ಶ್ರೀನಗರ, ಮೇ 7: ಪಹಲ್ಗಾಮ್ ಭಯೋತ್ಪಾದನಾ ದಾಳಿಗೆ (Pahalgam Terror Attack) ಪ್ರತೀಕಾರವಾಗಿ ನಡೆಸಲಾದ 'ಆಪರೇಷನ್ ಸಿಂದೂರ್ (Operation Sindoor) ಕಾರ್ಯಾಚರಣೆಯ ಮೊದಲ ವಾರ್ಷಿಕೋತ್ಸವದಂದು ಭಾರತವು ಪಾಕಿಸ್ತಾನಕ್ಕೆ ಉಂಟಾದ ಭಾರಿ ನಷ್ಟದ ಅಧಿಕೃತ ಅಂಕಿಅಂಶಗಳನ್ನು ಗುರುವಾರ ಬಿಡುಗಡೆ ಮಾಡಿದೆ. ಈ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳು, ವಾಯುನೆಲೆಗಳು ಮತ್ತು ಯುದ್ಧ ವಿಮಾನಗಳನ್ನು ವ್ಯವಸ್ಥಿತವಾಗಿ ಧ್ವಂಸಗೊಳಿಸಲಾಗಿದೆ ಎಂದು ಹಿರಿಯ ಸೇನಾಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಏರ್ ಮಾರ್ಷಲ್ ಎ.ಕೆ. ಭಾರತಿ, "ಕಳೆದ ವರ್ಷ ಮೇ 7ರಂದು ನಾವು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ (ಪಿಒಕೆ) ಶತ್ರುಗಳ 9 ಭಯೋತ್ಪಾದಕ ಶಿಬಿರಗಳನ್ನು ಸಂಪೂರ್ಣವಾಗಿ ನಾಶಪಡಿಸಿದ್ದೇವೆ. ಇದಕ್ಕೆ ಸಂಬಂಧಿಸಿದ ಪರಾವೆಗಳು ಎಲ್ಲರಿಗೂ ಲಭ್ಯವಿವೆ. ಅಲ್ಲದೆ, ಪಾಕಿಸ್ತಾನದ 11 ವಾಯುನೆಲೆಗಳ ಮೇಲೆ ದಾಳಿ ನಡೆಸಲಾಗಿದ್ದು, ನೆಲದ ಮೇಲೆ ಅಥವಾ ಆಕಾಶದಲ್ಲಿ ಒಟ್ಟು 13 ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ. ಇದರಲ್ಲಿ 300 ಕಿಲೋ ಮೀಟರ್ಗಿಂತಲೂ ಹೆಚ್ಚಿನ ದೂರದಲ್ಲಿದ್ದ ಶತ್ರುಗಳ ಅತ್ಯಂತ ಮೌಲ್ಯಯುತ ವೈಮಾನಿಕ ಆಸ್ತಿಯೂ ಸೇರಿದೆ" ಎಂದು ವಿವರಿಸಿದರು.
ಇದೇ ವೇಳೆ ಭಾರತಕ್ಕೆ ಉಂಟಾದ ನಷ್ಟದ ಬಗ್ಗೆ ಉತ್ತರಿಸಿದ ಅವರು, "ನಮ್ಮ ಮಿಲಿಟರಿ ಮೂಲಸೌಕರ್ಯಕ್ಕಾಗಲಿ ಅಥವಾ ನಾಗರಿಕ ಕಟ್ಟಡಗಳಿಗಾಗಲಿ ಯಾವುದೇ ಹಾನಿಯಾಗಿಲ್ಲ. ಭಾರತಕ್ಕೆ ಯಾವುದೇ ದೊಡ್ಡ ಮಟ್ಟದ ಹಾನಿ ಮಾಡಲು ಶತ್ರು ರಾಷ್ಟ್ರಕ್ಕೆ ಸಾಧ್ಯವಾಗಿಲ್ಲ" ಎಂದು ಸ್ಪಷ್ಟಪಡಿಸಿದರು.
'ಬಾಳಲು ಬಿಡಿ' ಎಂಬ ತತ್ವ ಮತ್ತು ಎಚ್ಚರಿಕೆ
''ಭಾರತವು ಯಾವಾಗಲೂ 'ಬದುಕಿ ಮತ್ತು ಬದುಕಲು ಬಿಡಿ' ಎಂಬ ತತ್ತ್ವವನ್ನು ಪಾಲಿಸುತ್ತದೆ. ಆದರೆ ಈ ತತ್ತ್ವಕ್ಕೆ ಸವಾಲು ಎದುರಾದಾಗ ದೇಶವು ಅತ್ಯಂತ ಕಠಿಣವಾಗಿ ಪ್ರತಿಕ್ರಿಯಿಸುತ್ತದೆ'' ಎಂದು ಭಾರತಿ ತಿಳಿಸಿದರು. 26 ನಾಗರಿಕರನ್ನು ಬಲಿಪಡೆದ ಪಹಲ್ಗಾಮ್ ದಾಳಿಯಂತಹ ಘಟನೆಗಳು ಮರುಕಳಿಸಬಾರದು ಎಂಬ ಉದ್ದೇಶದಿಂದಲೇ ಈ ಕಾರ್ಯಾಚರಣೆ ನಡೆಸಲಾಗಿತ್ತು. ಇದು ಕೇವಲ ಪ್ರತೀಕಾರವಲ್ಲ, ಬದಲಿಗೆ ಭವಿಷ್ಯದ ದಾಳಿಗಳನ್ನು ತಡೆಯುವ ಗುರಿಯನ್ನು ಹೊಂದಿತ್ತು.
ಪಾಕಿಸ್ತಾನದ ಶರಣಾಗತಿ
ಭಾರತದ ಪ್ರಚಂಡ ದಾಳಿಗೆ ಬೆದರಿದ ಪಾಕಿಸ್ತಾನವು ಪ್ರತಿ ದಾಳಿಗೆ ಯತ್ನಿಸಿ ವಿಫಲವಾಯಿತು. ಅಂತಿಮವಾಗಿ ಮೇ 10ರಂದು ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (DGMO) ಭಾರತದೊಂದಿಗೆ ಮಾತುಕತೆ ನಡೆಸಿ, ಕದನ ವಿರಾಮಕ್ಕೆ ಮೊರೆ ಇಟ್ಟರು. ಅಂದು ಸಂಜೆ 5 ಗಂಟೆಯಿಂದ ಭೂಮಿ, ವಾಯು ಮತ್ತು ಸಮುದ್ರ ಮಾರ್ಗಗಳಲ್ಲಿ ಎಲ್ಲಾ ರೀತಿಯ ಸೇನಾ ಕ್ರಮಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಯಿತು. ಈ ಮೂಲಕ ಆಪರೇಷನ್ ಸಿಂದೂರ್ ಭಾರತದ ಸೇನಾ ಶಕ್ತಿಯನ್ನು ಜಗತ್ತಿಗೆ ಮತ್ತೊಮ್ಮೆ ಸಾರಿ ಹೇಳಿದೆ.