ಮುಂಬೈ, ಜೂ. 20: ದೇವಸ್ಥಾನವೊಂದರ ನಿರ್ಮಾಣ ಹಂತದ ಸಭಾ ಮಂಟಪದ ಛಾವಣಿ ಕುಸಿದು ಬಿದ್ದ ಪರಿಣಾಮ ಐವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಸುಮಾರು 40 ಭಕ್ತರು ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ. ಮಹಾರಾಷ್ಟ್ರದ (Maharashtra) ಪರ್ಭಾನಿ ಜಿಲ್ಲೆಯ ಯಶ್ವಾಡಿ ಮಾರುತಿ ದೇವಸ್ಥಾನದಲ್ಲಿ ಈ ದುರ್ಘಟನೆ ಸಂಭವಿಸಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ದೇವಾಲಯದ ಮುಂಭಾಗದಲ್ಲಿರುವ ನಿರ್ಮಾಣ ಹಂತದಲ್ಲಿರುವ ಸಭಾ ಮಂಟಪದ ಛಾವಣಿಯು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದು, ಆವರಣದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಇದ್ದರು.
ಶನಿವಾರ (ಜೂ. 20) ದೇವಾಲಯದಲ್ಲಿ ಭಾರಿ ಜನಸಂದಣಿ ಇದ್ದುದರಿಂದ, ಈ ಕುಸಿತವು ಪ್ರದೇಶದಾದ್ಯಂತ ಭೀತಿ ಮತ್ತು ಅವ್ಯವಸ್ಥೆಯನ್ನು ಉಂಟು ಮಾಡಿತು. ಅಪಘಾತದಲ್ಲಿ ಹಲವು ಭಕ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ. ಜಿಲ್ಲಾಡಳಿತವು ಇನ್ನೂ ಅಧಿಕೃತವಾಗಿ ಸಾವುನೋವುಗಳು ಅಥವಾ ಗಾಯಗಳ ಸಂಖ್ಯೆಯನ್ನು ದೃಢಪಡಿಸಿಲ್ಲ.
ಸಿಸಿಟಿವಿ ದೃಶ್ಯದ ವಿಡಿಯೊ:
ಸುಮಾರು 30ರಿಂದ 40 ಭಕ್ತರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ ಎನ್ನಲಾಗಿದ್ದು, ಅವರನ್ನು ಹೊರತೆಗೆಯಲು ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ. ಘಟನೆಯ ನಂತರ, ಜಿಲ್ಲಾಡಳಿತದ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳು ಯುದ್ಧೋಪಾದಿಯಲ್ಲಿ ನಡೆಯುತ್ತಿವೆ.
ಮಳೆ ಅನಾಹುತ; ವಾಟರ್ ಪಾರ್ಕ್ ಗೋಡೆ ಕುಸಿತ, 10 ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ
ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಸಾಗಿಸಲು ಅಧಿಕಾರಿಗಳು ಹೆಚ್ಚಿನ ಸಂಖ್ಯೆಯ ಆಂಬ್ಯುಲೆನ್ಸ್ಗಳನ್ನು ವ್ಯವಸ್ಥೆ ಮಾಡಿದ್ದಾರೆ. ಅವಶೇಷಗಳನ್ನು ತೆರವುಗೊಳಿಸಲು ಮತ್ತು ಸಿಲುಕಿರುವವರನ್ನು ರಕ್ಷಿಸುವ ಪ್ರಯತ್ನಗಳು ಮುಂದುವರೆದಿರುವುದರಿಂದ ಆಡಳಿತವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.
ಜಮ್ಮು- ಕಾಶ್ಮೀರದಲ್ಲಿ ಲಿಫ್ಟ್ ಕುಸಿತ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಹೈದರ್ಪೋರಾ ಪ್ರದೇಶದ ಖಾಸಗಿ ಹೋಟೆಲ್ ಒಂದರಲ್ಲಿ ಲಿಫ್ಟ್ ಕುಸಿದು ಬಿದ್ದ ಪರಿಣಾಮ, ಪ್ರವಾಸಕ್ಕೆ ತೆರಳಿದ್ದ ಬೆಂಗಳೂರಿನ ಆರು ಮಂದಿ ಗಾಯಗೊಂಡ ಘಟನೆ ಕೆಲವು ದಿನಗಳ ಹಿಂದೆ ನಡೆದಿತ್ತು. ಶ್ರೀನಗರದ ‘ಹೋಟೆಲ್ ಅರಿಸನ್ ಲಕ್ಸುರಿ’ಯಲ್ಲಿ ಈ ಅವಘಡ ಸಂಭವಿಸಿತ್ತು. ಪ್ರವಾಸಿಗರು ಲಿಫ್ಟ್ ಬಳಸುತ್ತಿದ್ದಾಗ ಅದು ಹಠಾತ್ ಆಗಿ ಕೆಳಕ್ಕೆ ಕುಸಿದಿತ್ತು. ಗಾಯಗೊಂಡವರನ್ನು ಬೆಂಗಳೂರಿನ ನಿವಾಸಿ ವೆಂಕಟೇಶ್ (65), ಮಂಗಳಾ (54), ಕುಶಾಲಾ (18), ಪಂಕಜಾ (16), ವೆಂಕಟಲಕ್ಷ್ಮಮ್ಮ (60) ಮತ್ತು ಸೌಭಾಗ್ಯ (60) ಎಂದು ಗುರುತಿಸಲಾಗಿತ್ತು.