ಮುಂಬೈ, ಜೂ. 20: ಜೂನ್ 21ರಂದು ನಡೆಯಲಿರುವ ನೀಟ್ (NEET UG 2026) ಮರು ಪರೀಕ್ಷೆಗೆ ಮಹಾರಾಷ್ಟ್ರದ ನಾಗ್ಪುರದ ವಿದ್ಯಾರ್ಥಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಅಬುಧಾಬಿಯಲ್ಲಿ ಪರೀಕ್ಷಾ ಕೇಂದ್ರ ಹಂಚಿಕೆ ಮಾಡಿದೆ ಎನ್ನುವ ವಿಚಾರ. ಸದ್ಯ ಭಾರಿ ಕೋಲಾಹಲ ಮೂಡಿತ್ತು. ಎನ್ಟಿಎ ಮತ್ತೊಂದು ಯಡವಟ್ಟು ಮಾಡಿಕೊಂಡಿದೆ ಎಂದೇ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿ ಹಲವು ಮುಖಂಡರು ಈ ಬಗ್ಗೆ ಟೀಕಾಪ್ರಹಾರ ನಡೆಸಿದ್ದಾರೆ. ಇದೀಗ ಅಭ್ಯರ್ಥಿಯೇ ಯಡವಟ್ಟು ಮಾಡಿಕೊಂಡಿರುವುದು ಬಯಲಾಗಿದೆ. ಪೋರ್ಟಲ್ ಮೂಲಕ ಪರೀಕ್ಷಾ ಕೇಂದ್ರದ ಆದ್ಯತೆಗಳನ್ನು ಅಭ್ಯರ್ಥಿಯೇ ಸ್ವತಃ ಬದಲಾಯಿಸಿದ್ದಾನೆ ಎಂದು ಎನ್ಟಿಎ ಸ್ಪಷ್ಟಪಡಿಸಿದೆ. ಮೊದಲ ಆಯ್ಕೆಯಾಗಿ ಅಬುಧಾಬಿ ಮತ್ತು ಎರಡನೇ ಆಯ್ಕೆಯಾಗಿ ದುಬೈ ಸೆಲೆಕ್ಟ್ ಮಾಡಿದ್ದು, ಅದರಂತೆ ಪರೀಕ್ಷಾ ಕೇಂದ್ರ ಹಂಚಿಕೆ ಮಾಡಲಾಗಿದೆ ಎಂದು ಎನ್ಟಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿದ್ಯಾರ್ಥಿಯ ತಂದೆ ಅಬ್ದುಲ್ಲ ತಾಲಿಬ್ ಮಾತನಾಡಿ, ತಮ್ಮ ಮಗ ನೀಟ್ ಯುಜಿ ಪರೀಕ್ಷೆಗೆ ನಾಗ್ಪುರ, ವಾರ್ಧಾ ಮತ್ತು ಭಂಡಾರ ಕೇಂದ್ರಗಳಿಗೆ ಆದ್ಯತೆ ನೀಡಿದ್ದ ಎಂದು ತಿಳಿಸಿದ್ದರು. ಮೇ 3ರ ಪರೀಕ್ಷೆಯ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಲು ಬಳಸಲಾದ ಅದೇ ಐಪಿ ವಿಳಾಸವನ್ನು ಬಳಸಿಕೊಂಡು ಎನ್ಟಿಎ ಪೋರ್ಟಲ್ನಲ್ಲಿ ಮಾರ್ಪಾಡು ಮಾಡಲಾಗಿದೆ ಎಂದು ಎನ್ಟಿಎ ಅಧಿಕಾರಿಗಳು ಹೇಳಿದ್ದಾರೆ.
ಮೇ 21ರಂದು ಅಭ್ಯರ್ಥಿಯು ಲಾಗಿನ್ ಆಗಿ ತನ್ನ ಪರೀಕ್ಷಾ ನಗರದ ಆದ್ಯತೆಗಳನ್ನು ಬದಲಾಯಿಸಿದ್ದ. ಅಬುಧಾಬಿಯನ್ನು ಮೊದಲ ಆಯ್ಕೆಯಾಗಿ ಮತ್ತು ದುಬೈ ಎರಡನೆಯ ಆಯ್ಕೆಯಾಗಿ ಸೆಲೆಕ್ಟ್ ಮಾಡಿದ್ದ ಎನ್ನುವುದನ್ನು ಎಂದು ದಾಖಲೆಗಳು ತೋರಿಸುತ್ತವೆ. ಮೇ 3ರ ಪರೀಕ್ಷೆಗೆ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಲು ನಾಗ್ಪುರಕ್ಕೆ ಸಂಬಂಧಿಸಿದ ಅದೇ ಐಪಿ ವಿಳಾಸವನ್ನು ಬಳಸಲಾಗಿದೆ ಎಂದು ಅಧಿಕಾರಿ ವಿವರಿಸಿದ್ದಾರೆ.
ಪೋಸ್ಟ್ ಇಲ್ಲಿದೆ:
ಮೇ 24ರಂದು ಅದೇ ಐಪಿ ಬಳಸಿ ಮರುಪಾವತಿಗಾಗಿ ಬ್ಯಾಂಕ್ ವಿವರಗಳನ್ನು ನವೀಕರಿಸಲಾಗಿದೆ. ಅಭ್ಯರ್ಥಿಯು ಮೇ 24ರಂದು ಮರುಪಾವತಿಗಾಗಿ ತನ್ನ ಬ್ಯಾಂಕ್ ವಿವರಗಳನ್ನು ಕೂಡ ನವೀಕರಿಸಿದ್ದ. ಜೂನ್ 16ರಂದು ಪ್ರವೇಶ ಪತ್ರವನ್ನು ಕೂಡ ಅದೇ ಐಪಿ ವಿಳಾಸದಿಂದ ಡೌನ್ಲೋಡ್ ಮಾಡಿಕೊಂಡಿದ್ದ ಎಂದು ತಿಳಿಸಿದ್ದಾರೆ.
ಮುಂದುವರಿದ ನೀಟ್ ಯಡವಟ್ಟು ಸರಣಿ; ನಾಗ್ಪುರ ವಿದ್ಯಾರ್ಥಿಗೆ ಅಬುದಾಭಿಯಲ್ಲಿ ಪರೀಕ್ಷಾ ಕೇಂದ್ರ
ಎಕ್ಸ್ನಲ್ಲಿ ಪ್ರಕಟಿಸಿದ ಪೋಸ್ಟ್ನಲ್ಲಿ ಎನ್ಟಿಎ, ಅಭ್ಯರ್ಥಿಯ ಲಾಗಿನ್ ವಿವರಗಳನ್ನು ಬಳಸಿಕೊಂಡು ಮೂರು ಬಾರಿ ಪರೀಕ್ಷಾ ಕೇಂದ್ರವನ್ನು ಅಬುಧಾಬಿಗೆ ಬದಲಾಯಿಸಲಾಗಿತ್ತು. ಎರಡು ಬಾರಿ ಕೇಂದ್ರವನ್ನು ಅಬುಧಾಬಿ ಎಂದು ಪೂರ್ವವೀಕ್ಷಣೆ ಮಾಡಲಾಗಿತ್ತು ಎಂದು ತಿಳಿಸಿದೆ. ಜೂನ್ 19ರ ಸಂಜೆ ಪರೀಕ್ಷಾ ಕೇಂದ್ರವನ್ನು ನಾಗ್ಪುರಕ್ಕೆ ಬದಲಾಯಿಸುವಂತೆ ಅನೌಪಚಾರಿಕ ವಿನಂತಿ ಬಂದಿದ್ದರೂ, ನಂತರ ಕೇಂದ್ರವನ್ನು ನಾಗ್ಪುರಕ್ಕೆ ಬದಲಾಯಿಸಲಾಯಿತು ಎಂದು ಎನ್ಟಿಎ ತಿಳಿಸಿದೆ.
ಜೂನ್ 16ರಂದು ಪ್ರವೇಶಪತ್ರವನ್ನು ಡೌನ್ಲೋಡ್ ಮಾಡಿಕೊಂಡಿದ್ದರೂ, ಅಭ್ಯರ್ಥಿ ಅಥವಾ ಅವರ ಕುಟುಂಬವು ಎನ್ಟಿಎ ಅನ್ನು ಸಂಪರ್ಕಿಸಿಲ್ಲ ಅಥವಾ ಯಾವುದೇ ಮೇಲ್ ಕಳುಹಿಸಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.
“ನೀಟ್ ಪೋರ್ಟಲ್ನಲ್ಲಿ ಅವರ ಚಟುವಟಿಕೆಗಳ ಸಂಪೂರ್ಣ ದಾಖಲೆ ನಮ್ಮ ಬಳಿ ಇದೆ. ಜೂನ್ 16ರಂದು ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿದರೂ, ಅಭ್ಯರ್ಥಿಯಾಗಲಿ ಅಥವಾ ಅವರ ಕುಟುಂಬವಾಗಲಿ ಎನ್ಟಿಎ ಅನ್ನು ಸಂಪರ್ಕಿಸಲಿಲ್ಲ. ಈ ಬಗ್ಗೆ ಯಾವುದೇ ಮೇಲ್ ಕಳುಹಿಸಲಿಲ್ಲ. ಬದಲಾಗಿ, ಅಭ್ಯರ್ಥಿಯ ತಂದೆ ಜೂನ್ 20ರಂದು ಪರೀಕ್ಷೆಗೆ ಒಂದು ದಿನ ಮೊದಲು ನೇರ ಮಾಧ್ಯಮದ ಬಳಿ ತೆರಳಿ ಆರೋಪ ಹೊರಿಸಿದರು. ನಾವು ಈಗ ಅವರಿಗೆ ನಾಗ್ಪುರದಲ್ಲಿ ಒಂದು ಕೇಂದ್ರವನ್ನು ಮಂಜೂರು ಮಾಡುತ್ತಿದ್ದೇವೆ. ಆದರೆ ನಮ್ಮ ಸೈಬರ್ ತಂಡವು ಬದಲಾವಣೆಗಳನ್ನು ಅಭ್ಯರ್ಥಿಯೇ ಮಾಡಿದ್ದಾರೆಯೇ ಅಥವಾ ಅವರ ಖಾತೆಗೆ ಪ್ರವೇಶ ಪಡೆದಿರಬಹುದಾದ ಬೇರೆ ಯಾರಾದರೂ ಮಾಡಿದ್ದಾರೆಯೇ ಎಂದು ಪರಿಶೀಲಿಸುತ್ತಿದೆ” ಎಂದು ಹೇಳಿದ್ದಾರೆ.
ಕೊನೆಯ ಕ್ಷಣದಲ್ಲಿ ಪರೀಕ್ಷಾ ಕೇಂದ್ರಗಳನ್ನು ಬದಲಾಯಿಸುವಂತೆ ಕೋರಿ ಹಲವಾರು ಅಭ್ಯರ್ಥಿಗಳಿಂದ ಬಂದ ವಿನಂತಿಗಳನ್ನು ನಾವು ಸ್ವೀಕರಿಸಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಏನಿದು ಘಟನೆ?
ಭಾನುವಾರ (ಜೂನ್ 21) ನೀಟ್ ಮರು ಪರೀಕ್ಷೆಗೆ ನಾಗ್ಪುರ ವಿದ್ಯಾರ್ಥಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ನ (UAE) ಅಬುಧಾಬಿಯಲ್ಲಿ ಪರೀಕ್ಷಾ ಕೇಂದ್ರ ನೀಡಿರುವ ಬಗ್ಗೆ ಆರೋಪ ಕೇಳಿ ಬಂದಿತ್ತಿ. ಭಾನುವಾರ ನಡೆಯಬೇಕಿದ್ದ ಪರೀಕ್ಷೆಗೆ ಆಕಾಂಕ್ಷಿಯು ನಾಗ್ಪುರವನ್ನು ತನ್ನ ಆದ್ಯತೆಯ ನಗರವಾಗಿ ಆರಿಸಿಕೊಂಡಿದ್ದ ಎಂದು ಹೇಳಿದ್ದ. ಪರೀಕ್ಷಾ ಕೇಂದ್ರವನ್ನು ನೋಡಿದ ವಿದ್ಯಾರ್ಥಿಯ ಕುಟುಂಬವು ಮೊದಲಿಗೆ ಆತಂಕಕ್ಕೀಡಾಗಿತ್ತು. ತಮ್ಮ ಪುತ್ರನ ಬಳಿ ಪಾಸ್ಪೋರ್ಟ್ ಇಲ್ಲ. ಪಾಸ್ಪೋರ್ಟ್ಗೆ ಅರ್ಜಿ ಹಾಕಿ ಪಡೆಯಲು ಕೂಡ ಸಾಕಷ್ಟು ಸಮಯವಿಲ್ಲ ಎಂದು ವಿದ್ಯಾರ್ಥಿಯ ತಂದೆ ಮೊಹಮ್ಮದ್ ತಾಲಿಬ್ ತಿಳಿಸಿದ್ದರು. ಇದೀಗ ಅಭ್ಯರ್ಥಿಯ ನಾಟಕ ಬಯಾಲಾಗಿದೆ.