Yogi Adityanath: ಮಹಾಕುಂಭ ಮೇಳಕ್ಕೆ 7,500 ಕೋಟಿ ರೂ. ಖರ್ಚು ಮಾಡಿದ ಉತ್ತರ ಪ್ರದೇಶ ಸರ್ಕಾರಕ್ಕೆ ಹರಿದು ಬರುವ ಆದಾಯ ಎಷ್ಟು?
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ ಮುಕ್ತಾಯದ ಹಂತಕ್ಕೆ ತಲುಪಿದೆ. ಇದುವರೆಗೆ ಸುಮಾರು 53 ಕೋಟಿ ಮಂದಿ ಪುಣ್ಯಸ್ನಾನ ಮಾಡಿದ್ದಾರೆ. ಒಟ್ಟು 7,500 ಕೋಟಿ ರೂ. ಖರ್ಚು ಮಾಡಿದ ಸರ್ಕಾರಕ್ಕೆ ಸಿಗಲಿರುವ ಆದಾಯವೆಷ್ಟು ಗೊತ್ತೆ?

ಮಹಾ ಕುಂಭಮೇಳ.

ಲಖನೌ: ಉತ್ತರ ಪ್ರದೇಶದ ಪ್ರಯಾಗ್ರಾಜ್(Prayagraj)ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ (Maha Kumbh Mela) ಕೊನೆಯ ಘಟದತ್ತ ತಲುಪಿದೆ. ಫೆ. 26ರಂದು ಈ ಬೃಹತ್ ಧಾರ್ಮಿಕ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ತೆರೆ ಬೀಳಲಿದೆ. ಇದುವರೆಗೆ ಸುಮಾಡು 53 ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದಾರೆ. ಕೊನೆಯ ದಿನ ಸಮೀಪಿಸುತ್ತಿದ್ದಂತೆ ಭಕ್ತರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ. ಇದೀಗ ಮಹಾ ಕುಂಭಮೇಳದ ಬಗ್ಗೆ ಮಾತನಾಡಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರು ಹಲವು ಅಚ್ಚರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಮಹಾ ಕುಂಭವು ಲಕ್ಷಾಂತರ ಜನರಿಗೆ ಉದ್ಯೋಗವನ್ನು ಸೃಷ್ಟಿಸಿದೆ. ಇದು ಆದಾಯ ಹೆಚ್ಚಳ ಮತ್ತು ಉತ್ತರ ಪ್ರದೇಶದ ಆರ್ಥಿಕ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡಿದೆ ಎಂದು ಬಣ್ಣಿಸಿದ್ದಾರೆ. ಆ ಮೂಲಕ 45 ದಿನಗಳ ಧಾರ್ಮಿಕ ಕಾರ್ಯಕ್ರಮಕ್ಕೆ 7,500 ಕೋಟಿ ರೂ.ಗಳನ್ನು ಖರ್ಚು ಮಾಡುವ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
"ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಾ ಕುಂಭಮೇಳಕ್ಕೆ 7,500 ಕೋಟಿ ರೂ. ಹೂಡಿಕೆ ಮಾಡಿವೆ. ಇದರಿಂದ 3ರಿಂದ 3.5 ಲಕ್ಷ ಕೋಟಿ ರೂ.ಗಳ ಆದಾಯ ಹರಿದು ಬರುವ ನಿರೀಕ್ಷೆ ಇದೆ. ಇದು ಬುದ್ಧಿವಂತ ಹೂಡಿಕೆಯಲ್ಲವೆ?ʼʼ ಎಂದು ಅವರು ತಮ್ಮ ನಿವಾಸದಲ್ಲಿ ಉದ್ಯಮಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡುತ್ತಾ ಪ್ರಶ್ನಿಸಿದ್ದಾರೆ. ಆ ಮೂಲಕ ಈ ವಿಚಾರವಾಗಿ ಟೀಕಿಸುವ ವಿರೋಧ ಪಕ್ಷಗಳಿಗೆ ಪರೀಕ್ಷವಾಗಿ ತಿರುಗೇಟು ನೀಡಿದ್ದಾರೆ.
ʼʼ14 ಹೊಸ ಫ್ಲೈಓವರ್ಗಳು, 6 ಅಂಡರ್ಪಾಸ್ಗಳು, 200ಕ್ಕೂ ಹೆಚ್ಚು ಅಗಲವಾದ ರಸ್ತೆಗಳು, ಹೊಸ ಕಾರಿಡಾರ್ಗಳು, ವಿಸ್ತೃತ ರೈಲ್ವೆ ನಿಲ್ದಾಣಗಳು ಮತ್ತು ಆಧುನಿಕ ವಿಮಾನ ನಿಲ್ದಾಣ ಟರ್ಮಿನಲ್ ನಿರ್ಮಿಸಲು 7,500 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಹೆಚ್ಚುವರಿಯಾಗಿ ಕುಂಭಮೇಳದ ವ್ಯವಸ್ಥೆಗಳಿಗಾಗಿ 1,500 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆʼʼ ಎಂದು ಅವರು ಹೇಳಿದ್ದಾರೆ.
ʼʼಕುಂಭಮೇಳಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳ ಸಂಖ್ಯೆ 60 ಕೋಟಿ ತಲುಪಿದರೆ, ರಾಜ್ಯದ ಜಿಡಿಪಿ 3.25ರಿಂದ 3.5 ಲಕ್ಷ ಕೋಟಿ ರೂ.ಗೆ ಏರಿಕೆಯಾಗಬಹುದು. ಇಲ್ಲಿಯವರೆಗೆ ಮಹಾ ಕುಂಭಮೇಳಕ್ಕೆ ಸುಮಾರು 53 ಕೋಟಿ ಜನರು ಭೇಟಿ ನೀಡಿದ್ದಾರೆʼʼ ಎಂದಿದ್ದಾರೆ.
एकता, आस्था और अध्यात्म, सनातन धर्म की सांस्कृतिक शक्ति हैं। महाकुम्भ-2025, प्रयागराज के माध्यम से पूरा विश्व भारत की विविधता व दिव्यता के सनातन भाव से परिचित हो रहा है।
— Yogi Adityanath (@myogiadityanath) February 18, 2025
आदरणीय प्रधानमंत्री श्री @narendramodi जी के मार्गदर्शन में तीर्थराज प्रयाग पधार रहे समस्त श्रद्धालु जन माँ… https://t.co/WGfcjNqbX7
ʼʼ2013ರಲ್ಲಿ ಪ್ರಯಾಗ್ರಾಜ್ನಲ್ಲಿ ನಡೆದ ಕುಂಭಮೇಳದಲ್ಲಿ 55 ದಿನಗಳ ಕಾಲ 12 ಕೋಟಿ ಭಕ್ತರು ಪಾಲ್ಗೊಂಡಿದ್ದರು. 2019ರಲ್ಲಿ, ಅರ್ಧ ಕುಂಭ ನಡೆದಾಗ ಈ ಸಂಖ್ಯೆ ದ್ವಿಗುಣಗೊಂಡು 24 ಕೋಟಿಗೆ ಏರಿತು. ಈ ವರ್ಷ 36 ದಿನಗಳಲ್ಲಿ 53 ಕೋಟಿ ಭಕ್ತರು ಆಗಮಿಸಿದ್ದಾರೆ" ಎಂದು ಯೋಗಿ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Hema Malini: ಕುಂಭಮೇಳ ಕಾಲ್ತುಳಿತ ಪ್ರಕರಣ ದೊಡ್ಡ ಸಂಗತಿಯೇನಲ್ಲ; ಮಾತಿನ ಭರದಲ್ಲಿ ಹೇಮಾ ಮಾಲಿನಿ ಎಡವಟ್ಟು!
"2013ರಲ್ಲಿ ಕುಂಭಮೇಳವನ್ನು 2,000 ಎಕ್ರೆಯಲ್ಲಿ ನಡೆಸಲಾಗಿತ್ತು. ಈ ಬಾರಿ ಮೇಳವನ್ನು 10,000 ಎಕ್ರೆಯಲ್ಲಿ ಸಜ್ಜುಗೊಳಿಸಲಾಗಿದೆ. 35 ದಿನಗಳಲ್ಲಿ 40 ವಾಡಿಕೆಯ ವಿಮಾನಗಳು ಮತ್ತು 700ಕ್ಕೂ ಹೆಚ್ಚು ಚಾರ್ಟರ್ಡ್ ವಿಮಾನಗಳು ಆಗಮಿಸಿವೆ. ರೈಲ್ವೆ ಪ್ರತಿದಿನ ನೂರಾರು ವಿಶೇಷ ರೈಲುಗಳನ್ನು ಓಡಿಸುತ್ತಿದ್ದರೆ, ರಾಜ್ಯ ಸಾರಿಗೆ ನಿಗಮವು ಜನರ ಪ್ರಯಾಣಕ್ಕೆ ಅನುಕೂಲವಾಗುವಂತೆ 14,000 ಬಸ್ಸುಗಳನ್ನು ನಿಯೋಜಿಸಿದೆʼʼ ಎಂದು ಯೋಗಿ ವಿವರಿಸಿದ್ದಾರೆ.