ಮುಂಬೈ, ಫೆ. 21: ದೆಹಲಿಯ (Delhi) ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ (AI Impact Summit )ಗೆ ಯೂತ್ ಕಾಂಗ್ರೆಸ್ (Youth Congress) ಕಾರ್ಯಕರ್ತರು ಅಡ್ಡಿಪಡಿಸಿದ್ದನ್ನು ಖಂಡಿಸಿ, ಬಿಜೆಪಿ ಮತ್ತು ಯುವ ಮೋರ್ಚಾ ಕಾರ್ಯಕರ್ತರು ದೇಶಾದ್ಯಂತ ಭಾರಿ ಪ್ರತಿಭಟನೆ ನಡೆಸುತ್ತಿದ್ದಾರೆ. ದೆಹಲಿ (Delhi), ಸೂರತ್ (Surat), ಹೈದರಾಬಾದ್ (Hyderabad) ಮತ್ತು ಮುಂಬೈಯ ಮುಲುಂಡ್ (Mulund) ಸೇರಿದಂತೆ ಹಲವು ನಗರಗಳಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರ್.ಎಸ್.ಎಸ್. ಕಾರ್ಯಕರ್ತರೊಬ್ಬರು ದಾಖಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ವಿಚಾರಣೆಗಾಗಿ ಮಹಾರಾಷ್ಟ್ರದ ಥಾಣೆಗೆ ತೆರಳುತ್ತಿದ್ದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರಿಗೆ ಮುಂಬೈಯ ಮುಲುಂಡ್ನಲ್ಲಿ ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ಕಾಂಗ್ರೆಸ್ ವಿರೋಧಿ ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದರು.
ಮೋದಿ ನಮ್ಮನ್ನು ದೋಚುತ್ತಿದ್ದರು: ಸುಂಕ ರದ್ದುಗೊಂಡ ನಡುವೆ ಭಾರತ-ಯುಎಸ್ ವ್ಯಾಪಾರ ಒಪ್ಪಂದವನ್ನು ಹೊಗಳಿ ಟ್ರಂಪ್
ಏನಿದು ಪ್ರಕರಣ?
ಶುಕ್ರವಾರ ದೆಹಲಿಯ ಎಐ ಶೃಂಗಸಭೆಯ ವೇದಿಕೆಗೆ ಅರೆನಗ್ನರಾಗಿ ನುಗ್ಗಿದ್ದ ಯೂತ್ ಕಾಂಗ್ರೆಸ್ ಕಾರ್ಯಕರ್ತರು, ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದವನ್ನು ವಿರೋಧಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ಸಂಬಂಧ ಕೃಷ್ಣ ಹರಿ, ಕುಂದನ್ ಯಾದವ್ ಸೇರಿದಂತೆ ನಾಲ್ವರು ಪ್ರಮುಖ ಪ್ರತಿಭಟನಾಕಾರರನ್ನು ಬಂಧಿಸಲಾಗಿದ್ದು, ಐದು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಇವರು ಹೈ-ಸೆಕ್ಯುರಿಟಿ ಇರುವ ವೇದಿಕೆಗೆ ಕ್ಯೂಆರ್ ಕೋಡ್ (QR Code) ಬಳಸಿ ನುಗ್ಗಿದ್ದು ಹೇಗೆ ಮತ್ತು ಇದರ ಹಿಂದೆ ದೊಡ್ಡ ಪಿತೂರಿ ಇದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕೇಂದ್ರ ಸಚಿವರ ಆಕ್ರೋಶ
ಕೇಂದ್ರ ಸಚಿವ ಭೂಪೇಂದರ್ ಯಾದವ್ ಕಾಂಗ್ರೆಸ್ನ ಈ ವರ್ತನೆಯನ್ನು "ಸಂಪೂರ್ಣ ನಾಚಿಕೆಗೇಡು" ಎಂದು ಕರೆದಿದ್ದಾರೆ. "ಭಾರತವು ಜಾಗತಿಕ ತಂತ್ರಜ್ಞಾನ ಶಕ್ತಿಯಾಗಿ ಹೊರಹೊಮ್ಮುತ್ತಿರುವ ಸಮಯದಲ್ಲಿ, ಕಾಂಗ್ರೆಸ್ ದೇಶದ ಪ್ರತಿಷ್ಠೆಯನ್ನು ಕುಗ್ಗಿಸಲು ಪ್ರಯತ್ನಿಸುತ್ತಿದೆ. ಇದು ಕೇವಲ ರಾಜಕೀಯ ವಿರೋಧವಲ್ಲ, ಬದಲಿಗೆ ದೇಶದ ಇಮೇಜ್ ಹಾಳುಮಾಡುವ ಪ್ರಯತ್ನ" ಎಂದು ಅವರು ಎಕ್ಸ್ (X)ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮಹಾತ್ಮ ಗಾಂಧೀಜಿ ಅವರ ಹತ್ಯೆಯ ಹಿಂದೆ ಸಂಘ ಪರಿವಾರದ ಕೈವಾಡವಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿದೆ.