Kannada actor Upendra: ರಿಯಲ್ ಸ್ಟಾರ್ ಉಪೇಂದ್ರ ಜೊತೆ ಕೈ ಜೋಡಿಸಿದ ʻಪುಷ್ಪಾʼ ನಿರ್ಮಾಪಕರು
ರಿಯಲ್ ಸ್ಟಾರ್ ಉಪೇಂದ್ರ ಸ್ಯಾಂಡಲ್ವುಡ್ ಮಾತ್ರವಲ್ಲದೇ ಟಾಲಿವುಡ್ , ಕಾಲಿವುಡ್ ಇಂಡಸ್ಟ್ರಿವರೆಗೂ ಸಾಕಷ್ಟು ಪ್ರಸಿದ್ಧಿ ಪಡೆದಿದ್ದಾರೆ. ಹೀಗಾಗಿ ನಟ ಉಪೇಂದ್ರ ಅವರಿಗೆ ಪರ ಭಾಷೆಯಲ್ಲಿ ಕೂಡ ಉತ್ತಮ ಸಿನಿಮಾ ಆಫರ್ ಗಳು ಸಿಗುತ್ತಿವೆ. ಇತ್ತೀಚೆಗಷ್ಟೇ ಉಪೇಂದ್ರ ಅವರು ಕೂಲಿ ಸಿನಿಮಾ ಮೂಲಕ ಕಾಲಿವುಡ್ಗೆ ಎಂಟ್ರಿ ಕೊಟ್ಟಿದ್ದು ರಜನಿಕಾಂತ್ ಜೊತೆ ಅವರು ನಟಿಸಿದ್ದು ಹೆಮ್ಮೆ ತಂದುಕೊಟ್ಟ ವಿಚಾರವಾಗಿದೆ. ಕೂಲಿ ರಿಲೀಸ್ಗೂ ಮೊದಲೇ ಮತ್ತೊಂದು ತೆಲುಗು ಸಿನಿಮಾದಲ್ಲಿ ನಟ ಉಪೇಂದ್ರ ಅವರು ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯೂ ಈಗಾಗಲೇ ರಿಯಲ್ ಸ್ಟಾರ್ ಉಪೇಂದ್ರ ಅವರ ಕಾಲ್ ಶೀಟ್ ಪಡೆದುಕೊಂಡಿದೆ. ಹೀಗಾಗಿ ಉಪೇಂದ್ರ ಫ್ಯಾನ್ಸ್ಗೆ ಈ ವಿಚಾರ ದೊಡ್ಡ ಗುಡ್ನ್ಯೂಸ್ ಸಿಕ್ಕಂತಾಗಿದೆ.



ತೆಲುಗಿನಲ್ಲಿ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಪುಷ್ಪ 2 ನಂತಹ ಸಿನಿಮಾ ನೀಡಿರುವ ಮೈತ್ರಿ ಮೂವಿ ಮೇಕರ್ಸ್ ಈಗ ಕನ್ನಡದ ಸ್ಟಾರ್ ಹೀರೋಗಳನ್ನು ತನ್ನತ್ತ ಸೆಳೆಯುತ್ತಿದೆ. ಶ್ರೀಮಂತುಡು, ಗುಡ್ ಬ್ಯಾಡ್ ಅಗ್ಲಿ, ವೀರ ಸಿಂಹ ರೆಡ್ಡಿ, ರಂಗಸ್ಥಳಂ, ಪುಷ್ಪ 2 ನಂತಹ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯು ಈಗ ಹೊಸ ಕಾನ್ಸೆಪ್ಟ್ ಮೂಲಕ ಜನರನ್ನು ರಂಜಿಸಲು ಮುಂದಾಗಿದೆ.

ಹೊಸ ಸಿನಿಮಾಕ್ಕೆ ಮೈತ್ರಿ ಸಂಸ್ಥೆ ಕಲಾವಿದರ ಆಯ್ಕೆ ಮಾಡುತ್ತಿದ್ದು ಸೂರ್ಯ ಕುಮಾರ್ ಪಾತ್ರಕ್ಕೆ ಚಿತ್ರತಂಡ ನಟ ಉಪೇಂದ್ರ ಅವರನ್ನು ಆಯ್ಕೆ ಮಾಡಿ ಕಾಲ್ ಶೀಟ್ ಪಡೆದುಕೊಂಡಿದೆ ಎನ್ನಲಾಗಿದೆ. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯು ಸಮರ ಸಿಂಹ ರೆಡ್ಡಿ ಸಿನಿಮಾದಲ್ಲಿ ನಟ ದುನಿಯಾ ವಿಜಯ್ ಅವರಿಗೆ ನೆಗೆಟಿವ್ ರೋಲ್ ನೀಡುವ ಮೂಲಕ ವಿಲನ್ ಆಗಿ ಪರಿಚಯಿಸಿದ್ದರು. ಖ್ಯಾತ ನಟ ನಂದಮೂರಿ ಬಾಲಕೃಷ್ಣ ಅವರಿಗೆ ಖಡಕ್ ಫೈಟ್ ನೀಡುವ ವಿಭಿನ್ನ ಪಾತ್ರದಲ್ಲಿ ದುನಿಯಾ ವಿಜಯ್ ಪರಭಾಷೆಯಲ್ಲಿ ಮಿಂಚಿದ್ದರು. ಇದೀಗ ನಟ ಉಪೇಂದ್ರ ಅವರಿಗೆ ಅವಕಾಶ ಸಿಕ್ಕಿದೆ.

ಇದೇ ಚಿತ್ರದಲ್ಲಿ ರಾಮ್ ಪೋತಿನೇನಿ ನಾಯಕನಾಗಿ, ಭಾಗ್ಯಶ್ರೀ ಬೋರ್ಸೆ ನಾಯಕಿಯಾಗಿ ನಟಿಸುತ್ತಿದ್ದು ರಿಯಲ್ ಸ್ಟಾರ್ ಉಪ್ಪಿ ಖಳನಾಯಕನ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎನ್ನಲಾಗಿದೆ. ಉಪೇಂದ್ರ ಈ ಸಿನಿಮಾದಲ್ಲಿ ಸೂರ್ಯ ಕುಮಾರ್ ಎಂಬ ಪಾತ್ರ ನಿರ್ವಹಿಸುತ್ತಿದ್ದು ಚಿತ್ರತಂಡ ಇತ್ತೀಚೆಗಷ್ಟೇ ಸ್ಪೆಷಲ್ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿತ್ತು.

ಖ್ಯಾತ ನಟ ರಾಮ್ ಪೋತಿನೇನಿ ನಾಯಕನಾಗಿ ನಟಿಸುತ್ತಿರುವ ಈ ಸಿನಿಮಾಕ್ಕೆ #RAPO22 ಎಂದು ಹೆಸರಿಡಲಾಗಿದೆ. ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ ಸಿನಿಮಾ ಖ್ಯಾತ ನಿರ್ದೇಶಕ ಮಹೇಶ್ ಬಾಬು ಪಿ. ಅವರು #RAPO22 ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ನಟ ಉಪೇಂದ್ರ ಅವರ ಪಾತ್ರ ಹೇಗಿರುತ್ತೆ, ಉಳಿದ ಪಾತ್ರದಲ್ಲಿ ಯಾವೆಲ್ಲ ನಟ ನಟಿಯರು ಇರಲಿದ್ದಾರೆ ಇತ್ಯಾದಿ ವಿಚಾರದ ಬಗ್ಗೆ ಚಿತ್ರತಂಡ ಗೌಪ್ಯತೆ ಕಾಯ್ದಿಟ್ಟುಕೊಂಡಿದೆ.

ಸದ್ಯ ನಟ ಉಪೇಂದ್ರ ಅವರು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನದ 45 ಸಿನಿಮಾದ ಶೂಟಿಂಗ್ ಮತ್ತು ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಅದರ ಜೊತೆಗೆ ಬುದ್ಧಿವಂತ 2 ಕೂಡ ರಿಲೀಸ್ ಗೆ ರೆಡಿಯಾಗಿದೆ. ಈ ನಡುವೆ ನಟ ಉಪೇಂದ್ರ ಪುತ್ರ ಆಯುಷ್ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಸಹ ಇತ್ತೀಚೆಗಷ್ಟೆ ವೈರಲ್ ಆಗಿತ್ತು. ಉಪೇಂದ್ರ ಹೋಂ ಬ್ಯಾನರ್ನಲ್ಲಿ ಮಗನ ಚಿತ್ರ ನಿರ್ಮಾಣಗೊಳ್ಳಲಿದ್ದು ಈ ಬಗ್ಗೆ ಮುಂದಿನ ದಿನದಲ್ಲಿ ಇನ್ನಷ್ಟು ಮಾಹಿತಿ ತಿಳಿದುಬರಲಿದೆ.