ಗಂಡೈಕ್ಳಿಗೆ ಹೆಣ್ ಸಿಗ್ತಿಲ್ಲ’ ಎಂದು ಆಗಾಗ ಅಳಲು ತೋಡಿಕೊಳ್ಳುವ ಮಂಡ್ಯ ಜಿಲ್ಲೆಯಲ್ಲಿ ಭ್ರೂಣ ಹತ್ಯೆ ಮತ್ತೆ ಸದ್ದು ಮಾಡಿದೆ. ಈ ಹಿಂದೆಯೂ ಜಿಲ್ಲೆಯಲ್ಲಿ ಭ್ರೂಣ ಹತ್ಯೆ ಪ್ರಕರಣ ಗಳು ಪತ್ತೆಯಾಗಿದ್ದವು. ಈ ಸಂಬಂಧ ವೈದ್ಯರೂ ಸೇರಿದಂತೆ ಹಲವರನ್ನು ಬಂಧಿಸಲಾಗಿತ್ತು.
ಬಳಿಕ ಕರ್ನಾಟಕ ಸರಕಾರ ಭ್ರೂಣ ಹತ್ಯೆ ತಡೆಗೆ ವಿಶೇಷ ಕಾರ್ಯಕ್ರಮಗಳನ್ನು ಘೋಷಿಸಿತ್ತು. ಭ್ರೂಣ ಹತ್ಯೆಯ ಮಾಹಿತಿ ನೀಡುವವರಿಗೆ ವಿಶೇಷ ಬಹುಮಾನ ಘೋಷಿಸಿತ್ತು. ಇಷ್ಟಾದರೂ ಜಿಯಲ್ಲಿ ಭ್ರೂಣ ಪತ್ತೆ ಮತ್ತು ಹತ್ಯೆ ಪ್ರಕರಣಗಳು ಎಗ್ಗಿಲ್ಲದೆ ನಡೆಯುತ್ತಿರುವುದು ದುರ ದೃಷ್ಟಕರ.
ಇದೀಗ ಮಂಡ್ಯದ ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಅಪ್ರಾಪ್ತರ ವಯಸ್ಕರ ಭ್ರೂಣ ಪತ್ತೆ ಮತ್ತು ಹತ್ಯೆ ಸಂಬಂಧ ಮೂವರು ವೈದ್ಯರನ್ನು ಬಂಧಿಸಲಾಗಿದೆ. ಜೀವ ಉಳಿಸಬೇಕಾದ ವೈದ್ಯರೇ ಹಣದ ಆಸೆಗಾಗಿ ಜೀವ ತೆಗೆಯುವ ಕೆಲಸಕ್ಕೆ ಕೈ ಹಾಕಿರುವುದು ವೃತ್ತಿಧರ್ಮಕ್ಕೆ ಎಸಗಿದ ದ್ರೋಹವಾಗಿದೆ.
ಇದನ್ನೂ ಓದಿ: Vishwavani Editorial: ಯೋಜನೆ ಪ್ರಚಾರದ ಸರಕಾಗದಿರಲಿ
ಭ್ರೂಣ ಹತ್ಯೆ ಕೇವಲ ಕಾನೂನಿನ ಸಮಸ್ಯೆಯಲ್ಲ, ಇದೊಂದು ಗಂಭೀರ ಸಾಮಾಜಿಕ ಪಿಡುಗು. ಹೆಣ್ಣು ಮಗುವನ್ನು ಹೊರೆ ಎಂದು ಭಾವಿಸುವ ಮನಸ್ಥಿತಿ ಇಂದಿಗೂ ಸಮಾಜ ದಲ್ಲಿ ಜೀವಂತವಾಗಿರುವುದು ವಿಷಾದನೀಯ. ಸರಕಾರಿ ಕಾರ್ಯಕ್ರಮಗಳು ಕೇವಲ ಘೋಷಣೆಗಳಿಗೆ ಸೀಮಿತವಾಗದೆ, ಕೆಳಹಂತದಲ್ಲಿ ಪರಿಣಾಮಕಾರಿಯಾಗಿ ಜಾರಿಯಾಗ ಬೇಕಿದೆ.
ಖಾಸಗಿ ಸ್ಕ್ಯಾನಿಂಗ್ ಸೆಂಟರ್ಗಳ ಮೇಲೆ ನಿರಂತರ ನಿಗಾ ಇಡುವುದು ಮತ್ತು ಕಾನೂನು ಉಲ್ಲಂಘಿಸುವವರ ವಿರುದ್ಧ ರಾಜಿ ಇಲ್ಲದ ಕ್ರಮ ಕೈಗೊಳ್ಳುವುದು ಇಂದಿನ ತುರ್ತು ಅಗತ್ಯ ವಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಪ್ರಕಾರ, ಪ್ರತಿ ವರ್ಷ ಭಾರತದಲ್ಲಿ ನೂರಾರು ಭ್ರೂಣ ಹತ್ಯೆ ಪ್ರಕರಣಗಳು ದಾಖಲಾಗುತ್ತಿವೆ. ಆದರೆ, ಇವುಗಳಲ್ಲಿ ಶಿಕ್ಷೆಯ ಪ್ರಮಾಣ ಬಹಳ ಕಡಿಮೆ ಇರುವುದು ವ್ಯವಸ್ಥೆಯ ಮಿತಿಯಾಗಿದೆ.
ಮಹಿಳಾ ಸಬಲೀಕರಣದ ಬಗ್ಗೆ ನಾವು ಭಾಷಣ ಮಾಡುವ ಹೊತ್ತಿನ, ಮಗುವೊಂದು ಈ ಭೂಮಿಗೆ ಬರುವ ಮುನ್ನವೇ ಅದರ ಉಸಿರು ಹತ್ತಿಕ್ಕುವುದು ಮನುಷ್ಯ ಕುಲಕ್ಕೆ ಅಂಟಿದ ಕಪ್ಪುಚುಕ್ಕೆ. ಈ ಜಾಲದ ಹಿಂದಿರುವ ಪ್ರತಿಯೊಬ್ಬರಿಗೂ ಕಠಿಣ ಶಿಕ್ಷೆಯಾಗಬೇಕು. ಸಮಾಜವು ಹೆಣ್ಣುಮಕ್ಕಳನ್ನು ಗೌರವದಿಂದ ಕಾಣುವಂತಹ ಮಾನಸಿಕ ಬದಲಾವಣೆಗೆ ಮುಂದಾಗದಿದ್ದರೆ, ಇಂತಹ ಕ್ರೂರ ಘಟನೆಗಳಿಗೆ ಕೊನೆ ಎಂಬುದು ಇರುವುದಿಲ್ಲ.