ಮಹಾರಾಷ್ಟ್ರ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ (Maharashtra Deputy Chief Minister Eknath Shinde) ಅವರನ್ನು ಬುಧವಾರ ಎನ್ಸಿಪಿ (ಎಸ್ಪಿ) ಮುಖ್ಯಸ್ಥ ಶರದ್ ಪವಾರ್ (Sharad Pawar) ಅವರು ಭೇಟಿ ಮಾಡಿದ್ದು ಮಿತ್ರ ಪಕ್ಷಗಳನ್ನು ಕೆರಳಿಸಿವೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅಧ್ಯಕ್ಷತೆಯಲ್ಲಿ ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದದ ಕುರಿತು ನಡೆದ ಸಭೆಯ ಬಳಿಕ ಶಿಂಧೆ ಮತ್ತು ಪವಾರ್ ಭೇಟಿ ರಾಜ್ಯ ರಾಜಕಾರಣದಲ್ಲಿ ಭಾರೀ ಊಹಾಪೋಹಗಳನ್ನು ಎಬ್ಬಿಸಿದೆ. ಈ ಕುರಿತು ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿರುವ ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಲೆ (Supriya Sule) ಇದು ಕೇವಲ ಒಂದು ಸಣ್ಣ ಸೌಜನ್ಯದ ಭೇಟಿಯಾಗಿದೆ. ಅದಕ್ಕಿಂತ ಹೆಚ್ಚೇನೂ ಇಲ್ಲ ಎಂದರು.
ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಶರದ್ ಪವಾರ್ ಅವರು ಕಚೇರಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಶಿವಸೇನಾ ಯುಬಿಟಿ ನಾಯಕ ಸಂಜಯ್ ರಾವತ್ ಈ ಕುರಿತು ಪ್ರಶ್ನಿಸಿದ್ದರು. ಇದು ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ್ದು, ಇದನ್ನು ಈಗ ಶರದ್ ಪವಾರ್ ಅವರ ಪಕ್ಷವು ಶಾಂತಗೊಳಿಸುವ ಪ್ರಯತ್ನ ನಡೆಸಿದೆ.
ಪೊಲೀಸರನ್ನು ನಂಬಿದ್ದೆ ಆದರೆ ಕರೂರ್ ಕಾಲ್ತುಳಿತಕ್ಕೆ ಅವರು ನನ್ನನ್ನೇ ದೂಷಿಸಿದರು: ಸಿಎಂ ವಿಜಯ್
ಈ ಕುರಿತು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪುತ್ರಿ ಸುಪ್ರಿಯಾ ಸುಲೆ ಇದೊಂದು ಸಣ್ಣ ಸಭೆ. ಇದಕ್ಕಿಂತ ಹೆಚ್ಚಿನದ್ದು ಏನೂ ಇಲ್ಲ. ತಮ್ಮ ಪಕ್ಷದಲ್ಲಿನ ಒಂದು ತಂಡ ಎನ್ಡಿಎಗೆ ಸೇರುತ್ತದೆ ಎನ್ನುವುದು ಸುಳ್ಳು. ನಾನು ನಮ್ಮ ಎಲ್ಲಾ ಎಂಟು ಸಂಸದರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ತಿಳಿಸಿದರು.
ಶರದ್ ಪವಾರ್ ಮತ್ತು ಏಕನಾಥ್ ಶಿಂಧೆ ಅವರ ಭೇಟಿ ಕುರಿತು ಪ್ರತಿಕ್ರಿಯಿಸಿದ ಅವರು ನಾನು ಸಂಜಯ್ ರಾವತ್ ಅವರೊಂದಿಗೆ ಮಾತನಾಡಿದ್ದೇನೆ. ಅವರು ತಪ್ಪಾಗಿ ತಿಳಿದಿದ್ದರು. ಅವರ ತಪ್ಪು ತಿಳುವಳಿಕೆ ದೂರ ಮಾಡಿದ್ದೇವೆ ಎಂದರು.
ಶಿಂಧೆ ಅವರನ್ನು ಶರದ್ ಪವರ್ ಭೇಟಿ ಮಾಡಿ ಸಭೆ ನಡೆಸಿದ್ದಕ್ಕಾಗಿ ಪ್ರಶ್ನಿಸಿದ್ದ ಶಿವಸೇನಾ ಯುಬಿಟಿ ನಾಯಕ ಸಂಜಯ್ ರಾವತ್, ದೇಶದ್ರೋಹಿ ಶಿಂಧೆ ಅವರನ್ನು ಭೇಟಿಯಾಗುವುದು ಶರದ್ ಪವಾರ್ ಅವರ ಮೇಲಿನ ವಿಶ್ವಾಸಾರ್ಹತೆಗೆ ಧಕ್ಕೆ ತರುತ್ತದೆ. ಇದರಿಂದ ಮಿತ್ರಪಕ್ಷಗಳಿಗೂ ನೋವಾಗಿದೆ ಎಂದು ಹೇಳಿದರು.
ಶರದ್ ಪವಾರ್ ಅವರ ಮೇಲೆ ಕೋಪವಿಲ್ಲ. ಅವರು ಅಘಾಡಿ ಮೈತ್ರಿಕೂಟದ ಹಿರಿಯ ನಾಯಕ. ಅವರಿಗೆ ಪಕ್ಷದ ಕಾರ್ಯಕರ್ತರ ಭಾವನೆಗಳನ್ನು ತಿಳಿಸಿದ್ದೇನೆ. ಏಕನಾಥ್ ಶಿಂಧೆ ಅವರಿಂದ ದೂರವಿರಬೇಕು ಎಂದು ಹೇಳಿದ್ದೇನೆ. ಶಿಂಧೆ ಅವರೊಂದಿಗೆ ಚಹಾ ಕುಡಿಯುವುದನ್ನು ನೋಡಲು ಸಾಧ್ಯವಿಲ್ಲ ಎಂದರು.
ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅಧ್ಯಕ್ಷತೆಯಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ವಿವಾದದ ಕುರಿತು ನಡೆದ ನಿರ್ಣಾಯಕ ಸಭೆಯಲ್ಲಿ ಭಾಗವಹಿಸಲು ಶರದ್ ಪವಾರ್ ಬುಧವಾರ ಮಹಾರಾಷ್ಟ್ರ ವಿಧಾನಸಭೆಗೆ ಭೇಟಿ ನೀಡಿದ್ದರು. ಈ ಸಭೆಯ ಬಳಿಕ ಅವರು ವಿಧಾನಸಭೆ ಆವರಣದಲ್ಲಿರುವ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಕಚೇರಿಯಲ್ಲಿ ಶಿಂಧೆ ಭೇಟಿ ಮಾಡಿದರು. ಬಳಿಕ ಪಕ್ಷದ ಶಾಸಕರ ಸಭೆಯನ್ನು ನಡೆಸಿದರು. ಇದು ತೀವ್ರ ಊಹಾಪೋಹಗಳಿಗೆ ಕಾರಣವಾಯಿತು.