ಪಾಟ್ನಾ: ಎರಡನೇ ಹಂತದ ಮತದಾನಕ್ಕೆ (Voting) ಬಿಹಾರ (Bihar Assembly Election) ಈಗ ಸಿದ್ಧವಾಗಿದೆ. ನ. 11ರಂದು 20 ಜಿಲ್ಲೆಗಳ ಒಟ್ಟು 122 ಕ್ಷೇತ್ರಗಳಿಗೆ 3.7 ಕೋಟಿ ಮಂದಿ ಮತದಾರರು ಮತದಾನ ಮಾಡಲಿದ್ದಾರೆ. ಈಗಾಗಲೇ ಪ್ರಚಾರ (Election Campaign) ಕಾರ್ಯಕ್ಕೆ ತೆರೆ ಬಿದ್ದಿದ್ದು, ಕ್ಷನ ಕ್ಷನಕ್ಕೂ ಕೂತೂಹಲ ಕೆರಳಿಸುತ್ತಿದೆ. ಒಟ್ಟು 1,302 ಅಭ್ಯರ್ಥಿಗಳು ಕಣದಲ್ಲಿದ್ದು, ಶೇ. 10ರಷ್ಟು ಅಂದರೆ 136 ಮಂದಿ ಮಹಿಳಾ ಅಭ್ಯರ್ಥಿಗಳಾಗಿದ್ದಾರೆ. ಒಟ್ಟು 45,399 ಕೇಂದ್ರಗಳಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದಲ್ಲಿ 18 ಜಿಲ್ಲೆಗಳ 121 ಸ್ಥಾನಗಳಲ್ಲಿ ಮತದಾನ ನಡೆದಿತ್ತು.
2020ರ ಚುನಾವಣೆಯಲ್ಲಿ ಈ 122 ಸ್ಥಾನಗಳಲ್ಲಿ ಬಿಜೆಪಿ 42 ಸ್ಥಾನಗಳನ್ನು ಗೆದ್ದಿದ್ದು, ಆರ್ಜೆಡಿ 33, ಜೆಡಿಯು 20, ಕಾಂಗ್ರೆಸ್ 11 ಮತ್ತು ಎಡಪಂಥೀಯ ಪಕ್ಷಗಳು 5 ಸ್ಥಾನಗಳನ್ನು ಗೆದ್ದಿದ್ದವು.
ಇದನ್ನೂ ಓದಿ: Bihar Assembly Election: ಸೇತುವೆ ನಿರ್ಮಿಸುವವರೆಗೂ ಮತ ಚಲಾಯಿಸುವುದಿಲ್ಲ: ಬಿಹಾರದಲ್ಲಿ ಸಿಡಿದೆದ್ದ ಗ್ರಾಮಸ್ಥರು
ಎರಡನೇ ಹಂತದ ಮತದಾನದ 122 ಕ್ಷೇತ್ರಗಳು ಬಿಹಾರದ ಮಧ್ಯ, ಪಶ್ಚಿಮ ಮತ್ತು ಉತ್ತರ ಪ್ರದೇಶಗಳಲ್ಲಿ ಹರಡಿಕೊಂಡಿವೆ. ಇವುಗಳಲ್ಲಿ ಬಿಜೆಪಿ ತಿರ್ಹತ್, ಸರನ್ ಮತ್ತು ಉತ್ತರ ಮಿಥಿಲಾಂಚಲ್ ಪ್ರದೇಶಗಳಲ್ಲಿ ಪ್ರಾಬಲ್ಯ ಹೊಂದಿದೆ. ಪೂರ್ವ ಚಂಪಾರಣ್, ಪಶ್ಚಿಮ ಚಂಪಾರಣ್, ಶಿಯೋಹರ್, ಸೀತಾಮರ್ಹಿ ಮತ್ತು ಸರನ್ ಜಿಲ್ಲೆಗಳಲ್ಲಿ ಬಿಜೆಪಿ ಬಲವಾಗಿದೆ. ಜೆಡಿಯು ಭಾಗಲ್ಪುರ್ ಪ್ರದೇಶದಲ್ಲಿ ಬಲವಾದ ಅಸ್ತಿತ್ವವನ್ನು ಹೊಂದಿದೆ. ಮಹಾಘಟಬಂಧನ್ ಪಕ್ಷಗಳು ಗಯಾ, ಔರಂಗಾಬಾದ್, ನವಾಡ, ಜೆಹಾನಾಬಾದ್ ಮತ್ತು ಅರ್ವಾಲ್ ಜಿಲ್ಲೆಗಳಲ್ಲಿ ಪ್ರಬಲವಾಗಿದೆ.
ರಾಜಕೀಯವಾಗಿ ಸೂಕ್ಷ್ಮವಾಗಿರುವ ಸೀಮಾಂಚಲ್ ಪ್ರದೇಶಗಳ ಪುರ್ನಿಯಾ, ಅರಾರಿಯಾ, ಕಿಶನ್ಗಂಜ್ ಮತ್ತು ಕತಿಹಾರ್ ಎಂಬ ನಾಲ್ಕು ಜಿಲ್ಲೆಗಳಲ್ಲಿ ಹರಡಿರುವ ಇಪ್ಪತ್ತನಾಲ್ಕು ಸ್ಥಾನಗಳು ಅತ್ಯಂತ ದೊಡ್ಡ ಕ್ಷೇತ್ರವಾಗಿವೆ. ಇಲ್ಲಿನ ಸೀಮಾಂಚಲ್ ಜಿಲ್ಲೆಯು ಬಿಹಾರದ ಶೇಕಡಾ 17ರಷ್ಟು ಮುಸ್ಲಿಮರನ್ನು ಹೊಂದಿದೆ.
2020ರಲ್ಲಿ ಬಿಜೆಪಿ ಇಲ್ಲಿ ಎಂಟು ಸ್ಥಾನಗಳನ್ನು ಗೆದ್ದಿತು. ಬಿಜೆಪಿಯ ಮಿತ್ರ ಪಕ್ಷ ಜೆಡಿಯು ನಾಲ್ಕು ಸ್ಥಾನಗಳನ್ನು ಗೆದ್ದಿತು. ಕಾಂಗ್ರೆಸ್ ಐದು, ಸಿಪಿಐಎಂಎಲ್ ಮತ್ತು ಆರ್ಜೆಡಿ ತಲಾ ಒಂದು ಸ್ಥಾನವನ್ನು ಗೆದ್ದುಕೊಂಡಿದ್ದವು.
ಜಾತಿವಾರು ಲೆಕ್ಕಾಚಾರದಲ್ಲಿ ಬಿಹಾರದ ಜನಸಂಖ್ಯೆಯ ಶೇ. 36ರಷ್ಟಿರುವ ಅತ್ಯಂತ ಹಿಂದುಳಿದ ವರ್ಗಗಳು ಎರಡನೇ ಹಂತದ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ. ಮಧ್ಯ ಮತ್ತು ಪಶ್ಚಿಮ ಜಿಲ್ಲೆಗಳಲ್ಲಿ ಹರಡಿರುವ ಇಬಿಸಿಗಳು ನಿತೀಶ್ ಕುಮಾರ್ ಅವರನ್ನು ಬೆಂಬಲಿಸುತ್ತವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇವರ ಮತ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಆರ್ಜೆಡಿಯ ಯಾದವ್ ಮತದಾರರನ್ನು ಎದುರಿಸಲು ಎನ್ಡಿಎ ಯಾದವ್ ಅಲ್ಲದ ಒಬಿಸಿಗಳನ್ನು ಸೆಳೆಯುವ ಪ್ರಯತ್ನ ಮಾಡಿದೆ. ಇನ್ನು ಅರಾ, ಬಕ್ಸಾರ್ ಮತ್ತು ರೋಹ್ತಾಸ್ ಬೆಲ್ಟ್ಗಳಲ್ಲಿ ಪರಿಶಿಷ್ಟ ಜಾತಿಗಳು ಫಲಿತಾಂಶವನ್ನು ನಿರ್ಧರಿಸವ ಸಾಧ್ಯತೆ ಇದೆ.
ಇದನ್ನೂ ಓದಿ: Bengaluru News: ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ
ಒಟ್ಟಿನಲ್ಲಿ ಸಾಕಷ್ಟು ಕುತೂಹಲ ಸೆಳೆದಿರುವ ಬಿಹಾರ ವಿಧಾನಸಭೆಯ ಚುನಾವಣೆಯ ಅಂತಿಮ ಹಂತವನ್ನು ತಲುಪಿದ್ದು, ಶುಕ್ರವಾರ (ನ. 14) ಫಲಿತಾಂಶ ಘೋಷಣೆಯಾಗಲಿದೆ.