವಣೆ' ಯೋಜನೆಗೆ ಸಂಬಂಧಿಸಿದ ಮಹತ್ವದ ಮಸೂದೆಗಳನ್ನು ತರಲು ಉತ್ಸುಕವಾಗಿದೆ.

ಆದರೆ ಇವುಗಳ ಅಂಗೀಕಾರಕ್ಕೆ ಅಗತ್ಯವಿರುವ ಎರಡು-ಮೂರನೇ ಬಹುಮತದ ಸಂಖ್ಯೆಯನ್ನು ಮೊದಲು ಖಚಿತಪಡಿಸಿಕೊಳ್ಳುವತ್ತ ಸರ್ಕಾರ ಗಮನ ಹರಿಸಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ರಾಜ್ಯಸಭೆಯಲ್ಲೂ ಸಂಖ್ಯಾಬಲ ಹೆಚ್ಚಳ?

ರಾಜ್ಯಸಭೆಯಲ್ಲಿಯೂ ಎನ್‌ಡಿಎ ತನ್ನ ಸಂಖ್ಯಾಬಲವನ್ನು ವೃದ್ಧಿಸಿಕೊಳ್ಳಲು ಯತ್ನಿಸುತ್ತಿದೆ. ಟಿಎಂಸಿಯ ಕೆಲ ಸದಸ್ಯರು ರಾಜೀನಾಮೆ ನೀಡಿ ಬಿಜೆಪಿ ಬೆಂಬಲದೊಂದಿಗೆ ಮರು ಆಯ್ಕೆಯಾಗುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎನ್ನಲಾಗಿದೆ.

ಪ್ರಸ್ತುತ ರಾಜ್ಯಸಭೆಯಲ್ಲಿ ಎರಡು-ಮೂರನೇ ಬಹುಮತಕ್ಕೆ 164 ಸದಸ್ಯರ ಬೆಂಬಲ ಅಗತ್ಯವಿದ್ದು, ಎನ್‌ಡಿಎ ಈಗಾಗಲೇ 150ಕ್ಕೂ ಹೆಚ್ಚು ಸದಸ್ಯರ ಬೆಂಬಲ ಹೊಂದಿದೆ. ಡಿಎಂಕೆಯ ಸದಸ್ಯರಿಂದಲೂ ವಿಷಯಾಧಾರಿತ ಬೆಂಬಲ ಸಿಕ್ಕರೆ ಅಗತ್ಯ ಸಂಖ್ಯೆಗೆ ಇನ್ನಷ್ಟು ಹತ್ತಿರವಾಗಲಿದೆ.

ಒಟ್ಟಾರೆ, ಟಿಎಂಸಿಯ ಬಂಡಾಯ ಹಾಗೂ ಇತರೆ ಪಕ್ಷಗಳಿಂದ ಸಿಗಬಹುದಾದ ಬೆಂಬಲದ ಹಿನ್ನೆಲೆಯಲ್ಲಿ ಎನ್‌ಡಿಎ ಸರ್ಕಾರವು ಕ್ಷೇತ್ರ ಮರುಹಂಚಿಕೆ, ಮಹಿಳಾ ಮೀಸಲಾತಿ ಹಾಗೂ 'ಒಂದು ರಾಷ್ಟ್ರ-ಒಂದು ಚುನಾವಣೆ' ಸೇರಿದಂತೆ ಪ್ರಮುಖ ಸಂವಿಧಾನ ತಿದ್ದುಪಡಿ ಮಸೂದೆಗಳನ್ನು ಮತ್ತೆ ಸಂಸತ್ತಿಗೆ ತರಲು ಸಿದ್ಧತೆ ನಡೆಸುತ್ತಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.