ನವದೆಹಲಿ: ಸ್ವಾತಂತ್ರ್ಯ ಹೋರಾಟ ಮತ್ತು ಏಕತೆಯ ಸಂಕೇತವಾದ ವಂದೇ ಮಾತರಂ.. ರಾಷ್ಟ್ರೀಯ ಗೀತೆಯ 150 ವರ್ಷಗಳನ್ನು (Vande Mataram 150 Years) ದೇಶಾದ್ಯಂತ ಶುಕ್ರವಾರ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಒಂದೆಡೆ ವರ್ಷಪೂರ್ತಿ ಆಚರಣೆಗೆ ಚಾಲನೆ ನೀಡಿದರೆ ಇನ್ನೊಂದೆಡೆ ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu), ಪ್ರಧಾನಿ ನರೇಂದ್ರ ಮೋದಿ (Prime Minister Narendra Modi), ಕೇಂದ್ರ ಗೃಹ ಸಚಿವ ಅಮಿತ್ ಶಾ (Union Home Minister Amit) ಸೇರಿದಂತೆ ಅನೇಕ ನಾಯಕರು ಗೀತೆಯ ಪರಂಪರೆಯನ್ನು ನೆನಪಿಸಿಕೊಂಡು ನಿರಂತರ ಏಕತೆಯ ಸಂದೇಶವನ್ನು ಸಾರಿದರು. ದೇಶದ ಈ ಐತಿಹಾಸಿಕ ದಿನದ ಸ್ಮರಣಾರ್ಥ ಅಂಚೆಚೀಟಿ ಮತ್ತು ನಾಣ್ಯವನ್ನು ಕೂಡ ಕೇಂದ್ರ ಸರ್ಕಾರ ಬಿಡುಗಡೆ ಮಾಡಿತು.
ಈ ಕುರಿತು ಸಾಮಾಜಿಕ ಮಾಧ್ಯಮ ಖಾತೆಯಾದ ಎಕ್ಸ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ನವೆಂಬರ್ 7 ಪ್ರತಿಯೊಬ್ಬ ಭಾರತೀಯನಿಗೂ ಒಂದು ಸ್ಮರಣಾರ್ಥ ದಿನ. ವಂದೇ ಮಾತರಂನ 150 ವರ್ಷಗಳನ್ನು ಆಚರಿಸುತ್ತಿದ್ದೇವೆ. ಇದು ರಾಷ್ಟ್ರದಾದ್ಯಂತ ದೇಶಭಕ್ತಿಯ ಮನೋಭಾವವನ್ನು ಹೊತ್ತಿಸಿದ ಒಂದು ರೋಮಾಂಚಕಾರಿ ಕ್ಷಣವಾಗಿದೆ ಎಂದು ತಿಳಿಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹಾಡಿನ ಪರಂಪರೆಯನ್ನು ನೆನೆದು ಗೌರವ ಸಲ್ಲಿಸಿದರು. ಹಾಡಿನ ಮೂಲ ಮತ್ತು ಪ್ರಭಾವವನ್ನು ಸ್ಮರಿಸಿದ ಅವರು, 1905ರ ಸ್ವದೇಶಿ ಚಳವಳಿಯ ಕಾಲದಿಂದಲೂ ಎಲ್ಲರಿಗೂ ಸ್ಫೂರ್ತಿಯಾಗಿರುವ ಹಾಡು ವಂದೇ ಮಾತರಂ. ಇದನ್ನು ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ಅವರು ಬರೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಈ ಹಾಡು ಭಾವನಾತ್ಮಕ ಪ್ರಜ್ಞೆ ಮತ್ತು ಏಕತೆಯ ಘೋಷಣೆ ಎಂದು ಬಣ್ಣಿಸಿದ ಅವರು ಮುಂದಿನ ಪೀಳಿಗೆಗೆ ಅದರ ಚೈತನ್ಯವನ್ನು ಕಾಪಾಡಿಕೊಳ್ಳುವಂತೆ ತಿಳಿಸಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಂದೇ ಮಾತರಂ ಭಾರತದ ಆತ್ಮದ ಧ್ವನಿ ಎಂದು ಹೇಳಿದ್ದಾರೆ.
ಇದು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ರಾಷ್ಟ್ರವನ್ನು ಒಂದುಗೂಡಿಸಿತ್ತು. ದೇಶವಾಸಿಗಳ ಹೃದಯಗಳಲ್ಲಿ ರಾಷ್ಟ್ರೀಯತೆಯ ಶಾಶ್ವತ ಜ್ವಾಲೆಯನ್ನು ಬೆಳಗಿಸುತ್ತಿದೆ. ಇದು ಭವಿಷ್ಯದ ಪೀಳಿಗೆಗೆ ಸ್ಫೂರ್ತಿಯಾಗಿರಲಿ. ಜನರು ತಮ್ಮ ಕುಟುಂಬಗಳೊಂದಿಗೆ ಇದರ ಪೂರ್ಣ ಆವೃತ್ತಿಯನ್ನು ಹಾಡಲು ಅವರು ಕರೆ ನೀಡಿದ್ದಾರೆ.
ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಈ ಹಾಡು ಅಸಂಖ್ಯಾತ ಕ್ರಾಂತಿಕಾರಿಗಳ ಜೀವನದಲ್ಲಿ ಸ್ವಾತಂತ್ರ್ಯದ ವಿಜಯೋತ್ಸವದ ಗೀತೆಯಾಗಿತ್ತು. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಸಂಪೂರ್ಣ ಭಾರತವೇ ಇಂದು ವಂದೇ ಮಾತರಂನ 150ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ: Viral News: ಗ್ರೀಕ್ ದೇವತೆಗಳು ಬಾಡಿ ಬಿಲ್ಡರ್ಗಳಂತಿದ್ದರೆ, ಹಿಂದೂ ದೇವರುಗಳು ಮಾತ್ರ... ಅರೇ! ಇದೇನಿದು ಹೊಸ ವಿವಾದ?
ಸಂವಿಧಾನ ದಿನಾಚರಣೆಯ ಜೊತೆಜೊತೆಯಾಗಿ ನವೆಂಬರ್ 7ರಿಂದ 26 ರವರೆಗೆ ದೇಶಾದ್ಯಂತ ನಡೆಯಲಿರುವ ವಂದೇ ಮಾತರಂ ಗಾಯನ ಕಾರ್ಯಕ್ರಮಗಳಲ್ಲಿ ಜನರು ಸೇರಬೇಕೆಂದು ಒತ್ತಾಯಿಸಿದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಷ್ಟ್ರೀಯ ಗೀತೆಯು 'ರಾಷ್ಟ್ರ ಮೊದಲು' ಎಂಬ ಭಾವನೆಯನ್ನು ಹುಟ್ಟುಹಾಕಲು ಪ್ರಯತ್ನಿಸಿತು. ನಮ್ಮ ಸಮರ್ಪಣೆ ಭಾರತ ಮಾತೆಯ ಕಡೆಗೆ ಇರಬೇಕು ಎಂದು ಹೇಳಿದರು.