Narendra Modi: ನಗರ ನಕ್ಸಲ್ ಭಾಷೆ, ಗುಡಿಸಲಲ್ಲಿ ಫೋಟೊ ಸೆಷನ್; ರಾಹುಲ್ ಗಾಂಧಿ ವಿರುದ್ಧ ಮೋದಿ ಗುಡುಗು
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣದ ವಂದನಾ ನಿರ್ಣಯಕ್ಕೆ ಲೋಕಸಭೆಯಲ್ಲಿ ಉತ್ತರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ವಿಪಕ್ಷಗಳ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. "ಇಂದು ಕೆಲವರು ನಗರ ನಕ್ಸಲ್ ಭಾಷೆಯನ್ನು ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಆ ಮೂಲಕ ನಮ್ಮ ದೇಶದ ವಿರುದ್ಧವೇ ಹೋರಾಟ ಘೋಷಿಸುತ್ತಿದ್ದಾರೆ. ಈ ಭಾಷೆಯನ್ನು ಮಾತನಾಡುವವರಿಗೆ ಸಂವಿಧಾನ ಅಥವಾ ರಾಷ್ಟ್ರದ ಏಕತೆ ಅರ್ಥವಾಗುವುದಿಲ್ಲ" ಎಂದು ಅವರು ಗುಡುಗಿದ್ದಾರೆ.
ಹೊಸದಿಲ್ಲಿ: ಕೆಲವು ವಿಪಕ್ಷ ನಾಯಕರು ನಗರ ನಕ್ಸಲ್ ಭಾಷೆ (Urban Naxals language)ಯಲ್ಲಿ ಮಾತನಾಡುತ್ತ, ಸುಳ್ಳು ಭರವಸೆಗಳನ್ನು ನೀಡಿ ಯುವ ಜನತೆಯ ದಾರಿ ತಪ್ಪಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಲೋಕಸಭೆಯಲ್ಲಿ ವಾಗ್ದಾಳಿ ನಡೆಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರ ಭಾಷಣದ ವಂದನಾ ನಿರ್ಣಯಕ್ಕೆ ಉತ್ತರಿಸಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಅವರನ್ನು ತರಾಟೆಗೆ ತೆಗೆದುಕೊಂಡರು. "ಇಂದು ಕೆಲವರು ನಗರ ನಕ್ಸಲ್ ಭಾಷೆಯನ್ನು ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಆ ಮೂಲಕ ನಮ್ಮ ದೇಶದ ವಿರುದ್ಧವೇ ಹೋರಾಟ ಘೋಷಿಸುತ್ತಿದ್ದಾರೆ. ಈ ಭಾಷೆಯನ್ನು ಮಾತನಾಡುವವರಿಗೆ ಸಂವಿಧಾನ ಅಥವಾ ರಾಷ್ಟ್ರದ ಏಕತೆ ಅರ್ಥವಾಗುವುದಿಲ್ಲ" ಎಂದು ಅವರು ಗುಡುಗಿದರು.
ಜ. 15ರಂದು ಮಾತನಾಡಿದ್ದ ರಾಹುಲ್ ಗಾಂಧಿ "ಬಿಜೆಪಿ ಮತ್ತು ಆರ್ಎಸ್ಎಸ್ ಪ್ರತಿಯೊಂದು ಸಾಂವಿಧಾನಿಕ ಸಂಸ್ಥೆಯನ್ನು ವಶಪಡಿಸಿಕೊಂಡಿವೆ. ನಾವು ಈಗ ಬಿಜೆಪಿ, ಆರ್ಎಸ್ಎಸ್ ಮತ್ತು ಭಾರತದ ರಾಜ್ಯ ವ್ಯವಸ್ಥೆಯ ವಿರುದ್ಧ ಹೋರಾಡುತ್ತಿದ್ದೇವೆʼʼ ಎಂದು ಹೇಳಿದ್ದರು. ದಿಲ್ಲಿಯ ಕೋಟ್ಲಾ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯನ್ನು ಉದ್ಘಾಟಿಸಿ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದರು. ಇದರ ವಿರುದ್ಧ ಗುವಹಾಟಿಯಲ್ಲಿ ಎಫ್ಐಆರ್ ದಾಖಲಾಗಿದೆ.
ಲೋಕಸಭೆಯಲ್ಲಿ ಕಾಂಗ್ರೆಸ್ ಅನ್ನು ಗುರಿಯಾಗಿಸಿಕೊಂಡು ಮಾತನಾಡಿದ ಮೋದಿ, ದಶಕಗಳಿಂದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಸಾಂವಿಧಾನಿಕ ಹಕ್ಕುಗಳಿಂದ ವಂಚಿತವಾಗಿದ್ದು, ಇದು ಜನರಿಗೆ ಮತ್ತು ಸಂವಿಧಾನಕ್ಕೆ ಮಾಡಿದ ಅನ್ಯಾಯ ಎಂದು ಹೇಳಿದರು.
"ನಾವು ಸಂವಿಧಾನದ ಆಶಯದಂತೆ ಬದುಕುತ್ತೇವೆ ಮತ್ತು ಅದಕ್ಕಾಗಿಯೇ ನಾವು ಬಲವಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ನಮ್ಮ ಸಂವಿಧಾನವು ತಾರತಮ್ಯ ಮಾಡುವ ಹಕ್ಕನ್ನು ನೀಡುವುದಿಲ್ಲ" ಎಂದು ಮೋದಿ ಪ್ರತಿಪಾದಿಸಿದರು.
ವಿಪಕ್ಷಗಳು ಈಡೇರದ ಭರವಸೆಗಳನ್ನು ನೀಡುವ ಮೂಲಕ ಯುವಜನತೆಯ ದಾರಿ ತಪ್ಪಿಸುತ್ತಿವೆ ಎಂದು ಮೋದಿ ಆರೋಪಿಸಿದರು. "ನಾವು ಯುವಜನತೆಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ಆದರೆ ಕೆಲವು ಪಕ್ಷಗಳು ಯುವಕರನ್ನು ಮೋಸ ಮಾಡುತ್ತಿವೆ. ಅವರು ಚುನಾವಣೆಯ ಸಮಯದಲ್ಲಿ ಭತ್ಯೆಗಳ ಭರವಸೆ ನೀಡುತ್ತಾರೆ ಆದರೆ ಆ ಭರವಸೆಗಳನ್ನು ಈಡೇರಿಸುವುದಿಲ್ಲ" ಎಂದು ದೂರಿದರು. ಈ ಮೂಲಕ ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳನನು ಟೀಕಿಸಿದರು.
ರಾಹುಲ್ ಗಾಂಧಿ ಹೆಸರು ಹೇಳದೆ ಪರೋಕ್ಷವಾಗಿ ಅವರು ವಿರುದ್ಧ ವಾಗ್ದಾಳಿ ನಡೆಸಿ, ʼʼತಮ್ಮ ಮನರಂಜನೆಗಾಗಿ ಬಡವರ ಗುಡಿಸಲಿನೆದುರು ಹೋಗಿ ಫೋಟೊ ಶೂಟ್ ಮಾಡಿಸಿಕೊಳ್ಳುವವರಿಗೆ ಸಂಸತ್ನಲ್ಲಿ ಬಡವರ ಕುರಿತಾದ ಚರ್ಚೆ, ಆ ಕುರಿತಾದ ಭಾಷಣ ನೀರಸ ಅಥವಾ ಬೋರಿಂಗ್ ಆಗಿಯೇ ಇರುತ್ತದೆʼʼ ಎಂದು ಲೇವಡಿ ಮಾಡಿದರು.
ಈ ಸುದ್ದಿಯನ್ನೂ ಓದಿ: PM Narendra Modi: ಯುಪಿಎ ಆಡಳಿತದಲ್ಲಿ ಜನರ ಮೇಲೆ 'ತೆರಿಗೆ ಬಾಂಬ್' ಎಸೆಯಲಾಗುತ್ತಿತ್ತು; ವಿಪಕ್ಷಗಳ ವಿರುದ್ಧ ಮೋದಿ ವಾಗ್ದಾಳಿ
ರಾಷ್ಟ್ರಪತಿ ಭಾಷಣಕ್ಕೆ ರಾಹುಲ್ ಗಾಂಧಿ ನೀಡಿದ ಪ್ರತಿಕ್ರಿಯೆಯನ್ನು ಉಲ್ಲೇಖಿಸಿ ಅವರು ಹೀಗೆ ಹೇಳಿದರು. ರಾಹುಲ್ ಗಾಂಧಿ ಅವರು ರಾಷ್ಟ್ರಪತಿ ಜ. 31ರಂದು ನಡೆಸಿದ್ದ ಭಾಷಣವನ್ನು ನೀರಸ ಎಂದು ಕರೆದಿದ್ದರು. 2047ರ ವೇಳೆಗೆ ಭಾರತವು ಸ್ವಾತಂತ್ರ್ಯದ 100 ವರ್ಷಗಳನ್ನು ಆಚರಿಸುವ ಹೊತ್ತಿಗೆ ಅಭಿವೃದ್ದಿ ಹೊಂದಿದ ದೇಶವಾಗುವ ಕನಸಿನೊಂದಿಗೆ ಸರ್ಕಾರ ಸಾಗುತ್ತಿದೆ ಎಂದು ಹೇಳಿದರು.