ನವದೆಹಲಿ: ದೆಹಲಿಯಲ್ಲಿ ಶನಿವಾರ ನಡೆದ ಕಾಂಗ್ರೆಸ್ ಪಕ್ಷ (Congress Party)ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆ 'ವಂದೇ ಮಾತರಂ' (Vande Mataram) ಪೂರ್ಣ ಆವೃತ್ತಿಯನ್ನು ಹಾಡುವ ವಿಚಾರವಾಗಿ ಭಾರೀ ರಾಜಕೀಯ ವಿವಾದ ಭುಗಿಲೆದ್ದಿದೆ. ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿ ಸೋನಿಯಾ ಗಾಂಧಿ (Sonia Gandhi) ಅವರು ವಂದೇ ಮಾತರಂ ಪೂರ್ಣ ಆವೃತ್ತಿಯನ್ನು ಹಾಡುವುದನ್ನು ತಡೆಯಲು ಯತ್ನಿಸಿದರು ಎಂದು ಬಿಜೆಪಿ (BJP) ಗಂಭೀರ ಆರೋಪ ಮಾಡಿದ್ದರೆ, ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕುಳಿತುಕೊಳ್ಳಲು ಕುರ್ಚಿ ತರಲು ಸೋನಿಯಾ ಗಾಂಧಿ ಸೂಚಿಸುತ್ತಿದ್ದರು ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಸಂಸದ ಸುಧಾಂಶು ತ್ರಿವೇದಿ, ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪ ಹಾಗೂ ಕೋಟ್ಯಂತರ ಭಾರತೀಯರ ಭಾವನೆಗೆ ಅನುಗುಣವಾಗಿ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯಲ್ಲಿ ವಂದೇ ಮಾತರಂ ಅನ್ನು ಸಂಪೂರ್ಣವಾಗಿ ಹಾಡಲಾಗಿದೆ ಎಂದರು. ಆದರೆ ಕಾಂಗ್ರೆಸ್ ಕಚೇರಿಯಲ್ಲಿ ರಾಷ್ಟ್ರಗೀತೆ ಹಾಡುವಾಗ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಪರಸ್ಪರ ಮಾತನಾಡುತ್ತಾ, ಕೈಸನ್ನೆ ಮೂಲಕ ವ್ಯಕ್ತಿಯೊಬ್ಬರನ್ನು ಕರೆಯುವ ಮೂಲಕ ಗೀತೆಗೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿದರು. ಕಾಂಗ್ರೆಸ್ ಪಕ್ಷಕ್ಕೆ ಇನ್ನೂ ವಂದೇ ಮಾತರಂ ಅನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಅವರು ಟೀಕಿಸಿದರು.
ಇಂಡೋನೇಷ್ಯಾವನ್ನೇ ನಲುಗಿಸಿದ 7.7 ತೀವ್ರತೆಯ ಭೂಕಂಪ: 38 ಮಂದಿ ಸಾವು
ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಲ್ವಿಯಾ ಸಹ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ವಾಗ್ದಾಳಿ ನಡೆಸಿದ್ದು, ಮೊದಲ ಕೆಲವು ಚರಣಗಳ ನಂತರ ಗೀತೆ ಮುಂದುವರಿದಾಗ ಸೋನಿಯಾ ಗಾಂಧಿ ಅಸಮಾಧಾನಗೊಂಡು ಅದನ್ನು ನಿಲ್ಲಿಸಲು ಸೂಚಿಸಿದರು ಎಂದು ಆರೋಪಿಸಿದ್ದಾರೆ. ಹೊಸ ಕಾಯ್ದೆಯ ಪ್ರಕಾರ ವಂದೇ ಮಾತರಂ ಅನ್ನು ಸಂಪೂರ್ಣವಾಗಿ ಗೌರವಿಸಬೇಕು ಮತ್ತು ಅಡ್ಡಿಪಡಿಸಿದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯ ಸಂದೇಶ ದೊರೆತ ನಂತರವೇ ಅವರು ಪೂರ್ಣ ಗೀತೆ ಹಾಡಲು ಸಮ್ಮತಿಸಿದರು ಎಂದು ದೂರಿದ್ದಾರೆ.
1875ರಲ್ಲಿ ಬಂಕಿಂ ಚಂದ್ರ ಚಟರ್ಜಿ ರಚಿಸಿದ ಈ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ 1937ರಲ್ಲಿ ಅಳವಡಿಸಿಕೊಳ್ಳಲಾಗಿತ್ತು. ಆದರೆ ಕೇಂದ್ರ ಸರ್ಕಾರವು ಸಾರ್ವಜನಿಕ ಸಮಾರಂಭಗಳು, ಶಾಲೆಗಳು ಮತ್ತು ಅಧಿಕೃತ ಸರ್ಕಾರಿ ಕಾರ್ಯಕ್ರಮಗಳಲ್ಲಿ ಗೀತೆಯನ್ನು ಸಂಪೂರ್ಣವಾಗಿ ಹಾಡುವುದನ್ನು ಕಡ್ಡಾಯಗೊಳಿಸಿದೆ. ಅಲ್ಲದೆ, ರಾಷ್ಟ್ರಗೀತೆಗೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುವುದನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸುವ ಮಸೂದೆಯನ್ನು ಸಂಸತ್ತು ಇತ್ತೀಚೆಗಷ್ಟೇ ಅಂಗೀಕರಿಸಿದೆ. ಈ ಎಲ್ಲ ಆರೋಪಗಳನ್ನು ತಳ್ಳಿಹಾಕಿರುವ ಕಾಂಗ್ರೆಸ್, ಕಾರ್ಯಕ್ರಮದಲ್ಲಿ ಸಂಪೂರ್ಣ ಗೀತೆಯನ್ನು ಶ್ರದ್ಧೆಯಿಂದ ಹಾಡಲಾಗಿದೆ ಹಾಗೂ ದೀರ್ಘಕಾಲ ನಿಂತಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕುಳಿತುಕೊಳ್ಳಲು ಕುರ್ಚಿ ತರುವಂತೆ ಸೋನಿಯಾ ಗಾಂಧಿ ಸೂಚಿಸುತ್ತಿದ್ದರು, ಇದನ್ನು ಬಿಜೆಪಿ ರಾಜಕೀಯ ಲಾಭಕ್ಕಾಗಿ ತಿರುಚುತ್ತಿದೆ ಎಂದು ಹೇಳಿದೆ.