DK Shivakumar: ಡಿ.ಕೆ.ಸುರೇಶ್ಗೆ ಇಡಿ ಸಮನ್ಸ್; ತನಿಖೆಗೆ ನಮ್ಮ ಸಹಕಾರ ಇರಲಿದೆ ಎಂದ ಡಿಸಿಎಂ ಡಿಕೆಶಿ
DK Shivakumar: ರಾಜ್ಯದಲ್ಲಿ ಮುಂದೆ ಬಿಜೆಪಿ- ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎನ್ನುವ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ʼಅವರಿಗೆ ಯಾವ ರೀತಿಯ ಪಂಚೆ, ಅಂಗಿ, ಜುಬ್ಬಾ, ಪ್ಯಾಂಟ್, ಮೇಲಂಗಿ ಬೇಕು ಎಂಬುದನ್ನು ಕಳುಹಿಸಿ ಕೊಡೋಣ. ಮಾಧ್ಯಮದವರ ಕೈಗೆ ಇವೆಲ್ಲವನ್ನು ನೀಡುತ್ತೇನೆ. ನೀವೇ ಅವರಿಗೆ ತಲುಪಿಸಿಬಿಡಿʼ ಎಂದು ಕುಹಕವಾಡಿದ್ದಾರೆ.

ಡಿಸಿಎಂ ಡಿ.ಕೆ. ಶಿವಕುಮಾರ್.

ಬೆಂಗಳೂರು: ಡಿ.ಕೆ.ಸುರೇಶ್ ಇಡಿ ತನಿಖೆಗೆ ಸಹಕಾರ ನೀಡಲಿದ್ದಾರೆ ಹಾಗೂ ತಮ್ಮ ಹೇಳಿಕೆಯನ್ನು ಸಲ್ಲಿಸಲಿದ್ದಾರೆ. ನಮ್ಮ ಹೆಸರನ್ನು ಅಪರಿಚಿತರು ದುರುಪಯೋಗ ಮಾಡಿಕೊಳ್ಳುತ್ತಾ ಇದ್ದಾರೆ ಎಂದು ಅವರು ಪೊಲೀಸರಿಗೆ ದೂರು ನೀಡಿದ್ದರು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದರು. ಅರಮನೆ ಮೈದಾನದಲ್ಲಿ ಮಾಧ್ಯಮದವರ ಪ್ರಶ್ನೆಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದರು.
ಐಶ್ವರ್ಯಾ ಗೌಡ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಕೆ. ಸುರೇಶ್ ಅವರಿಗೆ ಇಡಿ ಸಮನ್ಸ್ ನೀಡಿರುವ ಬಗ್ಗೆ ಕೇಳಿದಾಗ, ‘ಶಿವಕುಮಾರ್ ತಂಗಿ ಎಂದೇಳಿಕೊಂಡು ಮೋಸ ಮಾಡಿರುವ ಬಗ್ಗೆ ವಂಚನೆಗೆ ಒಳಗಾಗಿರುವ ಮೂರು ನಾಲ್ಕು ಜನರು ನನ್ನ ಬಳಿ ಬಂದು ಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಎಂದು ನಾವೂ ಸಹ ಹೇಳಿದ್ದೇವೆ. ಆದ ಕಾರಣ ನಾವು ಇಡಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ’ ಎಂದು ತಿಳಿಸಿದರು.
ಸುರೇಶ್ ಅವರು ವಿಚಾರಣೆಗೆ ಹಾಜರಾಗುತ್ತಾರೆಯೇ ಎಂದು ಕೇಳಿದಾಗ, ʼಈ ದೇಶದ ಕಾನೂನಿಗೆ, ವಿಚಾರಣೆಗಳಿಗೆ ನಾವು ಗೌರವ ನೀಡುತ್ತೇವೆ. ಮೋಸ ಮಾಡುವ ವ್ಯಕ್ತಿಗಳ ವಿರುದ್ಧದ ತನಿಖೆಗೆ ನಾವು ಸಹಕಾರ ನೀಡಲು ಬದ್ದರಾಗಿದ್ದೇವೆ. ಜನರಿಗೆ ನ್ಯಾಯ ಒದಗಿಸಿಕೊಡುವ ಕೆಲಸವನ್ನು ಡಿ.ಕೆ. ಸುರೇಶ್ ಹಾಗೂ ಶಿವಕುಮಾರ್ ಮಾಡುತ್ತಾರೆʼ ಎಂದರು.
ಸಮನ್ಸ್ ನೀಡಲು ಬಂದಾಗ ಸಹೋದರ ಮನೆಯಲ್ಲಿ ಇರಲಿಲ್ಲ
ಸಹೋದರ ಡಿ.ಕೆ. ಸುರೇಶ್ ಅವರ ಮನೆ ಬಾಗಿಲಿಗೆ ಇಡಿಯವರು ಸಮನ್ಸ್ ಅನ್ನು ಅಂಟಿಸಿ ಹೋಗುತ್ತೇವೆ ಎಂದರಂತೆ. ಅದಕ್ಕೆ ನಾನು ಸ್ವೀಕರಿಸಿ ಎಂದು ಹೇಳಿದ್ದೇನೆ. ಸಮನ್ಸ್ ನೀಡಲು ಬಂದಾಗ ಸಹೋದರ ಮನೆಯಲ್ಲಿ ಇರಲಿಲ್ಲ ಎಂದು ತಿಳಿಸಿದರು.
ರಾಜ್ಯದಲ್ಲಿ ಮುಂದೆ ಬಿಜೆಪಿ- ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎನ್ನುವ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, ʼಅವರಿಗೆ ಯಾವ ರೀತಿಯ ಪಂಚೆ, ಅಂಗಿ, ಜುಬ್ಬಾ, ಪ್ಯಾಂಟ್, ಮೇಲಂಗಿ ಬೇಕು ಎಂಬುದನ್ನು ಕಳುಹಿಸಿ ಕೊಡೋಣ. ಮಾಧ್ಯಮದವರ ಕೈಗೆ ಇವೆಲ್ಲವನ್ನು ನೀಡುತ್ತೇನೆ. ನೀವೇ ಅವರಿಗೆ ತಲುಪಿಸಿಬಿಡಿʼ ಎಂದು ಕುಹಕವಾಡಿದರು.
ಕಮಲಹಾಸನ್ ನಟನೆಯ ಚಿತ್ರ ಕರ್ನಾಟಕದಲ್ಲಿ ಬಿಡುಗಡೆ ಸಂಬಂಧ 24 ಗಂಟೆಯೊಳಗೆ ಸರ್ಕಾರ ವಿವರಣೆ ನೀಡಬೇಕು ಎನ್ನುವ ಸುಪ್ರೀಂ ಕೋರ್ಟ್ ನಿರ್ದೇಶನದ ಬಗ್ಗೆ ಕೇಳಿದಾಗ, ʼಕಮಲ ಹಾಸನ್ ವಿಚಾರದಲ್ಲಿ ನ್ಯಾಯಲಯ ನೀಡಿರುವ ಆದೇಶವನ್ನು ನಾವೆಲ್ಲರೂ ಗೌರವದಿಂದ ಪಾಲನೆ ಮಾಡಬೇಕು. ನಾವು ನಮ್ಮ ಮಿತಿಯನ್ನು ಮೀರಬಾರದು, ಶಾಂತಿಯಿಂದ ಇರಬೇಕು ಎಂದು ಕನ್ನಡಪರ ಸಂಘ- ಸಂಸ್ಥೆಗಳಲ್ಲಿ ನಾನು ಮನವಿ ಮಾಡಿಕೊಳ್ಳುತ್ತೇನೆ. ಯಾರೂ ಸಹ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ನಮ್ಮ ರಾಜ್ಯ ಶಾಂತಿ ಪ್ರಿಯ ರಾಜ್ಯʼ ಎಂದರು.
ಈ ಸುದ್ದಿಯನ್ನೂ ಓದಿ | DK Shivakumar: ಬಿಜೆಪಿಯವರನ್ನು ಹೆಗಲ ಮೇಲೆ ಹಾಕಿಕೊಂಡು ಹೊರೋಣ: ಡಿ.ಕೆ.ಶಿವಕುಮಾರ್ ವ್ಯಂಗ್ಯ
ಕನ್ನಡಿಗರ ಸ್ವಾಭಿಮಾನವನ್ನು ಯಾರೂ ಹಾಳು ಮಾಡಲು ಸಾಧ್ಯವಿಲ್ಲ
ಅವರ ಅಭಿಪ್ರಾಯ ಹೇಳುವುದು ತಪ್ಪಲ್ಲ. ಅವರ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ನೀಡಿದ್ದೇವೆ. ಎಲ್ಲಾ ಜಾತಿ, ಸಂಸ್ಕೃತಿ, ಧರ್ಮಗಳನ್ನು ಬೆಂಗಳೂರು ಅರಗಿಸಿಕೊಂಡಿದೆ. ಬೆಂಗಳೂರು ಅಂತಾರಾಷ್ಟ್ರೀಯ ನಗರ, ಎಲ್ಲರಿಗೂ ಬೇಕಾದ ನಗರ. ಕನ್ನಡದ ಜನರು ಹೃದಯ ಶ್ರೀಮಂತಿಕೆ ತೋರಿಸಿಕೊಂಡು ಬಂದಿದ್ದಾರೆ. ನಮ್ಮ ಸ್ವಾಭಿಮಾನವನ್ನು ಯಾರೂ ಸಹ ಹಾಳು ಮಾಡಲು ಸಾಧ್ಯವಿಲ್ಲ. ಕನ್ನಡದ ಪರ ನಾವಿದ್ದೇವೆ. ಆದರೆ ನ್ಯಾಯಲಯದ ತೀರ್ಪಿಗೆ ಗೌರವ ನೀಡಲೇ ಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.