ಇಸ್ಲಾಮಾಬಾದ್: ಪಾಕಿಸ್ತಾನದ ಐಎಸ್ಐ (ISI) ಬೆಂಬಲಿತ ಉಗ್ರ ಜಾಲದ(Terror Network) ತನಿಖೆಯಲ್ಲಿ ಹೊಸ ಮಾಹಿತಿಗಳು ಬೆಳಕಿಗೆ ಬಂದಿವೆ. ಕರಾಚಿಯ ಪ್ರತಿಷ್ಠಿತ ಕ್ಲಿಫ್ಟನ್ ರಸ್ತೆ(Clifton Road Karachi) ಪ್ರದೇಶದಿಂದ ಈ ಜಾಲವನ್ನು ನಿರ್ವಹಿಸಲಾಗುತ್ತಿತ್ತು ಎಂಬ ಶಂಕೆಯನ್ನು ತನಿಖಾ ಸಂಸ್ಥೆಗಳು ವ್ಯಕ್ತಪಡಿಸಿದ್ದು, ದೆಹಲಿ ಹಾಗೂ ಮುಂಬೈ ನಗರಗಳು ಈ ಉಗ್ರ ಜಾಲದ ಪ್ರಮುಖ ಗುರಿಗಳಾಗಿದ್ದವು ಎಂದು ಹೇಳಲಾಗಿದೆ. ಇತ್ತೀಚೆಗೆ ದೆಹಲಿ ಪೊಲೀಸ್ ಸ್ಪೆಷಲ್ ಸೆಲ್ ಹಾಗೂ ಕೇಂದ್ರ ತನಿಖಾ ಸಂಸ್ಥೆಗಳು ಬಂಧಿಸಿದ್ದ ಎಂಟು ಶಂಕಿತರಿಂದ ವಿಚಾರಣೆ ನಡೆಸಿದ ವೇಳೆ ಈ ಮಾಹಿತಿ ಲಭ್ಯವಾಗಿದೆ. ಕಾರ್ಯಾಚರಣೆಯಲ್ಲಿ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳು ಹಾಗೂ ಹ್ಯಾಂಡ್ ಗ್ರೆನೇಡ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ದಾವೂದ್ ಆಪ್ತ ಮುನ್ನಾ ಝಿಂಗಾಡಾ ಪ್ರಮುಖ ಸಂಚಾಲಕ?
ತನಿಖೆಯಲ್ಲಿ ಸಯ್ಯದ್ ಮುದಸ್ಸರ್ ಹುಸೇನ್ ಅಲಿಯಾಸ್ ಮುನ್ನಾ ಝಿಂಗಾಡಾ(Munna Jhingada) ಈ ಜಾಲದ ಪ್ರಮುಖ ಸಂಚಾಲಕನಾಗಿ ಗುರುತಿಸಲಾಗಿದ್ದು, ಆತ ಭೂಗತ ಪಾತಕಿ ದಾವೂದ್ ಇಬ್ರಾಹಿಂ (Dawood Ibrahim) ಹಾಗೂ ಆತನ ಸಹಚರ ಛೋಟಾ ಶಕೀಲ್ ಅವರ ಆಪ್ತನೆಂದು ಅಧಿಕಾರಿಗಳು ತಿಳಿಸಿದ್ದಾರೆ. ಕರಾಚಿಯಲ್ಲಿ ಐಷಾರಾಮಿ ಹೋಟೆಲ್ ಸಮೀಪ ಹಾಗೂ ದಾವೂದ್ನ 'ವೈಟ್ ಹೌಸ್' ನಿವಾಸದಿಂದ ಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಸೇಫ್ ಹೌಸ್ನಿಂದ ಆತ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತಿದ್ದನೆಂದು ತನಿಖೆಯಲ್ಲಿ ತಿಳಿದುಬಂದಿದೆ.
ವಿಡಿಯೊ ಕರೆ, ನೇಮಕಾತಿ ಮತ್ತು ಹಣಕಾಸು ನೆರವು
ಮುನ್ನಾ ಝಿಂಗಾಡಾ ಕರಾಚಿಯ ಸೇಫ್ ಹೌಸ್ನಿಂದ ಭಾರತದಲ್ಲಿರುವ ಕಾರ್ಯಕರ್ತರೊಂದಿಗೆ ನಿಯಮಿತವಾಗಿ ವಿಡಿಯೊ ಕರೆಗಳ ಮೂಲಕ ಸಂಪರ್ಕದಲ್ಲಿದ್ದನೆಂದು ತನಿಖಾ ಮೂಲಗಳು ತಿಳಿಸಿದ್ದು, ಭಾರತದಲ್ಲಿ ಹೊಸ ಭೂಗತ-ಉಗ್ರ ಜಾಲವನ್ನು ನಿರ್ಮಿಸಲು ಆತ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದನೆಂಬ ಆರೋಪವೂ ಕೇಳಿಬಂದಿದೆ.
114 ರಫೇಲ್ ಜೆಟ್ ಖರೀದಿಗೆ ಮುಂದಾದ ಭಾರತ: ಫ್ರಾನ್ಸ್ನೊಂದಿಗೆ 3.25 ಲಕ್ಷ ಕೋಟಿ ರೂಪಾಯಿಗಳ ಬೃಹತ್ ಒಪ್ಪಂದ
ದೆಹಲಿ ಮತ್ತು ಮುಂಬೈ ಗುರಿ
ತನಿಖೆಯ ಪ್ರಕಾರ, ದೆಹಲಿ ಮತ್ತು ಮುಂಬೈ ನಗರಗಳಲ್ಲಿ ದಾಳಿ ನಡೆಸುವ ಉದ್ದೇಶದಿಂದ ಪೂರ್ವಭಾವಿ ಪರಿಶೀಲನೆ (ರೆಕ್ಕಿ) ನಡೆಸಲಾಗಿತ್ತು. ಉಗ್ರ ಚಟುವಟಿಕೆಗಳಿಗೆ ಬೇಕಾದ ಶಸ್ತ್ರಾಸ್ತ್ರಗಳು ಹಾಗೂ ಲಾಜಿಸ್ಟಿಕ್ ನೆರವನ್ನು ಒದಗಿಸುವ ಕೆಲಸವೂ ಈ ಜಾಲ ಮಾಡುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಂಜಾಬ್ನಲ್ಲಿ ಶಸ್ತ್ರಾಸ್ತ್ರ ಪೂರೈಕೆ
ಕೆಲವು ಸದಸ್ಯರು ಭಾರತದಲ್ಲಿ ಕಾರ್ಯಾಚರಣೆ ನಡೆಸಲು 20 ಲಕ್ಷ ಬೇಡಿಕೆ ಇಟ್ಟಿದ್ದರೆಂದು ವಿಚಾರಣೆಯಲ್ಲಿ ಬಹಿರಂಗವಾಗಿದ್ದು, ಪಾಕಿಸ್ತಾನದಿಂದ ಕಳುಹಿಸಲಾದ ಶಸ್ತ್ರಾಸ್ತ್ರಗಳು ಮತ್ತು ಹ್ಯಾಂಡ್ ಗ್ರೆನೇಡ್ಗಳನ್ನು ಪಂಜಾಬ್ನ ಗುರುದಾಸ್ಪುರ್ ಜಿಲ್ಲೆಯಲ್ಲಿ ಡ್ರಾಪ್ ಮಾಡಲಾಗಿತ್ತು ಎನ್ನಲಾಗಿದೆ.
ಮತ್ತೆ ಸುದ್ದಿಯಲ್ಲಿರುವ ಕ್ಲಿಫ್ಟನ್ ರಸ್ತೆ
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕರಾಚಿಯ ಕ್ಲಿಫ್ಟನ್ ರಸ್ತೆ ಪ್ರದೇಶ ಮತ್ತೆ ಭಾರತೀಯ ಭದ್ರತಾ ಸಂಸ್ಥೆಗಳ ಗಮನ ಸೆಳೆದಿದ್ದು, ಸಂಘಟಿತ ಅಪರಾಧ ಮತ್ತು ಗಡಿ ದಾಟಿದ ಉಗ್ರ ಚಟುವಟಿಕೆಗಳಿಗೆ ಈ ಪ್ರದೇಶ ಪ್ರಮುಖ ನೆಲೆಯಾಗಿರಬಹುದು ಎಂದು ತನಿಖಾ ಸಂಸ್ಥೆಗಳು ಶಂಕಿಸಿವೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಹಣಕಾಸು ವ್ಯವಹಾರಗಳು, ಸಂವಹನ ದಾಖಲೆಗಳು ಹಾಗೂ ಗಡಿ ದಾಟಿದ ಸಂಪರ್ಕಗಳ ಕುರಿತು ಹೆಚ್ಚಿನ ಪರಿಶೀಲನೆ ನಡೆಯುತ್ತಿದೆ.