ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

20 ರುಪಾಯಿ ಲಂಚ ಪ್ರಕರಣ ಬರೋಬ್ಬರಿ 30 ವರ್ಷಗಳ ಬಳಿಕ ಅಂತ್ಯ: ಇಬ್ಬರು ಸರ್ಕಾರಿ ನೌಕರರು ಖುಲಾಸೆ

Legal Battle For Bribe: ಕೇವಲ 20 ರುಪಾಯಿ ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದ ಸುಮಾರು 30 ವರ್ಷಗಳ ಹಳೆಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಇಬ್ಬರು ಗುಜರಾತ್ ಸರ್ಕಾರಿ ನೌಕರರನ್ನು ಖುಲಾಸೆಗೊಳಿಸಿದೆ. ಪ್ರಕರಣದಲ್ಲಿ ಲಂಚದ ಬೇಡಿಕೆಯೇ ಸಮರ್ಪಕವಾಗಿ ಸಾಬೀತಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ. ಕೇವಲ ಹಣ ವಶಪಡಿಸಿಕೊಂಡಿರುವುದು ಮಾತ್ರ ಆರೋಪ ಸಾಬೀತುಪಡಿಸಲು ಸಾಕಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ವಿದ್ಯಾರ್ಥಿಯ ಹೇಳಿಕೆಗಳಲ್ಲಿ ಕಂಡುಬಂದ ವ್ಯತ್ಯಾಸಗಳು, ಗುರುತಿಸಲಾದ 120 ರುಪಾಯಿಯಲ್ಲಿ ಕೇವಲ 20 ರುಪಾಯಿ ಪಿಯೂನ್ ಬಳಿ ಪತ್ತೆಯಾಗಿರುವುದು ಹಾಗೂ ಉಳಿದ ಹಣದ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ಸೇರಿ ಹಲವು ಅಂಶಗಳನ್ನು ಪರಿಗಣಿಸಿ, ವಿಚಾರಣಾ ನ್ಯಾಯಾಲಯ ಮತ್ತು ಗುಜರಾತ್ ಹೈಕೋರ್ಟ್ ನೀಡಿದ್ದ ತೀರ್ಪುಗಳನ್ನು ರದ್ದುಗೊಳಿಸಿ ಇಬ್ಬರು ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ, ಆ. 20: ಕೇವಲ 20 ರುಪಾಯಿ ಲಂಚದ ಆರೋಪಕ್ಕೆ ಸಂಬಂಧಿಸಿದ ಸುಮಾರು ಮೂರು ದಶಕಗಳ ಹಳೆಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಇಬ್ಬರು ಗುಜರಾತ್ ಸರ್ಕಾರಿ ನೌಕರರನ್ನು ಖುಲಾಸೆಗೊಳಿಸಿದೆ. ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಮತ್ತು ಅತುಲ್ ಎಸ್. ಚಾಂದುರ್ಕರ್ ಅವರ ಪೀಠ, ಲಂಚದ ಬೇಡಿಕೆ ಸಾಬೀತಾಗದೆ ಕೇವಲ 20 ರುಪಾಯಿ ವಶಪಡಿಸಿಕೊಂಡಿರುವ ಆಧಾರದ ಮೇಲೆ ಆರೋಪಿಗಳನ್ನು ದೋಷಿಗಳೆಂದು ತೀರ್ಮಾನಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ಈ ಪ್ರಕರಣವ 1996ರ ಫೆಬ್ರವರಿಯಲ್ಲಿ ನಡೆದಿತ್ತು. ಶಿಕ್ಷಣ ಸೌಲಭ್ಯ ಪಡೆಯಲು ಆದಾಯ ಪ್ರಮಾಣಪತ್ರಕ್ಕಾಗಿ ಆನಂದ್ ಜಿಲ್ಲೆಯ ಬೆಚಾರಿ ಗ್ರಾಮ ಪಂಚಾಯತ್ ಕಚೇರಿಗೆ ವಿದ್ಯಾರ್ಥಿಯೊಬ್ಬರು ತೆರಳಿದ್ದರು. ಪ್ರಮಾಣಪತ್ರ ನೀಡಲು ಕ್ಲರ್ಕ್ 120 ರುಪಾಯಿ ಲಂಚ ಕೇಳಿದ್ದಾನೆ ಎಂದು ಆರೋಪಿಸಲಾಗಿತ್ತು. ಇದರಲ್ಲಿ 100 ರುಪಾಯಿ ಕ್ಲರ್ಕ್‌ಗೆ ಹಾಗೂ 20 ರುಪಾಯಿ ಪಿಯೂನ್‌ಗೆ ಎಂದು ಹೇಳಲಾಗಿತ್ತು.

ನಂತರ ವಿದ್ಯಾರ್ಥಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದು, ಎಸಿಬಿ ಬಲೆ ಬೀಸಿತ್ತು. 120 ರುಪಾಯಿ ನೋಟುಗಳನ್ನು ವಿದ್ಯಾರ್ಥಿಗೆ ನೀಡಲಾಗಿತ್ತು. ಆದರೆ ಪ್ರಮಾಣಪತ್ರ ಪಡೆದ ಬಳಿಕ ವಿದ್ಯಾರ್ಥಿ ಪಿಯೂನ್‌ಗೆ ಕೇವಲ 20 ರುಪಾಯಿ ನೀಡಿದ್ದ. ದಾಳಿ ವೇಳೆ ಆ 20 ರುಪಾಯಿ ಪಿಯೂನ್ ಬಳಿ ಪತ್ತೆಯಾದರೂ, ಉಳಿದ 100 ರುಪಾಯಿ ಕ್ಲರ್ಕ್ ಬಳಿ ಪತ್ತೆಯಾಗಿರಲಿಲ್ಲ.

ಪ್ರಕರಣದ ವಿಚಾರಣೆಯಲ್ಲಿ ವಿದ್ಯಾರ್ಥಿಯ ಹೇಳಿಕೆಗಳಲ್ಲಿ ವ್ಯತ್ಯಾಸಗಳಿರುವುದನ್ನು ಸುಪ್ರೀಂ ಕೋರ್ಟ್ ಗಮನಿಸಿತು. ಮತ್ತೊಂದು ಪ್ರಕರಣದಲ್ಲಿ ಕ್ಲರ್ಕ್ ಮೊದಲು 200 ರುಪಾಯಿ ಕೇಳಿ, ನಂತರ 120 ರುಪಾಯಿಗೆ ಒಪ್ಪಂದ ಮಾಡಿಕೊಂಡಿದ್ದ ಎಂದು ವಿದ್ಯಾರ್ಥಿ ಹೇಳಿದ್ದರೂ, ವಿಚಾರಣಾ ನ್ಯಾಯಾಲಯದ ಮುಂದೆ ಈ ವಿಚಾರವನ್ನು ಉಲ್ಲೇಖಿಸಿರಲಿಲ್ಲ.

ಹರಿಹರ ಕೋಟೆಯ ಕಿರಿದಾದ ಮೆಟ್ಟಿಲ ಮೇಲೆ ಜನಸಾಗರ

ಎಸಿಬಿ ಅಧಿಕಾರಿಗಳು ಬೇಡಿಕೆ ಬಂದರೆ ಪೂರ್ಣ 120 ರುಪಾಯಿ ನೀಡುವಂತೆ ಸೂಚಿಸಿದ್ದರೂ, ವಿದ್ಯಾರ್ಥಿ ಕೇವಲ 20 ರುಪಾಯಿ ಪಿಯೂನ್‌ಗೆ ನೀಡಿದ್ದೇಕೆ ಎಂಬ ಪ್ರಶ್ನೆಯನ್ನೂ ನ್ಯಾಯಾಲಯ ಎತ್ತಿತು. ಕ್ಲರ್ಕ್, ಪಿಯೂನ್ ಪಕ್ಕದಲ್ಲೇ ಇದ್ದಾಗ ಉಳಿದ 100 ರುಪಾಯಿ ಏಕೆ ನೀಡಲಿಲ್ಲ ಎಂಬ ಅನುಮಾನವೂ ಮೂಡಿತು.

ವಿಚಾರಣೆ ವೇಳೆ ಪಿಯೂನ್ ಸ್ವತಃ ಯಾವುದೇ ಲಂಚ ಕೇಳಿರಲಿಲ್ಲ ಎಂದು ವಿದ್ಯಾರ್ಥಿಯೇ ಒಪ್ಪಿಕೊಂಡಿದ್ದ. ಜತೆಗೆ, ಆದಾಯ ಪ್ರಮಾಣಪತ್ರ ಪಡೆದ ನಂತರವೇ 20 ರುಪಾಯಿ ನೀಡಲಾಗಿತ್ತು ಎಂಬ ಅಂಶವೂ ಪ್ರಕರಣದ ಬಗ್ಗೆ ಗಂಭೀರ ಅನುಮಾನ ಹುಟ್ಟಿಸಿತು.

ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 20ರ ಕಾನೂನು ಊಹೆಯ ಕುರಿತು ಮಾತನಾಡಿದ ಸುಪ್ರೀಂ ಕೋರ್ಟ್, ಲಂಚದ ಬೇಡಿಕೆಯೇ ಸಾಬೀತಾಗದಿದ್ದರೆ ಕೇವಲ ಹಣ ವಶಪಡಿಸಿಕೊಂಡಿರುವುದು ಆರೋಪ ಸಾಬೀತುಪಡಿಸಲು ಸಾಕಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಪಿಯೂನ್ ನೀಡಿದ ವಿವರಣೆಯಾದ ಮರುದಿನ ಈದ್ ಹಬ್ಬ ಇದ್ದ ಕಾರಣ ವಿದ್ಯಾರ್ಥಿ 20 ರುಪಾಯಿ ನೀಡಿದ್ದಿರಬಹುದು ಎಂಬ ವಾದ ಹೆಚ್ಚು ಸಮಂಜಸವಾಗಿದೆ ಎಂದು ನ್ಯಾಯಾಲಯ ತಿಳಿಸಿದೆ. ಇದಲ್ಲದೆ, ಕ್ಲರ್ಕ್ ವಿರುದ್ಧ ಪ್ರಕರಣ ದಾಖಲಿಸಲು ನೀಡಲಾದ ಪ್ರಾಸಿಕ್ಯೂಷನ್ ಅನುಮತಿ ಅನಧಿಕೃತ ಅಧಿಕಾರಿಯಿಂದ ನೀಡಲ್ಪಟ್ಟಿದ್ದರಿಂದ ಅದು ಕೂಡ ಅಮಾನ್ಯ ಎಂದು ಕೋರ್ಟ್ ಹೇಳಿದೆ. ಕೊನೆಗೆ, ಸುಪ್ರೀಂ ಕೋರ್ಟ್ ವಿಚಾರಣಾ ನ್ಯಾಯಾಲಯ ಮತ್ತು ಗುಜರಾತ್ ಹೈಕೋರ್ಟ್ ನೀಡಿದ್ದ ತೀರ್ಪುಗಳನ್ನು ರದ್ದುಗೊಳಿಸಿ, ಇಬ್ಬರು ಆರೋಪಿಗಳನ್ನು ಖುಲಾಸೆಗೊಳಿಸಿದೆ.