ಬಿಹಾರದಲ್ಲಿ ಪೊಲೀಸರು ನಡೆಸಿದ ಒಂದು ಎನ್ಕೌಂಟರ್ ಇದೀಗ ಚರ್ಚೆಯನ್ನು ಹುಟ್ಟುಹಾಕಿದೆ. ಬಿಹಾರದ ಭೋಜ್ಪುರ್ ಜಿಲ್ಲೆಯಲ್ಲಿ ಸಾರ್ವಜನಿಕರ ಹಕ್ಕುಗಳ ಪರ ಧ್ವನಿ ಎತ್ತಿದ್ದ ಭರತ್ ಭೂಷಣ್ ತಿವಾರಿ ಎಂಬಾತನನ್ನು ಪೊಲೀಸರು ಗುಂಡಿಕ್ಕಿ ಕೊಂದು ಹಾಕಿದ್ದಾರೆ. ಘಟನೆಯ ಕೆಲವು ವಿಡಿಯೋ ಗಳು ಲಭ್ಯವಿವೆ. ಈತ ರಿವಾಲ್ವರ್ ಹೊಂದಿದ್ದ. ಸ್ಥಳೀಯ ನೆಲೆಯಲ್ಲಿ, ಗ್ರಾಮಸ್ಥರ ಪರವಾಗಿ ಧ್ವನಿ ಎತ್ತುತ್ತಿದ್ದ ಹಾಗೂ ವಿಡಿಯೋಗಳನ್ನು ಮಾಡುತ್ತಿದ್ದ ಈತ, ಸೋಶಿಯಲ್ ಮೀಡಿಯಾದಲ್ಲೂ ಅವುಗಳನ್ನು ಅಪ್ಲೋಡ್ ಮಾಡುತ್ತಿದ್ದ.
ನೆರೆ ಸಂತ್ರಸ್ತರು, ರಸ್ತೆ ನಿರ್ಮಾಣದಿಂದ ಜಮೀನು ಕಳೆದುಕೊಳ್ಳುತ್ತಿದ್ದ ರೈತರ ಪರವಾಗಿ ಈತ ಮಾತನಾಡಿದ್ದು, ಈ ಸಂತ್ರಸ್ತರ ಸಮಸ್ಯೆ ಪರಿಹಾರವಾಗದಿದ್ದರೆ ‘ಆಯುಧಗಳು ಮಾತನಾಡಲಿವೆ’ ಎಂದಿದ್ದ. ಪೊಲೀಸರು ಸ್ಥಳಕ್ಕೆ ಹೋದಾಗ ಈತ ಪಿಸ್ತೂಲ್ ಝಳಪಿಸಿದ್ದು ವಿಡಿಯೋದಲ್ಲಿ ದಾಖಲಾ ಗಿದ್ದು, ನಂತರ ಅದನ್ನು ಕೆಳಗಿಟ್ಟು ಶರಣಾಗಿದ್ದಾನೆ ಎಂದು ಸ್ಥಳೀಯ ಮೂಲಗಳು ಹೇಳಿವೆ.
ಇದನ್ನೂ ಓದಿ: Naxal Encounter: ಭದ್ರತಾ ಪಡೆಗಳಿಂದ 14 ಮಾವೋವಾದಿಗಳ ಎನ್ಕೌಂಟರ್; ನಾಯಕ ಸಚಿನ್ ಮಾಂಗ್ಡು ಬಲಿ
ಆದರೆ ಆತ ಶರಣಾದ ಬಳಿಕದ ವಿಡಿಯೋಗಳಿಲ್ಲ. ಪೊಲೀಸರು ಗುಂಡಿಕ್ಕಿದ ಅವನ ಶವ ದೊರೆತಿದೆ. ಕೆಲ ಪೊಲೀಸರನ್ನು ಅಮಾನತು ಮಾಡಲಾಗಿದೆ, ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ. ಆದರೂ ಈ ಪರಿಸ್ಥಿತಿಯನ್ನು ಭಿನ್ನ ರೀತಿಯಲ್ಲಿ ನಿಭಾಯಿಸಬಹುದಿತ್ತು ಎಂಬುದು ತಜ್ಞರ ಅಭಿಪ್ರಾಯ.
ಸಾರ್ವಜನಿಕ ಹಿತಕ್ಕಾಗಿ ಧ್ವನಿ ಎತ್ತುವವರನ್ನು ಮೌನಗೊಳಿಸುವ ಹಲವು ವಿಧಾನಗಳಲ್ಲಿ ಎನ್ಕೌಂಟರ್ ಕೂಡ ಒಂದು, ಹಾಗೂ ಇದು ಅತ್ಯಂತ ಕಚ್ಚಾ ಆದ ಒಂದು ದಾರಿ. ಉತ್ತರ ಪ್ರದೇಶ ಹಾಗೂ ಬಿಹಾರಗಳಲ್ಲಿ ಇದನ್ನು ವ್ಯಾಪಕವಾಗಿ ಬಳಸಲಾಗುತ್ತಿತ್ತು. ಪಾತಕಿಗಳನ್ನು ಪೊಲೀಸರು ಕೊಂದಾಗ ಜನತೆ ಸಂಭ್ರಮಿಸುತ್ತಾರೆ. ಆದರೆ ಅಪರಾಧಿಗಳಿಗೂ ಸಾರ್ವಜನಿಕ ಹೋರಾಟಗಾರರಿಗೂ ವ್ಯತ್ಯಾಸವಿದೆ. ಈ ವ್ಯತ್ಯಾಸವನ್ನು ಪೊಲೀಸರು ಅರ್ಥ ಮಾಡಿಕೊಳ್ಳದೆ ಹೋದರೆ ಇಂಥ ಅನಾಹುತ ಗಳು ಘಟಿಸುತ್ತವೆ.
ಪೊಲೀಸರಿಗೆ ಎನ್ಕೌಂಟರ್ ಅಧಿಕಾರ ದತ್ತವಾಗಿ ಕೊಡಲ್ಪಟ್ಟಿಲ್ಲ. ಅದು ಅನಿವಾರ್ಯ ಆದಾಗ ಆತ್ಮರಕ್ಷಣೆಗಾಗಿ ನಡೆಸುವ ಪ್ರಕ್ರಿಯೆ. ಈ ಬಗ್ಗೆ ಇಲಾಖೆ ತನಿಖೆ ನಡೆಸುತ್ತದೆ. ಆದರೆ ಎಷ್ಟು ಪೊಲೀಸ ರಿಗೆ ಶಿಕ್ಷೆ ಆಗಿದೆಯೋ ಗೊತ್ತಿಲ್ಲ. ಲಾಕಪ್ ಡೆತ್ಗಳ ಬಗ್ಗೆ, ಎನ್ಕೌಂಟರ್ಗಳ ಬಗ್ಗೆ ಸುಪ್ರೀಂ ಕೋರ್ಟ್ ಈ ಹಿಂದಿನ ಪ್ರಕರಣಗಳಲ್ಲಿ ಕಟುವಾದ ಅಭಿಪ್ರಾಯಗಳನ್ನು ದಾಖಲಿಸಿದೆ.
ಪೊಲೀಸರು ಕಾನೂನು ಸುವ್ಯವಸ್ಥೆಯ ಪರಿಪಾಲಕರೇ ಹೊರತು, ಶಿಕ್ಷೆ ನೀಡುವುದು ಅವರ ಕೈಯಲ್ಲಿಲ್ಲ. ನ್ಯಾಯಾಂಗದ ಕೆಲಸವನ್ನು ಪೊಲೀಸರು ನಿರ್ವಹಿಸುವುದು ಸರಿಯಲ್ಲ. ನ್ಯಾಯಾಂಗ ವೂ ವಿವೇಚನೆ, ವಿಚಾರಣೆ ಇಲ್ಲದೆ ಗಲ್ಲು ಶಿಕ್ಷೆ ನೀಡುವುದಿಲ್ಲ. ಇಂಥ ಸನ್ನಿವೇಶಗಳನ್ನು ತಡೆಯ ದಿದ್ದರೆ ಕಾನೂನನ್ನು ಕೈಗೆ ತೆಗೆದುಕೊಳ್ಳುವ ಪರಿಪಾಠ ಹೆಚ್ಚಬಹುದು.