ಬೆಂಗಳೂರು ಮಹಾನಗರಿಯ ಉತ್ತರ ವಿಭಾಗದ ಉಪನಿರ್ದೇಶಕರ ಕಚೇರಿಯಲ್ಲಿ ಇಲೆಕ್ಟ್ರಾನಿಕ್ ಉಪಕರಣಗಳ ಖರೀದಿಯ ವೇಳೆ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರುವುದು ವರದಿಯಾಗಿದೆ. ಸರಕಾರಿ ಶಾಲೆಗಳಿಗೆ ಒದಗಿಸಲಾಗುವ ಕಂಪ್ಯೂಟರ್, ಲ್ಯಾಪ್ಟಾಪ್ಗಳ ಖರೀದಿಯ ಸಂದರ್ಭದಲ್ಲಿ ಮಾರು ಕಟ್ಟೆ ದರಕ್ಕಿಂತ ಹೆಚ್ಚು ಮೊತ್ತವು ಪಾವತಿಯಾಗಿರುವ ಕಾರಣ, ಸರಕಾರಿ ಬೊಕ್ಕಸಕ್ಕೆ ಕೋಟ್ಯಂತರ ರುಪಾಯಿ ನಷ್ಟವಾಗಿದೆ ಎಂದಿದೆ ವರದಿ.
‘ಜನಕಲ್ಯಾಣ ಮತ್ತು ಬಡತನ ನಿರ್ಮೂಲನೆಗೆಂದು ಸರಕಾರದ ವತಿಯಿಂದ ಖರ್ಚಾಗುವ ಪ್ರತಿ ೧ ರುಪಾಯಿ ಯೋಜನಾ ಮೊತ್ತವು, ಉದ್ದೇಶಿತ ಫಲಾನುಭವಿಗೆ ತಲುಪುವ ಹೊತ್ತಿಗೆ ೧೫ ಪೈಸೆಗೆ ಇಳಿದಿರುತ್ತದೆ’ ಎಂಬಂರ್ಥದ ಮಾತನ್ನಾಡಿದ್ದರು ಭಾರತದ ಮಾಜಿ ಪ್ರಧಾನಿಯೊಬ್ಬರು. ಇದು ಸ್ವಾತಂತ್ರ್ಯಾನಂತರದ ಕಾಲಘಟ್ಟದಿಂದಲೂ ನಮ್ಮ ದೇಶದಲ್ಲಿ ‘ಪರಂಪರೆ’ಯಂತೆ ನಡೆದು ಕೊಂಡು ಬಂದಿರುವ ‘ಸೋರಿಕೆ’ಯ ಪರಿಪಾಠವೇ!
ಇದನ್ನೂ ಓದಿ: Vishwavani Editorial: ಭಾರತ-ರಷ್ಯಾ ಮೈತ್ರಿಗೆ ಇನ್ನಷ್ಟು ಬಲ
ನಮ್ಮಲ್ಲಿ ಜನಕಲ್ಯಾಣದ ಕಾರ್ಯಕ್ರಮಗಳಿಗೆ ಮತ್ತು ಅಭಿವೃದ್ಧಿ ಸಂಬಂಧಿತ ಉಪಕ್ರಮಗಳಿಗೆ ಕೊರತೆಯೇನಿಲ್ಲ, ಬಣ್ಣಬಣ್ಣದ ಹೆಸರುಗಳೊಂದಿಗೆ ಅವು ರಾರಾಜಿಸುತ್ತಲೇ ಇವೆ.
ಆದರೆ ಮಾರ್ಗಮಧ್ಯದಲ್ಲೇ ಬಿಲ ತೋಡುವ ಒಂದಿಷ್ಟು ಹೆಗ್ಗಣಗಳಿಂದಾಗಿ ಅರ್ಹ ಫಲಾನುಭವಿ ಗಳಿಗೆ ಅವು ತಲುಪುತ್ತಿಲ್ಲ ಎಂಬುದು ಕರಾಳ ಸತ್ಯ. ಹೀಗಾಗಿ ಯೋಜನೆಯ ಆಶಯಗಳು ಪರಿಪೂರ್ಣ ವಾಗಿ ಅನುಷ್ಠಾನಗೊಳ್ಳದೆ, ತೂತುಕೊಡಕ್ಕೆ ನೀರು ತುಂಬಿಸುವ ವ್ಯರ್ಥ ಕಸರತ್ತಾಗಿ ಅವು ಪರ್ಯವ ಸಾನಗೊಳ್ಳುತ್ತಿವೆ. ಸರಕಾರವು ಮೇಲಿನಿಂದ ನೀರು ಸುರಿಯುವುದಂತೂ ತಪ್ಪುವುದಿಲ್ಲ, ಆದರೆ ಫಲಾನುಭವಿಯ ಕೊಡ ತುಂಬುವುದೇ ಇಲ್ಲ; ಕಾರಣ ಹೆಗ್ಗಣಗಳು ಕೊಡಕ್ಕೆ ಕೊರೆದಿರುವ ತೂತು!
ಸ್ವಾತಂತ್ರ್ಯ ದೊರಕಿ ದಶಕಗಳೇ ಕಳೆದಿದ್ದರೂ ಇಂಥ ರಾಜಾರೋಷ ಲೂಟಿಯನ್ನು ಜನರು ಇನ್ನೂ ಸಹಿಸಬೇಕೇ? ಈ ಪ್ರಶ್ನೆಗೆ ಉತ್ತರಿಸುವವರಂತೂ ಕಾಣುತ್ತಿಲ್ಲ. ಕಾರಣ, ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವುದಕ್ಕೆ ಯಾರಿಗೂ ಪುರುಸೊತ್ತಿಲ್ಲ!