ಬ್ರಿಸ್ಟಲ್: ಇಲ್ಲಿನ ಕೌಂಟಿ ಗ್ರೌಂಡ್ನಲ್ಲಿ ನಡೆಯುತ್ತಿರುವ ನಾಲ್ಕನೇ ಟಿ20ಐ ಪಂದ್ಯಕ್ಕೂ (IND vs ENG) ಮುನ್ನ ಶ್ರೇಯಸ್ ಅಯ್ಯರ್ ನಾಯಕತ್ವದ ಭಾರತ ತಂಡಕ್ಕೆ ಭಾರಿ ಹಿನ್ನಡೆಯಾಯಿತು. ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿರುವ ವೇಗದ ಬೌಲರ್ ಹರ್ಷಿತ್ ರಾಣಾ (Harshit Rana) ಹಾಗೂ ಸ್ಪಿನ್ನರ್ ವರುಣ್ ಚಕ್ರವರ್ತಿ (Varun Chakravarhty) ಟಿ20ಐ ಸರಣಿಯ ನಾಲ್ಕನೇ ಹಾಗೂ ಐದನೇ ಪಂದ್ಯಗಳಿಂದ ಹೊರ ಬಿದ್ದಿದ್ದಾರೆ. ಈ ಬಗ್ಗೆ ಬಿಸಿಸಿಐ ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಈ ಮಾಹಿತಿಯನ್ನು ನೀಡಿದೆ.
ಪಂದ್ಯದ ಟಾಸ್ ವೇಳೆ ಬಿಸಿಸಿಐ, "ಹರ್ಷಿತ್ ರಾಣಾ ಹಾಗೂ ವರುಣ್ ಚಕ್ರವರ್ತಿ ಅವರು ಟ್ರೆಂಟ್ ಬ್ರಿಡ್ಜ್ನಲ್ಲಿ ನಡೆದಿದ್ದ ಮೂರನೇ ಟಿ20ಐ ಪಂದ್ಯದ ಸಮಯದಲ್ಲಿ ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿದ್ದರು. ಬಿಸಿಸಿಐ ವೈದ್ಯಕೀಯ ತಂಡ ಅವರ ಆರೋಗ್ಯವನ್ನು ಪರಿಶೀಲಿಸಿದ್ದು, ಅವರು ನಾಲ್ಕು ಮತ್ತು ಐದನೇ ಟಿ20ಐ ಪಂದ್ಯಗಳಿಂದ ಹೊರ ನಡೆದಿದ್ದಾರೆ," ಎಂದು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದೆ.
IND vs ENG 4th T20I: ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಿಸಿಕೊಂಡ ಭಾರತ!
ನಾಲ್ಕು ತಿಂಗಳ ಬಳಿಕ ಗಾಯದಿಂದ ಚೇತರಿಸಿಕೊಂಡು ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಿದ ಕೇವಲ ಎರಡು ವಾರಗಳಲ್ಲೇ ಹರ್ಷಿತ್ ರಾಣಾಗೆ ಮತ್ತೊಂದು ಹಿನ್ನಡೆಯಾಗಿದೆ. ಐರ್ಲೆಂಡ್ ವಿರುದ್ಧದ ಟಿ20ಐ ಸರಣಿಯ ಮೂಲಕ ತಂಡಕ್ಕೆ ಮರಳಿದ್ದ ಯುವ ವೇಗಿ, ಕೇವಲ ಐದು ಪಂದ್ಯಗಳನ್ನು ಆಡಿದ ಬಳಿಕ ಮತ್ತೆ ಗಾಯಕ್ಕೆ ತುತ್ತಾಗಿದ್ದು, ಇದು ಅವರಿಗೂ ಭಾರತ ತಂಡಕ್ಕೂ ದೊಡ್ಡ ಹಿನ್ನಡೆಯಾಗಿದೆ.
ಭಾರತ ತಂಡ ಆರಂಭಿಕ ಎರಡು ಪಂದ್ಯಗಳನ್ನು ಈಗಾಗಲೇ ಕಳೆದುಕೊಂಡು ಸರಣಿಯನ್ನು ಸಮಬಲ ಸಾಧಿಸುವ ಪ್ರಯತ್ನದಲ್ಲಿರುವಾಗ ಹರ್ಷಿತ್ ಹಾಗೂ ವರುಣ್ ಅವರ ಗಾಯಗಳು ಖಂಡಿತವಾಗಿಯೂ ಪ್ರವಾಸಿ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ಇದಕ್ಕೂ ಮುನ್ನ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಹರ್ಷಿತ್ ಮೊಣಕಾಲು ಗಾಯಕ್ಕೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ಚುಟುಕು ವಿಶ್ವಕಪ್ನಿಂದ ಹೊರ ಬಿದ್ದಿದ್ದರು.
ಆರಂಭದಲ್ಲಿ ಈ ಗಾಯವು ಸಣ್ಣ ಪ್ರಮಾಣದ್ದೆಂದು ಭಾವಿಸಲಾಗಿತ್ತು. ಆದರೆ ಬಳಿಕ ಅದು ನಿರೀಕ್ಷೆಗಿಂತ ಗಂಭೀರವಾಗಿದೆ ಎಂಬುದು ವೈದ್ಯಕೀಯ ಪರೀಕ್ಷೆಯಲ್ಲಿ ತಿಳಿದುಬಂದ ಕಾರಣ, ಹರ್ಷಿತ್ ರಾಣಾ ದೀರ್ಘಕಾಲ ಪುನಶ್ಚೇತನ ಪ್ರಕ್ರಿಯೆಗೆ ಒಳಗಾಗಬೇಕಾಯಿತು. ಪರಿಣಾಮವಾಗಿ ಅವರು ಐಪಿಎಲ್ 2026 ಆವೃತ್ತಿಯಿಂದ ಹೊರಗುಳಿದಿದ್ದರು. ಸುಮಾರು ನಾಲ್ಕು ತಿಂಗಳು ಮೈದಾನದಿಂದ ದೂರವಿದ್ದ ಬಳಿಕ, ಐರ್ಲೆಂಡ್ ವಿರುದ್ಧದ ಟಿ20 ಸರಣಿಯ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಿದ್ದರು.
ಸಂಜು ಸ್ಯಾಮ್ಸನ್ರಿಂದಾಗಿ ಟೀಮ್ ಮ್ಯಾನೇಜ್ಮೆಂಟ್, ಆಯ್ಕೆದಾರರ ನಡುವೆ ಭಿನ್ನಾಭಿಪ್ರಾಯ!
ಭಾರತ ತಂಡಕ್ಕೆ ಮಹತ್ವದ ಹಂತದಲ್ಲಿ ಹೆಚ್ಚುವರಿ ವೇಗದ ಬೌಲಿಂಗ್ ಆಯ್ಕೆಯಾಗಿ ಹರ್ಷಿತ್ ರಾಣಾ ಅವರ ಕಮ್ಬ್ಯಾಕ್ ಆಶಾಕಿರಣ ಮೂಡಿಸಿತ್ತು. ಆದರೆ ಈಗ ತಗುಲಿರುವ ಹ್ಯಾಮ್ಸ್ಟ್ರಿಂಗ್ ಗಾಯವು ಮತ್ತೊಮ್ಮೆ ಅವರ ಪ್ರಗತಿಗೆ ಬ್ರೇಕ್ ಹಾಕಿದೆ. ಮೊದಲ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಸೋಲು ಕಂಡಿರುವ ಭಾರತ ಸರಣಿಯಲ್ಲಿ ಉಳಿಯಲು ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ, ರಾಣಾ ಅನುಪಸ್ಥಿತಿ ತಂಡದ ಆಯ್ಕೆ ಪ್ರಕ್ರಿಯೆಗೆ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ. ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟಿ20ಐ ಪಂದ್ಯಕ್ಕೂ ಮುನ್ನ ಇದು ತಂಡದ ಸಮತೋಲನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.