ವಲಸೆ ಕಾರ್ಮಿಕರಿಗೆ ಬಿಗ್ ರಿಲೀಫ್; 5 ಕೆಜಿ ಸಿಲಿಂಡರ್ ಹಂಚಿಕೆ ದ್ವಿಗುಣಗೊಳಿಸಿದ ಕೇಂದ್ರ ಸರ್ಕಾರ
Relief for migrants: ವಲಸೆ ಕಾರ್ಮಿಕರಿಗೆ ನೆರವಾಗಲು ಇದೀಗ ಕೇಂದ್ರ ಮುಂದಾಗಿದ್ದು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ದೈನಂದಿನ 5 ಕೆಜಿ ಸಿಲಿಂಡರ್ಗಳ ಹಂಚಿಕೆಯನ್ನು ದ್ವಿಗುಣಗೊಳಿಸಲು ನಿರ್ಧರಿಸಿದೆ. ಈ 5 ಕೆಜಿ ಸಿಲಿಂಡರ್ ಅನ್ನು ಕೇವಲ ಗುರುತಿನ ಚೀಟಿ ತೋರಿಸಿ ಸುಲಭವಾಗಿ ಖರೀದಿಸಬಹುದು. ಇದಕ್ಕೆ ಮರುಖರೀದಿ ಯೋಜನೆಗಳೂ ಇವೆ.
ಸಾಂದರ್ಭಿಕ ಚಿತ್ರ -
ನವದೆಹಲಿ, ಏ. 7: ಇರಾನ್ನಲ್ಲಿನ ಯುದ್ಧವು (Iran war) ದ್ರವ ಪೆಟ್ರೋಲಿಯಂ ಅನಿಲ (LPG) ಪೂರೈಕೆಯನ್ನು ಕುಗ್ಗಿಸುತ್ತಿರುವುದರಿಂದ, ವಲಸೆ ಕಾರ್ಮಿಕರಿಗೆ ಅನುಕೂಲ ಒದಗಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ದೈನಂದಿನ 5 ಕೆಜಿ ಸಿಲಿಂಡರ್ಗಳ ಹಂಚಿಕೆಯನ್ನು ದ್ವಿಗುಣಗೊಳಿಸಲು ಕೇಂದ್ರ ಸರ್ಕಾರ (Central Government) ನಿರ್ಧರಿಸಿದೆ.
5 ಕೆಜಿ ಫ್ರೀ ಟ್ರೇಡ್ ಎಲ್ಪಿಜಿ ಸಿಲಿಂಡರ್ನ್ನು ಚೋಟು ಎಂದೂ ಕರೆಯಲಾಗುತ್ತದೆ. ಇದು ನಗರ ಹಾಗೂ ಸಣ್ಣ ನಗರ ಪ್ರದೇಶಗಳಲ್ಲಿ ಕೆಲಸ ಮಾಡುವ ವಲಸೆ ಕಾರ್ಮಿಕರನ್ನು ಗಮನದಲ್ಲಿಟ್ಟು ಪರಿಚಯಿಸಲಾಯಿತು. ಸಾಮಾನ್ಯ ಗೃಹ ಬಳಕೆಯ ಅನಿಲ ಸಂಪರ್ಕ ಪಡೆಯಲು ವಿಳಾಸದ ಪುರಾವೆ ನೀಡುವುದು ಅಗತ್ಯ. ಆದರೆ ವಲಸೆ ಕಾರ್ಮಿಕರಿಗೆ ಇದು ಕಷ್ಟವಾಗುತ್ತದೆ. ಇದರಿಂದ ಅವರು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಯಲ್ಲಿ ಅನಿಲವನ್ನು ಖರೀದಿಸಬೇಕಾಗುತ್ತದೆ. ಈ ಸಮಸ್ಯೆಗೆ ಪರಿಹಾರವಾಗಿ ಚೋಟುವನ್ನು ಪರಿಚಯಿಸಲಾಯಿತು. ಈ 5 ಕೆಜಿ ಸಿಲಿಂಡರ್ನ್ನು ಕೇವಲ ಗುರುತಿನ ಚೀಟಿ ತೋರಿಸಿ ಸುಲಭವಾಗಿ ಖರೀದಿಸಬಹುದು. ಇದಕ್ಕೆ ಮರುಖರೀದಿ ಯೋಜನೆಗಳೂ ಇವೆ.
5 ಕೆಜಿ ಸಿಲಿಂಡರ್ಗಳ ಹಂಚಿಕೆಯನ್ನು ದ್ವಿಗುಣಗೊಳಿಸಿದ ಕೇಂದ್ರ:
Govt to double daily 5kg FTL cylinder allocation for migrant laborers, with distribution by state authorities and support from OMCs.#MigrantWorkers #FTLCylinders #India #PetroleumMinistry #Support #FuelSupply pic.twitter.com/HnwoR8R3PM
— DD News Meghalaya (@ddnewsshillong) April 7, 2026
ಈ ಹೆಚ್ಚುವರಿ ಹಂಚಿಕೆಯನ್ನು ರಾಜ್ಯಗಳಿಗೆ ಈ ವರ್ಷದ ಮಾರ್ಚ್ 2 ಮತ್ತು 3ರಂದು ವಲಸೆ ಕಾರ್ಮಿಕರಿಗೆ ನೀಡಲಾದ ಸಿಲಿಂಡರ್ಗಳ ಸರಾಸರಿ ದಿನನಿತ್ಯ ಸರಬರಾಜಿನ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಇದು ಅಸ್ತಿತ್ವದಲ್ಲಿರುವ ಶೇಕಡಾ 20ರ ಮಿತಿಗಿಂತ ಹೆಚ್ಚು ಎಂದು ಪ್ರಕಟಣೆ ತಿಳಿಸಿದೆ.
ಎಲ್ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆ 195.50 ರೂ. ಏರಿಕೆ
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರವು ಬರೆದ ಪತ್ರದ ಪ್ರಕಾರ, ರಾಜ್ಯ ಸರ್ಕಾರಗಳಿಗೆ ಹಂಚಿಕೆ ಮಾಡಲಾದ ಹೆಚ್ಚುವರಿ 5 ಕೆಜಿ ಸಿಲಿಂಡರ್ಗಳನ್ನು ವಲಸೆ ಕಾರ್ಮಿಕರಿಗೆ ಪೂರೈಸಲು ಮಾತ್ರ ಬಳಸಲಾಗುವುದು. ತೈಲ ಮಾರುಕಟ್ಟೆ ಕಂಪನಿಗಳ ಸಹಾಯದಿಂದ ಪೂರೈಕೆಯನ್ನು ಸುಗಮಗೊಳಿಸಲಾಗುತ್ತದೆ. ವಲಸೆ ಕಾರ್ಮಿಕರು ಮತ್ತು ಸಮಾಜದ ಇತರ ದುರ್ಬಲ ವರ್ಗಗಳಿಗೆ ಸಾಕಷ್ಟು ಅಡುಗೆ ಇಂಧನ ಲಭ್ಯವಾಗುವಂತೆ ನೋಡಿಕೊಳ್ಳುವುದು ಈ ಕ್ರಮದ ಉದ್ದೇಶ.
ಉತ್ತರ ಪ್ರದೇಶದ ಈ ಹಳ್ಳಿಯಲ್ಲಿಲ್ಲ ಎಲ್ಪಿಜಿ ಸಮಸ್ಯೆ
ಇಸ್ರೇಲ್-ಅಮೆರಿಕ-ಇರಾನ್ ಸಂಘರ್ಷವು ಭಾರತದಾದ್ಯಂತ ಎಲ್ಪಿಜಿ ಸರಬರಾಜನ್ನು ಅಡ್ಡಿಪಡಿಸಿದೆ. ಎಲ್ಲೆಡೆ ಇಂಧನ ಕೊರತೆ ಕಾಣಿಸಿಕೊಂಡಿದೆ. ಹಳ್ಳಿಗಳಲ್ಲೂ ಬಹುತೇಕರು ಎಲ್ಪಿಜಿ ಸಿಲಿಂಡರ್ಗೆ ಒಗ್ಗಿಕೊಂಡಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿದೆ. ಆದರೆ ಉತ್ತರ ಪ್ರದೇಶದ ಒಂದು ಸಣ್ಣ ಹಳ್ಳಿಯು ಜೈವಿಕ ಅನಿಲ ಬಳಕೆ ಮಾಡುತ್ತಿರುವುದರಿಂದ ಎಲ್ಪಿಜಿ ಕೊರತೆ ಯಾವುದೇ ಪರಿಣಾಮ ಬೀರಿಲ್ಲ.
ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ ಎಕೌನಿ ಗ್ರಾಮದ 150 ಕುಟುಂಬಗಳ ಪೈಕಿ ಸುಮಾರು 125 ಕುಟುಂಬಗಳು ಅಡುಗೆಗಾಗಿ ಬಯೋಗ್ಯಾಸ್ ಬಳಸುತ್ತಿದೆ. ದೇಶದ ಹಲವು ಭಾಗಗಳಲ್ಲಿ ಜನರು ಸಿಲಿಂಡರ್ಗಳಿಗಾಗಿ ಸಾಲಿನಲ್ಲಿ ನಿಲ್ಲುವಂತೆ ಮಾಡಿರುವ ಎಲ್ಪಿಜಿ ಬಿಕ್ಕಟ್ಟು ಈ ಹಳ್ಳಿಗೆ ತಟ್ಟೇ ಇಲ್ಲ ಎನ್ನುವುದು ವಿಶೇಷ.