ಕೋಲ್ಕತಾ: ಜಸ್ಪ್ರೀತ್ ಬುಮ್ರಾ (Jasprit Bumrah) ಮಾರಕ ಬೌಲಿಂಗ್ ದಾಳಿಯ ಸಹಾಯದಿಂದ ಭಾರತ ತಂಡ, ದಕ್ಷಿಣ ಆಫ್ರಿಕಾ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯದ (IND vs SA) ಆರಂಭಿಕ ದಿನ ಪ್ರಾಬಲ್ಯ ಸಾಧಿಸಿದೆ. ಇಲ್ಲಿನ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಿಸಿಕೊಂಡ ಪ್ರವಾಸಿ ನಾಯಕ ತೆಂಬಾ ಬವೂಮಾ ನಿರ್ಧಾರವನ್ನು ಬುಮ್ರಾ ತಮ್ಮ ಮಾರಕ ದಾಳಿಯಿಂದ ತಲೆ ಕೆಳಗಾಗುವಂತೆ ಮಾಡಿದರು. ಹರಿಣ ಪಡೆ (South Africa) ಪ್ರಥಮ ಇನಿಂಗ್ಸ್ನಲ್ಲಿ 55 ಓವರ್ಗಳಿಗೆ 159 ರನ್ಗಳಿಗೆ ಆಲ್ಔಟ್ ಆಯಿತು. ಆ ಮೂಲಕ ಪಂದ್ಯದ ಆರಂಭಿಕ ಆಘಾತಕ್ಕೆ ಒಳಗಾಗಿದೆ.
ಪಾಕಿಸ್ತಾನದಲ್ಲಿ ಟೆಸ್ಟ್ ಸರಣಿಯನ್ನು ಡ್ರಾ ಮಾಡಿಕೊಂಡು ವಿಶ್ವಾಸದಲ್ಲಿ ಭಾರತಕ್ಕೆ ಬಂದಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಆರಂಭಿಕ ದಿನವೇ ಆತಿಥೇಯ ಬೌಲರ್ಗಳು ನಿರಾಶೆ ಮೂಡಿಸಿದರು. ಏಡೆನ್ ಮಾರ್ಕ್ರಮ್ ಹಾಗೂ ರಯಾನ್ ರಿಕೆಲ್ಟನ್ ಅವರು ಆರಂಭಿಕ ವಿಕೆಟ್ಗೆ 57 ರನ್ಗಳ ಜೊತೆಯಾಟವನ್ನು ಆಡಿ ತಂಡಕ್ಕೆ ಉತ್ತಮ ಆರಂಭ ತಂದುಕೊಟ್ಟರೂ ನಂತರ, ಮಧ್ಯಮ ಹಾಗೂ ಕೆಳ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳ ವೈಫಲ್ಯದಿಂದ ಹರಿಣ ಪಡೆ ಪ್ರಥಮ ಇನಿಂಗ್ಸ್ನಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕಲು ಸಾಧ್ಯವಾಗಿಲ್ಲ.
IND vs SA: ಮೊದಲನೇ ಟೆಸ್ಟ್ನಲ್ಲಿ ಕಗಿಸೊ ರಬಾಡ ಆಡದೇ ಇರಲು ಕಾರಣ ತಿಳಿಸಿದ ತೆಂಬಾ ಬವೂಮಾ!
5 ವಿಕೆಟ್ ಸಾಧನೆ ಮಾಡಿದ ಜಸ್ಪ್ರೀತ್ ಬುಮ್ರಾ
ಆರಂಭಿಕ ವಿಕೆಟ್ಗೆ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರುತ್ತಿದ್ದ ಏಡೆನ್ ಮಾರ್ಕ್ರಮ್ (31), ರಯಾನ್ ರಿಕೆಲ್ಟನ್ (23) ಅವರನ್ನು ಜಸ್ಪ್ರೀತ್ ಬುಮ್ರಾ ಔಟ್ ಮಾಡಿ ಆತಿಥೇಯ ತಂಡದ ಕಮ್ಬ್ಯಾಕ್ಗೆ ನೆರವು ನೀಡಿದರು. ನಾಯಕ ತೆಂಬಾ ಬವೂಮಾ ಹಾಗೂ 24 ರನ್ ಗಳಿಸಿ ಕ್ರೀಸ್ನಲ್ಲಿ ನೆಲೆ ಕಂಡಿದ್ದ ವಿಯಾನ್ ಮುಲ್ಡರ್ ಅವರನ್ನು ಕುಲ್ದೀಪ್ ಯಾದವ್ ತಮ್ಮ ಸ್ಪಿನ್ ಮೋಡಿಯಿಂದ ಔಟ್ ಮಾಡಿದರು. ನಂತರ 25 ರನ್ ಗಳಿಸಿ ಉತ್ತಮ ಆರಂಭ ಪಡೆದಿದ್ದ ಟೋನಿ ಡಿ ಜಾರ್ಜ್ಅವರನ್ನು ಕೂಡ ಜಸ್ಪ್ರೀತ್ ಬುಮ್ರಾ ಪೆವಿಲಿಯನ್ ಹಾದಿ ತೋರಿಸಿದರು. ನಂತರ ಕೊನೆಯ ಹಂತದಲ್ಲಿ 2 ವಿಕೆಟ್ಗಳನ್ನು ಕಬಳಿಸಿ ಐದು ವಿಕೆಟ್ಗಳನ್ನು ಪೂರ್ಣಗೊಳಿಸಿದರು. ಒಟ್ಟು 14 ಓವರ್ ಬೌಲ್ ಮಾಡಿದ ಬುಮ್ರಾ 27 ರನ್ ನೀಡಿ 5 ವಿಕೆಟ್ಗಳನ್ನು ಕಬಳಿಸಿದರು.
ಜಸ್ಪ್ರೀತ್ ಬುಮ್ರಾಗೆ ಕೈ ಜೋಡಿಸಿದ ಮೊಹಮ್ಮದ್ ಸಿರಾಜ್ ಹಾಗೂ ಕುಲ್ದೀಪ್ ಯಾದವ್ ತಲಾ ಎರಡೆರಡು ವಿಕೆಟ್ಗಳನ್ನು ಕಬಳಿಸಿದರು. ಅಕ್ಷರ್ ಪಟೇಲ್ ತಮ್ಮ ಬೌಲಿಂಗ್ನಲ್ಲಿ ನಿರಾಶೆ ಮೂಡಿಸಲಿಲ್ಲ. ಇವರು ಕೂಡ ಒಂದು ವಿಕೆಟ್ ಪಡೆದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ ತಂಡದ ಬ್ಯಾಟಿಂಗ್ ರಣತಂತ್ರ ಭಾರತದ ಬೌಲರ್ಗಳ ಎದುರು ಕೈ ಹಿಡಿಯಲಿಲ್ಲ. ಅಲ್ಲದೆ ಈಡನ್ ಗಾರ್ಡನ್ಸ್ನ ಪಿಚ್ ಮರ್ಮವನ್ನು ಅರಿಯುವಲ್ಲಿ ವಿಫಲರಾದರು.
IND vs SA: ಜಸ್ಪ್ರೀತ್ ಬುಮ್ರಾ ದಾಳಿಗೆ ನಲುಗಿದ ಹರಿಣ ಪಡೆ; 159 ರನ್ಗೆ ಆಲೌಟ್
ಭಾರತ ತಂಡ: 37-1
ಬಳಿಕ ಪ್ರಥಮ ಇನಿಂಗ್ಸ್ ಆರಂಭಿಸಿದ ಭಾರತ ತಂಡ, ಮೊದಲನೇ ದಿನದಾಟದ ಅಂತ್ಯಕ್ಕೆ 20 ಓವರ್ಗಳಿಗೆ ಒಂದು ವಿಕೆಟ್ ನಷ್ಟಕ್ಕೆ 37 ರನ್ ಗಳಿಸಿದೆ. 27 ಎಸೆತಗಳಲ್ಲಿ 12 ರನ್ ಗಳಿಸಿದ ಬಳಿಕ ಆರಂಭಿಕ ಯಶಸ್ವಿ ಜೈಸ್ವಾಲ್, ಮಾರ್ಕೊ ಯೆನ್ಸನ್ ಅವರ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಆದರೆ, ಮತ್ತೊಬ್ಬ ಆರಂಭಿಕ ಬ್ಯಾಟ್ಸ್ಮನ್ ಕೆಎಲ್ ರಾಹುಲ್, 59 ಎಸೆತಗಳಲ್ಲಿ 13 ರನ್ ಗಳಿಸಿ ಎರಡನೇ ದಿನಕ್ಕೆ ಅಜೇಯರಾಗಿ ಉಳಿದಿದ್ದಾರೆ. ಮತ್ತೊಂದು ತುದಿಯಲ್ಲಿ ವಾಷಿಂಗ್ಟನ್ ಸುಂದರ್ ಇದ್ದಾರೆ. ಆ ಮೂಲಕ ಭಾರತ ತಂಡ 122 ರನ್ಗಳ ಹಿನ್ನಡೆಯಲ್ಲಿದೆ.