ಚೆನ್ನೈ, ಮೇ 8: ತಮಿಳುನಾಡು ವಿಧಾನಸಭಾ ಚುನಾವಣೆ ಫಲಿತಾಂಶ ಘೋಷನೆಯಾದ ಬೆನ್ನಲ್ಲೇ ರಾಜಕೀಯ ಚಟುವಟಿಕೆ ತಾರಕಕ್ಕೇರಿದ್ದು, ಹಲವು ದಿನಗಳಿಂದ ಮೂಡಿದ್ದ ಗೊಂದಲ ಒಂದು ಹಂತಕ್ಕೆ ಮುಕ್ತಾಯವಾಗಿದೆ. ಸರ್ಕಾರ ರಚಿಸಲು ದೊಡ್ಡ ಟಿವಿಕೆಗೆ (TVK) ಅಗತ್ಯವಾದ ಮ್ಯಾಜಿಕ್ ನಂಬರ್ 118 ಲಭಿಸಿದ್ದು, ವಿಜಯ್ (Vijay) ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾದಂತಾಗಿದೆ. ಕಾಂಗ್ರೆಸ್ ಬೆನ್ನಲ್ಲೇ ಎಡಪಕ್ಷಗಳು ಮತ್ತು ವಿಸಿಕೆ ಶಾಸಕರು ಟಿವಿಕೆಗೆ ಬೆಂಬಲ ಸೂಚಿಸಿದ್ದು, ಸದ್ಯದಲ್ಲೇ ವಿಜಯ್ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರನ್ನು ಭೇಟಿಯಾಗಿ ಸರ್ಕಾರ ರಚನೆಯ ಹಕ್ಕು ಮಂಡಿಸಲಿದ್ದಾರೆ.
ದಳಪತಿ ವಿಜಯ್ ಅವರ ಟಿವಿಕೆ ಪಕ್ಷ 108 ಸ್ಥಾನಗಳಲ್ಲಿ ಜಯ ಗಳಿಸಿದರೂ ಸರ್ಕಾರ ರಚನೆಗೆ ಅಗತ್ಯವಾದ 118 ಶಾಸಕರ ಬೆಂಬಲ ಲಭಿಸದೆ ಗೊಂದಲದ ಸನ್ನಿವೇಶ ಎದುರಾಗಿತ್ತು. ಇದೀಗ ಗೊಂದಲಗಳೆಲ್ಲ ತಿಳಿಯಾಗಿದ್ದು, ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣ ವಚನ ಸ್ವೀಕರಿಸುವುದನ್ನು ಕಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.
ಸರ್ಕಾರ ರಚಿಸಲು ಮುಂದಾದ ವಿಜಯ್ ಅವರಿಗೆ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಈಗಾಗಲೇ 118 ಶಾಸಕರೊಂದಿಗೆ ಬನ್ನಿ, ನಿಮ್ಮನ್ನು ಬಿಟ್ಟು ಯಾರನ್ನೂ ಬಹುಮತ ಸಾಬೀತಿಗೆ ಆಹ್ವಾನಿಸಲ್ಲ ಎಂದು ಎಂದು ಹೇಳಿದ್ದರು. ಇದೀಗ ವಿಜಯ್ ತಮಗೆ ದೊರೆತ ಮತ್ತಷ್ಟು ಬೆಂಬಲದೊಂದಿಗೆ ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ. ಆ ಮೂಲಕ ಚೊಚ್ಚಲ ಚುನಾವಣೆಯಲ್ಲೇ ಸರ್ಕಾರ ರಚಿಸಿದ ಹೆಗ್ಗಳಿಕೆಗೆ ಟಿವಿಕೆ ಪಾತ್ರವಾಗಲಿದೆ.
ಟಿವಿಕೆಗೆ ಸಿಕ್ತು ಬಹುಮತ:
ಯಾರ ಬೆಂಬಲ?
ವಿಜಯ್ 2 ಕ್ಷೇತ್ರಗಳಲ್ಲಿ ಜಯ ಗಳಿಸಿರುವುದರಿಂದ 1 ಕಡೆ ರಾಜೀನಾಮೆ ನೀಡಬೇಕಾಗುತ್ತದೆ. ಹೀಗಾಗಿ ಟಿವಿಕೆಯ ಬಲ 107 ಆಗಲಿದೆ. ಇದರಿಂದ ಸರ್ಕಾರ ರಚನೆಗೆ ಇನ್ನು 11 ಶಾಸಕರ ಬೆಂಬಲ ಅಗತ್ಯ. ಈಗಾಗಲೇ ಕಾಂಗ್ರೆಸ್ನ ಐವರು ಶಾಸಕರು, ಎಡಪಕ್ಷ (ಸಿಪಿಎಂ, ಸಿಪಿಐ)ಗಳ ನಾಲ್ವರು ಮತ್ತು ವಿಸಿಕೆಯ ಇಬ್ಬರು ಬೆಂಬಲ ನೀಡಿದ್ದಾರೆ. ಆ ಮೂಲಕ ಸರ್ಕಾರ ರಚನೆಗೆ ಅಗತ್ಯವಾದ ಮ್ಯಾಜಿಕ್ ನಂಬರ್ ಲಭಿಸಿದ್ದು, ಟಿವಿಕೆ ಬೆಂಬಲಿಗರ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.
ಮ್ಯಾಜಿಕ್ ನಂಬರ್
- ಟಿವಿಕೆ-107
- ಕಾಂಗ್ರೆಸ್-5
- ಎಡಪಕ್ಷಗಳು-4
- ವಿಸಿಕೆ-2
- ಐಯುಎಂಎಲ್-2
- ಒಟ್ಟು-120
ಮತ್ತೊಮ್ಮೆ ರಾಜ್ಯಪಾಲರ ಭೇಟಿಯಾಗಲಿದ್ದಾರೆ ವಿಜಯ್
ಈಗಾಗಲೇ ಮ್ಯಾಜಿಕ್ ನಂಬರ್ ಪಡೆದುಕೊಂಡಿರುವ ವಿಜಯ್ ಮತ್ತೊಮ್ಮೆ ರಾಜ್ಯಪಾಲರ ಭೇಟಿಗೆ ಮುಂದಾಗಿದ್ದಾರೆ. ಸಂಜೆ 6 ಗಂಟೆಗೆ ವಿಜಯ್ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಮತ್ತೊಮ್ಮೆ ಹಕ್ಕು ಮಂಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೇ 9ರಂದೇ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದ್ದು, ಬೆಂಬಲ ನೀಡಿದ ಪಕ್ಷಗಳಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ.
ಟಿವಿಕೆ ಪಕ್ಷದಿಂದ ಗೆದ್ದು ತಮಿಳುನಾಡಿನಲ್ಲಿ MLA ಆದ ಕನ್ನಡಿಗ; ಯಾರೀತ ಹಿನ್ನೆಲೆಯೇನು?
ʼಇಂಡಿಯಾʼ ಒಕ್ಕೂಟ ಛಿದ್ರ ಛಿದ್ರ
ಟಿವಿಕೆಗೆ ಕಾಂಗ್ರೆಸ್ ಬೆಂಬಲ ನೀಡುವುದರೊಂದಿಗೆ ತಮಿಳುನಾಡಿನಲ್ಲಿ ʼಇಂಡಿಯಾʼ ಒಕ್ಕೂಟ ಛಿದ್ರ ಛಿದ್ರವಾಗಿದೆ. ಕಾಂಗ್ರೆಸ್ ನಡೆಗೆ ಡಿಎಂಕೆ ಕಿಡಿಕಾರಿದ್ದು, ಮೈತ್ರಿಗೆ ಮೋಸಲ ಮಾಡಿದೆ ಎಂದು ಎಂದು ಹೇಳಿದೆ. 234 ಬಲದ ತಮಿಳುನಅಡು ವಿಧಾನಸಭೆಯಲ್ಲಿ ಬಹುಮತಕ್ಕೆ 118 ಶಾಸಕ ಬೆಂಬಲ ಅಗತ್ಯ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಟಿವಿಕೆ 108 ಕಡೆ ಜಯ ಗಳಿಸಿತ್ತು. ಇತ್ತ ಡಿಎಂಕೆಗೆ 73, ಎಐಎಡಿಎಂಕೆ 53 ಸೀಟ್ ಲಭಿಸಿತ್ತು.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.