ಲಖನೌ: ಅಫ್ಘಾನಿಸ್ತಾನ ವಿರುದ್ಧದ ಎರಡನೇ ಏಕದಿನ ಪಂದ್ಯಕ್ಕೆ (IND vs AFG) ಭಾರತ ತಂಡದ ಪ್ಲೇಯಿಂಗ್ XI ಆರಿಸಿರುವ ಟೀಮ್ ಮ್ಯಾನೇಜ್ಮೆಂಟ್ ವಿರುದ್ಧ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ (Manoj Tiwary) ಬೇಸರ ವ್ಯಕ್ತಪಡಿಸಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಓಪನರ್ ಶುಭಮನ್ ಗಿಲ್ ಉಪಸ್ಥಿತಿಯ ಹೊರತಾಗಿಯೂ ರೋಹಿತ್ ಶರ್ಮಾಗೆ ಇನಿಂಗ್ಸ್ ಆರಂಭಿಸಲು ಯಶಸ್ವಿ ಜೈಸ್ವಾಲ್ಗೆ ಅವಕಾಶ ನೀಡಿರುವುದರ ಹಿಂದಿನ ಯೋಜನೆ ಏನೆಂದು ನನಗೆ ಅರ್ಥವಾಗುತ್ತಿಲ್ಲವೆಂದು ಅವರು ಹೇಳಿದ್ದಾರೆ. ಏಕೆಂದರೆ ಗಿಲ್ ಅವರನ್ನು ಮೂರನೇ ಕ್ರಮಾಂಕದಲ್ಲಿ ಆಡಿಸಿರುವುದು ಭವಿಷ್ಯದಲ್ಲಿ ಆಯ್ಕೆಗೆ ಸಂಬಂಧಿಸಿದಂತೆ ದೊಡ್ಡ ತಲೆ ನೋವು ಉಂಟಾಗಲಿದೆ ಎಂದು ಅವರು ಎಚ್ಚರಿಕೆಯನ್ನು ನೀಡಿದ್ದಾರೆ.
ಜೂನ್ 17 ರಂದು ಬುಧವಾರ ನಡೆದಿದ್ದ ಎರಡನೇ ಏಕದಿನ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಮೂರು ಬದಲಾವಣೆಯನ್ನು ತರಲಾಯಿತು. ನಿತೀಶ್ ರೆಡ್ಡಿಗೆ ಗಾಯದ ಕಾರಣ ವಿಶ್ರಾಂತಿ ನೀಡಿದರೆ, ಹರ್ಷ್ ದುಬೆ ಹಾಗೂ ಪ್ರಸಿಧ್ ಕೃಷ್ಣ ಅವರಿಗೆ ವಿಶ್ರಾಂತಿಯನ್ನು ನೀಡಲಾಯಿತು. ಇವರ ಸ್ಥಾನಗಳಿಗೆ ಯಶಸ್ವಿ ಜೈಸ್ವಾಲ್, ಕುಲ್ದೀಪ್ ಯಾದವ್ ಹಾಗೂ ಪ್ರಿನ್ಸ್ ಯಾದವ್ ಬಂದರು. ಜೈಸ್ವಾಲ್ ಪ್ಲೇಯಿಂಗ್ XIಗೆ ಬಂದಿದ್ದರಿಂದ, ಇನಿಂಗ್ಸ್ ಆರಂಭಿಸುತ್ತಿದ್ದ ಗಿಲ್ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವಂತಾಯಿತು.
IND vs AFG: ನಾಲ್ಕು ವರ್ಷಗಳ ಬಳಿಕ ಒಡಿಐ ಶತಕ ಬಾರಿಸಿದ ಇಶಾನ್ ಕಿಶನ್!
ಮೂರನೇ ಕ್ರಮಾಂಕದಲ್ಲಿ ಶುಭಮನ್ ಗಿಲ್ ಹೆಚ್ಚಿನ ರನ್ಗಳನ್ನು ಗಳಿಸಿದರೆ, ಬಲಗೈ ಬ್ಯಾಟ್ಸ್ಮನ್ ಅನ್ನು ಅಗ್ರ ಕ್ರಮಾಂಕಕ್ಕೆ ಮರಳಿ ಕಳುಹಿಸಬೇಕಾ? ಅಥವಾ ಮೂರನೇ ಕ್ರಮಾಂಕದಲ್ಲಿಯೇ ಮುಂದುವರಿಸಬೇಕಾ? ಎಂಬಂತೆ ಟೀಮ್ ಮ್ಯಾನೇಜ್ಮೆಂಟ್ ತಲೆ ನೋವು ಉಂಟಾಗಲಿದೆ. ಇನ್ನು ಆರಂಭಿಕನಾಗಿ ಜೈಸ್ವಾಲ್ ಸಕ್ಸಸ್ ಆಗಿ, ರೋಹಿತ್ ಶರ್ಮಾ ವಿಫಲರಾದರೆ, ಆಗ ಕೂಡ ಮುಂದಿನ ಪಂದ್ಯಗಳಿಗೆ ಅವರ ಮೇಲೆ ಬಿದ್ದಂತಾಗುತ್ತದೆ ಎಂದು ತಿವಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭವಿಷ್ಯದಲ್ಲಿ ದೊಡ್ಡ ತಲೆ ನೋವು
"ರೋಹಿತ್ ಶರ್ಮಾ ಜೊತೆ ಯಶಸ್ವಿ ಜೈಸ್ವಾಲ್ ಅವರನ್ನು ಇನಿಂಗ್ಸ್ ಆರಂಭಿಸಲು ಅವಕಾಶ ನೀಡಿ, ಶುಭಮನ್ ಗಿಲ್ ಅವರನ್ನು ಮೂರನೇ ಕ್ರಮಾಂಕದಲ್ಲಿ ಆಡಿಸಿದರೆ, ಇದು ಭವಿಷ್ಯದಲ್ಲಿ ದೊಡ್ಡ ತಲೆ ನೋವು ಉಂಟು ಮಾಡಲಿದೆ. ಮೂರನೇ ಕ್ರಮಾಂಕದಲ್ಲಿ ಉತ್ತಮ ರನ್ಗಳನ್ನು ಗಳಿಸಿದರೆ, ನಾನು ಮೂರನೇ ಕ್ರಮಾಂಕದಲ್ಲಿ ಮುಂದುವರಿಯಬೇಕಾ? ಅಥವಾ ಆರಂಭಿಕ ಸ್ಥಾನಕ್ಕೆ ಹೋಗಬೇಕಾ, ಬೇಡವಾ? ಎಂಬ ಬಗ್ಗೆ ಗಿಲ್ ಯೋಚಿಸಬಹುದು," ಎಂದು ಕ್ರಿಕ್ಬಜ್ಗೆ ಮನೋಜ್ ತಿವಾರಿ ತಿಳಿಸಿದ್ದಾರೆ.
"ಹಾಗಾಗಿ, ಅವರು ಏನನ್ನು ಪ್ರಯತ್ನಿಸುತ್ತಿದ್ದಾರೆಂಬ ಬಗ್ಗೆ ನನಗೆ ಯಾವುದೇ ಉಪಾಯ ಇಲ್ಲ. ಇಲ್ಲಿ ದೊಡ್ಡ ಮಟ್ಟದಲ್ಲಿ ಸ್ಪಷ್ಟತೆಯ ಕೊರತೆ ನನಗೆ ಕಾಣುತ್ತಿದೆ. ಆದರೆಮ ಜೈಸ್ವಾಲ್ ಆಡುವುದನ್ನು ನೋಡಲು ನನಗೆ ಖುಷಿಯಾಗುತ್ತಿದೆ, ಏಕೆಂದರೆ ಅವರು ಎಲ್ಲಾ ಸ್ವರೂಪದಲ್ಲಿ ಆಡಲು ಅರ್ಹರಾಗಿದ್ದಾರೆ. ರೋಹಿತ್ ಶರ್ಮಾ ಉತ್ತಮ ಪ್ರದರ್ಶನವನ್ನು ತೋರುವಲ್ಲಿ ವಿಫಲರಾದರೆ, ಅವರ ಮೇಲೆ ಹೊರಗಡೆಯಿಂದ ಸಾಕಷ್ಟು ಒತ್ತಡ ಬೇಳಬಹುದು," ಎಂದು ಮಾಜಿ ಕ್ರಿಕೆಟಿಗ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೂರನೇ ಕ್ರಮಾಂಕದಲ್ಲಿ ಗಿಲ್ ಶತಕ
ಅಂದ ಹಾಗೆ ಮನೋಜ್ ತಿವಾರಿ ಹೇಳಿದ ಹಾಗೆ, ಎರಡನೇ ಏಕದಿನ ಪಂದ್ಯದಲ್ಲಿ ನಾಯಕ ಶುಭಮನ್ ಗಿಲ್ ಮೂರನೇ ಕ್ರಮಾಂಕದಲ್ಲಿ ಶತಕ ಬಾರಿಸಿದ್ದಾರೆ. ಅವರು 110 ಎಸೆತಗಳಲ್ಲಿ 154 ರನ್ಗಳನ್ನು ಗಳಿಸಿದ್ದಾರೆ. ಆದರೆ, ಯಶಸ್ವಿ ಜೈಸ್ವಾಲ್ ವಿಫಲರಾದರು. ರೋಹಿತ್ ಶರ್ಮಾ 48 ರನ್ ಗಳಿಸಿದರು. ಇನ್ನು ಇಶಾನ್ ಕಿಶನ್ ಕೂಡ ಉತ್ತಮವಾಗಿ ಬ್ಯಾಟ್ ಮಾಡಿ 79 ಎಸೆತಗಳಲ್ಲಿ 125 ರನ್ಗಳನ್ನು ಕಲೆ ಹಾಕಿದರು. ಆ ಮೂಲಕ ಭಾರತ 50 ಓವರ್ಗಳಿಗೆ 402 ರನ್ಗಳನ್ನು ಕಲೆ ಹಾಕಿತು.