ಬೆಂಗಳೂರು, ಡಿ. 2: ಹಿಂದೂ ಸಂಪ್ರದಾಯದಲ್ಲಿ(Hindu Traditions) ಹನುಮ ಜಯಂತಿ (Hanuman Jayanti) ಅತ್ಯಂತ ಮಹತ್ವವುಳ್ಳ ಪವಿತ್ರ ದಿನ(Good Day)ವಾಗಿದ್ದು, ಈ ಹಬ್ಬವನ್ನು ಹನುಮಾನ್ ಜನ್ಮೋತ್ಸವ, ಆಂಜನೇಯ ಜಯಂತಿ, ಬಜರಂಗಬಲಿ ಜಯಂತಿ ಎಂಬ ಹೆಸರಗಳಿಂದಲೂ ಕರೆಯಲಾಗುತ್ತದೆ. ವಾಯುದೇವನ ಅಂಶಾವತಾರವಾಗಿರುವ ಹನುಮಂತನು ಮಾತಾ ಅಂಜನಾ ಮತ್ತು ಕೇಸರಿಯ ಪುತ್ರನಾಗಿ ಜನಿಸಿದ್ದಾನೆ.
ಭಕ್ತರು ಮಾರುತಿ ದೇವರ ಜನ್ಮೋತ್ಸವವನ್ನು ಭಕ್ತಿ ಮತ್ತು ಭಾವಪರವಶದಿಂದ ಆಚರಿಸುತ್ತಾರೆ. ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸುವುದರ ಜತೆಗೆ, ಮನೆಯನ್ನೂ ವಿಶೇಷವಾಗಿ ಅಲಂಕರಿಸಿ ಪೂಜೆ ಮಾಡುತ್ತಾರೆ. ಇಂದು ಹಲವರು ಉಪವಾಸ ವ್ರತವನ್ನು ಕೈಗೊಳ್ಳುವ ಮೂಲಕ ಅಂಜನಿಪುತ್ರನ ಕೃಪೆಗೆ ಪಾತ್ರರಾಗುತ್ತಾರೆ. ಹಿಂದೂ ಪಂಚಾಂಗದ ಪ್ರಕಾರ ಹನುಮಾನ್ ಜಯಂತಿ ಚೈತ್ರ ಮಾಸದ ಶುಕ್ಲ ಪಕ್ಷದ ಪೂರ್ಣಿಮೆಯಂದು ಬರುತ್ತದೆ. ಹನುಮಾನ್ ಜಯಂತಿಯನ್ನು ಹೇಗೆ ಆಚರಿಸಬೇಕು? ಹನುಮಾನ್ ಜಯಂತಿ ಪೂಜೆ ವಿಧಾನ, ಮಹತ್ವ ಮತ್ತು ಮಂತ್ರಗಳ ಬಗ್ಗೆ ಇಲ್ಲಿದೆ ಮಾಹಿತಿ.
ಮಹತ್ವ
ಹನುಮಾನ್ ಜಯಂತಿ ಭಗವಾನ್ ರಾಮನ ಪರಮಭಕ್ತ ಹಾಗೂ ʼರಾಮಾಯಣʼದ ಪ್ರಮುಖ ಪಾತ್ರ ಭಗವಾನ್ ಹನುಮಂತನ ಜನ್ಮ ವಾರ್ಷಿಕೋತ್ಸವ. ಹನುಮಂತನ ಜನನವು ʼರಾಮಾಯಣʼ ಯುಗದಲ್ಲೇ ನಡೆದದ್ದು ಎಂದು ಪೌರಾಣಿಕ ನಂಬಿಕೆ ಇದ್ದು, ದೃಕ್ ಪಂಚಾಂಗದ ಪ್ರಕಾರ, ಮಂಗಳವಾರದ ಸೂರ್ಯೋದಯದ ನಂತರ ಚೈತ್ರ ಮಾಸದ ಪೂರ್ಣಿಮೆಯ ದಿನ, ಚಿತ್ರ ನಕ್ಷತ್ರ ಮತ್ತು ಮೇಷ ಲಗ್ನದಲ್ಲಿ ಹನುಮಂತನು ಅವತರಿಸಿದ್ದಾನೆಂದು ಶ್ರೀಮದ್ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಹನುಮಂತನು ಮಹಾದೇವನ ಆಂಶಿಕ ಅವತಾರ, ಅಷ್ಟಸಿದ್ಧಿ-ನವ ನಿಧಿಗಳ ಧಾರಕನೆಂದು ಪರಿಗಣಿಸಲಾಗುತ್ತದೆ. ಕರುಣೆ, ಭಕ್ತಿ, ಶಕ್ತಿ ಮತ್ತು ನಿಷ್ಠೆಯ ಸಂಕೇತವಾದ ಹನುಮನ ಆರಾಧನೆ, ಜೀವನದಲ್ಲಿ ಸಾಮರಸ್ಯ, ಧೈರ್ಯ ಮತ್ತು ಯಶಸ್ಸನ್ನು ತರುವುದಾಗಿ ನಂಬಲಾಗುತ್ತದೆ.
ಮನೆಯಲ್ಲಿ ದೇವರ ಮೂರ್ತಿ ಹೇಗಿರಬೇಕು? ವಾಸ್ತು ಶಾಸ್ತ್ರ ಏನು ಹೇಳುತ್ತದೆ?
ಹೀಗೆ ಆಚರಿಸಿ
ಹನುಮ ಜಯಂತಿಯಂದು ಬೆಳಗ್ಗೆ ಬೇಗ ಎದ್ದು ಶುದ್ಧಗೊಂಡು ಆಂಜನೇಯನ ದೇವಾಲಯಕ್ಕೆ ತೆರಳಿ ದರ್ಶನ ಪಡೆದು, ಅವನ ಸನ್ನಿಧಿಯಲ್ಲಿ ತುಪ್ಪದ ದೀಪ ಅಥವಾ ಎಣ್ಣೆಯ ದೀಪ ಹಚ್ಚುವುದು ಅತ್ಯಂತ ಶುಭ ಎಂದು ನಂಬಲಾಗಿದೆ. ದೀಪಾರಾಧನೆಯ ನಂತರ ಹನುಮಾನ್ ಚಾಲೀಸವನ್ನು 11 ಬಾರಿ ಪಠಿಸುವುದು ವಿಶೇಷ ಫಲದಾಯಕ ಎಂದು ನಂಬಲಾಗಿದೆ. ಇಂತಹ ಭಕ್ತಿ ಪೂರ್ವಕ ಆರಾಧನೆಯಿಂದ ಬಜರಂಗಬಲಿ ಶೀಘ್ರ ಸಂತುಷ್ಟನಾಗಿಸುವುದರ ಜತೆಗೆ, ಅವರ ಅನುಗ್ರಹ ದೊರೆತು ಜೀವನದಲ್ಲಿನ ಹಲವು ತೊಂದರೆಗಳು ದೂರಾಗುತ್ತವೆ ಎಂಬ ನಂಬಿಕೆಯಿದೆ.
ಹಾಗೇ ಹನುಮ ಜಯಂತಿಯಂದು ವಿಧಿ-ವಿಧಾನಗಳೊಂದಿಗೆ ಪೂಜೆ ಮಾಡಿದರೆ ಶನಿ ದೋಷ, ಕಷ್ಟಗಳು, ಅಹಿತಕರ ಗ್ರಹಬಲ ಇವುಗಳಿಂದ ಮುಕ್ತಿ ದೊರೆಯುತ್ತದೆ ಎಂದು ಧಾರ್ಮಿಕ ಶಾಸ್ತ್ರಗಳು ಹೇಳುತ್ತವೆ. ಇದ್ದರಲ್ಲೇ ಹನುಮಂತನ ಆರಾಧನೆ ಶೌರ್ಯ, ಶಕ್ತಿ ಮತ್ತು ರಕ್ಷೆಗಾಗಿ ಪರಿಣಾಮಕಾರಿ ಎಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ.
ಈ ಮಂತ್ರ ಪಠಿಸಿ
ಈ ಶುಭದಿನದಂದು ಹನುಮಂತನ ಮೂಲ ಮಂತ್ರ “ಓಂ ಶ್ರೀ ಹನುಮತೇ ನಮಃ, ಅಷ್ಟ ಸಿದ್ಧಿ ನವ ನಿಧಿ ಕೆ ದಾತಾ, ಆಸು ವರ್ದೀನ್ ಜಾನಕಿ ಮಾತಾ” ಪಠಿಸುವುದರಿಂದ ನಿಮಗೆ ಶುಭ ಫಲಗಳು ಸಿಗುತ್ತದೆ. ಇದರೊಂದಿಗೆ ಹನುಮಾನ್ ಚಾಲೀಸಾ, ಸುಂದರಕಾಂಡ ಮತ್ತು ಬಜರಂಗ್ ಬಾನ್ ಹನುಮಂತನ ಸ್ತುತಿಗಳನ್ನು ಪಾರಾಯಣ ಮಾಡುವುದರಿಂದ ಆಂಜನೇಯನ ಆರ್ಶೀವಾದ ಪಡೆಯಬಹುದು.