ನವದೆಹಲಿ: ಕರ್ನಾಟಕ ತಂಡದ ಆಲ್ರೌಂಡರ್ ಮ್ಯಾಕ್ನೀಲ್ ನೊರೊನ್ಹಾ(Macneil Noronha) ಅವರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ಆಡುವ ಕನಸು ನನಸಾಗುವ ಸನಿಹದಲ್ಲಿದ್ದಾರೆ. ಅವರು ಗಾಯಾಳು ರಾಮಕೃಷ್ಣ ಘೋಷ್ ಅವರ ಸ್ಥಾನಕ್ಕೆ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ದದ ಪಂದ್ಯದಲ್ಲಿ ಮಹಾರಾಷ್ಟ್ರ ತಂಡದ ಆಟಗಾರ ಗಾಯಕ್ಕೆ ತುತ್ತಾಗಿದ್ದರು. ಹಾಗಾಗಿ ಅವರು ಟೂರ್ನಿಯ ಇನ್ನುಳಿದ ಭಾಗದಿಂದ ಹೊರಬಿದ್ದಿದ್ದಾರೆ. ಹಾಗಾಗಿ ಚೆನ್ನೈ ಫ್ರಾಂಚೈಸಿ, ಕರ್ನಾಟಕ ತಂಡದ ಆಟಗಾರನಿಗೆ ಅವಕಾಶವನ್ನು ನೀಡಿದೆ.
ಮ್ಯಾಕ್ನೀಲ್ ನೊರೊನ್ಹಾ ಅವರು ಮೂಲ ಬಲೆ 30 ಲಕ್ಷ ರು ಗಳಿಗೆ ಸಿಎಸ್ಕೆ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. 2024-25ರ ಸಾಲಿನ ಸಿಕೆ ನಾಯ್ಡು ಟ್ರೋಫಿ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಫಲವಾಗಿ ಕರ್ನಾಟಕ ಆಲ್ರೌಂಡರ್ ಮ್ಯಾಕ್ನೀಲ್ ಅವರು ಇತ್ತೀಚೆಗೆ ಬಿಸಿಸಿಐ ನಡೆಸಿದ್ದ ನಮನ್ ಅವಾರ್ಡ್ ಕಾರ್ಯಕ್ರಮದಲ್ಲಿ ಎಂಎ ಚಿದಂಬರಂ ಟ್ರೋಫಿಯನ್ನು ಗೆದ್ದಿದ್ದರು. ಈ ಟೂರ್ನಿಯಲ್ಲಿನ ಪ್ರದರ್ಶನದ ಆಧಾರದ ಮೇಲೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯ ಕರ್ನಾಟಕ ತಂಡಕ್ಕೆ ಅವರು ಆಯ್ಕೆಯಾಗಿದ್ದರು ಹಾಗೂ ಮೂರು ಪಂದ್ಯಗಳನ್ನು ಆಡಿದ್ದರು.
MS Dhoni: ಎಲ್ಎಸ್ಜಿ ವಿರುದ್ಧದ ಮಸ್ಟ್ ವಿನ್ ಪಂದ್ಯದಲ್ಲಿ ಧೋನಿ ಆಡುವ ಸಾಧ್ಯತೆ
ಮ್ಯಾಕ್ನೀಲ್ ಹ್ಯಾಡ್ಲಿ ನೊರೊನ್ಹಾಗೆ ಸ್ವಾಗತ
ಚೆನೈ ಸೂಪರ್ ಕಿಂಗ್ಸ್ ತಂಡ ತನ್ನ ಎಕ್ಸ್ ಖಾತೆಯಲ್ಲಿ ಈ ಪ್ರಕಟಿಸಿದೆ. "ಚಾರ್ಜ್ ಮಾಡಲಾಗಿದೆ ಮತ್ತು ಘರ್ಜನೆಗೆ ಸಿದ್ಧವಾಗಿದೆ! ಮ್ಯಾಕ್ನೀಲ್ ಹ್ಯಾಡ್ಲಿ ನೊರೊನ್ಹಾ ಅವರಿಗೆ ಹೆಮ್ಮೆಯ ಸ್ವಾಗತ! ರಾಮಕೃಷ್ಣ ಘೋಷ್ ಅವರ ಸ್ಥಾನಕ್ಕೆ ಮ್ಯಾಕ್ನೀಲ್ ಹ್ಯಾಡ್ಲಿ ನೊರೊನ್ಹಾ ಸೇರ್ಪಡೆಯಾಗಿದ್ದಾರೆ," ಎಂದು ಸಿಎಸ್ಕೆ ಪೋಸ್ಟ್ ಮಾಡಿದೆ.
ಮ್ಯಾಕ್ನೀಲ್ ನೊರೊನ್ಹಾ ಯಾರು?
ಮ್ಯಾಕ್ನೀಲ್ ನೊರೊನ್ಹಾ ಅವರು 24ರ ವಯಸ್ಸಿನ ಕರ್ನಾಟಕದ ಆಲ್ರೌಂಡರ್ ಆಗಿದ್ದು, 2025ರ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಗೆ ಕರ್ನಾಟಕ ತಂಡದ ಭಾಗವಾಗಿದ್ದರು. ಬಲಗೈ ಬ್ಯಾಟರ್ ಹಾಗೂ ಆಫ್-ಸ್ಪಿನ್ನರ್ ಆಗಿರುವ ಅವರು ತಮ್ಮ ಚಿಕ್ಕ ವೃತ್ತಿಜೀವನದಲ್ಲೇ ಗಮನಾರ್ಹ ಪ್ರದರ್ಶನ ನೀಡಿ ಮೆಚ್ಚುಗೆ ಗಳಿಸಿದ್ದಾರೆ.
ನೊರೊನ್ಹಾ ಅವರು 2024-25ರ ಅಂಡರ್-23 ಎಲೈಟ್ ಸಿಕೆ ನಾಯ್ಡು ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು. ಟೂರ್ನಿಯಲ್ಲಿ ಅವರು ಸರಾಸರಿ ಸುಮಾರು 80ರೊಂದಿಗೆ 1037 ರನ್ಗಳನ್ನು ಸಿಡಿಸಿದ್ದರು. ಮೂರು ಶತಕಗಳನ್ನು ಬಾರಿಸಿದ್ದ ಅವರು, ಗರಿಷ್ಠ 345 ರನ್ಗಳ ಭರ್ಜರಿ ಇನಿಂಗ್ಸ್ ಅನ್ನು ಕೂಡ ಆಡಿದ್ದರು.
ನೊರೊನ್ಹಾ ಅವರು 2025ರ ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಮಂಗಳೂರು ಡ್ರ್ಯಾಗನ್ಸ್ ತಂಡದ ಪರ ಆಡಿದ್ದು, ತಂಡ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಟೂರ್ನಿಯಲ್ಲಿ ಅವರು 13 ಪಂದ್ಯಗಳಲ್ಲಿ 148.82ರ ಸ್ಟ್ರೈಕ್ ರೇಟ್ನೊಂದಿಗೆ 253 ರನ್ ಗಳಿಸಿದ್ದು, ಜೊತೆಗೆ ಬೌಲಿಂಗ್ನಲ್ಲಿ 10 ವಿಕೆಟ್ಗಳನ್ನು ಕೂಡ ಪಡೆದಿದ್ದರು. ಹುಬ್ಬಳ್ಳಿ ಟೈಗರ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ನೊರೊನ್ಹಾ ಎರಡು ವಿಕೆಟ್ ಕಬಳಿಸಿ ಮಿಂಚಿದ್ದರು. ಈ ಎಲ್ಲ ಪ್ರದರ್ಶನಗಳ ಫಲವಾಗಿ ಅವರನ್ನು ಕರ್ನಾಟಕದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ತಂಡಕ್ಕೆ ಆಯ್ಕೆ ಮಾಡಲಾಗಿತ್ತು.
RCB vs KKR: ಫಾರ್ಮ್ ಕಂಡುಕೊಳ್ಳಲು ಜಿತೇಶ್ ಶರ್ಮಾಗೆ ಮಹತ್ವದ ಸಲಹೆ ನೀಡಿದ ಅಂಬಾಟಿ ರಾಯುಡು!
ದೇಶಿ ಪ್ರಮುಖ ಟಿ20 ಟೂರ್ನಿಯಲ್ಲಿ ಅವರು ಮೂರು ಪಂದ್ಯಗಳಲ್ಲಿ ಆಡಿದ್ದು, ಒಟ್ಟು 58 ರನ್ ಗಳಿಸುವುದರ ಜೊತೆಗೆ ಒಂದು ವಿಕೆಟ್ ಕೂಡ ಪಡೆದಿದ್ದಾರೆ. ತ್ರಿಪುರಾ ವಿರುದ್ಧದ ಪಂದ್ಯದಲ್ಲಿ 21 ಎಸೆತಗಳಲ್ಲಿ 34 ರನ್ ಸಿಡಿಸಿದ್ದೇ ಅವರ ಅತ್ಯುತ್ತಮ ಇನಿಂಗ್ಸ್ ಆಗಿದ್ದು, ಅದೇ ಪಂದ್ಯದಲ್ಲಿ ತಮ್ಮ ಏಕೈಕ ಟಿ20 ವಿಕೆಟ್ ಕೂಡ ಪಡೆದಿದ್ದರು.