President Droupadi Murmu: ಹಿರಿಯ ನಾಗರಿಕರಿಗೆ ಆರೋಗ್ಯ ವಿಮೆ, ಮಧ್ಯಮ ವರ್ಗದವರಿಗೆ ಮನೆ; ಉಭಯ ಸದನಗಳಲ್ಲಿ ಕೇಂದ್ರದ ಸಾಧನೆ ತೆರೆದಿಟ್ಟ ರಾಷ್ಟ್ರಪತಿ
ಸಂಸತ್ತಿನ ಬಜೆಟ್ ಅಧಿವೇಶನ ಆರಂಭವಾಗಿದೆ. ಅಧಿವೇಶನದ ಮೊದಲ ದಿನ ಉಭಯ ಸದನಗಳನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೇಂದ್ರ ಸರ್ಕಾರದ ಸಾದನೆಯನ್ನು ತೆರೆದಿಟ್ಟರು. ಕೇಂದ್ರವು ದೇಶದ ಸಮತೋಲಿತ ಅಭಿವೃದ್ಧಿಯನ್ನು ಖಚಿತಪಡಿಸಿದೆ ಮತ್ತು ಈಶಾನ್ಯ ಭಾಗದ ಜನರಲ್ಲಿ ಪರಕೀಯತೆಯ ಭಾವನೆಯನ್ನು ಕೊನೆಗೊಳಿಸುವ ಪ್ರಯತ್ನ ಕೈಗೊಂಡಿದೆ ಎಂದು ಹೇಳಿದರು.

ರಾಷ್ಟ್ರಪತಿ ದ್ರೌಪದಿ ಮುರ್ಮು.

ಹೊಸದಿಲ್ಲಿ: ಸಂಸತ್ತಿನ ಬಜೆಟ್ ಅಧಿವೇಶನ (Budget session) ಶುಕ್ರವಾರ (ಜ. 31) ಆರಂಭವಾಗಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಅವರು ಉಭಯ ಸದನಗಳನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಸಮತೋಲಿತ ಅಭಿವೃದ್ಧಿಯನ್ನು ಖಚಿತಪಡಿಸಿದೆ ಮತ್ತು ಈಶಾನ್ಯ ಭಾಗದ ಜನರಲ್ಲಿ ಪರಕೀಯತೆಯ ಭಾವನೆಯನ್ನು ಕೊನೆಗೊಳಿಸುವ ಪ್ರಯತ್ನ ಕೈಗೊಂಡಿದೆ ಎಂದು ಹೇಳಿದರು. ಜತೆಗೆ ಕೇಂದ್ರ ಸರ್ಕಾರದ ಸಾಧನೆಗಳನ್ನು ಉಭಯ ಸದನಗಳೆದುರು ಮಂಡಿಸಿದರು. ಅವರ ಭಾಷಣದ ಪ್ರಮುಖಾಂಶ ಇಲ್ಲಿದೆ.
ಹಿರಿಯ ನಾಗರಿಕರಿಗೆ ಆರೋಗ್ಯ ವಿಮೆ
70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ 6 ಕೋಟಿ ಹಿರಿಯ ನಾಗರಿಕರಿಗೆ ಆರೋಗ್ಯ ವಿಮೆ ಒದಗಿಸುವ ಗುರಿಯನ್ನು ಹೊಂದಿರುವ ಆಯುಷ್ಮಾನ್ ಭಾರತ್ ಯೋಜನೆಯ ಮಹತ್ವದ ವಿಸ್ತರಣೆಯನ್ನು ರಾಷ್ಟ್ರಪತಿ ಘೋಷಿಸಿದರು. ಈ ಯೋಜನೆಯು ವಯಸ್ಸಾದವರಿಗೆ ಯೋಗಕ್ಷೇಮವನ್ನು ಖಚಿತಪಡಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
To showcase the potential of the eight states of the North East to the entire country, the first-ever Ashtalakshmi Mahotsav was organized. pic.twitter.com/W498hV6zsm
— President of India (@rashtrapatibhvn) January 31, 2025
ಇಂಡಿಯಾ ಎಐ ಮಿಷನ್
ಕೃತಕ ಬುದ್ಧಿಮತ್ತೆ (Artificial Intelligence) ಕ್ಷೇತ್ರದಲ್ಲಿ ಭಾರತದ ಕೊಡುಗೆಗಳನ್ನು ಬಲಪಡಿಸಲು ವಿನ್ಯಾಸಗೊಳಿಸಲಾದ ಇಂಡಿಯಾ ಎಐ ಮಿಷನ್ (India AI Mission) ಅನ್ನು ರಾಷ್ಟ್ರಪತಿ ಪ್ರಸ್ತಾವಿಸಿದರು. ಈ ತಂತ್ರಜ್ಞಾನದಲ್ಲಿ ಭಾರತವನ್ನು ಜಾಗತಿಕ ಶಕ್ತಿಕೇಂದ್ರವನ್ನಾಗಿಸುವ ಸರ್ಕಾರದ ಮಹತ್ವಾಕಾಂಕ್ಷೆಯನ್ನು ಅವರು ಒತ್ತಿ ಹೇಳಿದರು.
ಬಾಹ್ಯಾಕಾಶ ಕ್ಷೇತ್ರದಲ್ಲಿ ಪ್ರಗತಿ
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಸಾಧಿಸುತ್ತಿರುವ ಪ್ರಗತಿಯನ್ನು ರಾಷ್ಟ್ರಪತಿ ಶ್ಲಾಘಿಸಿದರು ಮತ್ತು ಭಾರತದ ಮುಂಬರುವ ಮಾನವ ಬಾಹ್ಯಾಕಾಶ ಯಾನ ಮಿಷನ್ ಗಗನಯಾನದ ಬಗ್ಗೆ ಆಶಾವಾದ ವ್ಯಕ್ತಪಡಿಸಿದರು. ಭಾರತವು ತನ್ನದೇ ಆದ ಮಾನವ ಸಹಿತ ಗಗನಯಾನವನ್ನು ಪ್ರಾರಂಭಿಸುವ ದಿನ ದೂರವಿಲ್ಲ ಎಂದು ಅವರು ಹೇಳಿದರು.
ಯುವಜನತೆಗೆ ಶಿಕ್ಷಣ ಮತ್ತು ಉದ್ಯೋಗ
ಈ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಯುವಜನತೆಯ ಅಭಿವೃದ್ಧಿಗಾಗಿ ಸರ್ಕಾರ ಕೈಗೊಂಡಿರುವ ಯೋಜನೆಯನ್ನು ಶ್ಲಾಘಿಸಿದರು. ಶಿಕ್ಷಣಕ್ಕೆ ನೀಡಿರುವ ಮಹತ್ವ ಮತ್ತು ಹೊಸ ಉದ್ಯೋಗಾವಕಾಶಗಳ ಸೃಷ್ಟಿಗೆ ಒತ್ತು ನೀಡಿರುವುದನ್ನು ಪ್ರಸ್ತಾವಿಸಿದರು.
ಪ್ರಮುಖ ಯೋಜನೆಗಳು
ವಕ್ಫ್ ಮಂಡಳಿ ಸುಧಾರಣೆ ಮತ್ತು ಆಡಳಿತ ಹಾಗೂ ಚುನಾವಣಾ ದಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಒಂದು ರಾಷ್ಟ್ರ, ಒಂದು ಚುನಾವಣಾ ನೀತಿಯನ್ನು ಪರಿಚಯಿಸುವುದು ಸೇರಿದಂತೆ ಸರ್ಕಾರ ತೆಗೆದುಕೊಂಡ ಪ್ರಮುಖ ನಿರ್ಧಾರಗಳನ್ನು ಅವರು ಒತ್ತಿ ಹೇಳಿದರು.
ಮಹಿಳಾ ಸಬಲೀಕರಣಕ್ಕೆ ಒತ್ತು
ರಾಷ್ಟ್ರದ 10 ಕೋಟಿಗೂ ಹೆಚ್ಚು ಮಹಿಳೆಯರು ಸ್ವಯಂಸೇವಾ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಮತ್ತು ಲಖ್ಪತಿ ದೀದಿಗಳ ಸಂಖ್ಯೆಯನ್ನು ನಿರಂತರವಾಗಿ ಹೆಚ್ಚಿಸಲಾಗುತ್ತಿದೆ ಎಂದು ಮುರ್ಮು ಹೇಳಿದರು. ಕೇಂದ್ರ ಸರ್ಕಾರವು ದೇಶದಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿಗೆ ಒತ್ತು ನೀಡುತ್ತಿದೆ. ಸರ್ಕಾರವು 3 ಕೋಟಿ ಲಖ್ಪತಿ ದೀದಿಯನ್ನು ಹೊಂದುವ ಗುರಿ ಇಟ್ಟುಕೊಂಡಿದೆ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ: Droupadi Murmu: ಸಂಸತ್ ಬಜೆಟ್ ಅಧಿವೇಶನ ಆರಂಭ; ಕುಂಭಮೇಳ ದುರಂತಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಘಾತ
ಎಂಎಸ್ಎಂಇಗಳಿಗಾಗಿ ಪರಿಚಯಿಸಿರುವ ಕ್ರೆಡಿಟ್ ಗ್ಯಾರಂಟಿ ಯೋಜನೆ ಮತ್ತು ಇ-ಕಾಮರ್ಸ್ ರಫ್ತು ಕೇಂದ್ರವು ದೇಶದ ಎಲ್ಲ ಪ್ರದೇಶಗಳಲ್ಲಿ ವ್ಯಾಪಾರವನ್ನು ಉತ್ತೇಜಿಸುತ್ತಿದೆ ಎಂದ ರಾಷ್ಟ್ರಪತಿ ಸರ್ಕಾರ ಇತ್ತೀಚೆಗೆ 8ನೇ ವೇತನ ಆಯೋಗವನ್ನು ರಚಿಸಲು ನಿರ್ಧರಿಸಿದೆ. ಏಕೀಕೃತ ಪಿಂಚಣಿ ಯೋಜನೆಯಡಿ ನೌಕರರಿಗೆ ಶೇ. 50ರಷ್ಟು ಪಿಂಚಣಿ ನೀಡಲು ಕ್ರಮ ಕೈಗೊಳ್ಳಲಾಗಿದೆ. ಮಧ್ಯಮ ವರ್ಗದವರ ಸ್ವಂತ ಮನೆ ಕನಸನ್ನು ನನಸು ಮಾಡಲು ಸರ್ಕಾರ ಬದ್ಧವಾಗಿದೆ ಎಂದರು.