ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

One Nation One Time: ʼಒನ್‌ ನೇಷನ್‌ ಒನ್‌ ಟೈಂʼ ಲಾಂಚ್‌ಗೆ ಕೇಂದ್ರದ ಮಹತ್ತರ ಹೆಜ್ಜೆ; ಬೆಂಗಳೂರು ಸೇರಿ ದೇಶದ 5 ಕಡೆ ಪ್ರಾದೇಶಿಕ ಪ್ರಮಾಣಿತ ಪ್ರಯೋಗಾಲಯ ಸ್ಥಾಪನೆ

ಎಲ್ಲ ಕಾನೂನು, ವಾಣಿಜ್ಯ, ಡಿಜಿಟಲ್ ಮತ್ತು ಆಡಳಿತಾತ್ಮಕ ಉದ್ದೇಶಗಳಿಗಾಗಿ ಸರ್ಕಾರ ಶೀಘ್ರದಲ್ಲೇ ಭಾರತೀಯ ಪ್ರಮಾಣಿತ ಸಮಯವನ್ನು (IST) ಕಡ್ಡಾಯಗೊಳಿಸಲಿದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಬುಧವಾರ ಘೋಷಿಸಿದರು. ಇದಕ್ಕಾಗಿ ಗ್ರಾಹಕ ವ್ಯವಹಾರಗಳ ಇಲಾಖೆ, CSIR-NPL ಮತ್ತು ISRO ಸಹಯೋಗದಲ್ಲಿ ಬೆಂಗಳೂರು, ಅಹಮದಾಬಾದ್, ಭುವನೇಶ್ವರ, ಫರಿದಾಬಾದ್ ಮತ್ತು ಗುವಾಹಟಿಯಲ್ಲಿ 5 ಪ್ರಾದೇಶಿಕ ಪ್ರಮಾಣಿತ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುತ್ತಿದೆ.

ʼಒನ್‌ ನೇಷನ್‌ ಒನ್‌ ಟೈಂʼ ಲಾಂಚ್‌ಗೆ ಕೇಂದ್ರದ ಮಹತ್ತರ ಹೆಜ್ಜೆ

Profile Ramesh B Jun 18, 2025 9:26 PM

ಹೊಸದಿಲ್ಲಿ: ದೇಶದಲ್ಲಿ ಭಾರತೀಯ ಪ್ರಮಾಣಿತ (IST) ಮತ್ತು ನಿಖರ ಸಮಯ ಪ್ರಸರಣಕ್ಕಾಗಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದ್ದು, ಬೆಂಗಳೂರು ಸೇರಿ ದೇಶದ 5 ಕಡೆ ಪ್ರಾದೇಶಿಕ ಪ್ರಮಾಣಿತ ಪ್ರಯೋಗಾಲಯ ಸ್ಥಾಪನೆಗೆ ಸಿದ್ಧತೆ ನಡೆಸಿದೆ (One Nation One Time). ಗ್ರಾಹಕ ವ್ಯವಹಾರಗಳ ಇಲಾಖೆ, CSIR-NPL ಮತ್ತು ISRO ಸಹಯೋಗದಲ್ಲಿ ಬೆಂಗಳೂರು, ಅಹಮದಾಬಾದ್, ಭುವನೇಶ್ವರ, ಫರಿದಾಬಾದ್ ಮತ್ತು ಗುವಾಹಟಿಯಲ್ಲಿ 5 ಪ್ರಾದೇಶಿಕ ಪ್ರಮಾಣಿತ ಪ್ರಯೋಗಾಲಯಗಳನ್ನು (RRSL) ಸ್ಥಾಪಿಸುತ್ತಿದೆ.

ಈ ಕೇಂದ್ರಗಳು ಮಿಲಿ ಸೆಕೆಂಡ್‌ನಿಂದ ಮೈಕ್ರೋ ಸೆಕೆಂಡ್ ನಿಖರತೆ ಖಚಿತಪಡಿಸಿಕೊಳ್ಳಲು ನೆಟ್‌ವರ್ಕ್ ಟೈಮ್ ಪ್ರೋಟೋಕಾಲ್ (NTP) ಮತ್ತು ನಿಖರ ಸಮಯ ಪ್ರೋಟೋಕಾಲ್ (PTP) ಬಳಸಿಕೊಂಡು ಪರಮಾಣು ಗಡಿಯಾರ ಮತ್ತು ಸುರಕ್ಷಿತ ಸಿಂಕ್ರೊನೈಸೇಶನ್ ವ್ಯವಸ್ಥೆ ಹೊಂದಿರಲಿವೆ.

ನವದೆಹಲಿಯ ವಿಜ್ಞಾನ ಭವನದಲ್ಲಿ ಬುಧವಾರ, ʼಒನ್‌ ನೇಷನ್‌ ಒನ್‌ ಟೈಂʼ ಲಾಂಚ್‌ ಕುರಿತು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ (Pralhad Joshi) ನೇತೃತ್ವದಲ್ಲಿ ದುಂಡು ಮೇಜಿನ ಸಮ್ಮೇಳನ ನಡೆಸಿದ್ದು, ವಿವಿಧ ಇಲಾಖೆ ಹಾಗೂ ಖಾಸಗಿ ಸಂಸ್ಥೆಗಳ ಪ್ರಮುಖರೊಂದಿಗೆ ಮಹತ್ವದ ಚರ್ಚೆ ನಡೆಸಲಾಯಿತು. ಭಾರತೀಯ ತಂತ್ರಜ್ಞಾನ ಆಧಾರಿತ ಜಿಪಿಎಸ್‌ ಹಾಗೂ ನಿಖರ ಸಮಯ ಅನುಸರಣೆ ಬಗ್ಗೆ ಚಿಂತನ-ಮಂಥನ ನಡೆಯಿತು.



ಈ ಸುದ್ದಿಯನ್ನೂ ಓದಿ: Pralhad Joshi: ಕಾಂಗ್ರೆಸ್‌ ಯಾವತ್ತೂ ಸಾಮಾಜಿಕ ಬದ್ಧತೆ ತೋರಿಲ್ಲ, ಜಾತಿ ಗಣತಿ ರಾಜಕೀಯ ನಾಟಕವಷ್ಟೇ: ಪ್ರಲ್ಹಾದ್‌ ಜೋಶಿ

ದುಂಡು ಮೇಜಿನ ಈ ಸಮ್ಮೇಳನದಲ್ಲಿ ವಿವಿಧ ವಲಯಗಳ 100ಕ್ಕೂ ಹೆಚ್ಚು ಪ್ರತಿನಿಧಿಗಳ ಸಕ್ರಿಯ ಭಾಗವಹಿಸುವಿಕೆ ʼಒನ್‌ ನೇಷನ್‌ ಒನ್‌ ಟೈಂʼ ಕಾರ್ಯಗತಗೊಳಿಸುವ ನಿರ್ಣಯಕ್ಕೆ ಸಾಕ್ಷಿ ಎನ್ನುವಂತಿತ್ತು. ಅಲ್ಲದೇ, ಇದು ಇಂಡಿಯನ್‌ GPS ಆಧಾರಿತ ನಿಖರ ಟೈಂ ಅನ್ನು ಕಾನೂನುಬದ್ಧವಾಗಿ ಜಾರಿಗೊಳಿಸಲು, ಡಿಜಿಟಲ್ ಸುರಕ್ಷಿತೆ ಹಾಗೂ ಜಾಗತಿಕ ಮಾನದಂಡವಾಗಿಸಲು ಸಮ್ಮತಿಸಿತು.

ಸಮ್ಮೇಳನದ ನೇತೃತ್ವ ವಹಿಸಿದ್ದ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರು, ಭಾರತದ ಇತಿಹಾಸದಲ್ಲಿ ಇದೇ ಮೊಟ್ಟ ಮೊದಲು ʼISTʼ ನಮ್ಮ ದೇಶದ ಅಧಿಕೃತ ಕಾನೂನು ಸಮಯವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ʼಒನ್‌ ನೇಷನ್‌ ಒನ್‌ ಟೈಂʼ ದೃಷ್ಟಿಕೋನ ಭಾರತದ ಡಿಜಿಟಲ್ ಮತ್ತು ಆಡಳಿತಾತ್ಮಕ ದಕ್ಷತೆಯ ಹೊಸ ಯುಗಕ್ಕೆ ನಾಂದಿ ಹಾಡುತ್ತದೆ. ಅಲ್ಲದೇ, ವಂಚನೆ ಮತ್ತು ಸೈಬರ್ ದುರ್ಬಲತೆ, ವಿದೇಶಿ ಸಮಯ ಮೂಲಗಳ ಮೇಲಿನ ಅವಲಂಬನೆ ಹಾಗೂ ಅಪಾಯಗಳಿಗೆ ಇದು ಪರಿಹಾರವಾಗಲಿದೆ ಎಂದು ಅಭಿಪ್ರಾಯ ಹಂಚಿಕೊಂಡರು.

ಬೆಂಗಳೂರು ಸೇರಿದಂತೆ ದೇಶದ 5 ಕಡೆ ನಿರ್ಮಾಣವಾಗುವ ಪ್ರಾದೇಶಿಕ ಪ್ರಮಾಣಿತ ಪ್ರಯೋಗಾಲಯಗಳು ವಿಪತ್ತು ಚೇತರಿಕೆ ಕೇಂದ್ರವಾಗಲಿವೆ. ಭಾರತದಲ್ಲಿ ಅತಿ ಶೀಘ್ರದಲ್ಲಿಯೇ ಜಾರಿಗೊಳ್ಳುವ ʼಏಕೀಕೃತ ಸಮಯʼ ವ್ಯವಸ್ಥೆ ದೇಶದಲ್ಲಿ ಸ್ಥಿತಿಸ್ಥಾಪಕತ್ವ ಮತ್ತು ಅಭಿವೃದ್ಧಿಗೆ ಉತ್ತಮ ವೇದಿಕೆಯಾಗಲಿದೆ. ಇದು ರಾಷ್ಟ್ರದ ಭದ್ರತೆ, ಡಿಜಿಟಲ್ ವಹಿವಾಟುಗಳಲ್ಲಿ ವಿಶ್ವಾಸಾರ್ಹತೆ ಮತ್ತು ಮೂಲಸೌಕರ್ಯಗಳನ್ನು ಹೆಚ್ಚಿಸಲಿದೆ. IST ಅಳವಡಿಕೆಯು ಸೈಬರ್ ಭದ್ರತೆಯನ್ನು ಬಲಪಡಿಸುವುದರ ಜೊತೆ ವಿಧಿ ವಿಜ್ಞಾನ ತನಿಖೆಗಳನ್ನು ಬಲಪಡಿಸಲಿದೆ ಎಂದರು.

ದೇಶಾದ್ಯಂತ ವಿಶ್ವಾಸಾರ್ಹ ಮತ್ತು ಪ್ರಮಾಣೀಕೃತ ಡಿಜಿಟಲ್ ಪರಿಸರ ವ್ಯವಸ್ಥೆಗೆ ಇದು ಪ್ರಮುಖ ಹೆಜ್ಜೆಯಾಗಿದೆ. ರಾಷ್ಟ್ರೀಯ ಸಮಯ ಸಾರ್ವಭೌಮತ್ವವನ್ನು ಸಾರುವ ಕಡೆಗೆ ನಿರ್ಣಾಯಕ ಹೆಜ್ಜೆಯಾಗಿದೆ. ಸಾಮಾನ್ಯ ಜನರಿಗೆ ಹೆಚ್ಚಿನ ಸುರಕ್ಷಿತ ಡಿಜಿಟಲ್ ವಹಿವಾಟು, ನಿಖರ ಸಮಯದ ಬಿಲ್ಲಿಂಗ್, ಸೈಬರ್ ಅಪರಾಧದ ಅಪಾಯದಿಂದ ರಕ್ಷಿಸುವುದು, ಸಾರಿಗೆ ಮತ್ತು ಸಂವಹನದಲ್ಲಿ ಸಮಯಪಾಲನೆ, ನ್ಯಾಯಸಮ್ಮತ, ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯನ್ನು ʼಒನ್‌ ನೇಷನ್‌ ಒನ್‌ ಟೈಂʼ ಖಚಿತಪಡಿಸುತ್ತದೆ ಎಂದು ಜೋಶಿ ಪ್ರತಿಪಾದಿಸಿದರು.

NTP ಮತ್ತು PTP ಯಂತಹ ಸುರಕ್ಷಿತ ಪ್ರೋಟೋಕಾಲ್‌ಗಳನ್ನು ಹೊಂದಿದ 5 ಪ್ರಾದೇಶಿಕ ಉಲ್ಲೇಖ ಪ್ರಮಾಣಿತ ಪ್ರಯೋಗಾಲಯಗಳ (RRSLs) ಮೂಲಕ ಇಂಡಿಯನ್‌ ಸ್ಟ್ಯಾಂಡರ್ಡ್‌ ಟೈಂ (IST) ಅನ್ನು ಮಿಲಿ ಸೆಕೆಂಡ್‌ನಿಂದ ಮೈಕ್ರೋ ಸೆಕೆಂಡ್‌ಗೆ ನಿಖರತೆಯೊಂದಿಗೆ ತಲುಪಿಸುವ ಗುರಿಯನ್ನು ಇದು ಹೊಂದಿದೆ ಎಂದು ಹೇಳಿದರು.

ಗ್ರಾಹಕ ವ್ಯವಹಾರಗಳ ಇಲಾಖೆ, CSIR-NPL ಮತ್ತು ISRO ಸಹಯೋಗದಲ್ಲಿ ಜಾರಿಗೆ ತರುತ್ತಿರುವ ʼಸಮಯ ಪ್ರಸರಣʼ ಯೋಜನೆ ಕಾರ್ಯತಂತ್ರದ ಮಹತ್ವದ ಬಗ್ಗೆ ತಿಳಿಸಿದ ಸಚಿವರು, ನಿಖರತೆ ಮತ್ತು ರಾಷ್ಟ್ರೀಯ ಭದ್ರತೆ ಖಚಿತಪಡಿಸಿಕೊಳ್ಳಲು ಹಾಗೂ ಹಣಕಾಸು ಸಂಸ್ಥೆ, ವಿದ್ಯುತ್ ಗ್ರಿಡ್‌, ದೂರಸಂಪರ್ಕ, ಸಾರಿಗೆ ಮತ್ತಿತರ ಕ್ಷೇತ್ರಗಳಲ್ಲಿ IST ಯ ನಿಖರ ಮತ್ತು ಏಕರೂಪದ ಪ್ರಸರಣ ಅತ್ಯಗತ್ಯತೆಯನ್ನು ಪ್ರತಿಪಾದಿಸಿದರು.

2018ರಿಂದಲೂ 'ಒನ್‌ ನೇಷನ್‌ ಒನ್‌ ಟೈಂ' ಲಾಂಚ್‌ ಬಗ್ಗೆ ನಿರಂತರ ಸಮಾಲೋಚನೆ ನಡೆಸಲಾಗುತ್ತಿದೆ. ಪ್ರಧಾನ ವೈಜ್ಞಾನಿಕ ಸಲಹೆಗಾರರು, ಉಪ NSA, ಕ್ಯಾಬಿನೆಟ್ ಸಚಿವಾಲಯ ಮತ್ತು NSCS ಗಳೊಂದಿಗೆ ಹಲವು ಬಾರಿ ಸಭೆ ಸಹ ನಡೆಸಲಾಗಿದೆ. ಗ್ರಾಹಕ ವ್ಯವಹಾರಗಳ ಇಲಾಖೆ 60ಕ್ಕೂ ಹೆಚ್ಚು ಸಭೆಗಳನ್ನು ನಡೆಸಿದ್ದು, CSIR-NPL, ISRO ಮತ್ತಿತರ ಪ್ರಮುಖರೊಂದಿಗೆ ತಾಂತ್ರಿಕ ಸಮಾಲೋಚನೆ ಸಹ ನಡೆಸಲಾಗಿದ್ದು, ಕಾನೂನು ಮಾಪನಶಾಸ್ತ್ರ (ಭಾರತೀಯ ಪ್ರಮಾಣಿತ ಸಮಯ) ನಿಯಮ-2025ರ ಕರಡು ರಚನೆಗೆ ನಾಂದಿಯಾಗಿದೆ ಎಂದು ಹೇಳಿದರು.

ಗ್ರಾಹಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಶ್ರೀಮತಿ ನಿಧಿ ಖರೆ ಅವರು, ಪ್ರಸ್ತುತ ಕಾರ್ಯತಂತ್ರ ಮತ್ತು ಕಾರ್ಯತಂತ್ರೇತರ ವಲಯಗಳಲ್ಲಿ ಏಕರೂಪತೆ ಖಚಿತಪಡಿಸಿಕೊಳ್ಳಲು ನಿಖರ, ಸುರಕ್ಷಿತ ಮತ್ತು ಕಾನೂನು ಬದ್ಧವಾಗಿ ಕಡ್ಡಾಯವಾದ IST ಪ್ರಸರಣದ ತುರ್ತು ಅಗತ್ಯದ ಬಗ್ಗೆ ಸಮಾಲೋಚನೆ ನಡೆಸಿದರು.

ಗ್ರಾಹಕ ವ್ಯವಹಾರಗಳ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಭರತ್ ಖೇರಾ ಸ್ವಾಗತ ಭಾಷಣದಲ್ಲಿ ಎಲ್ಲಾ ವಲಯಗಳಲ್ಲಿ ಭಾರತೀಯ ಪ್ರಮಾಣಿತ ಸಮಯವನ್ನು ಅಳವಡಿಸಿಕೊಳ್ಳಲು ಸಾಮೂಹಿಕ ರಾಷ್ಟ್ರೀಯ ಬೆಂಬಲವನ್ನು ಕೋರಿದರು.

ಈ ದುಂಡು ಮೇಜಿನ ಸಮ್ಮೇಳನದಲ್ಲಿ ದೂರಸಂಪರ್ಕ ಇಲಾಖೆ, ವಿದ್ಯುತ್ ಸಚಿವಾಲಯ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ, ಹಣಕಾಸು ಸಚಿವಾಲಯ, ಸೆಬಿ, ಎನ್‌ಎಸ್‌ಸಿಎಸ್, ರೈಲ್ವೆ ಮತ್ತು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಂತಹ ಪ್ರಮುಖ ಸರ್ಕಾರಿ ಸಚಿವಾಲಯಗಳು ಹಾಗೂ ಇಲಾಖೆಗಳ ಹಿರಿಯ ಅಧಿಕಾರಿಗಳು ಸೇರಿದಂತೆ ಸಿಎಸ್‌ಐಆರ್-ಎನ್‌ಪಿಎಲ್ ಮತ್ತು ಇಸ್ರೋದ ತಂತ್ರಜ್ಞರು ಸಹ ಭಾಗವಹಿಸಿ ಚರ್ಚೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಪವರ್ ಗ್ರಿಡ್, ರೈಲ್‌ಟೆಲ್, ಬಿಎಸ್‌ಎನ್‌ಎಲ್, ಎನ್‌ಎಸ್‌ಇ, ಬಿಎಸ್‌ಇ ಮುಂತಾದ ಪ್ರಮುಖ ಸಾರ್ವಜನಿಕ ಮತ್ತು ಖಾಸಗಿ ವಲಯದ ಸಂಸ್ಥೆಗಳು ಮತ್ತು ರಿಲಯನ್ಸ್ ಜಿಯೋ, ಏರ್‌ಟೆಲ್, ಸಿಫಿ ಮತ್ತು ಟಾಟಾ ಕಮ್ಯುನಿಕೇಷನ್ಸ್‌ನಂತಹ ಪ್ರಮುಖ ಟೆಲಿಕಾಂ ಮತ್ತು ಇಂಟರ್‌ನೆಟ್‌ ಸೇವಾ ಪೂರೈಕೆದಾರರು ಭಾಗವಹಿಸಿದ್ದರು.