ಜೀವನದಲ್ಲಿ(Life) ನೋತಾಗ ನಿಮ್ಮನ್ನು ಗೆಲುವಿನತ್ತ(Success) ಕೊಂಡೊಯ್ಯುವುದು ನೀವು ಮಾಡುವ ಕೆಲಸದಲ್ಲಿ ನಿಮಗಿರುವ ಶ್ರದ್ಧೆ ಮತ್ತು ಕಠಿಣ ಪರಿಶ್ರಮ. ಇದು ಬಿಟ್ಟರೆ ಗೆಲುವಿಗೆ ಬೇರಿನ್ಯಾವುದೇ ಶಾರ್ಟ್ ಕಟ್ ಗಳಿಲ್ಲ. ಆದರೆ ನಾವು ಜೀವನದಲ್ಲಿ ಸೋತ ಸಂದರ್ಭದಲ್ಲಿ ನಮ್ಮ ಮನೋಸ್ಥೈರ್ಯ ಕುಗ್ಗಿ ಹೋಗಿರುತ್ತದೆ. ನಮ್ಮ ಜೊತೆಗಿದ್ದವರೇ ನಮ್ಮನ್ನು ದೂರವಿಡಲು ಪ್ರಾರಂಭಿಸುತ್ತಾರೆ. ಅಂತಹ ಸಂಕಷ್ಟದ ಸಂದರ್ಭದಲ್ಲಿ ನಮ್ಮ ಗೆಲುವಿನ ಪ್ರಯತ್ನಕ್ಕೆ ಬಲ ತುಂಬುವುದು ಒಂದಷ್ಟು ಸ್ಪೂರ್ತಿದಾಯಕ(Motivational) ಮಾತುಗಳು ಮತ್ತು ನಮ್ಮನ್ನು ಮತ್ತೆ ಗೆಲ್ಲುವಂತೆ ಮಾಡುವ ಸೋತು ಗೆದ್ದವರ ಸಾಧನೆಯ ಕಥೆಗಳು. ಹಾಗೆ ಜೀವನದಲ್ಲಿ ಸೋತು ಮತ್ತೆ ಮೇಲೇಳಬೇಕೆಂದು ಬಯಸುವವರಿಗೆ ನಿಜವಾದ ಸ್ಪೂರ್ತಿ ತುಂಬುವುದು ಚಾಣಕ್ಯ ನೀತಿ(Chanakya Niti) ಎಂದರೆ ತಪ್ಪಾಗಲಾರದು.
ಶ್ರೇಷ್ಠ ತತ್ವಜ್ಞಾನಿ, ಆರ್ಥಿಕ ತಜ್ಞ ಚಾಣಕ್ಯರು ನೀಡಿರುವ ನೀತಿಗಳಿಂದಾಗಿ ನಮ್ಮ ಜೀವನದಲ್ಲಿ ಮತ್ತೆ ಗೆಲುವಿನ ಹಾದಿಯನ್ನು ಹಿಡಿಯಲು ಸಾಧ್ಯವಿದೆ. ಇಲ್ಲಿ ಕೆಲವೊಂದು ಸ್ಪೂರ್ತಿದಾಯಕ ಚಾಣಕ್ಯ ನೀತಿಗಳನ್ನು ನಿಮಗೆ ನೀಡಲಾಗಿದೆ.
ಅಳವಡಿಸಿಕೊಳ್ಳುವಿಕೆ ಮತ್ತು ಆವಿಷ್ಕಾರ:
ನೀವು ತುಂಬಾ ಸಾಂಪ್ರದಾಯಿಕವಾಗಿ ಯೋಚಿಸುವುದರಿಂದ ನಿಮ್ಮ ಬೆಳವಣಿಗೆ ಕುಂಠಿತವಾಗಬಹುದು. ಹಾಗಾಗಿ ಚಾಣಕ್ಯ ಹೊಂದಿಕೊಳ್ಳುವಿಕೆ ಮತ್ತು ಆವಿಷ್ಕಾರಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ನೀವು ಯಾವುದೇ ವಿಚಾರವನ್ನು ನೋಡುವ ವಿಧಾನದಲ್ಲಿ ಹೊಸರೀತಿಯಲ್ಲಿ ಯೋಚಿಸುವುದು, ಹೊಸ ವಿಧಾನಗಳನ್ನು ಪ್ರಯತ್ನಿಸುವುದು ಅಥವಾ ಅಗತ್ಯವಿದ್ದಲ್ಲಿ ನಿಮ್ಮ ಗುರಿಗಳನ್ನು ಮಾರ್ಪಾಡಿಸಿಕೊಳ್ಳುವುದೂ ಸಹ ಅವಶ್ಯಥಕ ಎಂಬುದು ಚಾಣಕ್ಯ ನೀತಿಯ ಪ್ರಮುಖ ಅಂಶಗಳಲ್ಲಿ ಒಂದು.
ನಿಮ್ಮ ಬಯಕೆಗಳನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ:
ಬಯಕೆ ಮತ್ತು ಚಂಚಲತೆ ಎಂಬೆರೆಡು ವಿಚಾರಗಳು ನಿರ್ಧಾರವನ್ನು ಮಸುಕಾಗಿಸಬಹುದು ಮತ್ತು ನಿಮ್ಮ ಶಕ್ತಿಯನ್ನು ಕುಂದಿಸಬಹುದು. ಹಾಗಾಗಿ ನಿಮ್ಮ ಬಯಕೆಗಳಿಗೆ ಸ್ವಯಂ ನಿಯಂತ್ರಣ ಹೇರುವಂತೆ ಚಾಣಕ್ಯ ಸಲಹೆ ನೀಡುತ್ತಾರೆ. ಕೇವಲ ನಿರರ್ಥಕ ಸುಖದ ಹಿಂದೆ ಓಡುವುದಕ್ಕಿಂತ ನಿಮ್ಮ ಪ್ರಯತ್ನಗಳ ಮೇಲೆ ಗಮನವನ್ನು ಕೇಂದ್ರೀಕರಿಸಬೇಕೆಂಬುದು ಚಾಣಕ್ಯ ನೀತಿಯಲ್ಲಿ ಬರುವ ಸಲಹೆ.
ಈ ಸುದ್ದಿಯನ್ನು ಓದಿ: Vastu Tips: ಪರ್ಸ್ ನಲ್ಲಿಟ್ಟುಕೊಳ್ಳುವ ಈ ವಸ್ತುಗಳು ಅದೃಷ್ಟವನ್ನು ಆಕರ್ಷಿಸುತ್ತದೆ..! ಆ ವಸ್ತುಗಳು ಯಾವುವು ನೋಡಿ
ದೀರ್ಘಕಾಲೀನ ದೂರದೃಷ್ಟಿ ನಿಮ್ಮಲ್ಲಿರಲಿ:
ಕೆಲವೊಮ್ಮೆ ಧುತ್ತನೆ ಎದುರಾಗುವ ಸಮಸ್ಯೆಗಳು ನಮಗೆ ಬೆಟ್ಟದಂತೆ ತೋರುವ ಸಾಧ್ಯತೆಗಳಿವೆ. ಯಾಕಂದ್ರೆ ನಾವು ತುಂಬಾ ಚಿಕ್ಕದಾಗಿ ಫೋಕಸ್ ಮಾಡಿರುತ್ತೇವೆ. ಹಾಗಾಗಿ ನಮ್ಮ ಮುಂದೆ ದೊಡ್ಡ ಕನಸಿನ ಕ್ಯಾನ್ವಾಸನ್ನು ತೆರೆದಿಟ್ಟು ಅದನ್ನು ಸಾಕಾರಗೊಳಿಸಿಕೊಳ್ಳಲು ಶ್ರಮ ಪಡುವುದು ಅಗತ್ಯವೆಂದು ಚಾಣಕ್ಯ ಅಬಿಪ್ರಾಯಪಡುತ್ತಾರೆ.
ನಿಮ್ಮ ಗೌರವವನ್ನು ಕಾಪಾಡಿಕೊಳ್ಳಿ:
ಗೌರವವೆಂಬುದು ಒಂದು ಅಮೂಲ್ಯವಾದ ಆಸ್ತಿ ಎಂದು ಚಾಣಕ್ಯ ಬಲವಾಗಿ ನಂಬುತ್ತಾರೆ. ನೀವು ಜಿವನದಲ್ಲಿ ಸೋತ ಸಂದರ್ಭದಲ್ಲೂ ನಿಮ್ಮ ಆತ್ಮ ಗೌರವ ಮತ್ತು ಸನ್ನಡತೆಯನ್ನು ಕಾಪಾಡಿಕೊಳ್ಳಿ. ಬೇರೆಯವರು ನಿಮ್ಮ ಮೇಲಿಟ್ಟಿರುವ ಗ್ರಹಿಕೆ ನಿಮ್ಮ ಭವಿಷ್ಯದ ಅವಕಾಶಗಳು ಮತ್ತು ಸಂಬಂಧಗಳ ಮೇಲೆ ಪರಿಣಾಮವನ್ನು ಬೀರುತ್ತದೆ.
ಹಿನ್ನಡೆಯನ್ನು ಪಾಠವಾಗಿ ಸ್ವೀಕರಿಸಿ:
ಸೋಲು ಅಥವಾ ತಡೆ ಎಂಬುದು ಜೀವನದ ಅಂತ್ಯವಲ್ಲ, ಬದಲಾಗಿ ಅದು ಜೀವನ ನಮಗೆ ಕಲಿಸುವ ದೊಡ್ಡ ಪಾಠ ಎಂಬುದು ಚಾಣಕ್ಯ ನೀತಿಯ ತತ್ವವಾಗಿದೆ. ನಾವೆಲ್ಲಿ ತಪ್ಪಿದ್ದೇವೆ ಎಂಬುದನ್ನು ವಿಮರ್ಶೆಗೊಳಪಡಿಸಲು ಇದೊಂದು ಉತ್ತಮ ಅವಕಾಶವಾಗಿದೆ. ನಮ್ಮ ತಪ್ಪುಗಳಿಂದ ಪಾಠ ಕಲಿತುಕೊಂಡು ನಾವು ಮತ್ತೆ ಮುನ್ನುಗ್ಗಬೇಕು ಹಾಗೂ ಬಲವಾಗಿ ಬೆಳೆಯಬೇಕೆಂದು ಚಾಣಕ್ಯ ನೀತಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಒಟ್ಟಿನಲ್ಲಿ ಪ್ರಯತ್ನಶೀಲರಿಗೆ ಮತ್ತು ಕ್ರಿಯಾಶೀಲ ವ್ಯಕ್ತಿಗಳಿಗೆ ಜೀವನದಲ್ಲಿ ಸೋಲೆಂಬುದು ಒಂದು ತಾತ್ಕಾಲಿಕ ಹಿನ್ನಡೆ ಮತ್ತು ಜೀವನ ಪಾಠ. ಅದನ್ನು ಎದುರಿಸಿ, ತಪ್ಪುಗಳಿಂದ ಪಾಠ ಕಲಿತುಗೊಂಡು ಭವಿಷ್ಯವನ್ನು ಉನ್ನತೀಕರಿಸಿಕೊಳ್ಳಬೇಕೆಂಬುದೇ ಚಾಣಕ್ಯ ನೀತಿ ನಮಗೆ ಬೋಧಿಸುವ ಮೂಲ ತತ್ವವಾಗಿದೆ.