ನವದೆಹಲಿ: ಭಾರತ ಹಾಗೂ ಬಾಂಗ್ಲಾದೇಶದ (Bangladesh) ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆ , ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ (Mustafizur Rahman) ಅವರನ್ನು ತಮ್ಮ ತಂಡದಿಂದ ಕೈಬಿಡುವಂತೆ ಬಿಸಿಸಿಐ ಔಪಚಾರಿಕವಾಗಿ ವಿನಂತಿಸಿದೆ. ಸಾರ್ವಜನಿಕ ಮತ್ತು ರಾಜಕೀಯ ಒತ್ತಡ ತೀವ್ರಗೊಂಡ ನಂತರ, ಬಿಸಿಸಿಐ (BCCI) ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಈ ಘೋಷಣೆಯನ್ನು ಮಾಡಿದ್ದಾರೆ. ಐಪಿಎಲ್ 2026 ರ ಸೀಸನ್ಗಾಗಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಬಾಂಗ್ಲಾದೇಶದ ವೇಗದ ಬೌಲರ್ ಮುಸ್ತಾಫಿಜುರ್ ರೆಹಮಾನ್ ಅವರನ್ನು ಖರೀದಿಸಿತ್ತು.
ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸೈಕಿಯಾ ಮಾಧ್ಯಮಗಳಿಗೆ ತಿಳಿಸಿದರು. ಕೆಕೆಆರ್ ತಂಡವು ಮುಸ್ತಾಫಿಜುರ್ ರೆಹಮಾನ್ ಅವರ ಬದಲಿಗೆ ಬೇರೆ ಯಾವುದೇ ಆಟಗಾರನನ್ನು ಕೇಳಿದರೆ, ಬಿಸಿಸಿಐ ಆ ಬದಲಿ ಆಟಗಾರನಿಗೆ ಅವಕಾಶ ನೀಡಲಿದೆ ಎಂದು ಬಿಸಿಸಿಐ ಹೇಳಿದೆ. ಚೆನ್ನೈ ಸೂಪರ್ ಕಿಂಗ್ಸ್ ಜೊತೆಗಿನ ತೀವ್ರ ಬಿಡ್ಡಿಂಗ್ ಪೈಪೋಟಿ ಬಳಿಕ ಬಾಂಗ್ಲಾ ಆಟಗಾರನನ್ನು 9.2 ಕೋಟಿ ರೂ.ಗೆ ಖರೀದಿಸಿತ್ತು. ಬಾಂಗ್ಲಾದೇಶದ ನಡುವಿನ ಸಂಬಂಧಗಳು ಹದಗೆಟ್ಟಿರುವ ನಡುವೆ ರೆಹಮಾನ್ ಅವರನ್ನು ಆಯ್ಕೆ ಮಾಡಿದ್ದಕ್ಕಾಗಿ ತಂಡ ಮತ್ತು ಸಹ-ಮಾಲೀಕ ಶಾರುಖ್ ಖಾನ್ ಇಬ್ಬರೂ ಟೀಕೆಗೆ ಗುರಿಯಾಗಿದ್ದಾರೆ.
ಹಸೀನಾ ಸರ್ಕಾರ ಪತನದ ಬಳಿಕ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧ ಹಾಳಾಗಿದೆ. ಈಗ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿರುವ ಕಾರಣ ಬಾಂಗ್ಲಾದೇಶದ ಆಟಗಾರರು ಐಪಿಎಲ್ನಲ್ಲಿ (IPL) ಆಡಬಾರದು ಎಂಬ ಆಕ್ರೋಶ ಕ್ರಿಕೆಟ್ ಅಭಿಮಾನಿಗಳಿಂದ ವ್ಯಕ್ತವಾಗಿತ್ತು. ಒತ್ತಡ ಜಾಸ್ತಿಯಾಗುತ್ತಿದ್ದಂತೆ ಬಿಸಿಸಿಐ ಈಗ ಮಧ್ಯಪ್ರವೇಶಿಸಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಕೈ ಬಿಡುವಂತೆ ಕೋಲ್ಕತ್ತಾ ತಂಡದ ಜೊತೆ ಕೇಳಿಕೊಂಡಿದೆ.
ರಾಜಕೀಯ ತಿರುವು
ಐಪಿಎಲ್ ಪಂದ್ಯಗಳಲ್ಲಿ ಬಾಂಗ್ಲಾದೇಶಿ ಆಟಗಾರರು ಭಾಗವಹಿಸುವ ಬಗ್ಗೆ ಬಿಜೆಪಿ ನಾಯಕ ಕೌಸ್ತವ್ ಬಾಗ್ಚಿ ಸಾರ್ವಜನಿಕವಾಗಿ ಆಕ್ಷೇಪಣೆ ವ್ಯಕ್ತಪಡಿಸಿದ ನಂತರ ಮುಸ್ತಾಫಿಜುರ್ ಸೇರ್ಪಡೆಯ ವಿವಾದ ಹೆಚ್ಚಾಯಿತು. ಬಿಜೆಪಿ ಸಂಸದರು ಶಾರುಖ್ ಖಾನ್ ಅವರನ್ನು ದೇಶ ದ್ರೋಹಿ ಎಂದು ಕರೆದಿದ್ದರು. ಶಿವಸೇನೆ ಕೂಡ ಬಾಂಗ್ಲಾ ಆಟಗಾರರ ಸೇರ್ಪಡೆಗೆ ಆಕ್ಷೇಪ ವ್ಯಕ್ತಪಡಿಸಿತ್ತು. ವಿವಾದದ ಕುರಿತು ಈ ವರೆಗೆ ನಟ ಶಾರುಖ್ ಖಾನ್ ಆಗಲಿ ಅಥವಾ ಕೆಕೆಆರ್ ತಂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.