ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

TTD: ಇನ್ಮುಂದೆ ತಿರುಪತಿಯಲ್ಲಿ ಭಕ್ತರಿಗೆ ಅನ್ನ ಪ್ರಸಾದದ ಜತೆಗೆ ವಡೆಯೂ ಸಿಗಲಿದೆ

ತಿರುಮಲ ತಿರುಪತಿ ದೇವಸ್ಥಾನಂ ಇನ್ನುಮುಂದೆ ದೇವಸ್ಥಾನಕ್ಕೆ ಬರುವ ಭಕ್ತರಿಗೆ ದಿನಕ್ಕೆ ಎರಡು ಬಾರಿ ವಡೆ ವಿತರಣೆ ಮಾಡುವುದಾಗಿ ತಿಳಿಸಿದೆ. ಶ್ರೀ ತಾರಿಗೊಂಡ ಅನ್ನಪ್ರಸಾದ ಕೇಂದ್ರದಲ್ಲಿ ಬೆಳಗ್ಗೆ ಮತ್ತು ಸಂಜೆ ವಡೆ ನೀಡಲಾಗುವುದು ಎಂದು ತಿಳಿಸಿದ್ದು, ಈ ಯೋಜನೆಗೆ ಚಾಲನೆ ನೀಡಲಾಗಿದೆ.

ಇನ್ಮುಂದೆ ತಿರುಪತಿಯಲ್ಲಿ ಭಕ್ತರಿಗೆ ಸಿಗಲಿದೆ ವಡೆ

-

Ramesh Ballamoole
Ramesh Ballamoole Jul 7, 2025 10:14 PM

ಹೈದರಾಬಾದ್: ತಿರುಮಲ ತಿರುಪತಿ ದೇವಸ್ಥಾನಂ (Tirumala Tirupati Devasthanam) ಇನ್ನುಮುಂದೆ ದೇವಾಸ್ಥಾನಕ್ಕೆ ಬರುವ ಭಕ್ತರಿಗೆ ದಿನಕ್ಕೆ ಎರಡು ಬಾರಿ ವಡೆ ವಿತರಣೆ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದೆ. ಲಘು ಉಪಹಾರದ ವೇಳೆ ವಡೆಯನ್ನು ಶ್ರೀ ತಾರಿಗೊಂಡ ಅನ್ನಪ್ರಸಾದ ಕೇಂದ್ರದಲ್ಲಿ ಬೆಳಿಗ್ಗೆ ಮತ್ತು ಸಂಜೆ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ಈ ನೂತನ ಕ್ರಮವು ಈಗಾಗಲೇ ನಡೆಯುತ್ತಿರುವ ಉಚಿತ ಅನ್ನಪ್ರಸಾದ ಸೇವೆಯ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿದ್ದು, ದೇವಾಲಯಕ್ಕೆ ಬರುವ ಭಕ್ತರಿಗೆ ಅನುಕೂಲ ಒದಗಿಸಲಿದೆ.

ದೇವಾಸ್ಥಾನದ ಅಧ್ಯಕ್ಷ ಬಿ.ಆರ್.ನಾಯ್ಡು ಪರಂಪರೆಯ ಪ್ರಕಾರ ಪೂಜೆ ಸಲ್ಲಿಸಿ, ಈ ಸೇವೆಯನ್ನು ಅಧಿಕೃತವಾಗಿ ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಅವರು ಭಕ್ತರಿಗೆ ಸ್ವತಃ ವಡೆಗಳನ್ನು ವಿತರಿಸುವ ಮೂಲಕ ಯೋಜನೆಗೆ ಚಾಲನೆ ನೀಡಿದರು. ಈ ಹಿಂದೆ ಅನ್ನಪ್ರಸಾದ ಕೇಂದ್ರದಲ್ಲಿ ಪ್ರತಿ ದಿನ ಸುಮಾರು 40,000 ವಡೆಗಳನ್ನು ಲಂಚ್ ಸಮಯದಲ್ಲಿ ಮಾತ್ರ ತಯಾರಿಸಲಾಗುತ್ತಿತ್ತು. ಇಂದಿನಿಂದ ಬೆಳಗ್ಗೆ 11 ಗಂಟೆಯಿಂದ ರಾತ್ರಿ 10.30ರವರೆಗೆ ವಡೆ ಲಭ್ಯವಿರುವಂತೆ ಕ್ರಮ ಕೈಗೊಳ್ಳಲಾಗಿದೆ. “ಭಕ್ತರ ಡಿನ್ನರ್‌ಗೂ ವಡೆ ನೀಡಬೇಕೆಂಬ ಬೇಡಿಕೆಯು ಬಂದ ಹಿನ್ನೆಲೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ” ಎಂದು ನಾಯ್ಡು ಹೇಳಿದರು.



ಈ ನೂತನ ಸೇವೆಯಿಂದ ಪ್ರತಿದಿನ 70,000ರಿಂದ 75,000 ವಡೆಗಳವರೆಗೆ ತಯಾರಿಸಬೇಕಾಗಬಹುದು ಎನ್ನುವ ಲೆಕ್ಕಾಚಾರವಿದೆ. ದೇವಾಸ್ಥಾನದಲ್ಲಿ ತಯಾರಿಸುವ ವಡೆಗಳನ್ನು ಬೆಂಗಾಲ್ ಗ್ರಾಂ, ಹಸಿಮೆಣಸು, ಶುಂಠಿ, ಕರಿಬೇವು, ಕೊತ್ತಂಬರಿ, ಪುದೀನಾ ಬಳಸಿ ರುಚಿಕರ ರೀತಿಯಲ್ಲಿ ತಯಾರಿಸಲಾಗುತ್ತಿದೆ. ಇದಕ್ಕೆ ಭಕ್ತರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ.

1985ರಲ್ಲಿ ಆರಂಭಗೊಂಡ ವೇಂಕಟೇಶ್ವರ ನಿತ್ಯ ಅನ್ನದಾನ ಯೋಜನೆಯಡಿ ಉಚಿತ, ಪೌಷ್ಟಿಕ ಹಾಗೂ ಸ್ವಚ್ಛ ಆಹಾರ ಸೇವನೆ ನೀಡುವ ಈ ಪರಂಪರೆ ಇಂದಿಗೂ ಶ್ರದ್ಧಾ ಭಕ್ತಿಯಿಂದ ಮುಂದುವರಿದಿದೆ. ಈ ಹೊಸ ಘೋಷಣೆ ಭಕ್ತ ಸಮುದಾಯದಿಂದ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಸುದ್ದಿಯನ್ನೂ ಓದಿ: Tiruapati Laddu: ತಿರುಪತಿ ಲಡ್ಡು ಆನ್‌ಲೈನ್‌ನಲ್ಲಿ ಅನಧಿಕೃತ ಮಾರಾಟಕ್ಕೆ ತಡೆ

ತಿರುಪತಿ ತಿರುಮಲ ದೇವಾಲಯದಲ್ಲಿರುವ ಚಿನ್ನದ ಪ್ರಮಾಣ

ತಿರುಪತಿ ತಿಮ್ಮಪ್ಪನ ದೇವಾಲಯದಲ್ಲಿರುವ ಚಿನ್ನದ ಕುರಿತು ಚರ್ಚೆ ನಡೆಯುತ್ತಿದೆ. ವೆಂಕಟೇಶ್ವರ ಸ್ವಾಮಿಯ ದೈವಿಕ ವಾಸಸ್ಥಾನವಾದ ಆನಂದ ನಿಲಯಂಗೆ ವಾರ್ಷಿಕವಾಗಿ 2 ಕೋಟಿಗೂ ಹೆಚ್ಚು ಭಕ್ತರು ದರ್ಶನಕ್ಕೆಂದು ತೆರಳುತ್ತಾರೆ. ಪ್ರತಿ ವರ್ಷ ಹುಂಡಿ ಕಾಣಿಕೆಗಳ ಮೂಲಕ ಟಿಟಿಡಿಗೆ 800ರಿಂದ 1,000 ಕೆಜಿ ಚಿನ್ನ ಬರುತ್ತದೆ ಎಂದು ಹೇಳಲಾಗಿದೆ. ಇದನ್ನು ಠೇವಣಿ ರೂಪದಲ್ಲಿ ಬ್ಯಾಂಕುಗಳಲ್ಲಿ ಜಮೆ ಮಾಡಲಾಗುತ್ತದೆ. ದಾನ ಮಾಡಿದ ಈ ಚಿನ್ನವನ್ನು ಕರಗಿಸಿ, ಶುದ್ಧೀಕರಿಸಿ, ಚಿನ್ನದ ಬಿಸ್ಕತ್ತುಗಳಾಗಿ ಪರಿವರ್ತಿಸಿ, ನಂತರ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಜಮೆ ಮಾಡಲಾಗುತ್ತದೆ.

2015ರಲ್ಲಿ ಕೇಂದ್ರ ಸರ್ಕಾರವು ಚಿನ್ನದ ಹಣಗಳಿಕೆ ಯೋಜನೆ (GMS) ಪ್ರಾರಂಭಿಸಿದ ನಂತರ, ಟಿಟಿಡಿ ಈ ಚಿನ್ನವನ್ನು ದೀರ್ಘಾವಧಿಯ ಯೋಜನೆಗಳಲ್ಲಿ ಠೇವಣಿ ಇಡುತ್ತಿದೆ. ಇದು 2.5 ಪ್ರತಿಶತ ವಾರ್ಷಿಕ ಬಡ್ಡಿಯನ್ನು ಗಳಿಸುತ್ತಿದೆ. 2023–24ನೇ ಹಣಕಾಸು ವರ್ಷದಲ್ಲಿ ಮಾತ್ರ, 1,031 ಕೆಜಿ ಚಿನ್ನವನ್ನು ಠೇವಣಿ ಮಾಡಲಾಗಿದೆ. 2024 ರ ಹೊತ್ತಿಗೆ, ಒಟ್ಟು ಠೇವಣಿ ಮಾಡಿದ ಚಿನ್ನವು 11,329 ಕೆಜಿ ಆಗಿತ್ತು.