Pariksha Pe Charcha: ಪರೀಕ್ಷಾ ಪೆ ಚರ್ಚಾ ; ಮೋದಿ ಹೇಳಿದ ಯಶಸ್ಸಿನ ಸೂತ್ರಗಳೇನು?
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪರೀಕ್ಷೆಯನ್ನು ಎದುರಿಸಲಿರುವ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮತ್ತು ಪಾಲಕರ ಜೊತೆ ಮಾತನಾಡಿದ್ದು, ಕೆಲ ಸಲಹೆಗಳನ್ನು ನೀಡಿದ್ದಾರೆ. ಒತ್ತಡ ನಿರ್ವಹಣೆ ಹಾಗೂ ಆಹಾರ ಪದ್ಧತಿಯ ಬಗ್ಗೆಯೂ ಮೋದಿ ಮಾತನಾಡಿದ್ದಾರೆ.
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ವಿದ್ಯಾರ್ಥಿಗಳೊಂದಿಗೆ ನಡೆಸುವ 'ಪರೀಕ್ಷಾ ಪೆ ಚರ್ಚಾ (Pariksha Pe Charcha) ಕಾರ್ಯಕ್ರಮದ ಎಂಟನೇ ಆವೃತ್ತಿ ಸೋಮವಾರ ನಡೆಯಿತು. 36 ವಿದ್ಯಾರ್ಥಿಗಳೊಂದಿಗೆ ಪರೀಕ್ಷೆಗಳು ಮತ್ತು ಒತ್ತಡ ನಿರ್ವಹಣೆಗೆ ಸಂಬಂಧಿಸಿದ ಹಲವಾರು ವಿಷಯಗಳ ಕುರಿತು ಸಂವಾದ ನಡೆಸಿದ್ದಾರೆ. ವಿದ್ಯಾರ್ಥಿಗಳಿಗೆ ಸಲಹೆ ನೀಡಿರುವ ಮೋದಿ, ಯಾವುದೇ ರೀತಿಯ ಒತ್ತಡಕ್ಕೆ ಒಳಗಾಗದೆ ಓದಿನ ಕಡೆ ಗಮನ ಹರಿಸಬೇಕು, ಪರೀಕ್ಷೆಗಳೇ ಎಲ್ಲವೂ ಎಂಬ ಕಲ್ಪನೆಯೊಂದಿಗೆ ಬದುಕಬಾರದು ಎಂದು ಹೇಳಿದ್ದಾರೆ. ವಿದ್ಯಾರ್ಥಿಗಳ ಜೊತೆಯಲ್ಲಿ ಪಾಲಕರು ಹಾಗೂ ಶಿಕ್ಷಕರಿಗೂ ಮೋದಿ ಕೆಲ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
ಮೋದಿ ಹೇಳಿದ ಸೂತ್ರವೇನು?
ಸಮಯ ನಿರ್ವಹಣೆ: ಪ್ರಧಾನಿ ಮೋದಿ ಅವರು ಸಮಯದ ಬಳಕೆಯ ಮಹತ್ವವನ್ನು ಒತ್ತಿ ಹೇಳಿದರು. ವಿದ್ಯಾರ್ಥಿಗಳು ತಮ್ಮ ಸಮಯವನ್ನು ಯಾವುದಕ್ಕೆ ಎಷ್ಟು ಹೊತ್ತು ನೀಡಬೇಕು ಎಂದು ಮೊದಲೇ ವೇಳಾಪಟ್ಟಿ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. ನೆಚ್ಚಿನ ವಿಷಯಗಳನ್ನು ಕೇಂದ್ರೀಕರಿಸುವ ಬದಲು ಸವಾಲೆನಿಸುವ ವಿಷಯಗಳ ಬಗ್ಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಹೇಳಿದ್ದಾರೆ.
ಶಿಕ್ಷಕರಿಗೆ ಸಲಹೆ: ಪ್ರಧಾನಮಂತ್ರಿಯವರು ಶಿಕ್ಷಕರಿಗೆ ವಿಷೇಶವಾದ ಸಲಹೆಯನ್ನು ನೀಡಿದ್ದಾರೆ. ಶಿಕ್ಷಕರು ವಿದ್ಯಾರ್ಥಿಗಳ ವಿಶಿಷ್ಟ ಸಾಮರ್ಥ್ಯಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದ್ದಾರೆ. ವಿದ್ಯಾರ್ಥಿಗಳಿಗೆ ಕಲಿಕೆ ಬೇಕಾದ ವಾತಾವರಣವನ್ನು ನಿರ್ಮಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
"Never play to Gallery of Audience. Play as per merit of ball. Concentrate on your target. Have patience & avoid unnecessary excitement"
— BhikuMhatre (@MumbaichaDon) February 10, 2025
PM .@narendramodi Ji's masterclass on acing exams at #ParikshaPeCharcha 😍
I hope Twitter Experts will also learn something wrt his politics. pic.twitter.com/NdjbJMlllG
ಪರೀಕ್ಷೆ ಹಾಗೂ ಜ್ಞಾನ : ಪರೀಕ್ಷೆಗಳ ಮಹತ್ವವನ್ನು ಹೇಳಿದ ಪ್ರಧಾನಿ ಕೇವಲ ಅಂಕಗಳಿಕೆ ಮಾತ್ರ ಜೀವನವಲ್ಲ ಎಂದು ಹೇಳಿದ್ದಾರೆ. ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ತಯಾರಿ ನಡೆಸುವುದಕ್ಕಿಂತ ಹೆಚ್ಚಾಗಿ ಜ್ಞಾನವನ್ನು ಗಳಿಸುವತ್ತ ಗಮನಹರಿಸಬೇಕೆಂದು ಅವರು ಸಲಹೆ ನೀಡಿದ್ದಾರೆ.
ಹವ್ಯಾಸಗಳು ಮತ್ತು ಪಠ್ಯೇತರ ಚಟುವಟಿಕೆಗಳು: ಪೋಷಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಮಕ್ಕಳಿಗೆ ತಮ್ಮ ಆಸಕ್ತಿಗಳನ್ನು ಅನ್ವೇಷಿಸಲು ಸ್ವಾತಂತ್ರ್ಯ ನೀಡಿ ಎಂದು ಹೇಳಿದ್ದಾರೆ. ವಿದ್ಯಾರ್ಥಿಗಳು ಪುಸ್ತಕಗಳಿಗೆ ಮಾತ್ರ ಸೀಮಿತವಾಗಿರಬಾರದು ಮತ್ತು ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು, ಇದು ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿ ಎಂದು ಹೇಳಿದ್ದಾರೆ.
ಒತ್ತಡ ನಿಭಾಯಿಸುವಿಕೆ: ಕ್ರೀಡೆಯಿಂದ ಸ್ಫೂರ್ತಿ ಪಡೆದು, ಒತ್ತಡ ನಿಭಾಯಿಸುವುದನ್ನು ಕಲಿತಿಕೊಳ್ಳಬೇಕು. ಕ್ರಿಕೆಟ್ನಲ್ಲಿ ಜನಸಂದಣಿಯ ಗದ್ದಲದ ನಡುವೆ ಬ್ಯಾಟ್ಸ್ಮನ್ ಚೆಂಡಿನ ಮೇಲೆ ಗಮನ ಕೇಂದ್ರೀಕರಿಸುವಂತೆ, ವಿದ್ಯಾರ್ಥಿಗಳು ಒತ್ತಡದ ಬಗ್ಗೆ ಚಿಂತಿಸುವ ಬದಲು ಕಲಿಕೆಯತ್ತ ಗಮನ ಹರಿಸಬೇಕು ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: ಆತಂಕದಿಂದ ದೂರವಿರಿ, ಒತ್ತಡಕ್ಕೆ ಒಳಗಾಗಬೇಡಿ: ಪರೀಕ್ಷಾ ಪೇ ಚರ್ಚಾದಲ್ಲಿ ಮೋದಿ
ಆರೋಗ್ಯ, ನಿದ್ರೆ ಮತ್ತು ಆಹಾರ ಪದ್ಧತಿ: ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಮಹತ್ವವನ್ನು ಪ್ರಧಾನಿ ಒತ್ತಿ ಹೇಳಿದ್ದಾರೆ. ಸರಿಯಾದ ನಿದ್ರೆ ಮತ್ತು ಸಮತೋಲಿತ ಆಹಾರ ಪದ್ಧತಿ ದೇಹಕ್ಕೆ ಮಾತ್ರವಲ್ಲದೆ ಮಾನಸಿಕ ಆರೋಗ್ಯಕ್ಕೂ ಉತ್ತಮವಾಗಿದೆ. ಆರೋಗ್ಯ ಸರಿಯಾಗಿ ಕಾಪಾಡಿಕೊಂಡರೆ ಮಾತ್ರ ಸಾಧನೆ ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.