ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PM Svanidhi Scheme: ಬೀದಿ ಬದಿ ವ್ಯಾಪಾರಿಗಳಿಗೆ ಗುಡ್‌ ನ್ಯೂಸ್:‌ ʼಪಿಎಂ ಸ್ವನಿಧಿʼ ಯೋಜನೆ ಮತ್ತೈದು ವರ್ಷ ವಿಸ್ತರಣೆ

PM Svanidhi Scheme: ಕೇಂದ್ರ ಸರ್ಕಾರವು ಬೀದಿ ಬದಿ ವ್ಯಾಪಾರಿಗಳ ಆರ್ಥಿಕ ಚೇತರಿಕೆ ಮತ್ತು ಜೀವನೋಪಾಯಕ್ಕಾಗಿ ಜಾರಿಗೊಳಿಸಿದ್ದ ʼಪಿಎಂ ಸ್ವನಿಧಿʼ ಯೋಜನೆಯನ್ನು ಮತ್ತೈದು ವರ್ಷ ವಿಸ್ತರಿಸುವ ಮೂಲಕ ಜೀವನೋಪಾಯಕ್ಕೆ ಉತ್ತೇಜನ ನೀಡಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ನೀಡಿಕೆ ಅವಧಿಯನ್ನು 2024ರ ಡಿಸೆಂಬರ್ 31ರ ನಂತರದಿಂದ 2030ರ ಮಾರ್ಚ್ 31ರವರೆಗೆ ಪುನರ್‌ರಚನೆ ಹಾಗೂ ವಿಸ್ತರಣೆಗೆ ಮಹತ್ತರ ಕ್ರಮ ಕೈಗೊಂಡಿದೆ.

ʼಪಿಎಂ ಸ್ವನಿಧಿʼ ಯೋಜನೆ ಮತ್ತೈದು ವರ್ಷ ವಿಸ್ತರಣೆ ಮಾಡಿದ ಕೇಂದ್ರ ಸರ್ಕಾರ

Profile Siddalinga Swamy Aug 28, 2025 3:17 PM

ಬೆಂಗಳೂರು: ದೇಶದ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರತೆಗೆ ಸಂಕಲ್ಪ ತೊಟ್ಟಿದ್ದ ಕೇಂದ್ರ ಸರ್ಕಾರ (Central Government), ಇದೀಗ ಗಣೇಶ ಹಬ್ಬದ ಪ್ರಯುಕ್ತ ಬಂಪರ್‌ ಕೊಡುಗೆ ಕೊಡಮಾಡಿದೆ. ಇವರ ಆರ್ಥಿಕ ಚೇತರಿಕೆಗಾಗಿ ಜಾರಿಗೊಳಿಸಿದ್ದ ʼಪಿಎಂ ಸ್ವನಿಧಿʼ ಯೋಜನೆಯನ್ನು (PM Svanidhi Scheme) ಮತ್ತೈದು ವರ್ಷ ವಿಸ್ತರಿಸುವ ಮೂಲಕ ಜೀವನೋಪಾಯಕ್ಕೆ ಉತ್ತೇಜನ ನೀಡಿದೆ. ಕೋವಿಡ್ ಸಂಕಷ್ಟಿತ ಸಮಯದಲ್ಲಿ ಬೀದಿ ಬದಿ ವ್ಯಾಪಾರಿಗಳ ಬೆಂಬಲಕ್ಕೆ ನಿಂತಿದ್ದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ, ಇವರ ಆರ್ಥಿಕ ಚೇತರಿಕೆ ಮತ್ತು ಜೀವನೋಪಾಯಕ್ಕಾಗಿ 2020ರ ಜೂನ್‌ 1ರಂದು ʼಪ್ರಧಾನ ಮಂತ್ರಿ ಸ್ವನಿಧಿʼ ಯೋಜನೆಗೆ ಚಾಲನೆ ನೀಡಿತ್ತು. ಈಗದನ್ನು 2030ರ ಮಾರ್ಚ್‌ 31ರವರೆಗೆ ವಿಸ್ತರಿಸುವ ಮೂಲಕ ಮತ್ತೊಮ್ಮೆ ಅಭೂತಪೂರ್ವ ಕೊಡುಗೆ ನೀಡಿದೆ.

ಗಣೇಶ ಚತುರ್ಥಿ ದಿನವೇ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ʼಪಿಎಂ ಸ್ಪನಿಧಿʼ ಯೋಜನೆ ಪುನರ್‌ರಚನೆ ಮತ್ತು ವಿಸ್ತರಣೆಗೆ ಅನುಮೋದನೆ ನೀಡಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ನೀಡಿಕೆ ಅವಧಿಯನ್ನು 2024ರ ಡಿಸೆಂಬರ್ 31ರ ನಂತರದಿಂದ 2030ರ ಮಾರ್ಚ್ 31ರವರೆಗೆ ಪುನರ್‌ರಚನೆ ಹಾಗೂ ವಿಸ್ತರಣೆಗೆ ಮಹತ್ತರ ಕ್ರಮ ಕೈಗೊಂಡಿದೆ.

1.15 ಕೋಟಿ ಫಲಾನುಭವಿಗಳ ಗುರಿ

ʼಪಿಎಂ ಸ್ವನಿಧಿʼ ಯೋಜನೆ ಒಟ್ಟು ₹ 7,332 ಕೋಟಿ ವೆಚ್ಚದಿಂದ ಕೂಡಿದ್ದು, ಪುನರಚನೆಯಿಂದ 50 ಲಕ್ಷ ಹೊಸ ಫಲಾನುಭವಿಗಳು ಸೇರ್ಪಡೆಯಾಗಲಿದ್ದಾರೆ. ಒಟ್ಟಾರೆ 1.15 ಕೋಟಿ ಫಲಾನುಭವಿಗಳಿಗೆ ಯೋಜನೆ ಪ್ರಯೋಜನ ನೀಡುವ ಗುರಿ ಹೊಂದಿದೆ. ಪ್ರಸ್ತುತ ಯೋಜನೆ ಅನುಷ್ಠಾನ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಹಾಗೂ ಹಣಕಾಸು ಸೇವೆಗಳ ಇಲಾಖೆ ಹೊಣೆಗಾರಿಕೆಯಾಗಿದೆ. ಇನ್ನು, ಬ್ಯಾಂಕ್/ಹಣಕಾಸು ಸಂಸ್ಥೆಗಳು ಮತ್ತು ಕಾರ್ಯಕರ್ತರ ಮೂಲಕ ಸಾಲ-ಕ್ರೆಡಿಟ್ ಕಾರ್ಡ್‌ ಪಡೆಯುವುದು DFS ಜವಾಬ್ದಾರಿ ಆಗಿರುತ್ತದೆ.

ಸಾಲದ ಮೊತ್ತ ಹೆಚ್ಚ

ʼಪಿಎಂ ಸ್ವನಿಧಿʼ ಪುನರ್‌ರಚನೆಯಿಂದ ಕೋಟ್ಯಂತರ ಬೀದಿ ಬದಿ ವ್ಯಾಪಾರಿಗಳಿಗೆ ಹೆಚ್ಚಿನ ಪ್ರಯೋಜನವಾಗುತ್ತಿದೆ. ಯೋಜನೆ ಫಲಾನುಭವಿಗಳಿಗೆ ಮೊದಲ ಮತ್ತು ಎರಡನೇ ಕಂತಿನಲ್ಲಿ ಸಾಲದ ಮೊತ್ತವನ್ನು ಹೆಚ್ಚಿಸಿದ್ದು, ಎರಡನೇ ಕಂತಿನ ಸಾಲವನ್ನು ಮರುಪಾವತಿಸಿದ ಫಲಾನುಭವಿಗಳಿಗೆ UPI-ಸಂಯೋಜಿತ ʼರುಪೇ ಕ್ರೆಡಿಟ್ ಕಾರ್ಡ್ʼ ಹಾಗೂ ಚಿಲ್ಲರೆ ಮತ್ತು ಸಗಟು ವಹಿವಾಟುಗಳಿಗೆ ʼಡಿಜಿಟಲ್ ಕ್ಯಾಶ್‌ಬ್ಯಾಕ್ʼ ಪ್ರೋತ್ಸಾಹ ಸಹ ಲಭ್ಯವಾಗುತ್ತದೆ. ಈ ಯೋಜನೆ ವ್ಯಾಪ್ತಿಯನ್ನು ಪಟ್ಟಣ, ಪೆರಿ-ನಗರ ಪ್ರದೇಶಗಳಿಗೆ ಶ್ರೇಣೀಕೃತ ರೀತಿಯಲ್ಲಿ ವಿಸ್ತರಿಸಲಾಗುತ್ತಿದೆ. ಮೊದಲ ಕಂತಿನ ಸಾಲವನ್ನು 10ರಿಂದ 15,000ಕ್ಕೆ, ಎರಡನೇ ಕಂತನ್ನು 20ರಿಂದ 25000ಕ್ಕೆ ಹೆಚ್ಚಿಸಲಾಗಿದೆ. ಆದರೆ ಮೂರನೇ ಕಂತಿನ ಸಾಲದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಇದು ₹50,000 ಕಂತಿನಲ್ಲೇ ಇದೆ.

ಡಿಜಿಟಲ್‌-ಕ್ಯಾಶ್‌ಬ್ಯಾಕ್‌ ಸೌಲಭ್ಯ

ಪಿಎಂ ಸ್ವನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ UPI-ಸಂಯೋಜಿತ RUPAY ಕ್ರೆಡಿಟ್ ಕಾರ್ಡ್‌ ನೀಡುತ್ತಿದ್ದು, ತುರ್ತು ವ್ಯವಹಾರ ಮತ್ತು ವೈಯಕ್ತಿಕ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಇದು ತಕ್ಷಣದ ಸಾಲ ಸೌಲಭ್ಯ ಪಡೆಯುವಲ್ಲಿ ಅನುಕೂಲಕರವಾಗಿದೆ. ಅಲ್ಲದೇ, ಡಿಜಿಟಲ್ ವ್ಯವಸ್ಥೆ ಅಳವಡಿಸಿಕೊಂಡು ಚಿಲ್ಲರೆ-ಸಗಟು ವಹಿವಾಟು ನಡೆಸಿದಲ್ಲಿ ₹1,600ರವರೆಗೆ ಕ್ಯಾಶ್‌ಬ್ಯಾಕ್ ಪ್ರೋತ್ಸಾಹ ಸಹ ಘೋಷಿಸಲಾಗಿದೆ.

ಹೊಸ ಮೈಲುಗಲ್ಲು ಸ್ಥಾಪನೆ

ಪಿಎಂ ಸ್ವನಿಧಿ ಯೋಜನೆ ಕಳೆದೈದು ವರ್ಷಗಳಿಂದ ಗಮನಾರ್ಹ ಪ್ರಗತಿ ಸಾಧಿಸಿದ್ದು, ಈಗ ಪುನರ್‌ರಚನೆ ಮತ್ತು ವಿಸ್ತರಣೆಯಿಂದ ಮತ್ತೈದು ವರ್ಷದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸುವ ಗುರಿ ಹೊಂದಿದೆ. ಈಗಾಗಲೇ 2025ರ ಜುಲೈ 30ರ ವೇಳೆಗೆ 68 ಲಕ್ಷಕ್ಕೂ ಹೆಚ್ಚು ಬೀದಿ ವ್ಯಾಪಾರಿಗಳಿಗೆ ಜೀವನ ರೂಪಿಸಿಕೊಟ್ಟ ಹೆಗ್ಗಳಿಕೆಗೆ ಪಾತ್ರವಾಗಿದೆ.

₹241 ಕೋಟಿ ಕ್ಯಾಶ್‌ಬ್ಯಾಕ್

ಪಿಎಂ ಸ್ವನಿಧಿ ಯೋಜನೆಯಡಿ ಈವರೆಗೆ ಒಟ್ಟು ₹13,797 ಕೋಟಿ ಮೊತ್ತದ ಸಾಲ ಸೌಲಭ್ಯ ಕಲ್ಪಿಸಲಾಗಿದೆ. 96 ಲಕ್ಷಕ್ಕೂ ಹೆಚ್ಚು ಸಾಲಗಳನ್ನು ವಿತರಿಸಲಾಗಿದೆ. ಸುಮಾರು 47 ಲಕ್ಷ ಡಿಜಿಟಲ್ ಫಲಾನುಭವಿಗಳಿದ್ದು, ₹6.09 ಲಕ್ಷ ಕೋಟಿ ಮೌಲ್ಯದ ಸಾಲ ಪಡೆದು 557 ಕೋಟಿಗೂ ಹೆಚ್ಚು ಡಿಜಿಟಲ್ ವಹಿವಾಟು ನಡೆಸಿದ್ದಾರೆ. ಇದಕ್ಕಾಗಿ ಒಟ್ಟು ₹241 ಕೋಟಿ ಕ್ಯಾಶ್‌ಬ್ಯಾಕ್ ಸಹ ಗಳಿಸಿದ್ದಾರೆ.

ʼಸ್ವನಿಧಿ ಸೆ ಸಮೃದ್ಧಿ' ಉಪಕ್ರಮದಡಿ 3,564 ನಗರ ಸ್ಥಳೀಯ ಸಂಸ್ಥೆಗಳಲ್ಲಿ (ULB) 46 ಲಕ್ಷ ಫಲಾನುಭವಿಗಳನ್ನು ಪ್ರೊಫೈಲ್ ಮಾಡಲಾಗಿದ್ದು, ಇದರಿಂದ 1.38 ಕೋಟಿಗೂ ಅಧಿಕ ಮಂಜೂರಾತಿಗಳಿಗೆ ಉತ್ತೇಜನ ನೀಡಿದೆ.

ರಾಷ್ಟ್ರೀಯ ಪುರಸ್ಕಾರಕ್ಕೆ ಪಾತ್ರ

ʼಪಿಎಂ ಸ್ವನಿಧಿʼ ಯೋಜನೆ ರಾಷ್ಟ್ರೀಯ ಮನ್ನಣೆ ಪಡೆದಿದ್ದು, ಬೀದಿ ಬದಿ ವ್ಯಾಪಾರಿಗಳ ಆರ್ಥಿಕತೆ ಉತ್ತೇಜನ, ಜೀವನೋಪಾಯಕ್ಕೆ ನೆರವು ಮತ್ತು ಡಿಜಿಟಲ್ ಸಬಲೀಕರಣಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ-ಪುರಸ್ಕಾರಕ್ಕೆ ಪಾತ್ರವಾಗಿದೆ. ಬೀದಿ ಬದಿ ವರ್ತಕರಿಗೆ ಅತ್ಯುತ್ತಮ ಕೊಡುಗೆಗಾಗಿ, ಸಾರ್ವಜನಿಕ ಆಡಳಿತದಲ್ಲಿ ಶ್ರೇಷ್ಠತೆಗಾಗಿ ಪ್ರಧಾನ ಮಂತ್ರಿಗಳ ನಾವೀನ್ಯತೆಗಾಗಿ 2023ರಲ್ಲಿ ಕೇಂದ್ರ ಮಟ್ಟದ ಪ್ರಶಸ್ತಿ ಹಾಗೂ ಡಿಜಿಟಲ್ ರೂಪಾಂತರಕ್ಕಾಗಿ ಸರ್ಕಾರಿ ಪ್ರಕ್ರಿಯೆ ಪುನರ್‌ ನಿರ್ಮಾಣದಲ್ಲಿ ಶ್ರೇಷ್ಠತೆಗಾಗಿ 2022ರಲ್ಲಿ ʼಬೆಳ್ಳಿ ಪ್ರಶಸ್ತಿʼಯನ್ನು ಸಹ ತನ್ನದಾಗಿಸಿಕೊಂಡಿದೆ ಈ ಯೋಜನೆ.

FSSAI ಸಹಭಾಗಿತ್ವದಲ್ಲಿ ತರಬೇತಿ

ಈ ಮಹತ್ವದ ಯೋಜನೆ ಬೀದಿ ಬದಿ ವ್ಯಾಪಾರಿಗಳಲ್ಲಿ ಆರ್ಥಿಕ ಶಕ್ತಿ ಸಾಮರ್ಥ್ಯ ವೃದ್ಧಿಸುವತ್ತ ಹೆಚ್ಚು ಗಮನ ಹರಿಸುತ್ತಿದ್ದು, ಉದ್ಯಮಶೀಲತೆ, ಆರ್ಥಿಕ ಸಾಕ್ಷರತೆ, ಡಿಜಿಟಲ್ ಕೌಶಲ್ಯ ಮತ್ತು ಮಾರುಕಟ್ಟೆಯನ್ನು ಕೇಂದ್ರೀಕರಿಸುತ್ತಿದೆ. FSSAI ಸಹಭಾಗಿತ್ವದಲ್ಲಿ ಬೀದಿ ಆಹಾರ ಮಾರಾಟಗಾರರಿಗೆ ಪ್ರಮಾಣಿತ ನೈರ್ಮಲ್ಯ ಮತ್ತು ಆಹಾರ ಸುರಕ್ಷತಾ ತರಬೇತಿಗಳನ್ನು ಸಹ ನಡೆಸಲಾಗುತ್ತಿದೆ. ಬೀದಿ ವ್ಯಾಪಾರಿಗಳು ಮತ್ತವರ ಕುಟುಂಬಗಳ ಸಮಗ್ರ ಕಲ್ಯಾಣ, ಸಂಪೂರ್ಣ ಅಭಿವೃದ್ಧಿ ಹಾಗೂ ಮಾಸಿಕ ಲೋಕ ಕಲ್ಯಾಣ ಮೇಳಗಳ ಮೂಲಕ ʼಸ್ವನಿಧಿ ಸೇ ಸಮೃದ್ಧಿ' ಘಟಕವನ್ನು ಮತ್ತಷ್ಟು ಬಲಪಡಿಸುವತ್ತ ಕೇಂದ್ರ ಸರ್ಕಾರ ಮಹತ್ತರ ಹೆಜ್ಜೆಯಿರಿಸಿದ್ದು, ವಿವಿಧ GOI ಯೋಜನೆಗಳಡಿ ಫಲಾನುಭವಿಗಳಿಗೆ, ಕುಟುಂಬಗಳಿಗೆ ಸ್ಯಾಚುರೇಶನ್ ವಿಧಾನದಲ್ಲಿ ಸೌಲಭ್ಯ ಪ್ರಯೋಜನಕಾರಿ ಆಗಲಿದೆ.‌

ಈ ಸುದ್ದಿಯನ್ನೂ ಓದಿ | Intelligence Bureau Recruitment 2025: ಗುಪ್ತಚರ ಇಲಾಖೆಯಲ್ಲಿದೆ 394 ಹುದ್ದೆ; ಡಿಪ್ಲೊಮಾ ವಿದ್ಯಾರ್ಹತೆ ಹೊಂದಿದವರು ಅಪ್ಲೈ ಮಾಡಿ

ಸಾಮಾಜಿಕ ಪರಿವರ್ತನೆಗೆ ನಾಂದಿ

ʼಪಿಎಂ ಸ್ವನಿಧಿʼ ಯೋಜನೆ ಕಾಲಾವಧಿ ವಿಸ್ತರಣೆ ಬೀದಿ ವ್ಯಾಪಾರಿಗಳ ಸಮಗ್ರ ಅಭಿವೃದ್ಧಿಗೆ ವರದಾನವಾಗಿದೆ. ಇದು ವ್ಯಾಪಾರ-ವಹಿವಾಟು ವೃದ್ಧಿ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆಗೆ ಅವಕಾಶ ಕಲ್ಪಿಸಲಿದೆ. ಸಣ್ಣ ವ್ಯಾಪಾರಿಗಳಿಗೆ ವಿಶ್ವಾಸಾರ್ಹ ಹಣಕಾಸಿನ ನೆರವು ನೀಡುವ ಜತೆಗೆ ಸಬಲೀಕರಣಗೊಳಿಸುತ್ತಿದೆ. ಬೀದಿ ವ್ಯಾಪಾರಿಗಳು ಮತ್ತು ಅವರ ಕುಟುಂಬಗಳ ಸಾಮಾಜಿಕ-ಆರ್ಥಿಕ ಉನ್ನತಿ, ಜೀವನೋಪಾಯಕ್ಕೆ ಶಕ್ತಿ ತುಂಬಿ ಸ್ವಾವಲಂಬನೆ ಜತೆಗೆ ಒಟ್ಟಾರೆ ಸಾಮಾಜಿಕ ಪರಿವರ್ತನೆಗೂ ನಾಂದಿ ಹಾಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.