ಚೆನ್ನೈ, ಜೂ.8: ಪ್ರತಿಷ್ಠಿತ ನಾರ್ವೆ ಚೆಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ತವರಿಗೆ ಮರಳಿದ ಭಾರತದ ಗ್ರ್ಯಾಂಡ್ಮಾಸ್ಟರ್ ಆರ್.ಪ್ರಜ್ಞಾನಂದ ಅವರನ್ನು ತಮಿಳುನಾಡು ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಸೋಮವಾರ ಭೇಟಿಯಾಗಿ ಸನ್ಮಾನಿಸಿದರು. ತಮಿಳುನಾಡು ಸರ್ಕಾರದ ಪರವಾಗಿ 50 ಲಕ್ಷ ರೂ. ನಗದು ಬಹುಮಾನವನ್ನು ನೀಡಿದರು.
ಜೂನ್ 6 ರ ಶನಿವಾರ ಓಸ್ಲೋದಲ್ಲಿ ನಡೆದ ಪ್ರತಿಷ್ಠಿತ ನಾರ್ವೆ ಚೆಸ್ನ ಅಂತಿಮ ಸುತ್ತಿನ ಪಂದ್ಯದಲ್ಲಿ ಜರ್ಮನಿಯ ವಿನ್ಸೆಂಟ್ ಕೀಮರ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಪ್ರಜ್ಞಾನಂದ, ಈ ಪ್ರಶಸ್ತಿ ಪಡೆದ ಭಾರತದ ಮೊದಲ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು. ಸನ್ಮಾನ ಸಮಾರಂಭದಲ್ಲಿ, ಸಿಎಂ ವಿಜಯ್ ಅವರು ಪ್ರಜ್ಞಾನಂದ ಜತೆ ಚೆಸ್ ಕೂಡ ಆಡಿ ಗಮನ ಸೆಳೆದರು. ಈ ವೇಳೆ ಪ್ರಜ್ಞಾನಂದ ಅವರ ತಾಯಿ ನಾಗಲಕ್ಷ್ಮಿ ಕೂಡ ಇದ್ದರು. ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ಮತ್ತು ಕ್ರೀಡಾ ಅಭಿವೃದ್ಧಿ ಸಚಿವ ಆಧವ್ ಅರ್ಜುನ ಕೂಡ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಸಿಎಂ ವಿಜಯ್ ಅವರೊಂದಿಗಿನ ಭೇಟಿಯ ನಂತರ ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಜ್ಞಾನಂದ, ಮುಖ್ಯಮಂತ್ರಿಯವರ ಚೆಸ್ ಕೌಶಲ್ಯದಿಂದ ನಿಜವಾಗಿಯೂ ಆಶ್ಚರ್ಯವಾಯಿತು ಎಂದು ಹೇಳಿದರು.
ಚೊಚ್ಚಲ ಪಂದ್ಯದಲ್ಲೇ 6 ವಿಕೆಟ್ ಕಿತ್ತು ಹಲವು ದಾಖಲೆ ಬರೆದ ಸ್ಪಿನ್ನರ್ ಮಾನವ್ ಸುತಾರ್
"ವಿಜಯ್ ಸರ್ ಚೆಸ್ ಆಡುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ. ಅವರು ಬೋರ್ಡ್ ತರಲು ನನ್ನನ್ನು ಕೇಳಿದರು. ಅದರಂತೆ ನಾವು ಬೋರ್ಡ್ ಮೇಲೆ ಕಾಯಿಗಳನ್ನು ಜೋಡಿಸಿ ಪೂರ್ವಸಿದ್ಧತೆಯಿಲ್ಲದೆ ಆಡಲು ಪ್ರಾರಂಭಿಸಿದೆವು. ಅವರು ಚೆನ್ನಾಗಿ ಆಡಿದರು" ಎಂದು ಪ್ರಜ್ಞಾನಂದ ಹೇಳಿದರು.
ಭಾರತದ ಚೆಸ್ ದಂತಕಥೆ ವಿಶ್ವನಾಥನ್ ಆನಂದ್ ಮತ್ತು ಹಾಲಿ ವಿಶ್ವ ಚಾಂಪಿಯನ್ ಡಿ. ಗುಕೇಶ್ ಸೇರಿದಂತೆ ಯಾರಿಗೂ ಸಾಧ್ಯವಾಗದ ಅಪರೂಪದ ಸಾಧನೆಯನ್ನು ಚೆನ್ನೈ ಮೂಲದ 20 ವರ್ಷದ ಪ್ರಜ್ಞಾನಂದ ಮಾಡಿದ್ದಾರೆ. ಟೂರ್ನಿಯ ಆರಂಭದಲ್ಲಿ ಪ್ರಜ್ಞಾನಂದ ಅವರು ಆರು ಗಣ್ಯ ಆಟಗಾರರ ಎದುರು ನಿಧಾನಗತಿಯ ಮುನ್ನಡೆ ಪಡೆದಿದ್ದರು. ಆದರೆ, ಟೂರ್ನಿಯ ದ್ವಿತೀಯಾರ್ಧದಲ್ಲಿ ಭರ್ಜರಿ ವೇಗ ಪಡೆದುಕೊಂಡರು.
ಏಳು ಬಾರಿಯ ನಾರ್ವೆ ಚೆಸ್ ಚಾಂಪಿಯನ್ ಮತ್ತು ವಿಶ್ವದ ನಂ. 1 ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ ಅವರನ್ನು ಎರಡು ಬಾರಿ ಸೋಲಿಸುವ ಮೂಲಕ ಪ್ರಜ್ಞಾನಂದ ಮೇಲುಗೈ ಸಾಧಿಸಿದ್ದು ವಿಶೇಷ.