ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ (Winter Session 2025) ಡಿಸೆಂಬರ್ 1ರಿಂದ 19ರವರೆಗೆ ನಡೆಸಲು ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಅನುಮೋದನೆ ನೀಡಿದ್ದಾರೆ. ಚಳಿಗಾಲದ ಅಧಿವೇಶನವನ್ನು ಕರೆಯಲು ಅನುಮತಿ ನೀಡುವಂತೆ ಕೋರಿ ಕೇಂದ್ರ ಸರ್ಕಾರವು ಸಲ್ಲಿಸಿದ್ದ ಪ್ರಸ್ತಾವನೆಯನ್ನು ದ್ರೌಪದಿ ಮುರ್ಮು ಅನುಮೋದಿಸಿದ್ದಾರೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು (Union Minister Kiren Rijiju) ತಿಳಿಸಿದ್ದಾರೆ. ರಾಷ್ಟ್ರದ ಪ್ರಜಾಪ್ರಭುತ್ವವನ್ನು ಬಲಪಡಿಸುವ ಮತ್ತು ಜನರ ಆಕಾಂಕ್ಷೆಗಳನ್ನು ಪೂರೈಸುವ ರಚನಾತ್ಮಕ ಮತ್ತು ಅರ್ಥಪೂರ್ಣ ಅಧಿವೇಶನಕ್ಕಾಗಿ ಎದುರು ನೋಡುತ್ತಿರುವುದಾಗಿ ರಿಜಿಜು ಹೇಳಿದ್ದಾರೆ.
ಚಳಿಗಾಲದ ಅಧಿವೇಶನ ನಡೆಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮೋದನೆ ನೀಡಿದ್ದಾರೆ ಎಂದು ಘೋಷಿಸಿದ ಕಿರಣ್ ರಿಜಿಜು, ʼʼಡಿಸೆಂಬರ್ 1ರಿಂದ ಡಿಸೆಂಬರ್ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ಕರೆಯುವ ಸರ್ಕಾರದ ಪ್ರಸ್ತಾವನೆಗೆ ಅನುಮೋದನೆ ಸಿಕ್ಕಿದೆ. ಇದು ಸಂಸದೀಯ ವ್ಯವಹಾರಗಳ ತುರ್ತು ಪರಿಸ್ಥಿತಿಗೆ ಒಳಪಟ್ಟಿರುತ್ತದೆʼʼ ಎಂದು ವಿವರಿಸಿದರು.
ಇದನ್ನೂ ಓದಿ: Star Saree Fashion 2025: ನಟಿ ಪ್ರಿಯಾಮಣಿಯ ಇಂಡೋ-ವೆಸ್ಟರ್ನ್ ಶೀರ್ ಸೀರೆ ಲವ್
ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಏಪ್ರಿಲ್ 26ರಂದು ಕಾಶ್ಮೀರದ ಪಹಲ್ಗಾಮ್ನ ಬೈಸರನ್ ಕಣಿವೆಯಲ್ಲಿ ನಡೆದ ಭಯೋತ್ಪಾದಕ ದಾಳಿ, ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ಭಾರತ ನಡೆಸಿದ 'ಆಪರೇಷನ್ ಸಿಂದೂರ್' ಕಾರ್ಯಾಚರಣೆ ಸೇರಿದಂತೆ ಹಲವಾರು ವಿಷಯಗಳ ಕುರಿತು ಸರ್ಕಾರ ಮತ್ತು ವಿರೋಧ ಪಕ್ಷದ ನಡುವೆ ತೀವ್ರ ಚರ್ಚೆಗಳನ್ನು ನಡೆಸಲಾಗಿತ್ತು.
ಕೇಂದ್ರ ಸಚಿವ ಕಿರಣ್ ರಿಜಿಜು ಅವರ ಎಕ್ಸ್ ಪೋಸ್ಟ್;
ಇದರೊಂದಿಗೆ ಬಿಹಾರದಲ್ಲಿ ನಡೆದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ಕುರಿತು ಚರ್ಚೆ ನಡೆಸಬೇಕೆಂಬ ಪ್ರತಿಪಕ್ಷಗಳ ಬೇಡಿಕೆಗೆ ನಿರಂತರ ಅಡ್ಡಿಯಾಗಿತ್ತು. ಗಂಭೀರ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿರುವ ಪ್ರಧಾನಿ, ಮುಖ್ಯಮಂತ್ರಿ ಮತ್ತು ಸಚಿವರನ್ನು ಪದಚ್ಯುತಗೊಳಿಸುವ ಮಸೂದೆ ಮಂಡನೆಗೂ ವಿರೋಧ ಪಕ್ಷದ ಸಂಸದರು ನಿರಂತರ ಅಡ್ಡಿಪಡಿಸಿದರು. ಇದರಿಂದ ರಾಜ್ಯ ಮತ್ತು ಲೋಕಸಭೆಯ ಅಧಿವೇಶನಗಳು ಪದೇ ಪದೆ ಮುಂದೂಡಲ್ಪಟ್ಟಿತ್ತು.
ಲೋಕಸಭೆಯ ಒಟ್ಟು 120 ಗಂಟೆಗಳಲ್ಲಿ ಕೇವಲ 37 ಗಂಟೆಗಳ ಕಾಲ ಹಾಗೂ ರಾಜ್ಯಸಭೆಯಲ್ಲಿ ಒಟ್ಟು 41.15 ಗಂಟೆಗಳ ಕಾಲ ಚರ್ಚೆಗಳು ನಡೆದವು. ಈ ಅಧಿವೇಶನದಲ್ಲಿ ಒಟ್ಟು 15 ಮಸೂದೆಗಳನ್ನು ಅಂಗೀಕರಿಸಲಾಗಿತ್ತು.
ಈ ಹಿಂದೆ ಚಳಿಗಾಲದ ಅಧಿವೇಶನವು ಸಾಮಾನ್ಯವಾಗಿ ನವೆಂಬರ್ ಮೂರನೇ ವಾರದಲ್ಲಿ ಪ್ರಾರಂಭವಾಗಿ ಕ್ರಿಸ್ಮಸ್ಗೆ ಮುಂಚಿತವಾಗಿ ಕೊನೆಗೊಳ್ಳುತ್ತಿತ್ತು. ಆದರೆ ಕಳೆದ ವರ್ಷ ಚಳಿಗಾಲದ ಅಧಿವೇಶನವು ನವೆಂಬರ್ 25ರಂದು ಪ್ರಾರಂಭವಾಗಿ ಡಿಸೆಂಬರ್ 20ರಂದು ಕೊನೆಯಾಗಿತ್ತು. ಈ ಬಾರಿ ಡಿಸೆಂಬರ್ 1ರಿಂದ 19ರವರೆಗೆ ನಡೆಸಲು ನಿರ್ಧರಿಸಲಾಗಿದೆ.
ಈ ಬಾರಿ ಚಳಿಗಾಲದ ಅಧಿವೇಶನವನ್ನು ಅಲ್ಪಾವಧಿಗೆ ಮಾಡಿರುವುದನ್ನು ವಿರೋಧ ಪಕ್ಷದ ನಾಯಕರು ಟೀಕಿಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯಸಭೆಯಲ್ಲಿ ಪಕ್ಷದ ಮುಖ್ಯ ಸಚೇತಕ ಜೈರಾಮ್ ರಮೇಶ್, ʼʼಇದು ಏನನ್ನು ಸೂಚಿಸುತ್ತದೆ? ಸರ್ಕಾರಕ್ಕೆ ಯಾವುದೇ ಅಗತ್ಯ ಕೆಲಸವಿಲ್ಲ, ಯಾವುದೇ ಮಸೂದೆಗಳನ್ನು ಅಂಗೀಕರಿಸಬೇಕಾಗಿಲ್ಲ ಮತ್ತು ಯಾವುದೇ ಚರ್ಚೆಗೆ ಅವಕಾಶ ನೀಡಬೇಕಾಗಿಲ್ಲʼʼ ಎಂದು ಹೇಳಿದ್ದಾರೆ.